Sunday, October 14, 2018

ಭಾಗ ೭

ಅಖಿಲನು ಅವಸರದ ಹೆಜ್ಜೆಗಳನ್ನು ಹಾಕುತ್ತಾ ಮುಖ್ಯ ರಸ್ತೆಗೆ ಬಂದು ಆಟೋವನ್ನು ಹತ್ತಿಕೊಂಡು ಹೊರಟು ಮನೆ ಇನ್ನೆರಡು ಬೀದಿ ದೂರವಿರುವಾಗಲೆ ಇಳಿದು, ಆಟೋದವನಿಗೆ ಹಣವನ್ನು ಕೊಟ್ಟು ಕಳುಹಿಸಿಬಿಟ್ಟನು. ಕೈ ಗಡಿಯಾರದಲ್ಲಿ ಸಮಯವನ್ನು ನೋಡಿಕೊಂಡನು, ಹತ್ತು ಇಪ್ಪತ್ತೆರಡಾಗಿತ್ತು, ಅತ್ತಿತ್ತ ತಿರುಗಿ ನೋಡಿ ತನ್ನನ್ನು ಯಾರು ಗಮನಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು, ಬಿರಬಿರನೆ ನಡೆಯತ್ತಾ ಎರಡು ಬೀದಿಗಳನ್ನು ದಾಟಿ ಮೂರನೆ ಬೀದಿಯ ಕೊನೆಯಲ್ಲಿ ಡೂಪ್ಲಿಕೇಟ್ ಕೀ ಮಾಡಿಕೊಡುವ ಬಷೀರನ ಮನೆಯಿತ್ತು. ಬಷೀರನ ಮನೆಯ ಬಾಗಿಲು ಮುಚ್ಚಿತ್ತಾದರು ರಾತ್ರಿ ಹೊತ್ತಿನಲ್ಲಿಯೆ ಅವನ ವ್ಯವಹಾರ ಬಲು ಜೋರು ಎಂದು ಅಖಿಲನಿಗೆ ಗೊತ್ತಿತ್ತು, ಡಬ್ ಡಬ್ ಎಂದೆರಡು ಸಲ ಬಾಗಿಲನ್ನು ಬಡೆದನು ಅಖಿಲನು, ' ಕೌನ್ ಹೈ ಜೀ ಇತ್ನೆ ರಾತ್ಮೆ' (ಯಾರ್ರೀ ಅದು ಇಷ್ಟೊತ್ನಲ್ಲಿ,)
ಅಂತ ಒಳಗಿನಿಂದ ಧ್ವನಿಯೊಂದು ಕೇಳಿತು, ' ಮೈ ಜಿ ಭೈಯ್ಯಾ, ಅಖಿಲ'( ನಾನು ರೀ ಅಣ್ಣಾರ ಅಖಿಲ)'ಕೌನ ಅಖಿಲ'(ಯಾವ ಅಖಿಲ) ' ಯಹಿಂ ದೂಸ್ರೆ ಗಲಿಮೆ ರೆಹತೆ ಸೊ, ವೊ ಅಖಿಲ'(ಇಲ್ಲೆ ಪಕ್ಕದ ಬೀದಿಯಲ್ಲಿ ಇರುತ್ತೇನಲ್ಲ ಆ ಅಖಿಲ) 'ಕ್ಯಾ ಹೊನಾತಾ ಬಾ ಇತ್ನೆ ರಾತ್ಮೆ, ಯಾ ಅಲ್ಲಾ ' ( ಏನಾಗ್ಬೇಕಿತ್ತಪ್ಪ ಇಷ್ಟೊತ್ನಲ್ಲಿ ಯಾ ಅಲ್ಲಾ) ಅಂತ ಕೇಳುತ್ತಲೆ ಬಾಗಿಲನ್ನು ತೆರೆದು, ಅಖಿಲನನ್ನು ನೋಡಿ ಗುರುತು ಹಿಡಿದವರಂತೆ ತಲೆಯನ್ನಲ್ಲಾಡಿಸಿ ' ಅಂದರ್ ಆವೊ' ( ಒಳಗಡೆ ಬಾ) ಅಂತ ಒಳಗೆ ಕರೆದು ಬಾಗಿಲನ್ನು ಮುಚ್ಚಿಬಿಟ್ಟನು. ' ಭಯ್ಯಾ ಮೇರಾ ಬೈಕ್ ಕಾ ಚಾವಿ ಕ್ಹೋಗಯಾ ಹೈ, ಅರ್ಜೆಂಟ್ ಏಕ ಮಾಸ್ಟರ್ ಕೀ ಹೋನಾತ'( ಅಣ್ಣಾ ನಂದು ಬೈಕ ಕೀ ಕಳೆದು ಹೋಗಿದೆ ಅದಕ್ಕೆ‌ ಒಂದು ಮಾಸ್ಟರ್ ಕೀ ಬೇಕಿತ್ತು) ಎಂದ ಮೆಲ್ಲಗೆ ಬೇಡುವ ಧ್ವನಿಯಲ್ಲಿ, ' ತುನ್ಹೆ ಕಬ್ ಬೈಕ್ ಖರೀದಾ ?' ( ನೀ ಯಾವಾಗ ತಗೋಂಡಿಯೊ) ಆಶ್ಚರ್ಯಕರ ಧ್ವನಿಯಲ್ಲಿ ಬಷೀರನು ಕೇಳಿದನು. ' ಮೇರಾ ಖ್ಹುದ್ ಕಾ ನಹೀ ಜಿ ಭಯ್ಯಾ, ಮೇರೆ ದೋಸ್ತಕಾ ಹೈ ಮೈ ಏಕ ಜರೂರಿ ಕಾಮ್ ಪೆ ಉಸ್ಕಾ ಲೇಖೆ ಗಯಾತಾ, ಕಾಮ್ ಕಿ ಟೆನ್ಷನ್ ಮೆ ಕಹಿಂ ಪೆ ರಖದಿಯಾ ಹ್ಞೂಂ..ಜಿತ್ನಾ ಡೂಂಟಾ ಫೀರ್ ಬ್ಹೀ.. ನಹಿ ಮಿಲ್ ರಹಿ ಹೈ.'(ನಂದ ಸ್ವಂತದ್ದಲ್ರೀ ನನ್ನ ಗೆಳೆಯಂದು, ಒಂದ ಅರ್ಜೆಂಟ ಕೆಲಸಕ್ಕಂತಂದ ಒಯ್ದಿದ್ದೆ, ಕೆಲಸದ ಒತ್ತಡದಾಗ ಎಲ್ಲಿ ಇಟ್ಬಿಟ್ಟಿನೊ ಏನೊ ಎಷ್ಟೊಂದ ಹುಡಕಾಕ ಹತ್ತಿನಿ ಸಿಗುವಲ್ದ ರಿ) ಎನ್ನುತ್ತಾ ನೂರರ ಎರಡು ನೋಟನ್ನು ಬಷೀರನ ಮುಂದೆ ಹಿಡಿದನು. ನೋಟನ್ನು ನೋಡಿದ ಬಷೀರನು ' ದಸ್ ಮಿನ್ಟ ಬೈಟೊ, ಅಭಿ ಆತಾಹ್ಞೂಂ' ( ಹತ್ತ ನಿಮಿಷ ಕುಳಿತಿಕೊ ಈಗ ಬಂದೆ )ಎಂದು ಒಳಗಡೆ ಹೋಗಿ ಹದಿನೈದು ನಿಮಿಷದ ನಂತರ ಹೊರಗಡೆ ಬಂದು ಕೀಯನ್ನು ಕೊಟ್ಟನು. ಕೀಯನ್ನು ತೆಗೆದುಕೊಂಡು ಹೊರಡಬೇಕೆನ್ನುವಷ್ಟರಲ್ಲಿ, ' ಝರಾ ಠೇಹರೊ'( ಸ್ವಲ್ಪ ನಿಲ್ಲು) ಎಂದನು ಬಷೀರ, ಗಂಟಲಪಸೆಯೆ ಆರಿ ಹೋಯಿತು ಅಖಿಲನದು, ಎಲ್ಲಿ ನಾನು ಕಳ್ಳತನಕ್ಕೆ ಈ ಕೀಯನ್ನು ಉಪಯೋಗಿಸಬಹುದೆಂದು ಮರಳಿ ಕಿತ್ತುಕೊಂಡುಬಿಟ್ಟರೆ, ಎಂಬ ಭಯ ಅವನನ್ನು ಸುಡತೊಡಗಿತು. ಮೆಲ್ಲಗೆ ನಡಗುತ್ತಲೆ ಹೊರಳಿ ನಿಂತನು ಅಖಿಲನು. ಬಷೀರನು ತನ್ನ ಮೊಬೈಲನಿಂದ ಅಖಿಲನ ಹೆಗಲ ಮೇಲೆ ಕೈ ಹಾಕಿ ಪೋಟವನ್ನು ತೆಗೆದುಕೊಂಡು, ' ಕಲ್ ತುಮ್ ಕುಛ್ ಕ್ಯಾಬಿ ಗಡಬಡ್ ಕಿಯಾ ತೋ..? ಹೈ ಕಿ ನಹೀ.: ( ನಾಳೆ ನೀನೆನರ ಹೆಚ್ಚು ಕಡಿಮೆ ಮಾಡಿದೆಂದ್ರ ಹೌದಲ್ಲ) ಎಂದು ಪಾನಬೀಡಾ ಹಾಕಿ ಕೆಂಪಾದ ತನ್ನೆಲ್ಲ ಹಲ್ಲುಗಳ ದರ್ಶನವನ್ನು ಮಾಡಿಸುತ್ತಾ. 'ಮುದುಕಾ ಪಾರ್ವರ್ಡ ಆಗಿದ್ದಾನೆ' ಮನದಲ್ಲಿ ಮಾತನಾಡುತ್ತಾ 'ಹ್ಞಾಂ, ಅಚ್ಚಿ ಬಾತ್ ಭಯ್ಯಾ, ಮೈ ಚಲೂಂ'( ಒಳ್ಳೆ ಮಾತು ಅಣ್ಣಾ ನಾನಿನ್ನು ಹೊಗ್ಲಾ) ಎಂದು ಕೇಳಿದನು ಅಖಿಲನು. ಹ್ಞೂಂ ಎನ್ನುವಂತೆ ತಲೆಯನ್ನಾಡಿಸಿದನು ಬಷೀರ, ಬಾಗಿಲನ್ನು ತೆರೆದು ಒಂದ್ನಾಕು ಹೆಜ್ಜೆ ದೂರ  ಬಿರುಸಾಗಿ ನಡೆದು ಬಂದು  ನಂತರ ಓಡಲು ಶುರು ಮಾಡಿಬಿಟ್ಟನು. ಮನೆಯ ಹತ್ತಿರ ಬಂದು ಸ್ವಲ್ಪ ಸುಧಾರಿಸಿಕೊಂಡು, ಸಾಲಗಾರರು ಯಾರು ಮನೆಯ ಮುಂದೆ  ಕಾಯುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಮನೆಯ ಹತ್ತಿರ ಬಂದ ಕೀಯನ್ನು ತೆಗೆದು ಒಳಗಡೆ ಹೋಗಿ ಗಟಗಟನೆ ನೀರನ್ನು ಕುಡಿದು, ದಪ್ಪನೆಂದು ನೆಲಕ್ಕೆ ಕುಳಿತುಕೊಂಡು ಬಿಟ್ಟನು. ಮೈಯಿಂದ ಬೇವರು ಕಿತ್ತಿ ಬರಲಾರಂಭಿಸಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು, ಮೇಲೆದ್ದು ಬಟ್ಟೆಗಳನ್ನು ಬದಲಾಯಿಸಿ, ಮನೆಯಿಂದ ಹೊರಗೆ ಬಂದು ಕೀಲಿಯನ್ನು ಹಾಕಿ ತಾಯಿಯನ್ನು ನೋಡಲು ಆಸ್ಪತ್ರೆಯತ್ತ ಹೆಜ್ಜೆಯನ್ನು ಹಾಕತೊಡಗಿದನು.
