Sunday, October 14, 2018

ಭಾಗ ೨

ಅಖಿಲ್ ನ ಮಾತುಗಳು ಮುಗಿದ ಮೇಲೆ ಯಾರೊಬ್ಬರು ಮಾತನಾಡಲಿಲ್ಲ, ಅವರಿಬ್ಬರ ನಡುವೆ ಗಿಡದ ಪೊಟರೆಗಳಲ್ಲಿ ಚಿಲಿಪಿಲಿ ಮಾಡುತ್ತಿರುವ ಹಕ್ಕಿಗಳ ಕಲರವ, ಆಗೊಂದು ಈಗೊಂದು ಪಾರ್ಕಿನಾಚೆಗೆ ರಸ್ತರಯಲ್ಲಿ ಹಾರ್ನ ಹಾಕಿಕೊಂಡು ಓಡಾಡುವ ಬೈಕುಗಳ ಸದ್ದು, ಎಲ್ಲಿ ಜೋರಾಗಿ ಉಸಿರುಬಿಟ್ಟರೆ ನಿಶ್ಯಬ್ದತೆಗೆ ಭಂಗ ಬರುವುದೊ ಎಂದು ಇಬ್ಬರು ಸ್ಥಿಮಿತವಾಗಿ ಉಸಿರಾಡುತ್ತಿದ್ದರು. ಹತ್ತು ನಿಮಿಷ ಕಳೆದ ನಂತರ ರಮೇಶನು ಎರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಚಿಕ್ಕ ಮಕ್ಕಳಂತೆ ಬಿಕ್ಕಿ...ಬಿಕ್ಕಿ.. ಅಳಲಾರಂಬಿಸಿದನು. ಅಖಿಲ್ ನು ರಮೇಶನ ಹೆಗಲ ಮೇಲೆ ಕೈಯಿಟ್ಟು ಅದುಮಿದನು. ಪ್ಯಾಂಟಿನ ಜೇಬಿನಿಂದ ಕೈ ವಸ್ತ್ರವನ್ನು ತೆಗೆದ ರಮೇಶನು ಮೂಗು ಮತ್ತು ಕಣ್ಣೀರನ್ನು ಒರೆಸಿಕೊಂಡು ಮತ್ತೆ ಮೌನವಾಗಿ ಕುಳಿತುಕೊಂಡುಬಿಟ್ಟನು. ಅಖಿಲ್ ನು ಮರು ಮಾತನಾಡದೆ ಎದ್ದು ನಿಂತು, 'ಕ್ಷಮಿಸಿ ಸರ್, ನೀವು ತುಂಬಾ ದುಃಖದಲ್ಲಿರುವಂತೆ ಕಾಣುತ್ತಿದೆ, ನಾನು ನನ್ನ ದುಃಖವನ್ನು ನಿಮ್ಮಲ್ಲಿ ಹೇಳಿಕೊಂಡು ನಿಮ್ಮ ದುಃಖವನ್ನು ಹೆಚ್ಚಿಸಿಬಿಟ್ಟೆ ಅಂತಾ ಅನ್ನಿಸ್ತಿದೆ, ಬಹುಶಃ ಅದು ನಿಮಗೆ ಹೇಳಿಕೊಳ್ಳದೆ ಇರುವಂತ್ತಿದ್ದಿರಬಹುದು, ನಾನಿನ್ನು ಬರುತ್ತೇನೆ'. ಹೇಳಿ ಅಖಿಲ್ ಒಂದ್ನಾಕು ಹೆಜ್ಜೆಯನಿಟ್ಟು ಮುಂದೆ ನಡೆದನು.
