ರಮೇಶನ ಭುಜವನ್ನು ಯಾರೊ ಹಿಡಿದು ಅಲುಗಾಡಿಸಿದಂತಾಯಿತು. ತಟ್ಟನೆ ಕಣ್ಬಿಟ್ಟು ನೋಡಿದನು ಹೆದರಿಕೆಯಿಂದ, ಎದುರಿಗೆ ಅಖಿಲನು ನಿಂತಿದ್ದನು ನಗುತ್ತಾ, ಕೈಯಲ್ಲಿದ್ದ ನೀರಿನ ಬಾಟಲನ್ನು ಕೊಟ್ಟು ಕೈ ತೊಳೆದುಕೊಳ್ಳಲು ಹೇಳಿದನು, ಬ್ಯಾಗುಗಳನ್ನು ಸೈಡಲ್ಲಿಟ್ಟು, ಬಾಟಲಿಯನ್ನು ತೆಗೆದುಕೊಂಡು ಕೈಯನ್ನು ತೊಳೆದುಕೊಂಡು, ಅಖಿಲನ ಕೈಯಲ್ಲಿದ್ದ ಪೊಟ್ಟಣವನ್ನು ಪಡೆದುಕೊಂಡು ಗೋಡೆಗೆ ಆತುಕೊಂಡು ಕುಳಿತು ತಿಂಡಿಯ ಪೊಟ್ಟಣವನ್ನು ಬಿಚ್ಚಿದನು, ಎಗ್ಗರೈಸ್, ಅನ್ನದ ವಾಸನೆ ಮೂಗಿಗೆ ಬಡೆದದ್ದೆ ತಡ ಗಬಗಬನೆ ನಾಕೈದು ತುತ್ತನ್ನು ಉಂಡು ' ಯಾಕೊ ಇದರ ರುಚಿ ಬದಲಾಗಿದೆಯಲ್ಲ.?'
' ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲವಲ್ಲ, ಬಾಯಿ ರುಚಿಯನ್ನು ತಿಳಿಯಲು ಟೈಂ ಹಿಡಿಯುತ್ತದೆ, ಬೇಗ ಬೇಗ ಊಟಮಾಡಿ ಹೊರಡುವ'
'ಮತ್ತೆ ನೀನು.?'
'ನಂದಾಯಿತು, ಹೊಟ್ಟೆ ನನ್ನದು ಬಹಳಷ್ಟು ಹಸಿದುಬಿಟ್ಟಿತು, ನಿಮಗೆ ಪಾರ್ಸಲ್ ಕಟ್ಟುವ ಸಮಯದಲ್ಲೆ, ಅಲ್ಲೆ ನಾನು ಉಂಡು ಬಂದುಬಿಟ್ಟೆ'
' ಹೌದಾ. ಸರಿ ಸರಿ '
ಎನ್ನುತ್ತಾ ಎರಡೆ ತುತ್ತಿನಲ್ಲಿ ಎಲ್ಲವನ್ನು ಮುಗಿಸಿ. ನೀರನ್ನು ಕುಡಿದು ಕೈಯನ್ನು ತೊಳೆದುಕೊಂಡು ಅಖಿಲನ ಮುಖವನ್ನು ನೋಡಿದನು ರಮೇಶನು. ಅವನ ಮೊಗದಲ್ಲಿ ಒಂದು ಸಣ್ಣ ನಗುವು ಸುಳಿದಾಡುತ್ತಿತ್ತು, ಆ ಕ್ಷಣ ಯಾಕೊ ಎದೆ ಉರಿಯತೊಡಗಿತು, ಗಂಟಲು ಕಟ್ಟಿಕೊಂಡಿತು, ಹೊಟ್ಟೆಯಲ್ಲಿ ಬೆಂಕಿಯಿಟ್ಟಂತಹ ಅನುಭವ, ಹೊಟ್ಟೆ ಮತ್ತು ಗಂಟಲನ್ನು ಹಿಡಿದುಕೊಂಡು ನೆಲದ ಮೇಲೆ ಬಿದ್ದು ಹೊರಳಾಡಲಾರಂಬಿಸಿದನು ರಮೇಶನು. ಆ ದೃಶ್ಯವನ್ನು ನೋಡುತ್ತಾ, ಅಖಿಲನು ಅಂಗಡಿಗೆ ಹೋದಾಗಿನ ಘಟನೆಯನ್ನು ನೆನಪಿಸಿಕೊಂಡನು.
ಹೆದರುತ್ತಲೆ ಅಂಗಡಿಯೊಳಗೆ ಕಾಲಿಟ್ಟನು ಅಖಿಲನು. ಅತ್ತಿತ್ತ ನಾಕೈದು ಜನ ತಿಂಡಿಯನ್ನು ತಿನ್ನುತ್ತಾ, ಇವತ್ತು ಊರಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡುತ್ತಾ ಕುಳಿತುಕೊಂಡಿದ್ದರು
'ಎಷ್ಟು ಚಂದ ನಡದಿತ್ರಿ ಮೆರವಣಿಗೆ, ಯಾರೊ ಊರಿನ ಸುಖಾನ ಹಾಳ ಮಾಡೊಕಂತಂದ ಈ ರೀತಿ ಮಾಡ್ಯಾರ, ಅವರ ಉದ್ಧಾರ ಆಗೊಲ್ರೀ ಈ ಜನ್ಮದಾಗ, ಸಾಕಷ್ಟ ಮಂದಿ ಪಾಪ ತಟ್ಟತ್ತ ಅವ್ರಿಗೆ ನೋಡಿರಂತ'
ತಲೆಗೊಬ್ಬರು ಮಾತನಾಡುತ್ತಿದ್ದನ್ನು ಕೇಳಿ ಬೆವರಿಕೊಂಡ ಅಖಿಲನು ನೇರ ಮಾಲೀಕನ ಹತ್ತಿರ ಹೋಗಿ ಪಾರ್ಸಲ್ ಹೇಳಿ ತಾನು ಅಲ್ಲಿಯೆ ಕುಳಿತು ತಿಂಡಿಯನ್ನು ತರಿಸಿಕೊಂಡು ತಿನ್ನುತ್ತಾ
' ಅಮ್ಮಾ... ನಿನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಎಷ್ಟೆಲ್ಲಾ ಪ್ರಯತ್ನಪಟ್ಟೆ ಆದರೂ ಆಗುತ್ತಿಲ್ಲ ಕೈಗೆ ಸಿಕ್ಕಿದ ಹಣವು ನಿನ್ನ ಆಪರೇಷನ್ ಮಾಡಿಸಲು ಆಗುವುದಿಲ್ಲ, ಪೂರ್ತಿ ಹಣವನ್ನು ನಾನೊಬ್ಬನೆ ಕದ್ದಿದ್ದರೆ..?!!!!, ಏನು ಮಾಡುವುದಿಗ' ಎಂದುಕೊಳ್ಳುತ್ತಿರುವಾಗಲೆ, ಅಂಗಡಿಯಲ್ಲಿಟ್ಟಿದ್ದ ಟಿವಿಯಲ್ಲಿ ಹಿಟ್ ನ ಒಂದು ಜಾಹಿರಾತು ಇವನನ್ನು ತನ್ನತ್ತ ಸೆಳೆಯಿತು.
'ಕೊಂದು ಬಿಡಿ ಒಂದೆ ಒಂದು ಜಿರಲೆಯು ಉಳಿಯದ ಹಾಗೆ ಒಂದೆ ಸ್ಪ್ರೇನಲ್ಲಿ ' ಆ ಜಾಹಿರಾತಿನಿಂದ ಕ್ಷಣಕಾಲ ವಿಚಲಿತನಾದಂತಾದ ಅಖಿಲನು ' ಕೊಂದುಬಿಟ್ಟರೆ....!!!!,
ಎನ್ನುತ್ತಾ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ವಿಷವನ್ನು ನೆನಪಿಸಿಕೊಳ್ಳುತ್ತಾ,
' ಕೊಂದೆಬಿಟ್ಟರೆ...?,
' ಹೌದು ಕೊಂದೆಬಿಟ್ಟರೆ ಎಲ್ಲ ಹಣವು ನನ್ನದಾಗುವುದಾಗ' 'ಛೆ...ಛೆ...ಹಾಗೆಲ್ಲ ನಂಬಿದವರ ಬೆನ್ನಿಗೆ ಚೂರಿ ಹಾಕುವುದು ತಪ್ಪಾಗುವುದಿಲ್ಲವೆ..?'