ಸಮಯ ಮಧ್ಯರಾತ್ರಿ ಹನ್ನೆರಡು ಮುಕ್ಕಾಲಾಗಿತ್ತು. ಕಳ್ಳ ಹೆಜ್ಜೆಗಳನ್ನು ಹಾಕುತ್ತಾ ಜನರಲ್ ವಾರ್ಡನಲ್ಲಿ ಮಲಗಿಸಲಾಗಿದ್ದ ತಾಯಿಯ ಹತ್ತಿರ ಮೆಲ್ಲಗೆ ಕುಳಿತುಕೊಂಡು 'ಅಮ್ಮಾ..ಅಮ್ಮಾ..' ಎಂದೆರಡು ಸಲ ಕೈಯನ್ನು ಹಿಡಿದು ಅಲುಗಾಡಿಸುತ್ತಾ ಕೂಗಿದನು, ಮೆಲ್ಲಗೆ ಕಣ್ತೇರೆದ ಅವನ ತಾಯಿ, ' ಯಾಕೊ ಇವತ್ತು ಇಷ್ಟೊತ್ತಿಗೆ ಬಂದೆ, ಸಂಜೆ ಪಾಳೆಗೆ ಬಂದ ಡಾಕ್ಟ್ರು ನಿಂಗೇನೊ ಹೇಳ್ಬೇಕು ಅಂತಿದ್ರು ಕಣೋ, ಬೆಳಿಗ್ಗೆನಾದ್ರು ಅವರನ್ನ ಭೇಟಿಯಾಗು' ಚಿಕ್ಕ ಧ್ವನಿಯಲ್ಲಿ ಹೇಳುತ್ತಾ ಎದ್ದೆಳಲು ಅನುವಾದಳು. ತಕ್ಷಣ ಅಖಿಲನು ತಾಯಿಯನ್ನು ಕೈ ಹಿಡಿದೆಬ್ಬಿಸಿ, ಮಂಚಕ್ಕೆ ತಲೆದಿಂಬೊಂದನ್ನು ಇಟ್ಟು ಬೆನ್ನಿಗಾಸರಿಸಿ ಕುಳ್ಳರಿಸಿ, ದಾರಿಯಲ್ಲಿ ಬರುವಾಗ ಕಟ್ಟಿಸಿಕೊಂಡ ಬಂದ ಅನ್ನವನ್ನು ಬಿಚ್ಚಿ, ಒಂದೊಂದೆ ತುತ್ತನ್ನು ಉಣ್ಣಿಸತೊಡಗಿದನು, ಎರಡ್ಮೂರು ತುತ್ತನುಂಡು ಸಾಕೆಂದುಬಿಟ್ಟಳು, ಅಖಿಲನು ' ಇನ್ನೊಂದೆರಡು ತುತ್ತು ಉಣ್ಣಮ್ಮ' ಕಣ್ಣುಗಳಲ್ಲಿ ಕಣ್ಣೀರನ್ನೆ ತುಂಬಿಕೊಳ್ಳುತ್ತಾ,
' ಇಂದೊ.. ನಾಳೆನೊ ಬಿದ್ದು ಹೋಗೊ ಮರಕ್ಕೆ ಎಷ್ಟು ಉಪಚರಿಸಿದರು ಏನ್ ಬಂತಪ್ಪ, ಮತ್ತೆ ಚಿಗುರೊಡೆಯಲು ಸಾಧ್ಯವಿಲ್ಲ. ಈ ಉದುರಿ ಬಿಳೊ ಎಲಿನ ಉಳಿಸಿಕೊಳ್ಳಲು ನಿ ಪಡೊ ಕಷ್ಟಾನ ನನ್ನ ಕೈಲಿ ನೋಡೊದಿಕ್ಕ ಆಗ್ತಾಯಿಲ್ಲ ಕಣೊ,'
