Sunday, October 14, 2018

ಭಾಗ ೫

ತಲೆ ಮೇಲೆ ಕೈಹೊತ್ತುಕೊಂಡು ಅಳುತ್ತಾ ಕುಳಿತಿದ್ದ ರಮೇಶನನ್ನು ನೋಡಿ, ಸಮಾಧಾನಿಸಿ ಎಬ್ಬಿಸಿ ಪಾರ್ಕಿನ ಮಧ್ಯ ಭಾಗದಲ್ಲಿ ಕರೆದುಕೊಂಡು ಬಂದನು. ಅಲ್ಲಿ ಒಂದೆ ಒಂದು ಸರಕಾರದ ಲೈಟಿನ ಕಂಬವಿತ್ತು, ಅದರ ಕೆಳಗಡೆಯೆ ಒಂದು ಬೆಂಚಿತ್ತು, ಅದರ ಮೇಲೆ ರಮೇಶನನ್ನು ಕುಳ್ಳರಿಸಿ, ಅವನು ಊಣ್ಣಲಿಕ್ಕೆಂದು ಕೈಯನ್ನು ತೊಳೆದುಕೊಳ್ಳಲು ಒಂದು ಬಾಟಲಿಯಿಂದ ಅವನ ಕೈಗೆ ನೀರನ್ನು ಹಾಕಿ, ತಾನು ತೊಳೆದುಕೊಂಡು ಪಾರ್ಸಲ್ ನ್ನು ಬಿಚ್ಚಿ, ಗಬಗಬನೆ ಉಂಡು ಮುಗಿಸಿ ಕೈಯನ್ನು ತೊಳೆದುಕೊಂಡು ಒಂದು ಪುಲ್ ಬಾಟಲ್ ನೀರನ್ನು ಕುಡಿದು ಖಾಲಿ ಮಾಡಿದರು. ಊಟವಾದ ನಂತರ ಅಖಿಲನು ಎರಡು ಬೀಡಾಗಳನ್ನು ಕಟ್ಟಿಸಿಕೊಂಡು ಬಂದಿದ್ದನು, ರಮೇಶ ಅಭ್ಯಾಸವಿಲ್ಲವೆಂದರೂ ಕೇಳದೆ ಒತ್ತಾಯಪೂರ್ವಕವಾಗಿ ಅವನ ಬಾಯಿಗೆ ಬೀಡಾವನ್ನು ಹಾಕಿ ಅಗಿಯುತ್ತಾ ಕುಳಿತುಕೊಂಡರು.‌ಮುಂದೇನು ಎಂಬುವಂತೆ ರಮೇಶನು ಅಖಿಲನ ಮುಖವನ್ನು ನೋಡುತ್ತಾ ಕಣ್ಣಿನ ಹುಬ್ಬನ್ನು ಹಾರಿಸಿದನು. ರಮೇಶನು ಕೈ ಗಡಿಯಾರವನ್ನು ನೋಡಿಕೊಂಡನು ಆಗಲೆ ಒಂಬತ್ತು ಹನ್ನೆರಡಾಗಿತ್ತು, ಬೀಡಾವನ್ನು ಉಗುಳಿ,'ಇನ್ನೇನು ಬಿಟ್ ಪೋಲಿಸರು ಬರುವ ಹೊತ್ತು, ನಾವಿಬ್ಬರು ಇಲ್ಲೆ ಇದ್ದರೆ, ಯಾವೂರು, ಏನು ಕೆಲಸ, ಇಷ್ಟೊತ್ನಲ್ಲಿ ಇಲ್ಲೇನ ಮಾಡ್ತಿದ್ರೀ, ಆಧಾರ ಕಾರ್ಡ ತೋರ್ಸು, ಡ್ರೈವಿಂಗ್ ಲೈಸೆನ್ಸ್, ಗುರುತಿನ ಚೀಟಿ ಹೀಗೆ ನಾವು ಈ ಭೂಮಿ ಮೇಲೆ ಬದುಕಿದ್ದೇವೆ ಎಂದು ಗುರಿತಿಸುವ ಒಂದು ಪತ್ರವನ್ನು ಅವರಿಗೆ ತೋರಿಸಲೆಬೇಕು. ಇಲ್ದಿದ್ರೆ ಕೇಳಿದಷ್ಟು ಫೈನ್ ಕಟ್ಟ ಬೇಕಾಗುತ್ತದೆ, ಏಳಿ ಹೊರಡೋಣ' ಅಖಿಲನು ಎದ್ದು ನಿಂತು ತನ್ನ ಹಿಂಬದಿಗೆ ಹತ್ತಿದ್ದ ಧೂಳನ್ನು ಜಾಡಿಸಿಕೊಂಡು ಮುನ್ನಡೆದನು. ತಾಯಿಯನ್ನು ಹಿಂಬಾಲಿಸುವ ಆಕಳಿನ ಕರುವಿನಂತೆ ರಮೇಶನು ಅಖಿಲನನ್ನು ಹಿಂಬಾಲಿಸಿದನು. ಪಾರ್ಕಿನ ಗೇಟ್ ನಿಂದ ಮೊದಲು ಹೊರಬಂದ ಅಖಿಲನು ಅತ್ತಿತ್ತ ನೋಡಿ, ಪರ್ವಾಗಿಲ್ಲ ಬರಬಹುದು ಎಂದು ಕೈ ಸನ್ನೆಯ ಮೂಲಕ ತಿಳಿಸಿ ನಡೆದನು. ಸ್ವಲ್ಪ ದೂರ ಹೋದ ನಂತರ ರಸ್ತೆಯ ಪಕ್ಕದಲ್ಲಿ ಒಂದು ದೊಡ್ಡ ಆಲದ ಮರವಿತ್ತು, ಅದಕ್ಕೆ ಹತ್ತಿಕೊಂಡೆ ಒಂದು ಬೀದಿ ದೀಪವಿತ್ತು, ಅಖಿಲನು ಅತ್ತಿತ್ತ ನೋಡಿ, ಯಾರು ತಮ್ಮನ್ನು ಗಮನಿಸುತ್ತಿಲ್ಲ ಎಂಬ ಭರವಸೆ ಬಂದ ಮೇಲೆ ಮೆಲ್ಲಗೆ ಗಿಡದ ಹಿಂದೆ ಹೋಗಿ, ಅಲ್ಲಿಂದ ರಮೇಶನಿಗೆ ಬರಲು ಸನ್ನೆಯನ್ನು ಮಾಡಿದನು. ರಮೇಶನು ದಾರಿಯಲ್ಲಿ ಆಗೊಬ್ಬ ಈಗೊಬ್ಬರಷ್ಟೆ ಅಡ್ಡಾತಿದ್ದದವರ ಅರಿವಿಗೆ ಬಾರದಂತೆ ಅವನು ಗಿಡದ ಹಿಂಬದಿಯನ್ನು ಸೇರಿದನು.
'ಏನು ನಿರ್ಣಯವನ್ನು ಮಾಡಿದೆ ಮಿತ್ರ' ಈ ಸಲ ರಮೇಶನೆ ಕುತೂಹಲದಿಂದ ಮಾತನ್ನು ಪ್ರಾರಂಭಿಸಿದನು.
'ನಿಮ್ಮೆಲ್ಲ ಪ್ರಶ್ನೆಗಳಿಗೆ ಮತ್ತು ನಮ್ಮ ಕಷ್ಟಕ್ಕೆ ಒಂದು ಪರಿಹಾರವನ್ನು ಕಂಡುಕೊಂಡಿರುವೆ, ನೀವು ಧೈರ್ಯದಿಂದ ಒಪ್ಪಿಕೊಂಡರೆ ಮಾತ್ರ ಈ ಕೆಲಸ ಸಾಧ್ಯ, ಜಯ ಮಾತ್ರ ನಮ್ಮದೆಯಾಗುತ್ತದೆ:'
ಕೌತುಕದೊಂದಿಗೆ ' ಹೌದಾ..? ಸರಿ ಹಾಗಿದ್ರೆ ಹೇಳು'
ಎರಡು ನಿಮಿಷ ಮೌನವಾದ ಅಖಿಲನು ಧೀರ್ಘವಾದ ಉಸಿರೊಂದನ್ನು ಹೊರಹಾಕುತ್ತಾ,
'ನೋಡಿ ಸರ್ ನಿಮ್ಮ ಮೊದಲ ಪ್ರಶ್ನೆ ಸಿಕ್ಕಿ ಹಾಕಿಕೊಂಡರೆ,'
ಭಯ ಮಿಶ್ರಿತ ಧ್ವನಿಯಿಂದ 'ಹೌದು ಸಿಕ್ಕಿಹಾಕಿಕೊಂಡರೆ?'
