ಕಾಗದವನ್ನು ಓದಿ ಮುಗಿಸಿದ ನಂತರ ಅಖಿಲನು ದೇವಾಲಯದ ಕಲ್ಲುಗಂಬದಂತೆ ನಿಸ್ತೇಜಿತನಾಗಿ ನಿಂತುಬಿಟ್ಟನು. ಅಡಿಯಿಂದ ಮುಡಿಯವರೆಗೂ ಇರುವ ರಕ್ತನಾಳಗಳಲ್ಲಿನ ನೆತ್ತರು, ಗಡಿಗೆಯಲ್ಲಿದ್ದ ಸುಣ್ಣಕ್ಕೆ ನೀರನ್ನು ಸುರಿದಾಗ ಯಾವ ರೀತಿ ಕೊತಕೊತನೆ ಕುದಿಯುವುದೊ ಆ ರೀತಿಯಲ್ಲಿ ಕುದಿಯತೊಡಗಿತು, ಎದೆಯಲ್ಲಿ ಸಾವಿರಾರು ಅಶ್ವಗಳ ಓಟದ ಸದ್ದಿನಂತೆ ಎದೆಯು ಬಡೆದುಕೊಳ್ಳತೊಡಗಿತು, ಮೂಗಿನ ಹೊಳ್ಳೆಗಳಿಂದ ಬಾಲವ ತುಳಿಸಿಕೊಂಡ ಘಟಸರ್ಪವು ಬುಸುಗುಟ್ಟುವ ಹಾಗೆ ಉಸಿರಾಡತೊಡಗಿದನು, ಎರಡು ಕೈಗಳ ಮುಷ್ಠಿಯನ್ನು ಬಿಗಿದು, ಅಮ್ಮಾ...ಎಂದು ಜೋರಾಗಿ ಕೂಗಿಕೊಳ್ಳಬೇಕೆಂಬ ಸಂಕಟವನ್ನು ಗಂಟಲಿನ ಅರ್ಧದಲ್ಲೆ ಕತ್ತರಿಸಿಕೊಂಡುಬಿಟ್ಟನು. ಜೋರಾಗಿ ಕೂಗಿ ಆ ಸದ್ದಿಗೆ ಯಾರಾದರು ಬಂದರೆ...?. ಕಣ್ಣುಗಳಿಂದ ಅಶ್ರುಧಾರೆ ಒಂದೆ ಸಮನೆ ಸುರಿಯಲಾರಂಭಿಸಿತು, ತಲೆಯ ಕೂದಲನ್ನು ಕಿತ್ತಿಕೊಳ್ಳುವ ಹಾಗೆ ಜಗ್ಗುತ್ತಾ, ತಲೆಯನ್ನು ದೇವಾಲಯದ ಕಂಬಕ್ಕೆ ಗುದ್ದತೊಡಗಿದನು. ಗುದ್ದಿಕೊಳ್ಳುವ ರಭಸಕ್ಕೆ ಹಣೆಯಂಚಿನಲ್ಲಿ ಚಿಕ್ಕ ಗಾಯವಾಗಿ ನೆತ್ತರು ಜಿನುಗತೊಡಗಿತು. ಕಾದ ಕೆಂಡದ ಮೇಲೆ ನೀರನ್ನು ಚಿಮುಕಿಸಿ ಕೆಂಡವನ್ನು ಆರಿಸುವ ಹಾಗೆ ತನ್ನ ಮೇಲಿನ ಕೋಪವನ್ನು ತಾನೆ ನಿಯಂತ್ರಿಸಿಕೊಂಡು, ಅಳುತ್ತಾ ದಪ್ಪನೆ ರಮೇಶನ ಕಾಲಿನಡಿಯಲ್ಲಿ ಕುಳಿತುಬಿಟ್ಟನು.
