Sunday, October 14, 2018

ಭಾಗ ೬

ಆಟೋದಿಂದಿಳಿದ ರಮೇಶನು ಡ್ರೈವರ್ ಗೆ ಹಣವನ್ನು ಕೊಟ್ಟು ಮನೆಯ ಗೇಟನ್ನು ತಳ್ಳಿಕೊಂಡು ಒಳಗೆ ನಡೆದನು, ಅಷ್ಟರಲ್ಲಿ ಮನೆಯ ಹೊರಗಿನ ಬಲ್ಬು ಹೊತ್ತಿಕೊಂಡಿತು. ಎರಡೆ ನಿಮಿಷದಲ್ಲಿ ಕಿಟಕಿಯಿಂದ, ಹೊರಗಡೆ ಯಾರು ಬಂದಿದ್ದಾರೆ ಎಂದು ನೋಡಿದ ಆಕೃತಿಯು ಬಾಗಿಲನ್ನು ತೆರೆಯಿತು. ಬಾಗಿಲನ್ನು ತೆಗೆದದ್ದು ರಮೇಶನ ಮಡದಿ ಸೌಭಾಗ್ಯ... ಹೆಂಡತಿಯನ್ನು ಮನೆಯಲ್ಲಿ ನೋಡುತ್ತಲೆ,
'ನೀನೇನು ಇಲ್ಲಿ, ಆಸ್ಪತ್ರೆಯಲ್ಲಿ ಸೌಮ್ಯಳ ಹತ್ತಿರ ಯಾರು ?, ಅಪ್ಪನನ್ನೆದಾರು ಬಿಟ್ಟು ಬಂದಿರವೇಯಾ, ಅವರಿಗೆ ಮೊದಲೆ ಆರೋಗ್ಯ ಸರಿಯಾಗಿಲ್ಲ ಅಂತದ್ರಲ್ಲಿ, ಅವರೊಬ್ರನ್ನೆ ಬಿಟ್ಟು ಬಂದಿದ್ದಿಯಲ್ಲಾ, ಆಸ್ಪತ್ರೆಯನ್ನು ಬಿಡುವ ಮುಂಚೆಗಾದರು ನನಗೊಂದು ಪೋನ್ ಮಾಡಿದ್ದರೆ, ನೇರವಾಗಿ ಅಲ್ಲಿಗೆ ಬರುತ್ತಿದ್ದೆ' ಒಂದೆ ಉಸಿರಿನಲ್ಲಿ ಹೆಂಡತಿಯನ್ನು ಮಾತನಾಡಲು ಬಿಡದೆ ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸತೊಡಗಿದನು.
'ಯಪ್ಪಾ...ಯಪ್ಪಾ... ಚೂರ ಉಸರನ್ನರ ಬಿಡ್ರೀ, ಹಿಂಗ್ಯಾಕ ಜೋಕ್ಮಾರ ಸತ್ತಾಗ ಸುರಿಯೊ ಮಳಿ ಹಂಗ ಒಂದ ಸಮ್ನ ಪ್ರಶ್ನೆ ಮ್ಯಾಲ ಪ್ರಶ್ನೆ ಕೇಳಾಕ ಹತ್ತೀರಿ... ನಂಗೂ ಅಪ್ಪವ್ರನ್ನ ಒಬ್ರನ್ನ ಬಿಟ್ಟ ಬರೋ ಮನಸ್ಸಿದ್ದಿಲ್ರೀ.. ಅವ್ರ ಜಬರ್ದಸ್ತ ಮಾಡಿ ಕಳಸ್ಯಾರು, ಎಷ್ಟ ದಿನಾಂತ ನಿದ್ದಿ ಗೆಡ್ತಿ ಇವತ್ತೊಂದ ದಿನಾನರ ಜಲ್ದಿ ಹೋಗ ಅಂತಂದ ಅವ್ರ ಬೈದ ಕಳ್ಸಿದ್ರ ರಿ, ಹೋಗ್ಲಿ ತಗೋರಿ ಬೆಳಗ್ಗೆ ಜಲ್ದಿನ ಎದ್ದ ನಿಮ್ಗ ಆಫೀಸ್ಗ್ ಹೋಗಾಕ ಎಲ್ಲಾ ರೆಡಿ ಮಾಡ್ಕೊಟ್ಟ, ದವಾಖಾನಿಗೆ ಹೊಕ್ಕಿನಾಳ್ರಿ' ಎನ್ನುತ್ತಾ, ರಮೇಶನ ಕೈಗೆ ಟವಲನ್ನು ಕೊಟ್ಟು ಮುಖವನ್ನು ತೊಳೆದುಕೊಂಡು ಬರುವಂತೆ ಸನ್ನೆಯನ್ನು ಮಾಡಿದಳು. ಬಟ್ಟೆಯನ್ನು ಬದಲಾಯಿಸಿದ ರಮೇಶನು