'ಮೊದಲಿಗೆ ನೀವು ಸಿಕ್ಕು ಬಿದ್ದರೆ ಪೋಲಿಸರಿಗೆ ನಿಮ್ಮ ಮಗಳ ಅನಾರೋಗ್ಯದ ಸ್ಥಿತಿಯನ್ನು ವಿವರಿಸಿ,ಆರ್ಥಿಕ ದುರ್ಬಲತೆಯ ಬಗ್ಗೆ, ನಿಮ್ಮ ಮಗಳನ್ನು ಉಳಿಸಿಕೊಳ್ಳಲು ನೀವು ಪಡುತ್ತಿರುವ ಮತ್ತು ಪಟ್ಟ ಕಷ್ಟವನ್ನೇಲ್ಲ ಹೇಳಿ, ಹಾಗೆ ಹೇಳ್ತಾ ಹೇಳ್ತಾನೆ ಎಲ್ಲಾ ತಪ್ಪುಗಳನ್ನು ನನ್ನ ಮೇಲೆಯೆ ಹಾಕಿಬಿಡಿ'
ಭಯದಿಂದ 'ಅಂದ್ರೆ.. ನನಗರ್ಥವಾಗಲಿಲ್ಲ'
' ವೆರಿ ಸಿಂಪಲ್ ಸರ್, ಪೋಲಿಸರಿಗೆ ಹೇಳಿ ನಿಮ್ಮ ಅಸಹಾಯಕತೆಯನ್ನು ಬಳಸಿಕೊಂಡು ನಾನು ನಿಮ್ಮನ್ನು ಈ ಕಳ್ಳತನದ ಕೃತ್ಯಕ್ಕೆ ಕೈ ಹಾಕಲಿಕ್ಕೆ ಪ್ರೇರೆಪಿಸಿದೆ ಎಂದು, :
ಉದ್ವೇಗದಿಂದ
'ಅಂದರೆ ಎಲ್ಲ ತಪ್ಪುಗಳನ್ನು ನಿನ್ನ ಮೇಲೆ ಹಾಕಿಬಿಡಲೆ, ಇಲ್ಲ..ಇಲ್ಲ ಇದಕ್ಕೆ ನನ್ನ ಮನಸ್ಸಾಕ್ಷಿ ಒಪ್ಪದು' ತಲೆಯಾಡಿಸುತ್ತ
' ಹಾಗನ್ನಬೇಡಿ ಸರ್, ಹೀಗೆ ಹೇಳಿದರೆ ನಿಮಗೆ ಶಿಕ್ಷೆ ಕಡಿಮೆಯಾಗುತ್ತದೆ, ಮನೆಯಲ್ಲಿ ಇರುವ ವಿಚಾರ ತಾನೆ ತನಿಖೆಯಿಂದ ಅವರಿಗೂ ಎಲ್ಲ ಗೊತ್ತಾಗುತ್ತದೆ, ಅಲ್ಲದೆ ನಿಮ್ಮದು ಸಂಸಾರ ಭಾರ ದೊಡ್ಡದು, ಒಂದು ವೇಳೆ ನಾನೆನಾದರು ಸಿಕ್ಕಿ ಹಾಕಿಕೊಂಡರೆ, ಚಿಂತೆನೆ ಇಲ್ಲ ನಾನು ನಿಮ್ಮ ಹೆಸರನ್ನು ಹೇಳುವುದೆ ಇಲ್ಲ'
ಕಣ್ಣಿನಲ್ಲಿ ನೀರನ್ನು ತುಂಬಿಕೊಳ್ಳುತ್ತಾ ' ನಿನ್ನ ತಾಯಿಯ ಗತಿಯೇನು ಮಿತ್ರ'
'ಅವರ ಚಿಂತೆ ನಿಮಗೆ ಬೇಡ, ಡಾಕ್ಟ್ರೇ ಹೇಳಿದ್ದಾರೆ, ಆಪರೇಷನ್ ಮಾಡಿದರೂ ಬದುಕಬಹುದು, ಬದುಕದೆ ಇರಬಹುದು, ಇದು ಒಂದು ಪ್ರಯತ್ನವಷ್ಟೆ, ಹಾಗಾಗಿ ನೀವು ನನ್ನ ತಾಯಿಯ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೆ ಇಲ್ಲ'
ಅಖಿಲನ ಎರಡು ಕೈಗಳನ್ನು ಹಿಡಿದುಕೊಂಡು ಗಳಗಳನೆ ಅಳತೊಡಗಿದನು ರಮೇಶ