'ಒಂದ್ನಿಮಿಷ ಮಿತ್ರ' ಎಂದು ಅಖಿಲ್ ನನ್ನು ಕರೆದನು ರಮೇಶನು. ಹಿಂತಿರುಗಿ ನೋಡಿದ ಅಖಿಲೇಶ, 'ಇರಿ ಒಂದು ಕ್ಷಣ ಬಂದೆ' ಎಂದು ಪಾರ್ಕನಾಚಿ ಹೋಗಿ ಒಂದು ಬಾಟ್ಲಿ ನೀರನ್ನು ತಂದು ರಮೇಶನಿಗೆ ಕುಡಿಯಲಿಕ್ಕೆ ಕೊಟ್ಟು, ತಾನು ರಮೇಶನ ಪಕ್ಕದಲ್ಲಿ ಕುಳಿತುಕೊಂಡನು. ಬಾಟಲಿಯ ಕ್ಯಾಪನ್ನು ತೆಗೆದು ಗಟಗಟನೆ ನೀರನ್ನು ಕುಡಿದು, ಎರಡು ಕ್ಷಣ ಸಮಾಧಾನಿಸಿಕೊಂಡು, ಮತ್ತೆ ಕಣ್ಣಲ್ಲಿ ನೀರನ್ನು ತಂದುಕೊಳ್ಳುತ್ತಾ, 'ನೀನು ವಯಸ್ಸಿನಲ್ಲಿ ಸಣ್ಣವನಾದರು ನಿನ್ನನ್ನು ಮಿತ್ರ ಎಂದು ಕರೆಯಲೆ,'
ಆಗಲಿ ಎಂಬುವಂತೆ ತಲೆಯಾಡಿಸಿದನು ಅಖಿಲ್.
'ನನಗೂ, ನಿನ್ನ ಹಾಗೆಯೆ, ನನ್ನದೆಯಲ್ಲೂ ಸಿಡಿಯದೆ ಹಾಗೆ ಇದ್ದ ನೋವಿನ ಜ್ವಾಲಾಮುಖಿಯೊಂದು ಒಳಗೊಳಗೆ ಇಷ್ಟು ದಿನ ಕುದಿಯುತ್ತಲೆ ಇತ್ತು. ಸಿಡಿದು ದುಃಖದ ಲಾವಾರಸವನ್ನೆಲ್ಲ ಹರಿಸಿ ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಬೇಕೆಂದಿದ್ದೆ
ಎಷ್ಟೊ ಸಲ, ಕೇಳಲು ಒಳ್ಳೆಯ ಕಿವಿಗಳು ಸಿಕ್ಕಿರಲಿಲ್ಲ, ಅರಿತುಕೊಂಡು ಸಂತೈಸುವ ಮನಗಳೊಂದು ಕಾಣಲಿಲ್ಲ, ಎಲ್ಲರು ನನ್ನನು ನೋಡಿ ದೂರ ಸರಿಯುವವರೆ. ರೋಗಪೀಡಿತ ವ್ಯಕ್ತಿಯನ್ನು ನೋಡಿ ಹೆದರಿ ಹಿಂಜರಿಯುವಂತೆ,  ಮಾತನಾಡಿಸಿದರೆ ಎಲ್ಲಿ ಇವನು ಹಣವನ್ನು ಕೇಳುತ್ತಾನೊ, ಏನಾದರು ಸಹಾಯವನ್ನು ಬೇಡುತ್ತಾನೊ ಎಂಬಂತೆ ಅಸ್ಪೃಶ್ಯರನ್ನು ಕಾಣುವ ಹಾಗೆ ನನ್ನನ್ನೆಲ್ಲರು ನೋಡುತ್ತಿದ್ದರು. ಬಹುಶಃ ಪೃಕೃತಿಯ ನಿಯಮವೆ ಹಾಗಲ್ಲವೆ ಮಿತ್ರ, ಆಕಳು ಹಾಲು ಹಿಂಡುತ್ತದೆಂದರೆ ಮಾತ್ರ ಕೊಟ್ಟಿಗೆಯಲ್ಲಿ ಅದಕ್ಕೆ ಮೇವು ನೀರನ್ನು ಹಾಕುತ್ತಾರೆ, ಅದೆ ಗೊಡ್ಡಾದರೆ ನಿಷ್ಕರುಣೆಯಿಂದಲೆ ಕಟುಕನಿಗೆ ಮಾರಿ ಕೈ ತೊಳೆದುಕೊಂಡು ಬಿಡುತ್ತಾರೆ. ಹಣವಿಲ್ಲದ ನನ್ನಂತವನ ಪಾಡು ಹಾಗೆ ಆಗಿದೆ.
ಕತ್ತರಿಸಲು ಮಾರಾಟ ಮಾಡುವುದಿಲ್ಲವಷ್ಟೆ, ಮಾತಿನ ಚುಚ್ಚು ಬಾಣಗಳಿಂದ ದಿನವು ಚುಚ್ಚಿ...ಚುಚ್ಚಿ.. ಇಷ್ಟೀಷ್ಟೆ ಹಿಂಸಿಸುತ್ತಿರುವರಷ್ಟೆ,' ಕಣ್ಣಂಚಿಂದ ಜಾರುತ್ತಿದ್ದ ಹನಿಗಳನ್ನು ಒರೆಸಿಕೊಳ್ಳುತ್ತಾ ಹೇಳಿದನು.