ಮುಖವನ್ನು ತೊಳೆದುಕೊಂಡ ಬಂದು ಹೆಂಡತಿಯ ಮುಂದೆ ನಿಂತನು. ' ಹ್ಞೂಂ ಕುಂದ್ರಬರ್ರೀ ಊಟಕ್ಕ, ಭಾಳ್ಹೊತ್ತ ಆತ ಆಗ್ಲೆ, ಬ್ಯಾಳಿ ಸಾರ ಎರ್ಡ ಸಲಾ ಬಿಸಿ ಮಾಡಿಟ್ನಿ, ನೀವ್ ಜಲ್ದಿ ಬರ್ತಿರಂತಂದಕೊಂಡ,' ಎನ್ನುತ್ತಾ, ಹಣೆಯ ಮೇಲೆ ಜೋಲಾಡುತ್ತಿದ್ದ ಮುಂಗುರುಳನ್ನು ಕಿವಿಯ ಹಿಂದೆ ಸರಿಸುತ್ತಾ,‌, ತಾಟನ್ನು ಇಟ್ಟು ಅಡುಗೆಯನ್ನು ಬಡಿಸಲಾರಂಭಿಸಿದಳು. ರಮೇಶನು ಸೌಭಾಗ್ಯಳನ್ನೆ ನೋಡುತ್ತಾ, ಇಂತಹ ಚಿನ್ನದ ಗಣಿಯನ್ನು ಮನೆ ತುಂಬಿಸಿಕೊಂಡ ಪರಿಯನ್ನು ನೆನಪಿಸಿಕೊಳ್ಳತೊಡಗಿದನು. ತಾನು ಓದಿ ಪಡೆದುಕೊಂಡ ಕೆಲಸಕ್ಕೆ ಒಂದು ಚಿಕ್ಕ ನೌಕರಿ ಸಿಕ್ಕಿತ್ತು, ತಾಯಿ, ತಾಯಿಯ ಪ್ರೀತಿ ಏನೆಂದು ಅರಿಯುವ ಮೊದಲೆ ಇಹಲೋಕವನ್ನು ತ್ಯಜಿಸಿಬಿಟ್ಟಿದ್ದಳು. ಅಪ್ಪನಿಗೆ ನಾನು ಒಬ್ಬನೆ ಮಗನಾದ್ದರಿಂದ, ಹೆಣ್ಮಕ್ಕಳು ಕಂಡರೆ ಬಲು ಪ್ರೀತಿ ಅವರಿಗೆ. ಹೀಗಾಗಿ ಬಿಡಿಗಾಸು ವರದಕ್ಷಿಣೆಯನ್ನು ಅಪೇಕ್ಷಿಸದೆ ವಧುವಿನ ಹುಡುಗಾಟದಲ್ಲಿ ತೊಡಗಿದ್ದರು. ಸಿಕ್ಕವುಗಳೆಲ್ಲ ದೊಡ್ಡ ದೊಡ್ಡ ಸಂಬಂಧಗಳೆ, ರಮೇಶನ ಸಂಬಳವನ್ನು ಕೇಳಿ, ಹೇಳಿ ಕಳುಹಿಸುತ್ತೇವೆ ಎಂದವರಿಂದ ಮರಳಿ ಯಾವ ಉತ್ತರವು ಬರುತ್ತಿರಲಿಲ್ಲ. ಕೊನೆಗೂ ದೂರದ ಸಂಬಂಧಿಕರ ಪರಿಚಯದಿಂದ ಧಾರವಾಡದಲ್ಲಿ ಹೆಣ್ಣನ್ನು ನೋಡಲು ಹೋದಾಗ ಸಿಕ್ಕಿದ್ದೆ ಸೌಭಾಗ್ಯ. ಅವಳ ಮನೆಯ ಪರಿಸ್ಥಿತಿಯು ಅಷ್ಟೊಂದ ಗಟ್ಟಿಯಾಗಿರಲಿಲ್ಲ ಅವಳು ಹುಟ್ಟುತ್ತಲೆ ತಂದೆಯನ್ನು ಕಳೆದುಕೊಂಡು ಸ್ವಾದರ ಮಾವರ ಮನೆಯಲ್ಲಿ ಅವಳ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಹಾಗೊ ಹೀಗೊ ಕಂಕಣಭಾಗ್ಯ ಕೂಡಿಬಂದು ಸೌಭಾಗ್ಯಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ, ಸರಿಯಾಗಿ‌ ಅಡುಗೆಯನ್ನೆ ಮಾಡೊದಿಕ್ಕೆ ಬರುತ್ತಿರಲಿಲ್ಲ. ಅಪ್ಪನೆ ಎಲ್ಲಾ, ಅನ್ನಕ್ಕೆ ಉಪ್ಪು, ಸಾರಿಗೆ ಹುಳಿ, ಹದವಾಗಿ ತರಕಾರಿಗಳನ್ನು ಬೇಯಿಸುವುದು ಎಷ್ಟೊ ಕೆಲಸಗಳನ್ನೆಲ್ಲ ಅಪ್ಪನಿಂದಲೆ ಕಲಿತಿದ್ದಳು. ಇವರಿಬ್ಬರನ್ನು