'ಅಣ್ಣಾ... ಇಲ್ಲ...ಇಲ್ಲ ಈ ಹೊಲಸು ಬಾಯಿಯಿಂದ ನಿಮ್ಮನ್ನು ಅಣ್ಣಾ ಎಂದು ಕರೆಯುವ ಯೋಗ್ಯತೆಯು ನನಗಿಲ್ಲವಾಗಿದೆ. ಎಷ್ಟು ದುಡುಕಿಬಿಟ್ಟೆ ನಾನು, ಹಾಳಾದ್ದು ಈ ದುಡ್ಡು ಬಂದು ನನ್ನ ಬುದ್ದಿಯನ್ನು ಹಾಳುಗೆಡವಿದ್ದಲ್ಲದೆ, ನಿಮ್ಮನ್ನು ಕೊಂದು ಹಾಕುವ ಮಟ್ಟಕ್ಕೆ ಇಳಿದು ಬಿಟ್ಟಿತಲ್ಲ. ಈ ಪಾಪಕ್ಕೆ ಪ್ರಾಯಶ್ಚಿತ್ತ ವುಂಟೆ, ಗಂಗೆ ಯಮುನೆಗಳಲ್ಲಿ ಮುಳುಗೆದ್ದರು ತೊಳೆದು ಹೋಗುವುದೆ? ಹೌದು ಹೋಗಬಹುದು !!! ತಿನ್ನುವ ಅನ್ನದಲ್ಲಿ ವಿಷವನ್ನು ಕಲಿಸಿಕೊಟ್ಟ ಈ ಕೈಗಳಿಗಂಟಿದ ವಿಷದ ವಾಸನೆ ಹೋಗಬಹುದು!!!!, ಇವರನ್ನು ಕೊಲ್ಲಲು ಹರಿಸಿದ ಬೆವರಿನ ವಾಸನೆ ತೊಳೆದು ಹೋಗಬಹುದು,!!! ತೊಟ್ಟ ಈ ಅಂಗಿ, ಧೂಳು ಎಲ್ಲವು ತೊಳೆದು ಹೋಗಬಹುದು, ಆದರೆ....ಆದರೆ..ಈ ಮನಸ್ಸಿನಲ್ಲಿಗಾಗಲೆ ಪಾಪದ ಪ್ರಜ್ಞೆಯ ಬೀಜವೊಂದು ಮೊಳಕೆಯೊಡೆದು ಸಸಿಯಾಗಿಬಿಟ್ಟಿದೆಯಲ್ಲ, ಅದನ್ನು ಹೇಗೆ ಕಿತ್ತೊಗೆಯುವುದು. ಸಸಿಯಿದ್ದಾಗಲೆ ಇಷ್ಟೊಂದು ಕಾಡುತ್ತಿರುವ ಈ ಪಾಪವು ನಾಳೆ ಹೆಮ್ಮರವಾಗಿ ಬೆಳೆದುಬಿಟ್ಟರೆ..!!!!! ಅಬ್ಬಬ್ಬಾ..!!! ಸಹಿಸಿಕೊಳ್ಳಲಸಾಧ್ಯ. ಅಸಾಧ್ಯ, ಅಲ್ಲಾ, ತಾಯಿಯನ್ನು ಉಳಿಸಿಕೊಳ್ಳಲು ಹೋಗಿ ಮಾತೃ ಮನದ ಒಂದು ಮುಗ್ದ ಜೀವವನ್ನು ಬಲಿ ತೆಗೆದುಕೊಂಡುಬಿಟ್ಟೆನಲ್ಲ, ಕೇಳಿದ್ದರೆ ಕೊಡುತ್ತಿದ್ದರೊ ? ಇಲ್ಲವೆಂದ ಕಾರಣಕ್ಕೆ ತಾನೆ ನಾನು ಕೊಂದದ್ದು, ಮತ್ತೀಗ ನೀನು ಕೇಳದೇನೆ ಕೊಟ್ಟುಬಿಟ್ಟಿರುವೆಯಲ್ಲ, ಏನಾಗಿ ಹೋಯಿತು ನನ್ನ ಬುದ್ದಿಗೆ, ಎಲ್ಲೊ ತನ್ನ ಕಷ್ಟದಲ್ಲಿ ತಾನು ಒದ್ದಾಡುತ್ತಿದ್ದವನನ್ನು ಸಹಾಯ ಮಾಡುವೆ ಎಂಬ ನೆಪದಲ್ಲಿ ಕರೆದುಕೊಂಡು ಬಂದು ಬಲಿಯನ್ನು ತೆಗೆದುಕೊಂಡುಬಿಟ್ಟೆನಲ್ಲ,!!!! ಈಗೇನು ಮಾಡುವುದು, ಈಗೇನು ಮಾಡುವುದು, ಹ್ಞಾಂ..!! ಹಣವನ್ನೆಲ್ಲ ಅವರ ಮಗಳ ಆಪರೇಷನ್ ಗೆ ಕೊಟ್ಟು ನನ್ನ ಈ ಪಾಪವನ್ನು ಕಳೆದುಕೊಂಡು ಬಿಡಲೆ ? ಹೇಗೆ ? ಹೇಗೆ ಸಾಧ್ಯವಿಗ, ಅವರ ಮೊಬೈಲ್ ನಂಬರಾಗಲಿ, ವಿಳಾಸವಾಗಲಿ, ಕೆಲಸ ಮಾಡುತ್ತಿದ್ದ ಆಫೀಸಿನ ವಿಷಯವಾಗಲಿ ಒಂದು ಗೊತ್ತಿಲ್ಲ... ಹೋಗಲಿ, ನಮ್ಮೂರಿನಲ್ಲಿರುವ ಎಲ್ಲ ಆಸ್ಪತ್ರೆಗಳನ್ನು ಅಲೆದಾಡಿ ಅವರ ಮಗಳನ್ನು ಹುಡುಕುವ ಪ್ರಯತ್ನವೊಂದನ್ನು ಮಾಡಲೆ, ಹೌದು ಅದು ಸರಿ ಹಾಗೆ ಮಾಡಬಹುದು, ಆದರೆ...ಅವರು ಸಿಕ್ಕಾಗ ಏನಂತ ಹೇಳಿ ಹಣವನ್ನು ಕೊಡುವುದು ನಿಮ್ಮ ಮಗನನ್ನು ಕೊಂದು ಈ ಹಣವನ್ನು ತಂದಿರುವೆ ಎಂದು ಹೇಳಲೆ, ಅಥವಾ ನನ್ನ ಕೈಯಲ್ಲಿ ನಿಮಗೆ ಕೊಡು ಎಂದು ಹೇಳಿ ಕಳುಹಿಸಿದರೆಂದು ಹೇಳಲೆ, ಆಗದು...ನನ್ನಿಂದಾಗದು ನಾನು ಹೇಗೆ ಅವರನ್ನು ಎದುರಿಸಲು ಸಾಧ್ಯ ಇಂತಹ ಘೋರ ಕೃತ್ಯವನ್ನು ಮಾಡಿ.: ರಮೇಸನ ಕಾಲಡಿಯಿಂದ ಎದ್ದು ಕಣ್ಣೀರನ್ನು ಒರೆಸಿಕೊಂಡು ಏನು ಮಾಡಬೇಕೆಂದು ಅತ್ತಿತ್ತ ಅಲೆದಾಡತೊಡಗಿದನು.