' ಅದೇನು ನ್ಯಾಯದಿಂದ ಸಂಪಾದಿಸಿದ ಹಣವಾ...? ತಪ್ಪು ಒಪ್ಪುಗಳನ್ನು ಪರಾಮರ್ಶಿಸಲು.'
' ಅದು ಸರಿ, ನಾನೆ ನೇರವಾಗಿ ಕೇಳಿ ಬಿಡುತ್ತೇನೆ, ನನ್ನ ತಾಯಿ ಚಿಕಿತ್ಸೆಗೆ ಇಷ್ಟೊಂದು ಹಣ ಸಾಲುವುದಿಲ್ಲ, ಎಲ್ಲ ಹಣವನ್ನು ನನಗೆ ಕೊಟ್ಟುಬಿಡು ಎಂದು.'
'ಆಹಾ....ಹಾ... ಧರ್ಮರಾಯ ಕೇಳಿದ ತಕ್ಷಣವೆ ಕೊಟ್ಟು ಕಳುಹಿಸಲು ಅವನೇನು ದಾನಶೂರ ಕರ್ಣನೆಂದುಕೊಂಡೆಯಾ...? ಅವನಿಗೂ ನಿನಗೇಷ್ಟು ಹಣದ ಅವಶ್ಯಕತೆ ಇದೆಯೊ... ಅಷ್ಟೇ ಹಣದ ಅವಶ್ಯಕತೆ ಅವನಿಗೂ ಇದೆ'
' ನಿಜ ಹಾಗಂತ ಕೊಂದು ಬಿಡುವುದಾ,'
'ಮತ್ತೀನ್ನೇನು ಮಾಡುವೆ, ಉಳಿದ ಹಣಕ್ಕಾಗಿ ಯಾರ ಬಳಿ ಹೋಗಿ ಕೈ ಚಾಚುವೆ, ಈಗಾಗಲೆ ಸಮಯವಾಗಿಬಿಟ್ಟಿದೆ, ಇಂತಹ ಅವಕಾಶ ಪದೆ ಪದೆ ಮನೆ ಬಾಗಿಲನ್ನು ಬಡಿದುಕೊಂಡು ಬರುವುದಿಲ್ಲ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡುಬಿಡು'
, 'ಹೌದೆ..?'
' ಹ್ಞೂಂ..'
.' ಹೇಗೆ,?'
'ನಿನ್ನೆ ಔಷಧಿ ಅಂಗಡಿಯಲ್ಲಿ ಅಕಸ್ಮಾತ್ ಪೋಲಿಸ್ ನವರ ಕೈಗೆ ಸಿಕ್ಕು ಹಾಕಿಕೊಂಡರೆ ಜೀವಂತವಾಗಿರಬಾರದೆಂದು ವಿಷದ ಬಾಟಲಿಯನ್ನು ತಂದಿದ್ದಿಯಲ್ಲ ಅದನ್ನೆ ಅವನಿಗೆ ತಿಂಡಿಯಲ್ಲಿ ಕಲಿಸಿ ತಿನ್ನಿಸುಬಿಡು.'
' ಹ್ಞಾಂ...!!!, ಯಾರಿಗಾದರೂ ಗೊತ್ತಾದರೆ,'
'ಹುಚ್ಚಪ್ಪ ಯಾರಿಗೆ ತಾನೆ ಗೊತ್ತಾಗುತ್ತದೆ. ಒಬ್ಬರಿಗೊಬ್ಬರಿಗೂ ಮನೆಯ ಪರಿಚಯವಿಲ್ಲ ