ಕೈಯಲ್ಲಿ ಕಟ್ಟಿಕೊಂಡಿದ್ದ ವಾಚನ್ನು ನೋಡಿಕೊಂಡ ಅಖಿಲನು ಅದಾಗಲೆ ಹನ್ನೊಂದನ್ನು ಸೂಚಿಸುತ್ತಿತ್ತು. 'ಇಷ್ಟೊತ್ತಿಗಾಗಲೆ, ಇಲ್ಲವೆ ಇದಕ್ಕೂ ಮೊದಲೆ ರಮೇಶ ಅವರು ಬಂದು ನನಗೆ ಪೋನ್ ಮಾಡ್ಬೇಕಿತ್ತು, ಬಂದಿಲ್ಲವೆಂದರೆ ಬಹುಶಃ ಹೆದರಿಕೊಂಡು ಬಿಟ್ಟಿರಬೇಕು. ಪಾಪ ಸಂಸಾರಸ್ಥ, ಮೇಲಾಗಿ ಪುಕ್ಕಲು ಸ್ವಭಾವದವನು, ಈಗ ಮಾಡುವ ಕೆಲಸದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ,' ಎಂದು ಮನಸಿನಲ್ಲಿ ಮಾತನಾಡಿಕೊಳ್ಳುತ್ತಲೆ ಆಗುವ ಅನಾಹುತವನ್ನು ನೆನೆದು ಕ್ಷಣ ನಡುಗಿಬಿಟ್ಟನು. ' ಅವರು ನನ್ನ ಹಾಗೆಯೆ ಮನೆಗೆ ಹೋದ ಮೇಲೆ ತಮ್ಮ ನಿರ್ಣಯವನ್ನು ಬದಲಾಯಿಸಿಕೊಂಡಿರಬಹುದೇನೊ...?, ಹಾಗಿದ್ದರೆ ಅವರಿಂದು ಬರದೆ ಹೋದರೆ..!!!!, ' ಕುಳಿತಲ್ಲಿಂದ ಎದ್ದು ನಿಂತು ಬಾಲಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಅಲೆದಾಡುತ್ತಲೆ ಬ್ಯಾಂಕಿನತ್ತ ದೃಷ್ಟಿಯನ್ನು ಹರಿಸಿದನು. ದಿನನಿತ್ಯದಂತೆ ಅದರ ಕೆಲಸವನ್ನು ಪ್ರಾರಂಭಿಸಿಕೊಂಡಿತ್ತು. 'ಛೆ..ಈ ರಮೇಶ ಅವರು ಯಾಕಿಷ್ಟು ಹೊತ್ತಾದರು ಬರಲಿಲ್ಲ, ' ಎಡ ಅಂಗೈಗೆ ಬಲ ಮುಂಗೈಯಿಂದ ಗುದ್ದುಕೊಳ್ಳುತ್ತಾ, ಧೀರ್ಘ ಉಸಿರೊಂದನ್ನು ಒಳಗೆಳೆದು ಬಿಟ್ಟು ' ಆದದ್ದಾಗಲಿ, ಅವರು ಬರಲಿ ಬರದೆ ಇರಲಿ ಅಂದುಕೊಂಡ ಕಾರ್ಯವನ್ನು ಇವತ್ತು ಮಾಡಿ ಮುಗಿಸುವುದೆ, ಅದು ಹೇಗಾದರು ಸರಿ, ಸ್ವಲ್ಪ ರಿಸ್ಕ್ ಜಾಸ್ತಿಯಾದರು ಆಗಬಹುದು' ಎಂದು ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಾ, ಮುಂದೆ ಮಾಡಬೇಕಾಗಿರುವ ಕೆಲಸವನ್ನು ನೆನೆದುಕೊಂಡಾಗ ಸಣ್ಣಗೆ ಹಣೆಯ ಮೇಲೆ ಬೆವರ ಹನಿಗಳೆಲ್ಲ ಜೀನುಗಲಾರಂಭಿಸಿದವು.
ಎಡಗೈ ಅಂಗೈಯಿಂದ ಹಣೆಯ ಬೆವರನ್ನೊಮ್ಮೆ ಒರೆಸಿಕೊಂಡು, ಹಿಂಬದಿ ಪ್ಯಾಂಟಿನ ಪಾಕೇಟನಲ್ಲಿಟ್ಟುಕೊಂಡಿದ್ದ ರಜನಿಗಂಧ ಪಾನ ಮಸಾಲವನ್ನು ಹಾಕಿಕೊಂಡು ಜಗಿಯುತ್ತಾ, ಪ್ಯಾಂಟಿನ ಪಾಕೇಟ್ ನಲ್ಲಿ ನಿನ್ನೆ ರಾತ್ರಿ ರೇಡಿ ಮಾಡಿಸಿಕೊಂಡು ಬಂದಿದ್ದ ಡೂಪ್ಲಿಕೇಟ್ ಕೀಗಳನ್ನು ಮುಟ್ಟುಕೊಳ್ಳುತ್ತಾ, ಇಂದು ಬಲಿ ಬೀಳಿಸಲಿರುವ ಕುರಿಯ ಬರುವಿಕೆಗಾಗಿ ಕಾಯುತ್ತಾ ನಿಂತನು.
ಅಖಿಲನು ಬ್ಯಾಂಕಿನ ಎದುರಿನ ರಸ್ತಯಾಚೆಯ ಪುಟ್ ಪಾತ್ ಮೇಲೆ ನಿಂತುಕೊಂಡಿದ್ದನು. ಪುಟ್ ಪಾತ್ ಹಿಂದುಗಡೆ ಒಂದು ಮರವಿತ್ತು ಅದರ ನೆರಳಿನಲ್ಲಿ ಒಬ್ಬ ಅಜ್ಜಿ ಗಾಲಿಬಂಡಿಯಲ್ಲಿ ಕಡ್ಲೆ ಕಾಯಿಯನ್ನು ಮಾರುತ್ತಿದ್ದಳು. ಅಜ್ಜಿಯ ಹತ್ತಿರ ಹೋಗಿ ಹತ್ತು ರೂಪಾಯಿಯನ್ನು ಕೊಟ್ಟು ಹುರಿದ ಕಡ್ಲೆಕಾಯಿ ಪಟ್ಟಣವನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿ ಕೊಂಡಿದ್ದ ರಜನಿಗಂಧವನ್ನು ಉಗುಳಿ, ಕಡ್ಲೆ ಕಾಳುಗಳನ್ನು ತಿನ್ನುತ್ತಾ ಅಜ್ಜಿಯನ್ನು ಮಾತನಾಡಿಸಿದನು ' ಏನಜ್ಜಿ, ದಿನಾಲೂ ಇಲ್ಲೆ ವ್ಯಾಪಾರ ಮಾಡ್ತೀಯಾ ?'
' ಇಲ್ಲ ಕಣಪ್ಪ, ಇವತ್ತು ಕಡೆದಿನವಂತೆ ಬ್ಯಾಂಕಿಂದು'
'ಹಾಗಂದ್ರೆ' ಹೆದರಿದನು ಅಜ್ಜಿಯ ಮಾತನ್ನು ಕೇಳಿ
'ಅಂದ್ರೆ ಇನ್ನೂ ನಾಕೈದು ದಿನ ಬ್ಯಾಂಕು ರಜೆ ಇರ್ತದಂತಲ್ಲಪ್ಪಾ ಅದಕ್ಕೆ'
' ಓ ಹಾಗಾ'
' ಹ್ಞೂಂ, ಅದ್ಕೆಯಾ, ಇವತ್ತು ಇಲ್ಲಿ ನಾಳೆ ದುರ್ಗಮ್ಮನ ಗುಡಿ, ನಾಡಿದ್ದು ಪಾರ್ಕು ಹೀಗೆ ಊರೆಲ್ಲ ಸುತ್ತತಿರೋದೆ'
'ಓ ನೀನು ಕಿಲಾಡಿ ಮುದ್ಕಿ ಇದ್ದೀಯಾ ಬಿಡು'
' ಹ್ಞೂಂನಪ್ಪಾ ಕಿಲಾಡಿತನ ಇಲ್ದಿದ್ರೆ ಈ ಕಲಿಯುಗದಲ್ಲಿ ಬದ್ಕೊಕ ಆಗುತ್ತಾ, ಹೇಳು'
' ಅದು ನಿಜಾನೆ ಬಿಡು, ಮಕ್ಳಿಲ್ವಾ ?'
