ಒಂದೆ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ...ನಿನ್ನ ನೋವ ಜೊತೆಯಲ್ಲಿ ನಾನಿರುವೆ ನಿನ್ನಾಣೆ... ಈ ಹಾಡಿನ ರಿಂಗಟೋನ್ ಇದ್ದ ರಮೇಶನ ಮೊಬೈಲು ಒಂದೆ ಸಮನೆ ಹೊಡೆದುಕೊಳ್ಳಲಾರಂಬಿಸಿತ್ತು. ರಾತ್ರಿಯ ಸುಖ ಮತ್ತು ತಡವಾಗಿ ಮಲಗಿದುದರ ಪರಿಣಾಮವಾಗಿ ಕಣ್ಣೆ ತೆರೆಯಲು ಬರುತ್ತಿರಲಿಲ್ಲ ರಮೇಶನಿಗೆ. ಪದೆ ಪದೆ ಪೋನು ರಿಂಗಾಗತೊಡಗಿದ್ದರಿಂದ, ಮಸುಕಿದ್ದ ಹೊದಿಕೆಯನ್ನು ತೆಗೆದು ಸಮಯವನ್ನು ನೋಡಿದನು ಆರು ಕಾಲಾಗಿತ್ತು, ಪಕ್ಕದಲ್ಲಿ ನೋಡಿದರೆ ಭಾಗ್ಯಳು ಅದಾಗಲೆ ಎದ್ದು ಸ್ನಾನಕ್ಕೆ ಹೋದ ಹಾಗಿತ್ತು. 'ಇಷ್ಟೊಂದು ಬೆಳಂಬೆಳಗ್ಗೆ ಯಾರಪ್ಪ, ' ಎಂದು ಗೊಣಗಿಕೊಳ್ಳುತ್ತಲೆ ಪೋನ್ ನ್ನು ಕೈಗೆತ್ತಿಕೊಂಡು ನೋಡಿದಾಗ ಅಪ್ಪನ ನಂ, ದಿಗ್ಗನೆ ಎದ್ದು ಕುಳಿತು ರಿಸೀವ್ ಮಾಡಿ' ಹ್ಞಾಂ ಹೇಳಪ್ಪ,' ಎಂದು ಉದ್ವೇಗದಿಂದ ಕೇಳತೊಡಗಿದನು, ಅಷ್ಟರಲ್ಲಿ ಸೌಭಾಗ್ಯಳು ತಲೆ ಸ್ನಾನವನ್ನು ಮುಗಿಸಿ, ಟವಲ್ ನಿಂದ ತಲೆಯನ್ನು ಒರೆಸಿಕೊಳ್ಳುತ್ತಾ ಹೊರಗೆ ಬಂದು ರಮೇಶನ ಮುಂದೆ ಬಂದು ನಿಂತಳು. ಪೋನಿನಲ್ಲಿ ಮಾತನಾಡುತ್ತಿದ್ದ ರಮೇಶನ ಮುಖವು ಬಿಳಚಿಕೊಂಡದ್ದನ್ನು ನೋಡಿ ಅವಳಿಗೂ ಭಯವಾಗಿ, ಗಂಡನ ಪಕ್ಕದಲ್ಲಿ ಬಂದು ಕುಳಿತುಕೊಂಡಳು. ಎರಡು ನಿಮಿಷದ ನಂತರ ಪೋನನ್ನು ಕೆಳಗಿಟ್ಟ ರಮೇಶನು ಏನು ತಿಳಿಯದವನಂತಾಗಿ ಎದುರಿಗಿನ ಬಿಳಿ ಗೋಡೆಯನ್ನು ನೋಡುತ್ತ ಕುಳಿತುಬಿಟ್ಟನು. ಮೊದಲೆ ಭಯಬೀತಗೊಂಡಿದ್ದ ಸೌಭಾಗ್ಯಳು ಗಂಡನ ಈ ಅವಸ್ಥೆಯನ್ನು ನೋಡಿ, ರಮೇಶನ ಭುಜವನ್ನು ಹಿಡಿದು ಅಲ್ಲಾಡಿಸಿದಳು. 'ಹ್ಞಾಂ...' ಎಂದು ಬೆಚ್ಚಿಬಿದ್ದವನಂತೆ ಹೆಂಡತಿಯ ಮುಖವನ್ನು ನೋಡಿದನು. ' ಯಾಕ್ರೀ.. ಏನಾತ್ರೀ ಎಲ್ಲಿದ ಪೋನ್, ಯಾರ ಹಚ್ಚಿದ್ರ, ದವಾಖಾನಿಲಿಂದ ಅಪ್ಪಾರ ಏನಾರ ಹಚ್ಚಿದ್ರನು, ಪುಟ್ಟಿಗೇನಾರ ಹೆಚ್ಚುಕಮ್ಮಿ ಆಗೈತಂತನು, ಹೇಳ್ರಿ ಏನಾರ ಒಂದ, ಹಿಂಗ್ಯಾಕ ಕುಂತಿರಿ ಸುಮ್ನ ಗರ್ಡಗಂಭ ಕುಂತಂಗ' ಉದ್ವೇಗದಿಂದ ಗಂಡನನ್ನು ಅಲ್ಲಾಡಿಸುತ್ತಾ ಕೇಳತೊಡಗಿದಳು.
ಸೋತ ಧ್ವನಿಯಲ್ಲಿ 'ಆಸ್ಪತ್ರೆಯಿಂದ ಅಪ್ಪಾಜಿಯ ಪೋನ್' ' ಏನಂತ' ' ಪುಟ್ಟಿ....' ' ಹ್ಞೂಂ.. ಪುಟ್ಟಿ, ಪುಟ್ಟಿಗೆ ಏನಾತಂತ' ' ಪುಟ್ಟಿಗೆ ಇವತ್ತು ಸಾಯಂಕಾಲ, ತಪ್ಪಿದರೆ ನಾಳೆ ಬೆಳಗ್ಗೆ ಹತ್ತು ಗಂಟೆಯೊಳಗೆ ಆಪರೇಷನ್ ಮಾಡಿಸದೆ ಹೋದರೆ ನಮ್ಮ ಪುಟ್ಟಿ ಉಳಿಯೊದಿಲ್ಲಂತ' ಸಿಡಿಲು ಬಡಿದ ಬಂಡೆ ಕಲ್ಲಿನ ಚೂರು ಯಾವ ರೀತಿಯಾಗಿ ಸಿಡಿದು ದೂರ ಹೋಗಿ ಬಿಳುತ್ತದೆಯೊ ಹಾಗೆ ಸೌಭಾಗ್ಯಳು ಗಂಡನಿಂದ ಹಿಂದೆ ಸರಿದು ಗೋಡೆ ಬೆನ್ನುಕೊಟ್ಟು ನಿಂತುಬಿಟ್ಟಳು. ದೆವ್ವ ಬಡಿದವರ ಹಾಗೆ