ನೋಡಿದ ಪ್ರತಿಯೊಬ್ಬರು ಹೇಳುವ ಒಂದೆ ಮಾತು ಮಾವ ಸೊಸೆ ಅಲ್ಲ, ತಂದೆ ಮಗಳೆಂದೆ ಹೇಳುತ್ತಿದ್ದರು. ಏನೆಲ್ಲ ಕಲಿಸಿದ್ದರು ಅವಳು ಮಾತನಾಡುವ ಧಾರವಾಡ ಭಾಷೆಯನ್ನು ಮಾತ್ರ ಅವಳಿಂದ ಮರೆಸಲು ಆಗಿರಲಿಲ್ಲ. ಹಳೆಯದನೆಲ್ಲ ನೆನೆಯುತ್ತಾ, ಊಟವನ್ನು ಬಡಿಸಿದ ತಾಟನ್ನು ಮುಟ್ಟದೆ ತದೇಕಚಿತ್ತದಿಂದ ಅವಳನ್ನೆ ನೋಡುತ್ತಾ, ನಿಂತುಕೊಂಡಿದ್ದನು. 'ಹ್ಞೂಂ... ಕುಂದರ್ರೀ.. ಆರಾಮಾಗಿ ಊಟ ಮಾಡ್ರಿ.. ಮಧ್ಯಾನ್ದಾಗ ಎಷ್ಟೊತ್ತಿಗ ಉಂಡಿರೊ ಏನೊ.. ಸಂಜಿಮುಂದ ಬರೊ ದಾರ್ಯಾಗ ಛಾ..ಪಾ. ಕುಡ್ಕೊಂಡ ಬಂದಿರೊ..‌ಇಲ್ಲೊ.. ಒಂದು ತಿಳಿಯಾವಲ್ದು, ಹೌದು ಇವತ್ತ್ಯಾಕ ಇಷ್ಟೊಂದ ಹೊತ್ತ ಮಾಡಿ ಬಂದ್ರೀ..'
ಅವಳ ಮಾತುಗಳನ್ನು ಮದ್ಯದಲ್ಲೆ ಕತ್ತರಿಸುತ್ತಾ, ' ನಂಗೆ ಊಟ ಬೇಡ, ಹಸಿವಿಲ್ಲ,' ಎನ್ನುತ್ತಾ ತಾಟನ್ನು ದೂರ ಸರಿಸುತ್ತಾ ಅಖಿಲನು ಮನೆಗೆ ಪೋನ್ ಮಾಡಿ ಎಂದು ಹೇಳಿದ್ದರು, ಕರೆ ಮಾಡಲು ಮರೆತದ್ದಕ್ಕೆ ತಲೆಯನ್ನು ಕೆರೆದುಕೊಳ್ಳುತ್ತಾ ನಿಲ್ಲುತ್ತಾನೆ. ಸೌಭಾಗ್ಯ ರಮೇಶನ ಮಾತನ್ನು ಕೇಳಿ ತನ್ನ ಬಟ್ಟಲು ಕಂಗಳ ತುಂಬಾ ಕಣ್ಣೀರನ್ನ ತುಂಬಿಕೊಂಡು ಅರೆ ಘಳಿಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಹಿಡಿಯಲು ಪ್ರಯತ್ನಿಸಿದರು, ಕಣ್ಣಿಂದ ಜಾರುವ ಹನಿಗಳನ್ನು ಮಾತ್ರ ತಡೆಹಿಡಿಯಲಾಗಲಿಲ್ಲ. ಸೀರೆ ಸೆರಗಂಚಿಂದ ಬಾಯಿಯನ್ನು ಮುಚ್ಚಿಕೊಂಡು ಅಳುತ್ತಾ ತಾವು  ಮಲಗುವ ಕೋಣೆಯತ್ತ ಓಡಿ ಹೋಗಿಬಿಟ್ಟಳು. ರಮೇಶನು ಸ್ವಲ್ಪ ಹೊತ್ತು ಶಿಲ್ಪಿಯು ಪೂರ್ಣವಾಗಿ ರೂಪಿಸದೆ ನಿಲ್ಲಿಸಿದ ಶಿಲ್ಪದಂತೆ ನಿಂತುಬಿಟ್ಟನು. ತನ್ನ ಕಣ್ಣಿಂದಲು ಜಾರಿದ ಹನಿಗಳನ್ನು ಒರೆಸಿಕೊಂಡು, ಉಣ್ಣಲಿಕ್ಕೆಂದು ಬಡಿಸಿದ್ದ ತಾಟನ್ನು ಎತ್ತಿಕೊಂಡು ಕೋಣೆಯೊಳಗೆ ಬಂದನು. ಸೌಭಾಗ್ಯ ಹಾಸಿಗೆಯ ಮೇಲೆ ಕುಳಿತುಕೊಂಡು ಅಳುತ್ತಲಿದ್ದಳು. ಸೋತ ಹೆಜ್ಜೆಗಳೊಂದಿಗೆ ಅವಳ ಹತ್ತಿರ ಹೋಗಿ, ಭುಜವನ್ನು ಹಿಡಿದು ತನ್ನತ್ತ ತಿರುಗಿಸಿಕೊಂಡನು. ಅತ್ತು...ಅತ್ತು.. ಕಣ್ಣೆರಡು ಕೆಂಡದುಂಡೆಗಳಾಗಿದ್ದವು. ' ಹುಚ್ಚಿ.. ಸಮಾಧಾನ ಮಾಡ್ಕೊ, ಈಗ ಆಗುವುದಾದರು ಏನಾಗಿದೆ, ನಾನೆಲ್ಲ ಹಣದ ವ್ಯವಸ್ಥೆ ಮಾಡ್ತೀನಿ, ಪುಟ್ಟಿ ಮತ್ತೆ ಈ ಮನಿ ತುಂಬಾ ಓಡಾಡುವಂಗ ಮಾಡ್ತೀನಿ, ನಿ ನೋಡ್ತೀರು. ಈಗ ಅದೆಲ್ಲ ಹೋಗ್ಲಿ ಬಿಡು, ಎಲ್ಲಿ ನನ್ನ ಮುದ್ದು ಬಂಗಾರ ಅಲ್ಲ ಒಂಚೂರು ಉಣ್ಣಮ್ಮ,' ಸೌಭಾಗ್ಯ ಬೇಡ ಬೇಡವೆಂದರು ಬಲವಂತವಾಗಿ ನಾಲ್ಕು ತುತ್ತನುಣಿಸಿ, ತಾಟನ್ನು ಹೊರಗಡೆ ಇಟ್ಟು ಕೈ ತೊಳೆದುಕೊಂಡು, ನೀರನ್ನು ತಂದು ಸೌಭಾಗ್ಯಳಿಗೆ ಕುಡಿಸಿ, ತಾನೊಂದಿಷ್ಟು ಕುಡಿದು ಅವಳ ಪಕ್ಕದಲ್ಲಿ ಕುಳಿತುಕೊಂಡನು.
'ಮತ್ತ ನೀವ್ ಉಣ್ಣಂಗಿಲ್ಲೇನ್ರೀ..' ನೋವಿನ ಧನಿಯಲ್ಲಿ ಕೇಳಿದಳು.
'ಇಲ್ಲ, ದಾರಿಯಲ್ಲಿ ಬರುತ್ತಾ, ನಮ್ಮ ನಾಲ್ಕನೆ ಬೀದಿಯ ಕೊನೆಯಲ್ಲಿ ಲಕ್ಷ್ಮೀ ಗುಡಿಯಿದೆಯಲ್ಲ, ಅಲ್ಲಿ ಇವತ್ತು ಯಾರೊ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು, ಆ ಪೂಜೆಗೆ ಆಗಮಿಸಿದ್ದ ನನ್ನ ಮಿತ್ರ ನನ್ನನ್ನು ನೋಡಿ ನಾನೇಷ್ಟೆ ಬೇಡ ಬೇಡವೆಂದರು ಬಲವಂತವಾಗಿ ಕರೆದುಕೊಂಡು ಹೋಗಿ ಊಟವನ್ನು ಮಾಡಿಸಿಬಿಟ್ಟ. ಇದೆ ಕಾರಣಕ್ಕಾಗಿಯೆ ನಾನು ಊಟವನ್ನು ಬೇಡವೆಂದದ್ದು' ಎನ್ನುತ್ತಲೆ, ಸೌಭಾಗ್ಯಳು ರಮೇಶನ ಎದೆಯ ಮೇಲೆ ಒರಗಿ,'. ನಂಗ್ ಗೊತ್ತೈತ್ರಿ, ಪುಟ್ಟಿನ ಉಳ್ಸಕೊಳ್ಳಾಕ ನೀವ್ ಎಷ್ಟೊಂದು ತ್ರಾಸ ತಗೋಳಾಕ ಹತ್ತಿರಂತಂದ,ಎಲ್ಲೆಲ್ಲಿ ಅಡ್ಡಾಡಿ, ಯಾರಯಾರ ಕೈ ಕಾಲ ಹಿಡ್ಕೊಂಡ ಸಾಲಸೂಲ ಮಾಡಿ, ಆಕಿನ ತೋರ್ಸಾಕ ದಿನ ಬೆಳ್ಗ ಹರದ್ರ, ನಿವ್ ಪಡೊ ಪಾಡು ನಂಕೈಲಿ ನೋಡಾಕಾಗುವಲ್ದರೀ...ನೋಡ್ರಿ.. ಆ ದ್ಯಾವ್ರಿಗೆ ನಾವ್ ಸುಖವಾಗಿ ಇರೋದ ಸಹ್ಸಿಕೊಳ್ಳಾಕ ಆಗ್ಲಿಲ್ಲೇನ್ರೀ..ಅದ್ಕ ಹಾಲಂತ ಸಂಸಾರದಾಗ ಹುಳಿ ಹಿಂಡ್ಬಿಟ್ಟ್ ನಗಾಕ ಹತ್ತ್ಯಾನ,
ನಾನೇನ ಪಾಪ ಮಾಡಿದ್ನಿ ಅಂತಂದ ಹುಟ್ಟುತ್ಲೆ ತಂದಿನ ಕಳ್ಕೊಂಡ್ನಿ, ಮದುವ್ಯಾದ ಮ್ಯಾಲ, ತಂದಿಯಂತ ಮಾಮಾ, ಜೀವಕ್ಕ ಜೀವಾ ಕೊಡೊ ಗಂಡ, ನಮ್ಮಿಬ್ರ ಸಂತೋಷಕ್ಕೊಂದು
ಪುಟ್ಟ ಗೊಂಬೆ, ಇನ್ನೇನ ಬೇಕಿತ್ತ ನನ್ಗ, ಮುತ್ತೈದಿ ಸಾವೊಂದ ಬಿಟ್ಟ, ನಾಕ ದಿನ್ದ ಸುಖ್ದ ಗಂಗಾಳ್ದಾಗ, ವಿಷಾ ಕಲ್ಸಿ ಕೊಟ್ಟಾನಲ್ಲ
ಉಣ್ಣುದೊ...ಏನ‌ ಚೆಲ್ಲೊದೊ..ಚೆಲ್ಲೊದಕ್ಕ ಧೈರ್ಯ್ಯಾ ಸಾಲುವಲ್ದು, ಉಣ್ಣೊಕ ಮನಸ್ಸ ಒಪ್ಪುವಲ್ದು, ಹಿಂಗ ನಡು ನೀರನ್ಯಾಗ ನಿಂದ್ರಿಸಿ ಕೈ ತೊಳ್ಕಂಡ ಬಿಟ್ಟಾನಲ್ಲವ, ಯಾವ ದಡಾನಂತ ಹುಡ್ಕೋದು. ಏನ್ರೀ... ವರ ಕೊಡೊ ದೇವ್ರ ಶಾಪ ಕೊಟ್ಬಿಟ್ರ.. ಬಾಳೋದರ ಹ್ಯಾಂಗ್ರೀ..' ತಡೆಯಲಾಗದ ದುಃಖವನ್ನೆಲ್ಲ ಅಳುತ್ತಲೆ ತೊಡಿಕೊಂಡಳು. ಅವಳು ಅತ್ತ ಕಣ್ಣೀರಿಗೆ ರಮೇಶ ಮೈ ಮೇಲಿನ ಅರ್ಧ ಅಂಗಿಯು ತೋಯ್ದು ಹೋಗಿತ್ತು. ಸೌಭಾಗ್ಯಳ ತಲೆಯನ್ನು ಮೆಲ್ಲಗೆ ಸವರುತ್ತಾ, ' ನಾವ್ ಪಡ್ಕೊಂಡ ಬಂದಿದ್ದು ಇಷ್ಟ ಅಂತ ಇರ್ಬೇಕಾದ್ರೆ ನಾವೇನು ಮಾಡೋಕಾಗಲ್ಲ ಭಾಗ್ಯ. ಇನ್ನೂ ಏನು ಕಾಲ ಮಿಂಚಿಲ್ಲ, ಪ್ರಯತ್ನವನ್ನು ಪಟ್ಟರೆ, ಗೆಲ್ಲಲಾಗದೆ ಉಳಿಯುವಂತದ್ದು ಯಾವುದು ಇಲ್ಲ ಈ ಜಗದಲ್ಲಿ.'
' ನಮ್ದ ಪರಿಸ್ಥಿತಿನ ಬ್ಯಾರೆ ಐತೇಲ್ರೀ... ಗುಡ್ಡಾ ಹತ್ತೊದಾದ್ರ, ಇವತ್ತಲ್ಲ ನಾಳೆ ಹತ್ಬೊದು, ಹರಿಯೊ ನದಿ ದಾಟೊದಂದ್ರ, ಹ್ಯಾಂಗರ ಮಾಡಿ ದಾಟ್ಬೋದು. ಇದು ರೊಕ್ಕದ ವಿಷ್ಯಾ ಐತ್ರಿ, ರೊಕ್ಕದ ವಿಷ್ಯಾ, ನಿಮ್ಗ ಗೊತ್ತಿಲ್ದದ್ದು ಏನೈತ್ರಿ,  ಬೀಗ್ರ ಮುಂದ ರೊಕ್ಕದ ವಿಷ್ಯಾ ತಗದ್ರ, ವಿಷಾ ಕುಡ್ದೊರಂಗ ಮಾರಿಮಾಡ್ತಾರ, ಎದ್ರಿಗೆ ಬಂದ್ರ ಕಣ್ತಪ್ಪಿಸಿ ಹೋಕ್ಕಾರ, ನಿಮ್ಗ ಬರೊ ಸಂಬ್ಳದಾಗ, ಅರೆಹೊಟ್ಟೆಲೆ ಮಕ್ಕೊಂಡಾದ್ರು, ಇಷ್ಟ್ ದಿವ್ಸ ಪುಟ್ಟಿನ ಆರೈಕೆ ಮಾಡದ್ವಿ, ಅಲ್ಲಿಲ್ಲೆ ಕೈ ಸಾಲ ಮಾಡ್ಕೊಂಡ ಬದ್ಕಾಕ ಹತ್ತೀವಿ, ಇಂತಾದ್ರಾಗ ಆಪ್ರೇಷನ್ ಗೆ ಲಕ್ಷಾಂತರ ರೊಕ್ಕ ಅಂತದ್ರ ಹ್ಯಾಂಗ್ರಿ.. ಹೊಂದ್ಸುದು.' ತಲೆಯೆತ್ತಿ ದಿನಾಯ ದೃಷ್ಟಿಯಿಂದ ರಮೇಶನನ್ನು ನೋಡಿದಳು.