'ಇದ್ದಾರಪ್ಪ ಎಲ್ಲ ಹೆಂಡ್ತಿ ಮಾತ ಕೇಳ್ಕೊಂಡವ್ರೆ, ನಾನು ದುಡ್ದು ನಾಲ್ಕ ಕಾಸು ದುಡ್ಕೊಂಡು ಮನಿಗೆ ಹೋಗ್ಲಿಲ್ಲಾ ಅಂದ್ರೆ ಅವತ್ತು ಉಪವಾಸವೆ ಗತಿ' ಎಂದಳು ಗದ್ಗರಿತ ಧನಿಯಿಂದ
ಅಜ್ಜಿಯ ಮಾತನ್ನು ಕೇಳಿ ಕರಳು ಹಿಂಡಿದ ಅನುಭವವಾಗಿಬಿಟ್ಟಿತ್ತು ಅಖಿಲನಿಗೆ ಹಾಗೆ ಹೊರಳಿ ನಿಂತುಕೊಂಡು ಬಿಟ್ಟನು. ಕೈಯಲ್ಲಿದ್ದ ಕಡ್ಲೆ ಕಾಯಿಯ ಪೊಟ್ಟಣವು ಖಾಲಿಯಾಯಿತು, ಸಮಯವು ಆಯಿತು, ಸೆಕೆಂಡ್ ಸೆಕೆಂಡ್ಗೂ ಟೆನ್ಷನ್ ಹೆಚ್ಚಾಗತೊಡಗಿತು ಅಖಿಲನಲ್ಲಿ.
ಹೆಗಲ ಮೇಲೊಂದು ಕೈ ಬಿತ್ತು, ಅಖಿಲನು ಮೈ ಮೇಲೆ ಹಲ್ಲಿ ಬಿದ್ದವರಂತೆ ಹೆದರಿ ತಿರುಗಿ ನೋಡಿದನು. ಎದುರಿಗೆ ರಮೇಶನು ನಗುತ್ತಾ ನಿಂತಿದ್ದನು. ರಮೇಶನನ್ನು ನೋಡಿದ ಅಖಿಲನು ಅವನನ್ನು ಬಿಗಿಯಾಗಿ ತಬ್ಬಿಕೊಂಡುಬಿಟ್ಟನು. ಎರಡು ನಿಮಿಷದ ನಂತರ ಆಲಿಂಗನವನ್ನು ಸಡಲಿಸಿದ ಅಖಿಲನು ' ಸರ್ ನೀವು ಇವತ್ತು ಬರುತ್ತೀರೊ ಇಲ್ವೊ, ಅಂದ್ಕೊಂಡುಬಿಟ್ಟಿದ್ದೆ '
' ಅದು ಹೇಗೆ ಸಾಧ್ಯ, ಇವತ್ತು ನಮ್ಮ ಬದುಕಿನ ಅಗ್ನಿ ಪರೀಕ್ಷೆ
ಈ ಪರೀಕ್ಷೆಯಲ್ಲಿ ನಾವಿಬ್ಬರು ಗೆಲ್ಲಲೆಬೇಕು, ಇಲ್ಲವಾದರೆ'
' ಸೋಲುವ ಮಾತೆ ಇಲ್ಲ ಬಿಡಿ ಸರ್'
'ಅಂದ ಹಾಗೆ ಬೈಕ್ ನ ವ್ಯವಸ್ಥೆಯಾಗಿದೆಯಾ ?'
'ಇನ್ನು ಇಲ್ಲ ಸರ್, ಆದರೆ ಕೀ ರೆಡಿಯಿವೆ, ಮತ್ತೆ ನೀವು ಬರೋದು ತಡ ಮಾಡಿದ್ರಿ, ಈಗ ಬರೊ ಹಕ್ಕಿನ ಕಾಯ್ಕೊಂಡ ಕುಂದ್ರೊಕೆ ಒಬ್ರು ಬೇಕಲ್ಲ'
'ಅದು ನಿಜಾನೆ, ನಾನು ಬೆಳಿಗ್ಗೆ ಬೇಗನೆ ಮನೆಯಿಂದ ಹೊರಟೆ, ದಾರಿ ಮದ್ಯದಲ್ಲಿ ನಮ್ಮ ಆಫೀಸ್ ನ ಸ್ಟಾಫ್ ಒಬ್ರು ಸಿಕ್ಬಿಟ್ರು, ಅವರ ಜೊತೆ ಮಾತನಾಡಿ, ಅವರಿಂದ ಬಿಡಿಸಿಕೊಂಡು ಬರಲು ಸ್ವಲ್ಪ ಹೊತ್ತಾಗಿಬಿಡ್ತು'
' ಪರ್ವಾಗಿಲ್ಲ ಬಿಡಿ ಸರ್ ಅದು ' ಏನೊ ಹೇಳುತ್ತಿದ್ದ ಅಖಿಲನನ್ನು ತಡೆದ ರಮೇಶನು ಆಗ ತಾನೆ ಬ್ಯಾಂಕಿನ ಮುಂದೆ ಬಂದು ನಿಂತ ಕಾರಿನಿಂದ ಇಳಿದು ನಿಂತಿದ್ದ ವ್ಯಕ್ತಿಯನ್ನು ನೋಡಿ ' ಅದೇನಾ ನಮ್ಮ ಬೇಟೆ?'. ರಮೇಶನು ಕೇಳಿದನು.