ರಮೇಶನು ಮಾತನ್ನು ಮುಂದುವರೆಸುತ್ತಾ ' ನಿಮ್ಮ ಕೈಯಲ್ಲಿ ಆಗಲಿಲ್ಲವೆಂದರೆ ಇಂದು ಸಂಜೆಗೆ ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿಬಿಡಿ, ಒಂದು ವೇಳೆ ನಮ್ಮ ಆಸ್ಪತ್ರೆಯಲ್ಲಿ ಅವಳೇನಾದರು ಸತ್ತರೆ, ಹೆಣವನ್ನು ಕತ್ತರಿಸಿ ಮೂಟೆ ಕಟ್ಟಿ ಕೊಡಬೇಕಾಗುತ್ತದೆ, ಎಂದು ಹೇಳಿದ್ದಾರಂತೆ,' ಮೂಟೆ ಕಟ್ಟಿ ಕೊಡಬೇಕಾಗುತ್ತದೆ. ಈ ಮಾತು ಸೌಭಾಗ್ಯಳ ಕಿವಿಗೆ ಬಿದ್ದ ತಕ್ಷಣವೆ, ಗಂಡನ ಕಾಲಿಗೆ ಬಿದ್ದು ' ನೋಡ್ರಿ ಮದುವ್ಯಾಗಿ ಇಷ್ಟ ವರ್ಷದಾಗ ನಾ ನಿಮ್ಮನ್ನೇನು ಕೇಳಿಲ್ಲ, ಮುಂದೇನು ಕೇಳೊದಿಲ್ಲ, ನಂ ಪುಟ್ಟಿ ಜೀವಾನ ಉಳ್ಸಕೊಟ್ಬಿಡ್ರಿ,' ಅಳುತ್ತಾ ಬೇಡಿಕೊಳ್ಳತೊಡಗಿದಳು. ಕಾಲನ್ನು ಬಿಡಿಸಿಕೊಂಡು ಮಂಚದಿಂದ ಕೆಳಗಿಳಿದು ಬಂದು, ಸೌಭಾಗ್ಯಳ ಎರಡು ತೋಳುಗಳನ್ನು ಹಿಡಿದೆತ್ತಿ, ಎದುರಿಗೆ ನಿಲ್ಲಿಸಿಕೊಂಡು
' ಅಂದ್ರೆ ಏನು ಸೌಭಾಗ್ಯ ನಾನು ಪುಟ್ಟಿಯ ವಿಷಯದಲ್ಲಿ ಕೈ ಕಟ್ಟಿ ಕುಳಿತುಕೊಂಡಿರುವೆ ಎಂದುಕೊಂಡೆಯಾ..?'
' ನಾ ಆ ಅರ್ಥದಾಗಲ್ರೀ ಹೇಳಿದ್ದು, ನೀವ್ ಪುಟ್ಟಿನ ಉಳ್ಸಕೊಳ್ಳಾಕ ಎಷ್ಟ ಪಡಬಾರ್ದ ಪಾಡ ಪಟ್ಟಿರಂತಂದ ನಂಗಷ್ಟ ಗೊತ್ತೈತಿ, ಆದ್ರೂ ತಾಯಿ ಕಳ್ಳ್ ನೊಡ್ರಿ, ಹ್ಯಾಂಗ ತಡದಾತು, ಒಂಬತ್ತ ತಿಂಗ್ಳ ಹೆತ್ತ ಹೊತ್ತ, ಕಳ್ಳಿನ ಕುಡಿ ಇವತ್ತ ಕಣ್ಮುಂದ ಬಿಕ್ಕಾಕ ಹತ್ತೈತಂದ್ರ, ಹೆತ್ತ ಜೀವ ಹ್ಯಾಂಗ ಸಹಿಸಾತು, ನೀವ್ ಹೇಳ್ರಿ'
' ಎಂತಾ ಮಾತನ್ನು ಮಾತಾಡುತ್ತಿರುವೆ ಭಾಗ್ಯ, ನನಗೇನು ಪುಟ್ಟಿ ಬೇಸರವಾಗಿರುವಳೇನು..?'