'ನಿಮಗೇಕೆ ಈಗ ಅಷ್ಟೊಂದು ಹಣದ ಅವಶ್ಯಕತೆಯಿದೆ, ವ್ಯಾಪಾರದಲ್ಲಿ ಏನಾದರು ನಷ್ಟವಾಗಿದೆಯಾ, ಅಥವಾ ಯಾರಾದರು ಮೋಸ ಮಾಡಿದರಾ..?' ಅಖಿಲ್ ಕೇಳಿದನು.
'ಮಿತ್ರ ವ್ಯಾಪಾರದಲ್ಲಿ ನಷ್ಟವಾಗಿತ್ತೆಂದರೆ ಅದನ್ನು ಇನ್ನೊಂದು ವ್ಯಾಪಾರದಲ್ಲಿ ಗಳಿಸುತ್ತಿದ್ದೆ, ಮೋಸ ಮಾಡಿದ್ದರೆಂದರೆ ಮರೆತು ಹಾಯಾಗಿರುತ್ತಿದ್ದೆ, ಇವಾವುಗಳು ಅಲ್ಲ, ಮಿತ್ರ ನಾನು ಕೆಲಸ ಮಾಡುತ್ತಿರುವುದು ಒಂದು ಖಾಸಗಿ ಕಂಪನಿಯಲ್ಲಿ, ಮನೆಯಲ್ಲಿ ನಾನು ನನ್ನ ಹೆಂಡತಿ, ನನ್ನ ತಂದೆ. ನನ್ನ ನಾಲ್ಕು ವರ್ಷದ ಒಬ್ಳೆ ಒಬ್ಬ ಮಗಳು, ಹುಟ್ಟಿದಾಗಿನಿಂದ ನೆಲಕ್ಕೆ ಕಾಲು ಸೋಕಿಸದ ಹಾಗೆ ನಾನು, ಅಪ್ಪ, ಅವಳು ಎಲ್ಲರು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಿದ್ದೇವು. ಎರಡು ಹೊತ್ತು ಉಪವಾಸವಿದ್ದಾದರು ಅವಳು ಕೇಳಿದ್ದನ್ನು ತಂದು ಕೊಡುತ್ತಿದ್ದೇವು. ಒಂದು ದಿನ ಎದೆಯಲ್ಲಿ ನೋವು ಎಂದಳು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸರೆಯನ್ನು ತೆಗೆಸಿಕೊಂಡಾಗ ಗೊತ್ತಾದದ್ದು ಅವಳ ಎದೆಯಲ್ಲಿ ಒಂದು ಚಿಕ್ಕ ರಂಧ್ರವಿದೆ ಎಂಬುದು. ಅದರ ಆಪರೇಷನ್ ಗಾಗಿ ಹತ್ತಿರ ಹತ್ತಿರ ಸುಮಾರ ಎರಡು ಲಕ್ಷ ಹಣ ಬೇಕಾಗಿದೆ, ಅವಳನ್ನು ತೋರಿಸಲು ಕಂಡ ಕಂಡವರಲ್ಲಿ ಸಾಲ ಮಾಡಿದೆ, ಆದರು ಇನ್ನೂ ಸಾಲುತ್ತಿಲ್ಲ, ಈಗ ನಾನು ಉದ್ಯೋಗ ಮಾಡುವ ವಲಯದಲ್ಲಿ ನಮ್ಮ ವಠಾರದಲ್ಲಿ, ನಾನೆಂದರೆ ಭೂತದಂತೆ ಹೆದರಿ ದೂರ ಸರಿಯುತ್ತಾರೆ,ಮಿತ್ರ' ಎನ್ನುತ್ತಾ ಅಳುವನ್ನು ತಾಳಲಾರದೆ ಅವನ ಹಗೆಲ ಮೇಲೆ ತನ್ನ ಹಣೆಯನ್ನಿಟ್ಟು ಒಂದೆ ಸಮನೆ ಅಳಲಾರಂಭಿಸಿದನು.
'ಊರಲ್ಲಿ ಯಾವ ಆಸ್ತಿ ಪಾಸ್ತಿ ಇಲ್ವಾ, ಇರೋ ಮನೆ' ಕುತುಹಲದಿಂದ ಕೇಳಿದನು ಅಖಿಲನು
' ಆಸ್ತಿ ಪಾಸ್ತಿ ಅಂತಾದ್ದೇನು ಇಲ್ಲ, ಅಪ್ಪ ಒಂದು ಕಿರಾಣಿ ಅಂಗಡಿಯಲ್ಲಿ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದರು. ಈ ಕಂಪ್ಯೂಟರ್ ಎಂಟ್ರಿಗಳು, ಬಿಲ್ಲುಗಳು ಪ್ರಾರಂಭವಾದಾಗಿನಿಂದ ಆ ಕೆಲಸವನ್ನು ಬಿಟ್ಟು ಮನೆಯಲ್ಲಿಯೆ ಇರುತ್ತಾರೆ. ಇರುವ ಮನೆ ಬಾಡಿಗೆಯದ್ದು, ನಮ್ಮ ತಂದೆ ಕೆಲಸ ಮಾಡುತ್ತಿದ್ದ ಅಂಗಡಿಯ ಓನರ್ ದ್ದು, ಅವರ ಮಕ್ಕಳೆಲ್ಲ ಈಗ ಕಲಿತು ದೊಡ್ಡ ದೊಡ್ಡ ಕೆಲಸಗಳಲ್ಲಿದ್ದಾರೆ, ಈ ಮನೆ ಹಳೆಯದು ಹಂಚಿನ ಮನೆ,‌ಅದು ಅಲ್ಲದೆ ಅಲ್ಲಿ ವಾಸಿಸುವರೆಲ್ಲ ಮಧ್ಯಮ ಕುಟುಂಬದವರೆ ಹೀಗಾಗಿ ಮನೆಯನ್ನು ಸ್ವಚ್ಛವಾಗಿಯಾದರು ಇಟ್ಟುಕೊಳ್ಳತ್ತಾರಲ್ಲ ಎಂಬ ದುರಾಸೆಗೆ ನಮಗೆ ಕಡಿಮೆ ಬಾಡಿಗೆಗೆ ಮನೆಯನ್ನು ಕೊಟ್ಟಿದ್ದಾರೆ. ನನಗೆ ಬರುವ ಎಂಟು ಸಾವಿರ ಸಂಬಳದಲ್ಲಿ, ಎರಡು ಸಾವಿರ ಮನೆ ಬಾಡಿಗೆ, ಮಗಳ ಶಾಲೆಯ ತಿಂಗಳ ಆಟೋಗೆ ಮೂನ್ನುರು, ತಿಂಗಳ ಹಾಲಿನ ಖರ್ಚು ಆರ್ನೂರು, ಕರೆಂಟ್ ಬಿಲ್ಲು, ದಿನವು ಶುದ್ದವಾದ ನೀರನ್ನು ಕುಡಿಯಲಿಕ್ಕೆಂದು ಫೀಲ್ಟರ ನೀರು, ಸಂತೆ, ಆವಾಗಾವಾಗ ಕೈ ಕೊಡುವ ಅಪ್ಪನ ಆರೋಗ್ಯದ ಖರ್ಚು ಅವು ಇವು ಅಂತೆಲ್ಲ ತಿಂಗಳ ಕೊನೆಗೆ ಪಕ್ಕದ ಮನೆಯವರ ಹತ್ತಿರ ಒಂಚೂರು ಕೈ ಸಾಲ, ಹೀಗೆ ಕುಂಟುತ್ತಾ ಬದುಕನ್ನು ಸಾಗಿಸುತ್ತಿರುವಾಗ ಇದೊಂದು ಕಷ್ಟ ಬಂದೆರಗಿಬಿಟ್ಟಿದೆ ನಮ್ಮ ಮೇಲೆ'  ಎನ್ನುತ್ತಾ ಎದ್ದು ನಿಂತನು. ಆವಾಗ ರಮೇಶನು ಓದಲು ತಂದಿದ್ದ ಪೇಪರ್ ಅಖಿಲ್ ನ ಕಾಲಡಿಯಲ್ಲಿ ಬಿತ್ತು ರಮೇಶನ ಕೈ ತಾಗಿ, ಅಖಿಲ್ ನು ಅದನ್ನು ಎತ್ತಿಡುವಾಗ ಒಂದು ಸುದ್ದಿಯನ್ನು ಓದಿ ಅವನ ಕಣ್ಣಲ್ಲಿ ಮಿಂಚೊಂದು ಮೂಡಿತು.

No comments:

Post a Comment