' ಇನ್ನೊಂದು ಮುಖ್ಯ ವಿಚಾರ ಸರ್, ನಿಮ್ಮ ಮನೆಯ ವಿಳಾಸ ಹೋಗಲಿ ನಿಮ್ಮ ಪೋನ್ ನಂ ಕೂಡಾ ನನಗೆ ಗೊತ್ತಾಗಬಾರದು ನಿಮಗೂ ಸಹ, ಕಳ್ಳತನವು ಯಶಸ್ವಿಯಾದ ನಂತರ ನಮ್ಮಿಬ್ಬರ ಪಾಲಿನ ಹಣವನ್ನು ತೆಗೆದುಕೊಂಡು ಈ ಜನ್ಮದಲ್ಲಿ ಮತ್ತೊಮ್ಮೆ ಮುಖವನ್ನು ನೋಡಿಕೊಳ್ಳದಂತೆ ದೂರ ಹೋಗಿ ಬಿಡೊಣ ನಿಮಗೆ ಕಷ್ಟವಾಗಬಹುದು ನಾನು ನನ್ನ ತಾಯಿಯನ್ನು ಕರೆದುಕೊಂಡು ಬಹೂ ದೂರ ಹೋಗಿ ಬಿಡುತ್ತೇನೆ. ಇದರಿಂದ ಇಬ್ಬರಿಗೂ ಕ್ಷೇಮ, ಇಬ್ಬರಲ್ಲಿ ಒಬ್ಬರು ಪೋಲಿಸರ ಕೈಗೆ ಸಿಕ್ಕರು ಆಪತ್ತು ಅಲ್ವೆ ಅದಕ್ಕೆ, ನಾನೇದರು ಅವರ ಕೈಗೆ ಸಿಕ್ಕರೆ ನಿಮ್ಮ ಹೆಸರನ್ನೆ ಹೇಳುವುದಿಲ್ಲ, ಅಲ್ಲಿಯ ತನಕ ನಾನು ಜೀವಂತವಾಗಿಯು ಇರುವುದಿಲ್ಲ, ನೀವೆನಾದರು ಸಿಕ್ಕಿ ಹಾಕಿಕೊಂಡರು ತಪ್ಪನ್ನೆಲ್ಲ ನನ್ನ ಮೇಲೆ ಹೊರಿಸಿಕೊಂಡು ನಿಮ್ಮನ್ನು ಬಿಡುಗಡೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.'
ಶ್ರೀಕೃಷ್ಣ ಪರಮಾತ್ಮನು ರಣರಂಗದಲ್ಲಿ ಬಿಲ್ಲನ್ನು ಕೆಳಗಿಟ್ಟು ಯುದ್ಧವನ್ನು ಮಾಡಲಾರೆ ಎಂದ ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿ, ಭಗವದ್ಗೀತೆಯನ್ನು ಬೋಧಿಸಿ, ಹೋರಾಡಲು ಅಣಿಗೊಳಿಸಿದ ಮಹಾತ್ಮನಂತೆ ಅಖಿಲನು ರಮೇಶನಿಗೆ ಕಂಡನು. ಅವನ ಮಾತು ಮತ್ತು ಪ್ರೌಢತೆಯನ್ನು ಕಂಡು ಮೂಕವಿಸ್ಮಿತನಾದನು.
ಸಾವರಿಸಿಕೊಂಡು 'ಮತ್ತೆ ಕಳ್ಳತನಕ್ಕೆ ' ಮಾರಿಯನ್ನು ಒತ್ತಾಗಿ ಸುಟ್ಟ ಆಮ್ಲೆಟ್ ನಂತೆ ಮಾಡಿಕೊಂಡು,
' ಸರಿಯಾಗಿ ಗಮನವಿಟ್ಟು ಕೇಳಿ, ಮೊದಲಿಗೆ ನಮ್ಮಿಬ್ಬರಿಗೂ ಒಂದು ಬೈಕ್ ಬೇಕು,
'ಹೌದು, ನನ್ನ ಬಳಿಯಿಲ್ಲ, ಇದ್ದ ಒಂದು ಬೈಕು ಸಾಲಗಾರನ ಕಾಪೌಂಡನಲ್ಲಿ ನಿಂತಿದೆ'
'ಬೇಡ..ಬೇಡ ನಮ್ಮ ಬೈಕನ್ನು ಬಳಸಿಕೊಳ್ಳುವುದು ಅದು ಇಂತಹ ಕೆಲಸಕ್ಕೆ ಬಹಳ ಅಪಾಯಕಾರಿ, ನಮ್ಮ ವಠಾರದ ಮೂಲೆಯ ಮನೆಯಲ್ಲಿ ಒಬ್ಬ ಮಾಸ್ಟರ್ ಕೀಯನ್ನು ಮಾಡಿಕೊಡುತ್ತಾನೆ, ಇಂದು ರಾತ್ರಿ ಅವನ ಬಳಿ ಒಂದೆರಡು ಕೀ ಗಳನ್ನು ಮಾಡಿಸಿಕೊಂಡು ಬರುತ್ತೇನೆ.ಎರಡನೇದು, ಆ ಬ್ಯಾಂಕಿಗೆ ಬರುವ ಅನತಿ ದೂರದಲ್ಲಿ ಪ್ರತಿಷ್ಠಿತ ಒಂದು ಕಾಲೇಜ್ ಇದೆ, ಕಾಲೇಜ್ ನಾಕು ಗಂಟೆಗೆಲ್ಲ ಹೀಗೆ ಬಿಡುತ್ತದೆ, ಅಷ್ಟರೊಳಗಾಗಿ‌ ಅಂದರೆ ಮೂರು ಮೂವತ್ತಕ್ಕೆ ನಾನೊಂದು ಬೈಕನ್ನು ಎಗರಿಸಿಕೊಂಡು ಬರುತ್ತೇನೆ.'