'ಅದು ಹಾಗಲ್ರೀ.. ನಿಮ್ಗ ಹ್ಯಾಂಗ ಹೇಳ್ಲಿ ನನ್ನ ಹೊಟ್ಟ್ಯಾಗಿನ ಸಂಕ್ಟಾನ, ನೀವೆನು ಆಫೀಸ್ ಕೆಲ್ಸ ಮುಗ್ದ ಮ್ಯಾಲ, ಪಾರ್ಕನ್ಯಾಗ ಕುಂತ್ಗೊಂಡ ಮನಿಗ್ ಬರ್ತಿರಿ, ಯಾಕ್ ಹೇಳ್ರಿ ಜಲ್ದಿ ಮನಿಗ್ ಬಂದ್ರ ಪುಟ್ಟಿ ನೆನಪ ಕಾಡ್ತಾವಂತ್ಹೇಳಿ, ನಾನ್ಹೆಂಗ ದಿನಾಪೂರ್ತಿ ಕಳಿಲ್ಹೆಳ್ರೀ ಪುಟ್ಟಿಲ್ದ, ಬೆಳ್ಕ ಹರಿತಂದ್ರ ಸಾಕ, ಆಕಿ ಹಲ್ಲ ತಿಕ್ಕಿ, ಝಳಕ ಮಾಡ್ಸಿ, ಹಾಲ ಕುಡ್ಸಿ, ಆ ಕನ್ನಡಿ ಮುಂದ ನಿಂದ್ರಿಸಿ ನೀಟಾಗಿ ಬೈತಾಲಿ ತೆಗ್ದ, ಕ್ಲೀಪ್ ಇಟ್ಟ, ಹಣಿಗೊಂದು ಕಾಡ್ಗಿ ಬೊಟ್ಟಿಟ್ಟ, ದೃಷ್ಟಿಯಾಗ್ಬಾರ್ದಂತಂದ್ಕೊಂಡ ಎರ್ಡು ಕೈಲೆ ಲಟ್ಗಿ ಮುರ್ದ, ಎತ್ಕೊಂಡ ಬಂದ ಅಡ್ಗಿ ಮನಿ ಕಟ್ಟಿ ಮ್ಯಾಲ ಕುಂದ್ರಸ್ಗೊಂಡು, ಮೆತ್ತಗ ಆಗ ಮಾಡಿದ ಬಿಸಿ ಬಿಸಿ ಅನ್ನ ತುಪ್ಪ ಕಲ್ಸಿ ತುತ್ತ ಮಾಡಿ ಉಣ್ಸಿ, ಆಕಿ ಸಾಲಿ ಬೂಟ್ ನೆಲ್ಲಾ ಸೀರಿ ಸೆರ್ಗಿಲೆ ಒರ್ಸಿ, ರೆಡಿಮಾಡಿ ಆಟೋಕ ಕಳಿಸಿಕೊಟ್ತಿದ್ನಿ, ಸಂಜಿಕ ಬಂದ ಮ್ಯಾಲ, ನಾ ದಾರಾವಾಹಿ ನೋಡ್ತಿನನ್ನಾಕಿ, ಆಕಿ ಚಿಂಟು ನೋಡ್ತಿನನ್ನಾಕಿ ನಮ್ಮಿಬ್ರ ಜಗ್ಳಕ್ಕ ಅಪ್ಪಯ್ಯ ಆಕಿನ್ನ ಹೆಗಲ ಮ್ಯಾಲ ಕುಂದ್ರಸ್ಗೊಂಡ, ಮೂಲ್ಯಾನ ಶೆಟ್ರ ಅಂಗ್ಡಿಗೆ ಹೋಗಿ ಏನಾರ ತಿನ್ನಾಕ ಕೊಡ್ಸಿಕೊಂಡ ಬರ್ತಿದ್ರು, ಹೋಮ್ವರ್ಕ ಮಾಡಿಕೊಡು ಅಂತಂದ ರಾತ್ರಿ ಅಡ್ಗಿ ಕೆಲ್ಸ ಮಾಡಾಕ ಬಿಡಲಾರ್ದಂಗ ನನ್ನ ತೊಡಿ ಮ್ಯಾಲ ಕುಂತ್ಗೊಂಡ, ನನ್ನ ಆಟ ಆಡ್ಸತಿದ್ಳ ಅಂತಾಕಿ ಆರ ತಿಂಗ್ಳಾತು, ಮಲ್ಗಿದ ಹಾಸ್ಗಿ ಮ್ಯಾಲ ಮಲ್ಗೆ ಇದ್ದಾಳ, ನನ್ನ ಹೊಟ್ಟಿ ಉರಿಯಾಗಿಲ್ಲೇನ್ರೀ..ಒಂದ ಮಾತ ನಿಮ್ಮ ಕಿವಿಮ್ಯಾಗಿರ್ಲಿ ನೋಡ್ರಿ, ಪುಟ್ಟಿ ಇಲ್ದ ನಾನು ಬದುಕೋದ ಭಾಳ ಕಷ್ಟ ಐತ ನೋಡ್ರೀ' ಎಂತಂದವಳೆ ಎದ್ದು ದೇವರ ಕೋಣೆಯತ್ತ ಓಡಿಬಿಟ್ಟಳು ಅಳುತ್ತಲೆ. ಇದ್ದಕ್ಕಿದ್ದ ಹಾಗೆ ಬಂದೆರಗಿದ ಸುದ್ದಿ, ಅದನ್ನು ತಿಳಿದು ಸೌಭಾಗ್ಯಳು ಆಡಿದ ರೀತಿಗೆ ಬೇಗನೆ ಚೇತರಿಸಿಕೊಳ್ಳಲಾಗಲಿಲ್ಲ ರಮೇಶನಿಗೆ. ಟೈಂನ್ನು ನೋಡಿದನು ಏಳು ಹತ್ತಾಗಿತ್ತು, ನೇರವಾಗಿ ಸ್ನಾನಗೃಹಕ್ಕೆ ಹೋಗಿ ಮುಖ ಮತ್ತು ಸ್ನಾನವನ್ನು ಮಾಡಿಕೊಂಡ ಹೊರಗಡೆ ಬಂದು, ತನ್ನ ಆಫೀಸಿನ ಹಲವು ಸ್ನೇಹಿತರಿಗೆ, ಬಾಸ್ ಗೆ ಬಂದು ಬಾಂಧವರಿಗೆ ಎಲ್ಲರಿಗೂ ಕರೆ ಮಾಡಿ ಕೇಳಿದರು ಒಂದೆ ಉತ್ತರ ಹಣವಿಲ್ಲ, ಹಣವಿಲ್ಲ, ಈಗೀಲ್ಲ ಮೊನ್ನೆಯಷ್ಟೆ ಹೊಸ ಮನೆಯನ್ನು ಕಟ್ಟಿಸಿದೆ, ಹೊಸ ಕಾರನ್ನು ತೆಗೆದುಕೊಂಡೆ, ನಿವೇಶನ, ಮಗನ/ಳ ಫೀಸ್ ತುಂಬಿದೆ, ವಿದೇಶಕ್ಕೆ ಹೋಗಿಬಂದೆ ಎಂದು ಎಲ್ಲರು ಒಂದೊಂದು ಸಬೂಬನ್ನು ಹೇಳಿದರೆ ಹೊರತು ಒಬ್ಬರಾದರು ಪ್ರಯತ್ನಿಸುತ್ತೇನೆ ಎಂಬ ಒಂದು ಮಾತು ಯಾರ ಬಾಯಲ್ಲೂ ಬರಲೆ ಇಲ್ಲ. ಇಷ್ಟೇಲಾ ಆಗುತ್ತಲೆ ಸಮಯ ಒಂಬತ್ತಾಗಿಬಿಟ್ಟಿತ್ತು. ಇದೆಲ್ಲವನ್ನು ನೋಡುತ್ತಿದ್ದ ಸೌಭಾಗ್ಯಳು ನಿಟ್ಟುಸಿರನ್ನು ಬಿಡುತ್ತ, ಅಡುಗೆ ಮನೆಗೆ ಹೋಗಿ ಉಪ್ಪಿಟ್ಟನ್ನು ಒಂದು ಪ್ಲೇಟಿನಲ್ಲಿ ಬಡಿಸಿಕೊಂಡು ಬಂದು ರಮೇಶನ ಎದುರಿಗಿಟ್ಟಳು. ರಮೇಶನು ಹೆಂಡತಿಯ ಮುಖವನ್ನೊಮ್ಮೆ ನೋಡಿ, ಉಪ್ಪಿಟ್ಟಿನ ಪ್ಲೇಟನ್ನು