ಅವಳ ಕಣ್ಣಿನಲ್ಲಿರುವ ನೂರಾರು ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಅವಳನ್ನು ಬಿಗಿಯಾಗಿ ತಬ್ಬಿಕೊಂಡು ಚಿಕ್ಕ ಮಕ್ಕಳಂತೆ, ತನ್ನ ಮಗಳನ್ನು ಉಳಿಸಿಕೊಳ್ಳಲು ತನ್ನಿಂದಾಗದೇನೊ ಎಂಬ ಭೀತಿಯಿಂದ ಬಿಕ್ಕಿ, ಬಿಕ್ಕಿ  ಅಳಲಾರಂಭಿಸಿದನು. ಕ್ಷಣಕಾಲದ ನಂತರ ಇಬ್ಬರು ಅತ್ತು ಅತ್ತು ಸುಮ್ಮನಾದರು. ಇದೇನು ಹೊಸತಲ್ಲ ಕಳೆದಾರು ತಿಂಗಳಿಂದಲು ಮಗಳ ಖಾಯಿಲೆಯಿಂದ ನೊಂದುಕೊಳ್ಳುತ್ತಲೆ ಇದ್ದರು. ಆದರಿಂದು ಇಬ್ಬರೆ ಒಬ್ಬರಿಗೊಬ್ಬರು ನೋವನ್ನು ಹಂಚಿಕೊಳ್ಳುವ ಸುಸಂದರ್ಭವು ಒದಗಿ ಬಂದಿತ್ತು.
ರಮೇಶನು ಮೆಲ್ಲಗೆ  ಸೌಭಾಗ್ಯಳನ್ನು ತನ್ನ ಬಾಹು ಬಂಧನದಿಂದ ಬಿಡಿಸಿ ಎದುರಿಗೆ ಕುಳ್ಳರಿಸಿಕೊಂಡನು. ಬಹಳ ದಿನಗಳೆ ಕಳೆದು ಹೋಗಿದ್ದವು ಅವಳನ್ನು ಸ್ಪರ್ಶಿಸಿ. ತನ್ನ ಬಲಗೈ ಹೆಬ್ಬರಳಿನಿಂದ ಮೆಲ್ಲಗೆ ಅವಳ ಕೆಂದುಟಿಯನ್ನು ಸವರಿ ಅವಳ ಕೆಂದುಟಿಯನ್ನು ಧೀರ್ಘವಾಗಿ ಚುಂಬಿಸಿದನು, ಏಳೆಂಟು ತಿಂಗಳುಗಳಿಂದ ಸ್ಪರ್ಶ ಸುಖವಿಲ್ಲದೆ, ಉಪವಾಸವಿದ್ದ ಸೌಭಾಗ್ಯಳ ದೇಹವು ಬಿಸಿಯೇರಿ ಎದೆಯುಸಿರು ಹೆಚ್ಚಾಯಿತು, ಆ ಉಸಿರಿನ ರಭಸಕ್ಕೆ ಅವಳ ಸೀರೆಯ ಸೇರಗು ಜಾರಿಬಿದ್ದಿತು, ರಮೇಶನು ಚುಂಬಿಸುತ್ತಲೆ, ನಿಧಾನವಾಗಿ ಹಾಸಿಗೆಯ ಮೇಲೆ ಮಲಗಿಸಿ, ಅವಳ ಎದೆಯ ಮೇಲೆ ತನ್ನ ಕೈಯನ್ನು ಹರಿಬಿಟ್ಟನು, ಸೌಭಾಗ್ಯಳು ಬಲಗೈಯಿಂದ ಗೋಡೆಗೆ ಇದ್ದ ಬಲ್ಪ ಬಟನ್ ಅನ್ನು ಆರಿಸಿದಳು. ಕೊಣೆಯ ತುಂಬಾ ಕತ್ತಲೆ ಚೆಲ್ಲಿತು, ಇಬ್ಬರ ಎದುರುಸಿರೊಂದನ್ನು ಬಿಟ್ಟರೆ, ಟಿಕ್ ಟಿಕ್ ಅನ್ನುವ ಗಡಿಯಾರದ ಮುಳ್ಳೊಂದೆ ಸದ್ದು ಮಾಡುತ್ತಿತ್ತು, ಎಲ್ಲ ನೋವುಗಳ ಮರೆತು ಸುಖದ ತುತ್ತ ತುದಿಯನೇರಿ, ಬೇವರಲಿ ಮಿಂದೆದ್ದು ಒಬ್ಬರಿಗೊಬ್ಬರು ಸೋತು, ದೇಹದಾಟದಿಂದ ಮೈ ಮನಗಳು ಹಗುರಾದಂತಾಗಿ, ಸೌಭಾಗ್ಯಳು ರಮೇಶನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನೆದೆಯ ಮೇಲೆ ನಿಶ್ಚಿಂತೆಯಿಂದ ಮಲಗಿಬಿಟ್ಟಳು. ತಟ್ಟನೆ ಎಚ್ಚರವಾಯಿತು ರಮೇಶನಿಗೆ, ಲೈಟನ್ನು ಹಾಕಿ ಸಮಯವನ್ನು ನೋಡಿದಾಗ ಮೂರು ನಲ್ವತ್ತೇರಡಂತ ತೋರಿಸ್ತಾ ಇತ್ತು.‌ ತಮ್ಮ ಅವಸ್ಥೆಯನ್ನು ನೋಡಿಕೊಂಡನು ಮೈ ಮೇಲಿಬ್ಬರಿಗೂ ಎಳೆಯಷ್ಟು ಬಟ್ಟೆಯಿರಲಿಲ್ಲ. ಮತ್ತೆ ಲೈಟನ್ನು ಆಫ್ ಮಾಡಿ ಮಲಗಲು ಪ್ರಯತ್ನಪಟ್ಟನಾದರು, ಸಂಜೆ ಅಖೀಲನು ಮಾತನಾಡಿದ ವಿಷಯವು ರಮೇಶನನ್ನು ಚುಚ್ಚತೊಡಗಿತು.
' ಕಳ್ಳತನ ಮಾಡೋದು ಒಳ್ಳೆಯದಾ, ಕೆಟ್ಟದ್ದಾ, ಆ ಹಣವು ಯಾರೊ ಕಷ್ಟಪಟ್ಟು ದುಡಿದಿರೊ ದುಡ್ಡಲ್ಲವಾ, ಅಷ್ಟಕ್ಕೂ ಕಳ್ಳತನ ಮಾಡುವುದಕ್ಕೆ ನಮಗದೇಷ್ಟು ಜ್ಞಾನವಿದೆ, ಅನುಭವವಿದೆ, ಧೈರ್ಯವಿದೆ, ಕದ್ದ ಮೇಲೂ ಆ ವಿಷಯವನ್ನು ಮುಚ್ಚಿಕೊಂಡು ಬದುಕುವಷ್ಟು ಭಂಡತನವೆಲ್ಲಿದೆ, ಪಾಪ ಪ್ರಜ್ಞೆ ನಮ್ಮನು ಅನುದಿನವು ಕೊಲ್ಲದೆ ಇರುವುದೆ. ಅಲ್ಲಾ,  ಹಣ ಬೇಕೆಂಬ ದುರಾಸೆಯಲ್ಲಿ ಏನೊ ಒಪ್ಪಿಕೊಂಡುಬಿಟ್ಟೆ, ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭವಾ, ಇಲ್ಲ..ಇಲ್ಲ.. ಇದಾಗದ ಮಾತು. ಆದರು ಇರಲಿ ಒಂದು ಕೈ ನೋಡೆ ಬಿಡುವ ಎಂದು ಹುಚ್ಚು ಧೈರ್ಯದಿಂದ ಕೈಹಾಕಿ,ಅದು ವಿಫಲವಾಗಿ, ಕಳ್ಳತನದ ಸಮಯದಲ್ಲಿ ಪೋಲಿಸರ ಕೈಗೆ ಸಿಕ್ಕಿಬಿದ್ದರೆ, ಅವರು ಹೊಡೆಯುವ ಏಟುಗಳು, ಕೊಡುವ ಚಿತ್ರಹಿಂಸೆ, ಅಬ್ಬಬ್ಬಾ ಅಂತಾ ಹಿಂಸೆ ನನ್ನ ಶತ್ರುವಿಗೂ ಬೇಡ. ಇನ್ನೂ ಅಪ್ಪ..!!! ಊಟವಿಲ್ಲದಿದ್ದರು ವಾರಗಟ್ಟಲೆ ಉಪವಾಸವಿದ್ದದಿದೆ ಮಾನಕ್ಕಂಜಿ, ಅವರ ಹೇಗೆ ತಡೆದುಕೊಳ್ಳುತ್ತಾರೆ ಮಾನ ಹೋಗುವದನ್ನು, ಅರೇ... ಎಂತ ಹುಚ್ಚ ನಾನು, ಎಷ್ಟು ಜನ್ಮಗಳ ಪುಣ್ಯವೊ ಏನು, ಇಂತಹ ಹೆಂಡತಿ ಸಿಗಬೇಕಾದರೆ, ಹೇಳುವ ಮುನ್ನವೆ ಮನಸ್ಸಿನಲ್ಲಿರುವುದನ್ನೆಲ್ಲವ ಅರ್ಥ ಮಾಡಿಕೊಂಡು ಬಾಳುವ, ನನ್ನ ಬಾಳಿನ ಭಾಗ್ಯದ ಜ್ಯೋತಿಗೆ ಅನ್ಯಾಯವಾಗುವುದಿಲ್ಲವೆ, ನಾಳೆ ಇವರೆಲ್ಲ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗಲು ಸಾಧ್ಯವೆ' ಎಲ್ಲವನ್ನು ವಿಮರ್ಶಿಸಿಕೊಳ್ಳುತ್ತಲೆ ಮೈಯಲ್ಲ ಬೇವರಿನಿಂದ ತೋಯ್ದು ಹೋಗಿತ್ತು. ಸೌಭಾಗ್ಯಳನ್ನು ಮೆಲ್ಲಗೆ ಅವಳಿಗೆಚ್ಚರವಾಗದಂತೆ ಪಕ್ಕದಲ್ಲಿ ಮಲಗಿಸಿ, ಬಟ್ಟೆಯನ್ನು ಧರಿಸಿಕೊಂಡು ಅಡುಗೆ ಮನೆಗೆ ಬಂದು ಗಟಗಟನೆ ಚರಿಗೆ ತುಂಬಾ ನೀರನ್ನು ಕುಡಿದು, ಹಾಲ್ ಗೆ ಬಂದು ಫ್ಯಾನನ್ನು ಹಾಕಿಕೊಂಡು ಕಣ್ಮುಚ್ಚಿಕೊಂಡು ಕುಳಿತುಬಿಟ್ಟನು.‌ ಮತ್ತೆ ಅದೆ ವಿಷಯದ ತರ್ಕಕ್ಕೆ ಸಿಲುಕಿಕೊಂಡನು, ' ಪುಟ್ಟಿ... ಪುಟ್ಟಿ... ಮಾತೆತ್ತಿದ್ದರೆ ಹರಳು ಹುರಿದಂತೆ, ಕೋಪಗೊಂಡರೆ ನಾಲ್ಕು ಜನ ಬೇಕು ರಮಿಸಲು, ರಾತ್ರಿಯಲ್ಲ ಬಂದು ಎದೆಯ‌ ಮೇಲೆ ಮಲಗಿ ನಿದ್ರಿಸುತ್ತಿದ್ದೆ, ನಿಮ್ಮವ್ವನ ಕೈ ತೋಟದಲ್ಲಿ, ಅಜ್ಜನ ಮಾತ್ರೆ, ಕನ್ನಡಕ, ಕುಡಿಯಲಿಕ್ಕೆ ನೀರು, ಅವರು ತಂದು ಕೊಡುವ ಜಿಲೆಬಿಯನ್ನು ನಮಗ್ಯಾರಿಗು ಕೊಡದೆ ಸತಾಯಿಸಿ ತಿನ್ನುತ್ತಿದ್ದದು, ಒಂದೆ ಎರಡೆ ನಿನ್ನ ತುಂಟಾಟ, ನಿನ್ನ ಮೌನದಿಂದಾಗಿ ಮನೆಯೆ ಸ್ಮಶಾನವಾದಂತಾಗಿ ಬಿಟ್ಟಿದೆ, ಇಲ್ಲ ಇಲ್ಲ... ಬೆಳಿಗ್ಗೆ ಏನಾದರು ಮಾಡಿ,  ನನ್ನ ಜೀವವನ್ನು ಒತ್ತೆಯಿಟ್ಟಾದರು ಸರಿ, ನನ್ನ ಪುಟ್ಟಿಯನ್ನು ಉಳಿಸಿಕೊಳ್ಳುತ್ತೇನೆ, ಕಳ್ಳತನದ ಹುಚ್ಚು ಸಾಹಸಕ್ಕೆ ನಾ ಕೈ ಹಾಕಲಾರೆ, ಕೈ ಹಾಕಲಾರೆ.' ಎಂದು ಮನಸ್ಸಿನಲ್ಲಿಯೆ ಧೃಢ ಸಂಕಲ್ಪವೊಂದನ್ನು ಮಾಡಿ, ಧೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು, ಖುರ್ಚಿಯಿಂದೆದ್ದು ಮಲಗಲು ಹೊರಟು ಹೋದನು.

No comments:

Post a Comment