ಕಣ್ಣಲ್ಲಿ ನೀರನ್ನು ತುಂಬಿಕೊಳ್ಳುತ್ತಾ ಗದ್ಗರಿತ ಧ್ವನಿಯಲ್ಲಿ ನುಡಿದಳು. ' ಇಲ್ಲ ಅವ್ವ..  ಹಂಗೇನಿಲ್ಲ ಆಪರೇಷನ್ ಗೆಲ್ಲ  ಹಣಾನ ರೆಡಿ ಮಾಡಿಯಾಗಿದೆ, ನಾಳೆಯೊ ನಾಡಿದ್ದೊ ಬಂದ್ಬಿಡುತ್ತೆ ', ಅಖಿಲನ ತಾಯಿಯು ಅವನ ಬಾಯಿಗೆ ಕೈಯಿಟ್ಟು, ' ಹುಚ್ಚ ಹುಡ್ಗ, ನನ್ನ ಆರೋಗ್ಯವೇನು ಸಾವಿರಾರು ರೂಪಾಯಿಯಿಂದ ಗುಣವಾಗುವಂತದ್ದೇನು..?, ಲಕ್ಷ, ಲಕ್ಷಗಟ್ಟಲೆ ಹಣಬೇಕು ಕಣೋ, ನಮ್ದೇನಿದೆ ಆಸ್ತಿ ? ಹೊಲಾನಾ, ಮನೆನಾ, ಬ್ಯಾಂಕ್ ಖಾತೆಯಲ್ಲಿ ಏನಾದ್ರೂ ಜಮಾ ಇದೆಯಾ..? ಅದು ಇಲ್ಲ, ಮತ್ತೇಲ್ಲಿಂದ ತರ್ತೀಯಾ, ಯಾವುದಾದ್ರೂ ಬ್ಯಾಂಕಿಗೆ ಕಳ್ಳತನ ಮಾಡಾಕ ಹೋಗ್ಬೇಕ ನೋಡು.‌ಹ್ಹ....ಹ್ಹ....ಹ್ಹ..' ಹೇಳುತ್ತಾ, ತಣ್ಣಗೆ ನಕ್ಕಳು. ' ಬ್ಯಾಂಕ ಕಳ್ಳತನ..!!!!! ತಾಯಿಯಿ ಬಾಯಿಂದ ಆ ಮಾತನ್ನು ಕೇಳಿದ ತಕ್ಷಣವೆ ಬೆನ್ನಿನ ಹುರಿಯಲ್ಲಿ ನಡುಕ ಹುಟ್ಟಿದಂತಾಗಿ,‌‌ದಿಕ್ಕನೆ ಎದ್ದು ನಿಂತುಬಿಟ್ಟ ಅಖಿಲನು. ಗಂಟಲೆಲ್ಲ ಒಣಗಿ ಹೋಗಿ, ಮಾತನಾಡಲು ಬಾರದಂತೆ ತಡಬಡಿಸುತ್ತ ತಾಯಿಯ ಮುಖವನ್ನೆ ದಿಟ್ಟಿಸಿ ನೋಡುತ್ತಾ, ಏನು ಮಾತನಾಡಬೇಕೆಂಬುದನರಿಯದೆ, ಕೈಯಲ್ಲಿದ್ದ ಅನ್ನದ ಪೊಟ್ಟಣವನ್ನು ಮಡಿಚಿ, ವಾರ್ಡನಿಂದ ಹೊರಗೆ ಬಂದು ಅಲ್ಲೆ ಇಟ್ಟಿದ್ದ ಕಸದಡಬ್ಬಿಗೆ ಹಾಕಿ, ಕೈ ತೊಳೆದುಕೊಂಡು ಬಂದು, ಅಧೈರ್ಯದಿಂದಲೆ ತಾಯಿಯ ಪಕ್ಕದಲ್ಲಿ ಕುಳಿತುಕೊಂಡನು.