'ಅಲಿ ಸೆಕ್ಯುರಿಟಿ ಗಾರ್ಡ ಇರಲ್ವ..?'
'ಗುಡ್ ತಿಂಕಿಂಗ್, ಆ ಸಮಯದಲ್ಲಿ ನೀವು ಅವನ ಹತ್ತಿರ ಹೋಗಿ ಒಂದು ಅಡ್ರೆಸ್ ನ್ನು ಕೇಳುತ್ತಾ ಅವನ ಗಮನವನ್ನು ಬೇರೆ ಕಡೆ ಹರಿಸಬೇಕು, ಆಗ ನಾನು ಒಳಗಡೆ ಹೋಗಿ ಬೈಕನ್ನು ಕದ್ದುಕೊಂಡು ಬರುವೆ, ಮೂರನೇಯದಾಗಿ ಇಬ್ಬರು ಹೆಲ್ಮೆಟ್ ನ್ನು ಧರಿಸಿಕೊಂಡು, ನಾವು ಬ್ಯಾಂಕಿನ ಎದುರಲ್ಲೆ ದರೋಡೆ ಮಾಡೋದು ಬೇಡ, ಆ ಪಾರ್ಟಿ ವಾಹನದ ಮುಂದೆ ಒಂದು ಹಲಗೆಗೆ ಚಿಕ್ಕ ಮೊಳೆಯನ್ನು ಬಡಿದು ಗಾಲಿಯ ಸನಿಹದಲ್ಲಿ ಒಗಿಯೋಣ, ಅದು ಸ್ವಲ್ಪ‌ದೂರ ಹೋಗಿ ನಡು ರಸ್ತೆಯಲ್ಲಿ ಪಂಕ್ಚರ ಆಗಿ ನಿಲ್ಲುತ್ತದೆ, ಆಗ ಅವನು ಕಾರಿನಿಂದ ಇಳಿದು ಪಂಕ್ಚರ್ ಆದ ಗಾಲಿಯನ್ನು ನೋಡುವ ಸಮಯದಲ್ಲಿ ನೀವು ಹೆಲ್ಮಟ್ ಹಾಕಿಕೊಂಡೆ ಸಹಾಯ ಏನಾದ್ರು ಬೇಕಾ ಎಂದು ಕೇಳುತ್ತಾ ಅವನ ಗಮನವನ್ನು ಐದು ನಿಮಿಷ ಬೇರೆ ಕಡೆ ಸೆಳೆಯುವ ಹಾಗೆ ಮಾಡಿದರೆ, ನಾನು ಕಾರಿನಿಂದ ಹಣವನ್ನು ತೆಗೆದುಕೊಂಡು ಓಡಿ ಬಿಡುತ್ತೇನೆ, ಅವನು ಗಮನಿಸಿಯೆ ಗಮನಿಸುತ್ತಾನೆ, ಆಗ ನೀವು ಅವನಿಗೆ ಒಂದು ಜಾಡಿಸಿ ಒದೆಯನ್ನೊಂದು ಒದ್ದು ನನ್ನ ಹತ್ತಿರ ಗಾಡಿಯನ್ನು ಓಡಿಸಿಕೊಂಡು ಬನ್ನಿ, ನಾನು ಹತ್ತಿದ ತಕ್ಷಣವೆ ಗಾಡಿಯನ್ನು ಒಂದೆ ಸ್ಪೀಡಿನಲ್ಲಿ ಓಡಿಸಿಬಿಡಿ, ಅಷ್ಟೊತ್ತಿಗಾಗಲೆ ಕಾಲೇಜ್ ಬಿಟ್ಟಿರುವುದರಿಂದ, ರಸ್ತೆಯ ಟ್ರಾಫಿಕ್ ಜಾಮ್ ಹೆಚ್ಚಾಗಿರುತ್ತದೆ, ಎರಡು ಕ್ರಾಸ್ ದಾಟಿದ ನಂತರ ಯಾವುದಾದರೊಂದು ಸಿಸಿ ಟಿವಿಯನ್ನು ಅಳವಡಿಸದೆ ಇರುವ ಅಂಗಡಿಯ ಮುಂದೆ ನಿಲ್ಲಿಸಿ, ಒಂದು ಆಟೋವನ್ನು ಮಾಡಿಕೊಂಡು ಪದ್ಮಾ ಟಾಕೀಜ್ ಗೆ ಹೋಗೊಣ ಅಲ್ಲಿ ಪುನೀತ್ ರಾಜಕುಮಾರನ ರಾಜಕುಮಾರ ಚಿತ್ರ ಫುಲ್ ರಷ್ ಆಗಿರುತ್ತೆ, ಬ್ಲಾಕ್‌ ಟಿಕೆಟನ್ನಾದ್ರು ತೆಗೆದುಕೊಂಡು ಥಿಯೆಟರ್ ನಲ್ಲಿ ಕೂರೋಣ, ಚಿತ್ರ ಪ್ರಾರಂಭವಾಗಿ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಈ ಹಾಡು ಪ್ರಾರಂಭವಾದಾಗ ಮೆಲ್ಲಗೆ ಟಾಯ್ಲೆಟ್ ರೂಂ ಗೆ ಹೋಗಿ ಹಣವನ್ನು ಎಣಿಸಿಕೊಂಡು ಮೇಲಿನ ಶರ್ಟಗಳನ್ನು ಕಳಚಿ ಬೇರೆ ಶರ್ಟುಗಳನ್ನು ಹಾಕಿಕೊಂಡು, ಹಣೆಗೊಂದು ಅರ್ಧ ಮುಚ್ವುವಷ್ಟು ಕ್ಯಾಪ್ ಗಳನ್ನು ಹಾಕಿಕೊಂಡು ಮತ್ತೆ ಚಲನಚಿತ್ರ ನೊಡೋಣ ಸಿನಿಮಾ ಮುಗಿದ ನಂತರ ಜನರ ಗದ್ದಲದಲ್ಲಿ ಸೇರಿಕೊಂಡು ಹೊರಗಡೆ ಬಂದು ಒಬ್ಬರ ಮುಖವನ್ನು ಒಬ್ಬರು ನೋಡದಂತೆ ಹೊರಟು ಬಿಡೋಣ.'
' ಸರಿ ಪ್ಲ್ಯಾನ್ ಏನೊ ಚೆನ್ನಾಗಿದೆ, ಆದ್ರೆ ಅಷ್ಟು ದುಡ್ಡನ್ನು ಡ್ರಾ ಮಾಡಿಕೊಂಡು ನಮ್ಮ ಸಮಯಕ್ಕೆ ಅವನು ಬರಬೇಕಲ್ಲ,'
' ನಾನು ಊಟವನ್ನು ಪಾರ್ಸಲ್ ತರಲು ಹೋದಾಗ ನನ್ನ ಹಿಂದೆ ಕುಳಿತಿದ್ದಂತ ವ್ಯಕ್ತಿಗಳು ನಾಳೆ ನಾಲ್ಕು ಗಂಟೆಯ ಸುಮಾರಿಗೆ ಇಪ್ಪತ್ತು ಲಕ್ಷ ರೂಪಾಯಿಯನ್ನು ವಿತ್ ಡ್ರಾ ಮಾಡಿಕೊಳ್ಳುವ ವಿಷಯವನ್ನು ಮಾತನಾಡಿಕೊಳ್ಳುತ್ತಿದ್ದರು, ಅವರನ್ನೆ ಟಾರ್ಗೆಟ್ ಮಾಡಿದರಾಯ್ತು'
'ಅವರೆ ಅಂತ ಹೇಗೆ ಗುರುತನ್ನು ಹಿಡಿಯುವೆ, ಸರಿ ಅವರು ನಾಳೆನೆ ಬರುತ್ತಾರೆಂಬುದು ಏನು ಗ್ಯಾರಂಟಿ, ಅಲ್ಲದೆ ಬ್ಯಾಂಕಿನವರು ಒಂದು ದಿನಕ್ಕೆ ಒಬ್ಬನಿಗೆ ಅಬ್ಬಬ್ಬಾ ಎಂದರೆ ನಾಲ್ಕು ಲಕ್ಷದವರೆಗೆ ಕೊಡಬಹುದು ಇಪ್ಪತ್ತು ಲಕ್ಷವನ್ನು ಅದು ಹೇಗೆ ಅವರು ಡ್ರಾ ಮಾಡಿಕೊಂಡು ಬರುತ್ತಾರೆ,'
'ಇದು ಹಣವುಳ್ಳವರ ಆಟ ಸರ್, ಇದೊಂದು ರೀತಿ ನಮಗೆ ಪ್ಲಸ್ ಪಾಯಿಂಟ ಇದ್ಹಂಗೆ'
'ಅದ್ಹೇಗೆ..?'