ತಿರುಗಿ ನೋಡಿ, ದಿಗ್ಭ್ರಮೆಯಾಗಿ, ' ಹೌದು 'ಎಂದನು ಅಖಿಲನು
' ಇದೇನಿದು ನೀನು ನೋಡಿದ್ರೆ ಸಾಯಂಕಾಲದ ವೇಳೆ ಬರಬಹುದೆಂದುಕೊಂಡಿದ್ದೆ, ಇವನು ನೋಡಿದ್ರೆ ಈಗಲೆ ಬಂದು ಬಿಟ್ಟಿದ್ದಾನೆ, ಏನು ಮಾಡುವದು.' ರಮೇಶನ ಮಾತುಗಳನ್ನು ಕೇಳಿ ಅಖಿಲನಿಗೆ ತಲೆ ಗಿರ್ರ ಎಂದಿತ್ತು, ' ಏನು ಮಾಡುವುದು, ಇನ್ನು ಬೈಕ ಕದಿಬೇಕು, ಸರಿಯಾಗಿ ತಯಾರಾಗಬೇಕು,' ಎಂದು ಸ್ವಲ್ಪ ದಿಗಿಲುಕೊಂಡವರಂತೆ ಆಡತೊಡಗಿದನು.
' ಏನು ಮಾಡುವುದೀಗ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂದ ಹಾಗೆ ಆಗುತ್ತಿದ್ದೆಯಲ್ಲ ಅಖಿಲ, ಬೇಗ ಏನಾದ್ರು ಉಪಾಯ ಮಾಡು' ಎಂದ ರಮೇಶನು ಅಖಿಲನನ್ನು ಹಿಡಿದು ಅಲ್ಲಾಡಿಸಿದನು. ಏನು ಮಾಡಬೇಕೆಂದು ಅರಿವಾಗದೆ ಸುಮ್ಮನೆ ನಿಂತುಬಿಟ್ಟನು ಅಖಿಲನು. ಆವಾಗಲೆ ದೂರದಿಂದ ಯಾವುದೊ ಕಾರ್ಯಕ್ರಮದ ಬ್ಯಾಂಡ ಬಾಜಾದ ಸದ್ದು ಕೇಳಿತು. ಅತ್ತ ತಲೆಯತ್ತಿ ತಿರುಗಿ ನೋಡಿದರೆ ಯಾವುದೊ ಸಮಾಜದ ಜಯಂತಿ ಕಾರ್ಯಕ್ರಮದ ಮೆರವಣಿಗೆ ಬರುತ್ತಿತ್ತು, ಅದನ್ನು ನೋಡಿ ಏನೊ ಐಡಿಯಾ ಹೊಳೆದಂತಾಗಿ ' ಇಲ್ಲಿ ಇರಿ ಸರ್ ಒಂದ್ನಿಮಿಷ' ರಮೇಶನ ಮರುತ್ತರಕ್ಕು ಕಾಯದೆ ಓಡಿ ಹೋಗಿಬಿಟ್ಟನು, ಎರಡು ನಿಮಿಷದ ನಂತರ ಕೈಯಲ್ಲಿ ಯಾರೊ ಕುಡಿದು ಬಿಟ್ಟಿದ್ದ ಖಾಲಿ ಬಾಟಲಗಳನ್ನು ತಂದು ರಮೇಶನ ಕೈಗೆ ಕೊಟ್ಟು, ಮಾಡಬೇಕಾಗಿರುವ ಕೆಲಸವನ್ನು ಅವನ ಕವಿಯಲ್ಲಿ ಉಸುರಿದನು. ಅಖಿಲನ ಪ್ಲ್ಯಾನ್ ನ್ನು ಕೇಳಿ ರಮೇಶನು ಬೆವರಿಬಿಟ್ಟನು ' ಇದನ್ನ ಬಿಟ್ರೆ ಬೇರೆ ಐಡಿಯಾ ಇಲ್ವಾ..? ' ಎಂದ ಚೂರು ಭಯಭೀತ ದ್ವನಿಯಿಂದ,