' ನೋಡಪ್ಪ, ನನ್ಗಿರೋನು ನೀನೊಬ್ನೆ, ನಾನು ಈಗಂದ್ರೆ, ಈಗಲ್ಲ, ನಾಳೆಂದ್ರೆ ನಾಳಿಲ್ಲ, ಬೆಳಕು ಹರಿದು ಸೂರ್ಯನ ಬೆಳಕನ್ನ ನೋಡುವೆನೆಂಬ ನಂಬಿಕೆಯಿಲ್ಲ, ಇಂತಾ ಸಮಯದಲ್ಲಿ ನೀನು ನನ್ನ ಉಳಿಸುಕೊಳ್ಳುವ ಸಲುವಾಗಿ,, ಊರ ತುಂಬಾ ಸಾಲ ಮಾಡಿ, ಕಣ್ತಪ್ಪಿಸಿ ಅಲೆದಾಡೊದು ಚೆನ್ನಾಗಿರಲ್ಲ,' ತಾಯಿಯ ಮಾತಿನಿಂದ, ಎದ್ದು ತಾಯಿಯೆರಡು ಪಾದಗಳನ್ನು ಗಟ್ಟಿಯಾಗಿ ಎದೆಗವಚಿಕೊಂಡು  ಕಣ್ಣಿನ ತುದಿಯಲ್ಲೆ ಕಟ್ಟಿ ಹಾಕಿದ್ದ ಕಣ್ಣೀರ ಕಟ್ಟೆ ಒಡೆದು ಅಳಲಾರಂಭಿಸಿದನು. ' ಇವತ್ತು ಸಂಜೆ ನಿನಗೆ ಸಾಲ ಕೊಟ್ಟ ಸಾಲಗಾರರು ಇಲ್ಲಿಗೂ ಬಂದಿದ್ದರು ನಿನ್ನನ್ನು ಹುಡುಕಿಕೊಂಡು,
ನೋಡಪ್ಪಾ, ಬಿಸೊ‌ ಬಿರುಗಾಳಿ ಮುಂದೆ ಹಚ್ಚಿಟ್ಟ ಹಣತೆಯಂತೆ ನಾನು, ಒಮ್ಮೊಮ್ಮೆ ತಂಗಾಳಿ ಗಾಳಿನ ತಡ್ಕೊಳ್ಳದ ಆಗೋದಿಲ್ಲ, ಇನ್ನೂ ಬಿರುಗಾಳಿ ಮುಂದ ಗಟ್ಟಿಯಾಗಿ ನಿಂತ ಉರಿಯೊದಕ್ಕೆ‌ ಸಾಧ್ಯವೇನು..?, ಬೇಡ..ಬೇಡ.. ನನ್ನನು ಉಳಿಸಿಕೊಳ್ಳುವ  ದುಸ್ಸಾಹಸಕ್ಕೆ ನೀನು ಯಾವುದೆ ದುಸ್ಸಾಹಸಕ್ಕೆ ಕೈ ಹಾಕಬೇಡ, ನಾನು ಕಣ್ಮುಚ್ಚೊ ಮುಂಚೆ ನನ್ನ ಬಾಯಿಯೊಳಗ ಎರಡ ಹನಿ ನೀರನ್ನ ಹಾಕೊದಿಕ್ಕ ನನ್ನ ಪಕ್ಕ ಇದ್ದರೆ ಸಾಕು,'' ಕಣ್ಣಲ್ಲಿ ಕಣ್ಣೀರನ್ನು ತರುತ್ತಾ, ಅಖಿಲನಿಗೆ ಕೈ ಮುಗಿದಳು. ತಾಯಿ ಕೈ ಮುಗಿಯುವದನ್ನು ಕಂಡು, ಕಾಲುಗಳನ್ನು ಬಿಟ್ಟು ಕೈಗಳನ್ನು ಹಿಡಿದು' ಅವ್ವ...ಅವ್ವಾ... ಎಂತಹ ಮಾತುಗಳನ್ನಾಡುತ್ತಿರುವೆ, ನೀನು ಹೀಗೆ ಕೈ ಮುಗಿದು ನನ್ನನ್ನ ಯಾವ ನರಕಕ್ಕ ಕಳ್ಸತೀದಿ. ಆಯ್ತು ಇನ್ಮುಂದು ನಿನ್ನ ಬಿಟ್ಟು ನಾನೇಲ್ಲಿ ಹೋಗುವುದಿಲ್ಲ.' ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದನು.
ಇವರ ಮಾತಿನ ಶಬ್ದಕ್ಕೆ ಅಕ್ಕಪಕ್ಕದ ಬೆಡ್ ನಲ್ಲಿರುವ ಪೇಷಂಟ್ ಗಳು ಎಚ್ಚರವಾಗಿ ತಾಯಿ ಮಗನ ನಡುವೆ ನಡೆದ ಘಟನೆಯನ್ನು ನೋಡಿ, ಅವರು ಕಣ್ಣೀರಾದರು. ತಾಯಿಯನ್ನು ಮಲಗಿಸಿ ಮೇಲೆ ಬೆಡ್ ಶೀಟನ್ನು ಹೊದಿಸಿ ವಾರ್ಡನ ಹೊರಗಡೆ ಬಂದು, ಸಾರ್ವಜನಿಕರಿಗೆಂದೆ ವಿಶ್ರಮಿಸಲು ಹಾಕಿದ್ದ ಬೆಂಚಿನ ಮೇಲೆ ಕುಳಿತುಕೊಂಡು, ಯೋಚನಾಲಹರಿಯೊಳಗೆ ಈಜಾಡತೊಡಗಿದನು. ' ಹೌದಲ್ವ, ಇಂದೊ ನಾಳೆಯೊ‌ ಜೀವ ಬಿಡುವ ತಾಯಿಯನ್ನು ಉಳಿಸಿಕೊಳ್ಳಲು ಹೋಗಿ ಜೈಲು ಪಾಲಾದರೆ, ಅವಳ ಈ ಕಡೆಯ ದಿನಗಳಲ್ಲಿ ಅವಳನ್ನು ನೋಡಿಕೊಳ್ಳುವವರು ಯಾರು?, ಅವ್ವನೆ ಕೇಳಿದಂತೆ ಅವಳ ಕೊನೆ ಘಳಿಗೆಯಲ್ಲಿ ಕನಿಷ್ಟ ಪಕ್ಷ ಬಾಯಲ್ಲಿ ಎರಡು ಹನಿ ಗಂಗಾ ಜಲವನ್ನು ಹಾಕಲಾದರು ನಾನವಳ ಪಕ್ಕದಲ್ಲಿ ಇರಲೆ ಬೇಕಲ್ಲ..!!!, ಇನ್ನೂ ರಮೇಶ ಅವರು ಸಂಸಾರಸ್ಥರು, ನಾನು ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡರೆ ಪರ್ವಾಗಿಲ್ಲ, ಅವರೆನಾದರು ಸಿಕ್ಕರೆ, ಅವರ ಕುಟುಂಬದ ಪಾಡೇನು, ಆ ಕುಟುಂಬವನ್ನು ಮುಂದೆ ಸಾಕುವುದಾದರು ಯಾರು,' ಎಲ್ಲವನ್ನು ವಿವೇಚಿಸುತ್ತಲೆ ಮೈಯಲ್ಲಿ ಒಮ್ಮೆ ನಡುಕ ಹುಟ್ಟಿಕೊಂಡುಬಿಟ್ಟಿತು. 'ಛೆ....ಛೆ... ಎಂತಹ ದುಡುಕು ನಿರ್ಣಯಕ್ಕೆ ಕೈ ಹಾಕಿಬಿಟ್ಟಿದ್ದೆ ನಾನು. ಇಲ್ಲ...ಇಲ್ಲ. ಇದು ಹೀಗಾಗಬಾರದು, ರಮೇಶರ ಪಾಡು ಅವರಿಗಿರಲಿ, ನನ್ನಿಂದ ಅವರಿಗೇನು ತೊಂದರೆಯಾಗಬಾರದು. ಅದು ಅಲ್ಲದೆ ಬಷೀರ ಭಯ್ಯಾನು ಒಂದು ಸೆಲ್ಪಿ ತೆಗೆದುಕೊಂಡು ಬಿಟ್ಟಿದ್ದಾನೆ, ನಾಳೆ ನಾವು ಕಳ್ಳತನ ಮಾಡಿ ಬಚಾವಾದರು, ಆ ಒಂದು ಪೋಟೊದಿಂದ ಜೈಲೂಟವಂತು ಗ್ಯಾರಂಟಿ. ಬೇಡ...ಬೇಡ ನನ್ನದೊಂದು ದುಡುಕು ನಿರ್ಣಯದಿಂದ ಇಷ್ಟೆಲ್ಲ ಅನಾಹುತಗಳಾಗೋದು ಬೇಡ. ' ಎಂದು ಮನಸ್ಸಿನಲ್ಲಿ ಗಟ್ಟಿ ನಿರ್ಧಾರವನ್ನು ಮಾಡಿಕೊಂಡ ಮೇಲೆ ಮನಸ್ಸೊಂದಿಷ್ಟು ಹಗುರವಾದಂತಹ ಭಾವವುಂಟಾಗಿ, ಕುಳಿತ ಬೆಂಚಿನ ಮೇಲೆ‌ ದೇಹವನ್ನು ಚಾಚಿಕೊಂಡು ನಿದ್ದೆಗೆ ಜಾರಿಕೊಂಡುಬಿಟ್ಟನು.

No comments:

Post a Comment