'ಕಾನೂನಿನ ಪ್ರಕಾರ ನೀವು ಹೇಳಿದ ಹಾಗೆ ನಾಲ್ಕು ಲಕ್ಷವನ್ನಷ್ಟೆ, ಡ್ರಾ ಮಾಡಿಕೊಳ್ಳಬೇಕು, ನಾಳೆ ನಾವು ಅವರ ಹಣವನ್ನು ಲಪಟಾಯಿಸಿದ ನಂತರ ಅವರು ಪೋಲಿಸ್ ಸ್ಟೇಶನ್ ನಲ್ಲಿ ಇಪ್ಪತ್ತು ಲಕ್ಷ ಅಂತ ಕೇಸನ್ನು ಹಾಕಲು ಆಗುವುದಿಲ್ಲ. ಇನ್ನೂ ಅವರ ಮುಖವನ್ನು ಗುರುತು ಹಿಡಿಯಲೆಂದೆ ಅವರಿಬ್ಬರು ಕುಳಿತಿದ್ದನ್ನು ವಿಡಿಯೊ ಮಾಡಿಕೊಂಡು ಬಂದಿರುವೆ ನೋಡಿಲ್ಲಿ' ತಾನು ಹೋಟೆಲ್ ನಲ್ಲಿ ಮಾಡಿಕೊಂಡು ಬಂದ ವಿಡಿಯೊವನ್ನು ತೋರಿಸಿದನು.
' ಒಂದು ವೇಳೆ ಇವರಿಬ್ಬರೂ ಬರದೆ ಬೇರೆಯವರನ್ನು ಕಳಿಸಿಕೊಟ್ಟರೆ ?'
' ಸಾಧ್ಯವಿಲ್ಲ ಅಷ್ಟೊಂದು ಹಣವನ್ನು ಮೂರನೆ ವ್ಯಕ್ತಿಯ ಕೈಯಿಂದ ಅವರು ತರಿಸಿಕೊಳ್ಳುವುದಿಲ್ಲ ಅಷ್ಟಕ್ಕು ಇದು ಅವನ ಕಮೀಷನ್ ಹಣ, ಮೇಲಾಗಿ ತುಂಬಾ ರಿಸ್ಕ್ '
' ಒಂದು ವೇಳೆ ಬೆಳಿಗ್ಗೆ ಬಂದರೆ,'
' ಇಲ್ಲ ಬೆಳಿಗ್ಗೆ ಸಾಕಷ್ಟು ಗದ್ದಲವಿರುವುದರಿಂದ ಅದು ಆಗಲ್ಲ'
'ಅದೇ ಬ್ಯಾಂಕಿಗೆ ಬರುತ್ತಾನೆ ಎಂಬುದಕ್ಕೆ ಏನು ಸಾಕ್ಷಿ'
' ನಮ್ಮೂರಿನಲ್ಲಿ ಈಗ ಒಂದೆ ದಿನಕ್ಕೆ ಅಷ್ಟೊಂದು ಹಣವನ್ನು ಲೆಕ್ಕವಿಡದೆ ಕೊಡುವ ಬ್ಯಾಂಕ ಅಂದರೆ ಅದೊಂದೆ,'
ಇಷ್ಟೇಲ್ಲ ಪ್ಲ್ಯಾನ ಮಾಡಿಕೊಂಡರು, ರಮೇಶನಿಗೆ ಯಾಕೊ ಸಮಾಧಾನಗುತ್ತಿಲ್ಲ,  ಏನೊ ಒಂಥರಾ ಚಡಪಡಿಕೆ, ಅವನ ಸ್ಥಿತಿಯನ್ನು ನೋಡಿ ಅಖಿಲನು ' ನೋಡಿ ಸರ್ ನೀವು ಬೆಳಿಗ್ಗೆ ಮನೆಯನ್ನು ಬಿಡಬೇಕಾದರೆ, ಎಂದಿನಂತೆಯೆ ಆಫೀಸ್ಸಿಗೆ ಹೊರಡಿ ನಿಮ್ಮ ಮೊಬೈಲ್ ನ್ನು  ಬೇಕೆಂದೆ ಮನೆಯಲ್ಲಿಯೆ ಬಿಟ್ಟು ಬನ್ನಿ,  ಬೆಳಿಗ್ಗೆ ಹನ್ನೊಂದು ಗಂಟೆಗೆ ಬ್ಯಾಂಕಿನ ಹತ್ತಿರ ಬನ್ನಿ, ಅಲ್ಲಿ ಪಕ್ಕದಲ್ಲೊಂದು ಸಣ್ಣ ಬೀಡಿ ಡಬ್ಬಾ ಅಂಗಡಿಯಿದೆ, ಅವನಲ್ಲಿ ಅಂದಿನ ಪೇಪರನ್ನು ತೆಗೆದುಕೊಂಡು ಓದುತ್ತಿರುವರಂತೆ ನಾಟಕ ಮಾಡುತ್ತಾ, ಬ್ಯಾಂಕನ್ನು ವಾಚ್ ಮಾಡ್ತಾ ಇರಿ, ನೀವು ಹೇಳಿದ ಹಾಗೆ ಅವನು ಬೆಳಿಗ್ಗೆ ಬಂದರೆ, ನಾವು ಈ ಛಾನ್ಸನ್ನು ಮಿಸ್ ಮಾಡಿಕೊಳ್ಳುವ ಮಾತೆ ಇಲ್ಲ, ಹಾಗೆನಾದರು ಅವನು ಕಂಡರೆ, ತಗೊಳ್ಳಿ ಇದು ನನ್ನ ಮೊಬೈಲ್ ನಂ, ಆ ಬಿಡಾ ಅಂಗಡಿಯಲ್ಲಿ ಒಂದು ಕ್ವಾಯಿನ್ ಬಾಕ್ಸ ಇದೆ, ಅಲ್ಲಿಂದ ನೀವು ಕರೆಮಾಡಿ, ಹೊತ್ತಾಯ್ತು ಎನ್ನಿ ನನಗಷ್ಟೆ ಸಾಕು, ಅರ್ಥವಾಯ್ತಾ ಸರ್'
' ಅಲ್ಲ ನನ್ನ ಮೊಬೈಲನ್ನು ತೆಗೆದುಕೊಂಡು ಬರುತ್ತಿದ್ದೇನಲ್ಲ' ಎಂದನು ರಮೇಶನು ಉತ್ಸುಕನಾಗಿ
' ಬೇಡ ಸರ್ ನಿಮ್ಮನ್ನು ಯಾವುದೇ ರೀತಿಯ ರಿಸ್ಕಿನಲ್ಲಿ ಸಿಲುಕಿಸಲು ನನಗಿಷ್ಟವಿಲ್ಲ' ಎನ್ನುತ್ತಾ ಟೈಂನ್ನು ನೋಡಿಕೊಂಡನು, ಹತ್ತು ಮೂವತ್ತಾಗಿತ್ತು, 'ಸರಿ ನೀವಿನ್ನು ಹೊರಡಿ, ಬೆಳಿಗ್ಗೆ ಮಾತ್ರ ಮರೆಯದಿರಿ, ನನಗೀ ರಾತ್ರಿ ಬಹಳಷ್ಟು ಕೆಲಸಗಳಿವೆ'
'ಒಂದು ವೇಳೆ ನಾನು ಬರದೆ ಇದ್ದರೆ' ವ್ಯಂಗ್ಯದ ರೀತಿಯಲ್ಲಿ ಪ್ರಶ್ನೆಯನ್ನು ಕೇಳಿದನು.
' ಒಂದು ಕ್ಷಣ ಮೌನವಾದ ಅಖಿಲನು ' ನಿಮ್ಮ ಕೈಯಲ್ಲಿ ನನ್ನ ನಂಬರ ಇದೆಯಲ್ಲ,'
'ಹ್ಞೂಂ'
'ನಿಮ್ಮ ಮಗಳನ್ನು ಮಣ್ಣಿಗೆ ಕೊಡುವಾಗ ತಪ್ಪದೆ ನನ್ನನ್ನು ಕರೆಯಲು ಮರೆಯದಿರಿ' ಎಂದು ರಮೇಶನ ಮರು ಮಾತಿಗೂ ಕಾಯದೆ, ಗಿಡದ ಮರೆಯಿಂದ ಹೊರಬಂದು ಕತ್ತಲನ್ನೆ ಹೊದ್ದು ಮಲಗಿದ್ದ ರಸ್ತೆಯಲ್ಲಿ ಒಮ್ಮೆ ಹೊರಳಿಯು ನೋಡದಂತೆ ನಡೆದು ಮರೆಯಾಗಿಬಿಟ್ಟನು. ಅಖಿಲನ ಮಾತನ್ನು ಕೇಳಿ ಕ್ಷಣ ಗರಬಡಿದವನಂತೆ ನಿಂತುಬಿಟ್ಟನು, ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕಂಡು ಬೀದಿ ನಾಯಿಗಳು ಬೌ.....ಬೌ.. ಎನ್ನಲು ಶುರುಮಾಡಿದವು, ಗಿಡದ ಮರೆಯಿಂದ ಹೊರಬಂದ ರಮೇಶನು ಜಗದ ಅರಿವೆ ಇಲ್ಲದಂತೆ ಭಾರವಾದ ಹೆಜ್ಜೆಗಳನ್ನು ಹಾಕುತ್ತ ಮುಖ್ಯ ರಸ್ತೆಗೆ ಬಂದು ಆಟೋವನ್ನು ಹತ್ತಿಕೊಂಡು ಮನೆಯತ್ತ ಹೊರಟನು.

No comments:

Post a Comment