'ಇದೆ.. ನಾವಿಬ್ರು ವಿಷ ಕುಡಿಯೊದು' ಎನ್ನುತ್ತಲೆ ರಮೇಶನ ಬೆನ್ನನ್ನು ತಟ್ಟಿದ ಅಖಿಲನು ನೇರವಾಗಿ ಬ್ಯಾಂಕಿನ ಕಡೆಗೆ ನಡೆದನು. ರಮೇಶನು ಬಾಟಲಿಗಳನ್ನು ಬ್ಯಾಗನಲ್ಲಿಟ್ಟುಕೊಂಡು ಮೆರವಣಿಗೆಯತ್ತ ಸಾಗಿದನು. ಅಖಿಲನು ತಲೆಗೊಂದು ಕ್ಯಾಪ್ ನ್ನು ಹಾಕಿಕೊಂಡು, ಬ್ಯಾಂಕಿನ ಮುಂಬಾಗದಲ್ಲಿ ಹಾಕಿರುವ ಸಿಸಿ ಕ್ಯಾಮರಾಕ್ಕೆ ತನ್ನ ಮೊಖವನ್ನು ಕಾಣದಂತೆ ತಲೆ ತಗ್ಗಿಸಿಕೊಂಡು ಒಳಗೆ ಹೋದನು, ತಮಗೆ ಬೇಕಾಗಿದ್ದ ಆಸಾಮಿ ಎಲ್ಲೂ ಕಾಣಸಿಗಲಿಲ್ಲ, ಹಾಗೆ ಕಣ್ಣಾಡಿಸುತ್ತಾ, ಮ್ಯಾನೇಜರ್ ಛೇಂಬರ್ ಹತ್ತಿರ ಹೋದಾಗ, ಬಲಿ ಹಣವನ್ನು ಎಣಿಸಿಕೊಂಡು, ಬ್ಯಾಗನಲ್ಲಿ ತುಂಬಿಕೊಳ್ಳುತ್ತಿದ್ದನು. ತಟ್ಟನೆ ಹೊರಗಡೆ ಬಂದು ಬ್ಯಾಂಕಿನ ಮೆಟ್ಟಿಲುಗಳನ್ನು ಇಳಿದು ಅವನ ಕಾರಿನ ಹತ್ತಿರ ಬಂದು ನಿಂತುಕೊಂಡು ಡ್ರೈವರ್ ಏನಾದರು ಇದ್ದಾನಾ ಅಂತ ಪರೀಕ್ಷಿಸಿದನು. ಯಾರು ಕಂಡು ಬರಲಿಲ್ಲ ' ಓ ಒಬ್ಬನೆ ಬಂದ ಹಾಗಿದೆ ಅಡ್ಡಿಯಿಲ್ಲ ರಿಸ್ಕ ಚೂರು ಕಡಿಮೆಯಾಯಿತು' ಎಂದು ಮತ್ತೆ ಮೆಟ್ಟಿಲುಗಳನ್ನು ಹತ್ತಿ, ಬಾಗಿಲ ಒಂದು ಬದಿಯಲ್ಲಿ ನಿಂತುಕೊಂಡನು ಅಷ್ಟರಲ್ಲಿ ಆ ಆಸಾಮಿ ಬ್ಯಾಂಕಿನ ಡೋರನ್ನು ತೆಗೆದು, ಪೋನಿನಲ್ಲಿ ಮಾತನಾಡುತ್ತ ಮೆಲ್ಲಗೆ ಇಳಿಯತೊಡಗಿದನು. ಅಖಿಲನು ಆಗ ತಡಮಾಡದೆ ರಮೇಶನಿಗೆ ತನ್ನ ಬಲಗೈಯಿಂದ ಕೆಲಸವನ್ನು ಪ್ರಾರಂಭಿಸು ಎಂದು ಸಂಜ್ಞೆಯನ್ನು ಮಾಡಿದನು. ಮೆರವಣಿಗೆಯು ಬ್ಯಾಂಕಿನ ಹತ್ತಿರ ಹತ್ತಿರಕ್ಕೆ ಬಂದು ಬಿಟ್ಟಿತ್ತು, ಇವರ ಪುಣ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಯಾರದೊ ಹೊಸ ಎಟಿಎಮ್ ಪಿನ್ ಕಾರ್ಡನ್ನು ಎಟಿಎಮ್ ನಲ್ಲಿ ಆಕ್ಟ್ಯಿವೇಟ್ ಮಾಡಿ ಕೊಡುವದರಲ್ಲಿದ್ದನು. ಅತ್ತ ರಮೇಶನು ಅಖಿಲನು ಸಂಜ್ಞೆ ಮಾಡಿದ ತಕ್ಷಣವೆ, ರಸ್ತೆಯ ಪಕ್ಕದ ಗಿಡದ ಮರೆಯಲ್ಲಿ ನಿಂತು ಬ್ಯಾಗನಲ್ಲಿದ್ದ ಎರಡು ಬಾಟಲಿಗಳನ್ನು ಒಂದಂರ ಹಿಂದೊಂದರಂತೆ ಮೆರವಣಿಗೆಯ ಮೇಲೆ ಬೀಳುವಂತೆ ಬಾಟಲಿಗಳನ್ನು ಆಕಾಶದೆಡೆಗೆ ಒಗೆದ ತಕ್ಷಣವೆ ಒಂದ್ನಾಕ್ಕು ಚಿಕ್ಕ ಕಲ್ಲುಗಳನ್ನು ಮೆರವಣಿಗೆಯ ಗುಂಪಿನತ್ತ ಓಗೆದು ಮೆರವಣಿಯ ಹತ್ತಿರ ಓಡಿ,' ಅಯ್ಯೊ ಅಲ್ಲಿ ಯಾರೊ ಕಲ್ಲುಗಳನ್ನು ಎಸೆಯುತ್ತಿದ್ದಾರೆ,' ಅವನ ಮಾತು ಪೂರ್ತಿಗೊಳ್ಳುವ ಮೊದಲೆ ಕಲ್ಲುಗಳಾಗಲೆ ಕೆಲವರ ಬೆನ್ನು ಕೈ ತಲೆಗೆ ಬಿದ್ದಿದ್ದವು, ಆಕಾಶವನ್ನು ಕಂಡ ಖಾಲಿ ಬಾಟಲಿಗಳು ಮೆರವಣಿಗೆಯಲ್ಲಿದ್ದವರ ತಲೆಯ ಮೇಲೆ ಬಿದ್ದು ಒಡೆದು ರಕ್ತಸಿಕ್ತ ಮಾಡಿಬಿಟ್ಟವು, ರಮೇಶನು ಹೆದರಿ ಓಡಿ ಬರುವುದನ್ನು ಕಂಡ ಜನರು ಏನಾಯಿತು, ಏನಾಗುತ್ತಿದೆ ಎಂದರಿಯುವಷ್ಟರಲ್ಲಿ, ಜೇನಿನ ಗೂಡಿಗೆ ಗುರಿಯಿಟ್ಟು ಹೊಡೆದಾಗ ಚೆದುರುವ ಜೇನಿನ ನೊಣಗಳಂತೆ ನೆರದ ಜನರೆಲ್ಲ ಕೂಗಾಡುತ್ತಾ, ಚೀರಾಡುತ್ತಾ ಚೆಲ್ಲಾಪಿಲ್ಲಿಯಾಗಿಬಿಟ್ಟರು, ಜಯಂತಿಯ ನಡೆಸುವ ಸಮಾಜದ ಯುವಕರೆಲ್ಲ ಸಿಕ್ಕ ಸಿಕ್ಕ ವಾಹನ ಅಂಗಡಿಗಳನ್ನು ಜಖಂ ಮಾಡತೊಡಗಿದರು, ಅತ್ತ ಮೆರವಣಿಗೆ ಚೆಲ್ಲಾಪಿಲ್ಲಿಯಾದ ತಕ್ಷಣವೆ, ಅಖಿಲನು ಒಮ್ಮೆಲೆ ಹಾರಿ ಆ ಆಸಾಮಿಯ ಬ್ಯಾಗಿಗೆ ಕೈ ಹಾಕಿ ಜಗ್ಗಿದನು, ಆಸಾಮಿ ಕೈ ಬಿಡಲಿಲ್ಲ, ಅಖಿಲನು ಬಲಗೈಯಿಂದ ಆಸಾಮಿಯ ಕಿಬ್ಬೊಟ್ಟೆಗೆ ಜೋರಾಗಿ ಗುದ್ದಿದನು, ಆಸಾಮಿಗೆ ಉಸಿರೆ ನಿಂತಂತಾಗಿ ಬ್ಯಾಗನ್ನು ಕೈ ಬಿಟ್ಟು ಕುಸಿದು ಕುಳಿತುಬಿಟ್ಟನು. ಬ್ಯಾಗು ಕೈಗೆ ಸಿಕ್ಕಿದ್ದಷ್ಟೆ ತಡ ಬಿಲ್ಲಿನಿಂದ ಬಿಟ್ಟ ಬಾಣದಂತೆ ಶರವೇಗವಾಗಿ ಓಡಲಾರಂಭಿಸಿದನು, ಆ ಆಸಾಮಿ ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಕಳ್ಳ.. ಕಳ್ಳ.. ಎಂದೆರಡು ಸಲ ಕೂಗಿ ನೆಲಕ್ಕುರುಳಿದನು. ಸೆಕ್ಯೂರಿಟಿ ಗಾರ್ಡ ಆಸಾಮಿಯ ಕೂಗನ್ನು ಕೇಳಿ ಅತ್ತಿತ್ತ ನೋಡಿದನು, ಅಷ್ಟು ದೂರದಲ್ಲಿ ಅಖಿಲನು ಓಡುತ್ತಿದ್ದನ್ನು ಗಮನಿಸಿ, ಅಖಿಲನನ್ನು ಬೆನ್ನಟ್ಟಿದನು.