ಸರಿಸಿಬಿಟ್ಟನು. ಪ್ಲೇಟನ್ನು ಕೈಯಲ್ಲಿ ತೆಗೆದುಕೊಂಡ ಸೌಭಾಗ್ಯಳು, ರಮೇಶನು ಬೇಡ ಬೇಡವೆಂದು ಬಲವಂತ ಮಾಡಿ ಒಂದೊಂದೆ ತುತ್ತನ್ನು ತಿನ್ನಿಸತೊಡಗಿದಳು. ' ನನ್ನ ಕ್ಷಮಿಸಿಬಿಡ್ರಿ, ಬೆಳ್ಳಂ ಬೆಳಗ್ಗೆ ಪುಟ್ಟಿ ವಿಚಾರ ಕೇಳಿ ನಿಮ್ಮ ಮ್ಯಾಲ ಭಾಳ ಒತ್ತಾಯ ಹಾಕ್ಬಿಟ್ಟಿನ್ರೀ' ಕಣ್ತುಂಬಾ ಕಣ್ಣೀರನ್ನ ತುಂಬಿಕೊಂಡು ಮೆಲುಧ್ವನಿಯಲ್ಲಿ ಹೇಳಿದಳು ಸೌಭಾಗ್ಯ, ' ಭಾಗ್ಯ ನೀನು ಆಡಿದ ಮಾತುಗಳಲ್ಲಿ ಯಾವ ಮಾತು ತಪ್ಪಿಲ್ಲ, ಇನ್ನೂ ಕ್ಷಮಿಸುವ ಮಾತೆಲ್ಲಿ ಬಂತು, ಹೆತ್ತ ತಾಯಿ, ಪುಟ್ಟಿಯನ್ನು ಹೇರುವಾಗ ನಿನಗಾದ ನೋವು, ಸಂಕಟ, ಪಟ್ಟ ಕಷ್ಟ ಎಲ್ಲವು ನನಗೆ ಗೊತ್ತು. ಲೋ ಬಿಪಿಯಾಗಿ ಸಾವಿನ ಕದವನ್ನು ನೀನು ತಟ್ಟಿ ಬಂದು, ಪುಟ್ಟಿಗೆ ಜನ್ಮವನ್ನು ನೀಡಿದ್ದೆ. ಆ ಹೊತ್ತಿನಲ್ಲಿ ನಾನು ಬೇಡಿಕೊಳ್ಳದ ದೇವರುಗಳೆ ಉಳಿದಿರಲಿಲ್ಲ. ದೇವರ ದಯೆಯಿಂದ ಇಬ್ಬರು ಕ್ಷೇಮವಾಗಿ ಬದುಕುಳುದಿರಿ ಅಂದು.' ಎನ್ನುತ್ತಾ ನೀರನ್ನು ಕುಡಿದನು. ನಂತರ ಇಬ್ಬರಲ್ಲೂ ಮೌನ. ಹತ್ತು ನಿಮಿಷದ ನಂತರ ಮನಸ್ಸಿನಲ್ಲಿ ಏನೊ ಯೋಚಿಸಿದವನಂತೆ ಮಾಡಿ ಒಂದು ಗಟ್ಟಿ ನಿರ್ಣಯಕ್ಕೆ ಬಂದವನಂತೆ ಎದ್ದು ನಿಂತು ' ಭಾಗ್ಯ ನಾನು ಪುಟ್ಟಿಯನ್ನು ಆರೋಗ್ಯವಂತಳನ್ನಾಗಿಸಿಯೆ ಮನೆಗೆ ಕರೆದುಕೊಂಡು ಬರುತ್ತೆನೆ. ಅದು ಆದದ್ದಾಗಲಿ. ಇದು ನಾನು ನಿನಗೆ ನೀಡುವ ಭರವಸೆ' ಎಂದು ಎದ್ದವನೆ, ರೂಮಿಗೆ ಹೋಗಿ ಬ್ಯಾಗನ್ನು ತೆಗೆದುಕೊಂಡು ಎರಡು ಜೊತೆ ಬಟ್ಟೆ, ಮುಖವನ್ನು ಮರೆಮಾಚುವಂತಹ ಮಫ್ಲರ್ ನ್ನು ಇಟ್ಟುಕೊಂಡು, ತನ್ನ ಮೊಬೈಲನ್ನು ತಲೆದಿಂಬನ ಕೆಳಗಿಟ್ಟು, ಹೊರಗಡೆ ಬಂದು, ಸೌಭಾಗ್ಯಳ ನೆತ್ತಿಯನ್ನು ಸವರಿ, ' ಧೈರ್ಯದಿಂದಿರು, ನಮ್ಮ ಪಾಲಿಗೆ ಒಬ್ಬ ದೇವರು ಕಾಯುತ್ತಿದ್ದಾನೆ', ಎಂದು ಅವಳ ಹಣೆಗೊಂದು ದೀರ್ಘ ಮುತ್ತೊಂದನಿಕ್ಕಿ, ಹೊರಳಿ ಅವಳ ಮುಖವನ್ನು ನೋಡದೆ, ಮುಖ್ಯ ಬೀದಿಗೆ ಬಂದು ಆಟೋವನ್ನು ಹಿಡಿದು ಹತ್ತಿಕೊಂಡು ಹೋಗುವ ಅಡ್ರಸ್ ನ್ನು ಹೇಳಿ ಕಣ್ಮುಚ್ಚಿಕೊಂಡು ಯೋಚನಾಲಹರಿಗೆ ಜಾರಿಕೊಂಡನು'.
'ಅಲ್ಲ.. ಜನ ಎಂತೆಂತೆದುಕೆಲ್ಲ ಹಣವನ್ನು ಕೊಡ್ತಾರೆ, ಒಂದು ಜೀವ ಉಳಿಸೊದಿಕ್ಕ ಹಣ ಇಲ್ಲ ಅಂತಾರಲ್ಲ, ಕುಡಿಯೊದಿಕ್ಕ ಕೊಡ್ತಾರೆ, ಇಸ್ಪೀಟ ಆಡೋದಿಕ್ಕ ಕೊಡ್ತಾರೆ, ಮನೆಯಲ್ಲಿ ಕಟ್ಕೊಂಡ ಹೆಂಡ್ತಿಯರನ್ನು ಬಿಟ್ಟು ಮಲೇಷಿಯಾ ಸಿಂಗಾಪುರ ಅಂತ ಅಡ್ಡಾಡಿ, ಮಾಡಬಾರ್ದ ಕೆಲ್ಸನೆಲ್ಲಾ ಮಾಡಿ ಬರ್ತಾರೆ. ಮೊನ್ನೆ ಆ ದಿವಾಕರ ಸರ್ ಗೆ ಯಾವ್ದೊ ಕಂಪನಿ ಹಣ ಡಬಲ್ ಮಾಡಿ ಕೊಡ್ತೀನಂತ ಹೇಳಿ ಇದ್ಬದ್ದ ಹಣವನ್ನೆಲ್ಲ ಲಪಟಾಯಿಸಿಕೊಂಡು ಹೋಗಿ, ಲೆಕ್ಕವಿಲ್ಲದಷ್ಟು ಜನರಿಗೆ ಪಂಗನಾಮ ಹಾಕಿ ಹೋಯಿತು. ಅವರದೆಲ್ಲ ಒತ್ತೊಟ್ಟಿಗಿರಲಿ, ಈಗ ನಾವು ಕಳ್ಳತನ ಮಾಡಲು ಹೊರಟಿರುವ ಕಂಟ್ರ್ಯಾಕ್ಟರ್ ಹಣ. ಅದು ಏನು ಬೇವರು ಸುರಿಸಿ ದುಡಿದದ್ದೆ, ಅಲ್ಲವಲ್ಲ, ನಾವುಗಳು ಕಟ್ಟಿದ ಆಸ್ತಿಯ ಟ್ಯಾಕ್ಸಗಳಿಂದ ಕೂಡಿಕ್ರೂತ ದುಡ್ಡು. ಅದನ್ನು ನಾವೆ ಮರಳಿ ಕದಿಯೋದ್ರಲ್ಲಿ ತಪ್ಪೇನಿಲ್ಲವಲ್ಲ. ಆಮೇಲೆ ಪಾಪ ಪ್ರಜ್ಞೆಯ ಮಾತು, ಇಲ್ಲ... ನನಗ್ಯಾಕೆ ಕಾಡಬೇಕು ಪಾಪಪ್ರಜ್ಞೆ, ಆ ಹಣವನ್ನೇನಾದರು ನಾನು ಕೆಟ್ಟ ಕೆಲಸಗಳಿಗೆ ಉಪಯೋಗಿಸುತ್ತಿಲ್ಲವಲ್ಲ, ಒಂದು ಜೀವ ಉಳಿಸಿಕೊಳ್ಳುವುದಕ್ಕಾಗಿ ತಾನೆ, ಸಿಕ್ಕು ಬಿದ್ದರೆ, ಮಾನ ಮರ್ಯಾದೆ..!!! ದಿನದಿನ ಕ್ಷಣಕ್ಷಣ ಹೀಗೆ ನೋವಿನಲ್ಲಿ ಸಾಯುವುದಕ್ಕಿಂತ ಒಮ್ಮೆಲೆ ವಿಷವನ್ನು ಕುಡಿದು ಸತ್ತು ಬಿಡುವುದೆ ಲೇಸಲ್ಲವೆ, ಅಷ್ಟಕ್ಕೂ ಹೇಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ನಮ್ಮ ಪ್ಲ್ಯಾನ್ ಅಷ್ಟೊಂದು ಪರ್ಫೆಕ್ಟ ಆಗಿರುವಾಗ, ಆದದ್ದಾಗಲಿ ನೀರಲ್ಲಿ ಜಿಗಿದುಬಿಟ್ಟಾಗಿದೆ, ಚಳಿಗೆ ಹೆದರುವುದೇನಿದೆ, ಬಂದದ್ದನ್ನು ಅನುಭವಿಸುವುದಷ್ಟೇ ಮುಂದಿರುವ ಹಾದಿ' ಅಂದುಕೊಳ್ಳುತ್ತಲೆ ಆಟೋವು ರಮೇಶನು ಹೇಳಿದ ಜಾಗಕ್ಕೆ ತಂದು ನಿಲ್ಲಿಸಿತು. ಆಟೋದಿಂದಿಳಿದು ಬ್ಯಾಗನ್ನೆತ್ತಿಕೊಂಡು ಹಣವನ್ನು ಕೊಟ್ಟು ಕಳುಹಿಸಿ ಸಮಯವನ್ನು ನೋಡಿದನು ಹತ್ತು ಇಪ್ಪತ್ತಾಗಿತ್ತು. ಇಲ್ಲಿಂದ ಬ್ಯಾಂಕಿಗೆ ಹತ್ತು ನಿಮಿಷದ ದಾರಿ, ನಿನ್ನೆ ಅಖಿಲನು ಕೊಟ್ಟಿದ್ದ ಮೊಬೈಲ್ ನಂಬರನ್ನು ಕಿಸೆಯಿಂದ ಹೊರ ತೆಗೆದು ನೋಡಿಕೊಂಡು, ನಿಟ್ಟುಸಿರೊಂದನು ಬಿಟ್ಟು, ಆಕಾಶದೆಡೆಗೆ ಮುಖಮಾಡಿ ಎರಡು ನಿಮಿಷ ಕಣ್ಮುಚ್ಚಿಕೊಂಡು ನಿಂತುಕೊಂಡು, ನಂತರ ಬಿರಬಿರನೆ ಬ್ಯಾಂಕಿನ ಹಾದಿಯತ್ತ ಹೆಜ್ಜೆಯನ್ನು ಹಾಕಿದನು.
Sunday, October 14, 2018
ಭಾಗ ೮
Subscribe to:
Post Comments (Atom)
No comments:
Post a Comment