'ಇಲ್ಲ ಸಧ್ಯಕ್ಕಂತು ನನ್ನ ತಾಯಿಯ ಪರಿಸ್ಥಿತಿ ಗಂಭೀರವಾಗಿದೆ, ರಮೇಶರು ನನ್ನ ತಾಯಿಯ ಉಳಿವಿಗಾಗಿ ಹಣವನ್ನು ಬಿಟ್ಟಿದ್ದಾರೆ, ಮೊದಲು ನನ್ನ ತಾಯಿಯನ್ನು ಉಳಿಸಿಕೊಳ್ಳೊಣ,
ನಂತರದಲ್ಲಿ ಮುಂದಿನ ಕೆಲಸ. ತಪ್ಪಂತು ನಡೆದುಹೋಗಿಬಿಟ್ಟಿದೆ. ಹೆಣವನ್ನು ಇದೆ ಸ್ಥಿತಿಯಲ್ಲಿ ಇಲ್ಲೆ ಬಿಟ್ಟು ಹೋಗಲೆ, ಬೇಡ...ಬೇಡ ಬೆಳಿಗ್ಗೆ ಯಾರಿಗಾದರೂ ಗೊತ್ತಾಗಿ, ಪೋಲಿಸರಿಗೆ ತಿಳಿಸಿ ಅವರು ಬಂದು ಹುಡುಕಾಡಿ ಎಲ್ಲ ತಲೆ ಬುಡಕ್ಕೆ ತಂದುಬಿಟ್ಟರೆ, ಹಾಗಾಗುವುದು ಬೇಡ. ಏನು ಮಾಡುವುದು ಈಗ ಎಂದುಕೊಳ್ಳುತ್ತಿರುವಾಗಲೆ, ಎದುರಿಗೆ ಇನ್ನೂ ಸಣ್ಣಗೆ ಉರಿಯಿತ್ತಿರುವ ಚಿತೆಯನ್ನು ಕಂಡು ಒಂದು ಉಪಾಯವು ಹೊಳೆಯಿತು ಅಖಿಲನಿಗೆ.
ರಮೇಶನ ಹೆಣವನ್ನು ಹೊತ್ತುಕೊಂಡು ಹೋಗಿ ಅದೆ ಉರಿಯುವ ಚಿತೆಯಲ್ಲಿ ಒಗೆದುಬಿಟ್ಟು, ಅಲ್ಲೆ ಪಕ್ಕದಲ್ಲಿ ಬಿಟ್ಟು ಹೋಗಿದ್ದ ಕಟ್ಟಿಗೆ ಮತ್ತು ಟೈರಗಳನ್ನು ಎತ್ತಿಕೊಂಡು ಶವದ ಮೇಲೆ ಒಗೆದು ಬೆಂಕಿಯನ್ನು ಹೆಚ್ಚಿಸಿದನು. ಮರಳಿ ದೇವಾಲಯಕ್ಕೆ ಬಂದು ಬಟ್ಟೆಗಳನ್ನು ಬದಲಾಯಿಸಿಕೊಂಡು, ಗಾಯಗೊಂಡ ಹಣೆಗೊಂದು ಕರ್ಚೀಪ್ ನ್ನು ಕಟ್ಟಿಕೊಂಡು, ಅಳಿದುಳಿದ ಸಾಮಾನುಗಳನ್ನು ತನ್ನ ಹಳೆಯ ಬಟ್ಟೆಗಳನ್ನು ರಮೇಶನ ಬ್ಯಾಗಿನಲ್ಲಿ ಹಾಕಿ, ಬೆಂಕಿಯಲ್ಲಿ ಒಗೆದು ಸಾಕ್ಷಿಗಳೆಲ್ಲವನ್ನು ನಾಶಪಡಿಸಿ, ಉರಿದು ಹೋಗುತ್ತಿದ್ದ ರಮೇಶನ ಚಿತೆಗೆ ನಮಸ್ಕರಿಸಿ, ತಾಯಿಯನ್ನು ಕಾಣಲು ಆಸ್ಪತ್ರೆಗೆ ಹೊರಡುವ ಸಲುವಾಗಿ ಮುಖ್ಯ ರಸ್ತೆಗೆ ಬಂದು ನಿಂತುಕೊಂಡನು.
Sunday, October 14, 2018
ಭಾಗ ೧೫
Subscribe to:
Post Comments (Atom)
No comments:
Post a Comment