ಇತ್ತ ರಮೇಶನು ತನ್ನ ಕೆಲಸವನ್ನು ಮುಗಿಸಿ ಬೀದಿ ಕೊನೆಯ ತಿರುವಿನಲ್ಲಿ ಅಖಿಲನ ಬರುವಿಕೆಗಾಗಿ ಕಾಯುತ್ತಿದ್ದನು, ಅಖಿಲನು ಕೈಯಲ್ಲಿ ಬ್ಯಾಗನ್ನು ಹಿಡಿದುಕೊಂಡು ತನ್ನತ್ತಲೆ ಓಡಿ ಬರುವುದನ್ನು ಕಂಡು ಸಂತೋಷಿಸಿದನು, ಆದರೆ ಅಖಿಲನ ಹಿಂದೆ ಅನತಿ ದೂರದಲ್ಲಿ ಸೆಕ್ಯೂರಿಟಿ ಗಾರ್ಡ್ ಅಟ್ಟಿಸಿಕೊಂಡು ಬರುವುದನ್ನು ನೋಡಿ ದಿಗಿಲುಗೊಂಡನು, ಅಖಿಲನು ಓಡಿ ಬಂದು ರಮೇಶನ ಕೈಯನ್ನು ಹಿಡಿದುಕೊಂಡು ಓಡತೊಡಗಿದನು, ಎರಡು ಬೀದಿಗಳನ್ನು ದಾಟಿ ಬಂದರು ಬೆಂಬಿಡದ ಬೇತಾಳನಂತೆ ಸೆಕ್ಯುರಿಟಿ ಗಾರ್ಡ್ ಇವರ ಬೆನ್ನ ಹಿಂದೆಯೆ ಬಿದ್ದಿದ್ದನು.
ಮೂರನೆ ಬೀದೀಯ ಕೊನೆಯಲ್ಲೊಂದು ಮುಚ್ಚಿದ ಡಬ್ಬಾ ಬೀಡಿ ಅಂಗಡಿ ಕಾಣಿಸಿತು ಅಖಿಲನು ರಮೇಶನನ್ನು ಕರೆದುಕೊಂಡು ಬೀಡಿ ಡಬ್ಬಿಯ ಕೆಳಗಡೆ ಇರುವ ಕಪಾಟಿನೊಳಗೆ ಅವಿತುಕೊಂಡು ಚೀಲಕವಿರದ ಕಪಾಟಿನ ಬಾಗಿಲನ್ನು ಮುಚ್ಚಿ ಉಸಿರನ್ನು ಬಿಗಿ ಹಿಡಿದುಕೊಂಡು ಕುಳಿತುಬಿಟ್ಟರು. ಸೆಕ್ಯೂರಿಟಿ ಗಾರ್ಡ್ ಗೆ ಅಯೋಮಯವಾಗಿ ಹೋಯಿತು. ಬೀದಿಯ ತಿರುವನ್ನು ದಾಟುವದರಲ್ಲಿ ಎಲ್ಲಿ ಇವರಿಬ್ಬರು ಮಾಯವಾಗಿ ಹೋಗಿಬಿಟ್ಟರು ಎಂದು ಆಶ್ಚರ್ಯದಿಂದ ನೋಡುತ್ತಾ, ಅದೆ ಡಬ್ಬಾ ಅಂಗಡಿಯ ಮುಂದೆ ಬಂದು ನಿಂತು ಸ್ವಲ್ಪ ಸುಧಾರಿಸಿಕೊಂಡು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಹೊರಟು ಹೋದನು. ಅವನು ಹೋದ ಸದ್ದನ್ನು ಕೇಳಿ ನಿಟ್ಟುಸಿರನ್ನು ಬಿಟ್ಟರು. ರಮೇಶನು ಅಖಿಲನನ್ನು ಅಪ್ಪಿಕೊಂಡ ಆನಂದಭಾಷ್ಪವನ್ನು ಸುರಿಸತೊಡಗಿದನು. ' ಈ ಕೆಲಸ ಇಷ್ಟೊಂದು ಹಗುರವಾಗಿ ಬುಟ್ಟಿಯಿಂದ ಹೂವನ್ನು ಎತ್ತಿದಂತೆ ಸಾಂಗವಾಗಿ ನಡೆದು ಹೋಯಿತಲ್ಲ, ಅಬ್ಬಾ ನಾನು ಕನಸು ಮನಸ್ಸಿನಲ್ಲಿಯೂ ನೆನಸಿರಲಿಲ್ಲ, ಅಂತು ಇಂತೂ ನಮ್ಮ ಕಷ್ಟದ ದಿನಗಳಿಗೆ ಇಂದು ಕೊನೆ ಸಿಕ್ಕಿತು' ಏನ್ನುತ್ತಾ ನಿಟ್ಟುಸಿರೊಂದನ್ನು ಬಿಟ್ಟು ಕಪಾಟಿನ ಹಲಗೆಗೆ ಬೆನ್ನುಕೊಟ್ಟು ಕುಳಿತುಕೊಂಡನು.
ಹತ್ತು ನಿಮಿಷ ಸುಮ್ಮನಿದ್ದ ಅಖಿಲನು, ಸುಧಾರಿಸಿಕೊಂಡು
' ನಿಜ ಸರ್ ನಾವು ಅಂದುಕೊಂಡದ್ದಕ್ಕಿಂತ ಕೆಲಸವೇನೊ ಹೂವೆತ್ತಿದಂತೆ ನಡೆದುಹೋಯಿತು. ಹಾಗಂತ ನಾವು ಹರುಷ ಪಡುವ ಹಾಗಿಲ್ಲ, ನಾವು ಮಾಡಿದ ಗದ್ದಲಕ್ಕೆ ಊರೆಲ್ಲ ಈಗ ರಣರಂಗವಾಗಿಬಿಟ್ಟಿರುತ್ತದೆ, ಪೋಲಿಸರು ಕರ್ಪ್ಯೂವನ್ನು ಹೇರಿದರು ಹೇರಬಹುದು, ಊರ ತುಂಬೆಲ್ಲಾ ಖಾಕಿ ಪಡೆಗಳ ಕಾವಲು ಹೆಚ್ಚಾಗಿಬಿಡುತ್ತದೆ, ಇಷ್ಟು ಹಣವನ್ನು ನಾವಿಬ್ಬರೆ ಹೊತ್ತುಕೊಂಡು ತಿರುಗಾಡುವುದು ಈಗ ಅಷ್ಟೊಂದು ಸುಲಭದ ಕೆಲಸವೇನಲ್ಲ. ಯಾರೊಬ್ಬ ಪೋಲಿಸ್ ಕೈಗೆ ಸಿಕ್ಕರು ತೊಂದರೆ ತಪ್ಪಿದ್ದಲ್ಲ, ಆದ್ದರಿಂದ ಕತ್ತಲಾಗುವವರೆಗೂ ಇಲ್ಲೆ ಕಾದು ನಂತರ ಹಣವನ್ನು ಹಂಚಿಕೊಂಡು ನಮ್ಮ ನಮ್ಮ ದಿಕ್ಕುಗಳನ್ನು ಹಿಡಿದು ಹೋಗಿಬಿಡೋಣ' ಎಂದನು ಅಖಿಲನು, ಅವನ ಮಾತಿಗೆ ಸಮ್ಮತಿಸಿದ ರಮೇಶನು ಮೆಲ್ಲಗೆ ಕಣ್ಣನ್ನು ಮುಚ್ಚಿಕೊಂಡು ನಿದ್ರಾ ದೇವಿಗೆ ಜಾರಿಕೊಂಡನು.
Sunday, October 14, 2018
ಭಾಗ ೧೦
Subscribe to:
Post Comments (Atom)
No comments:
Post a Comment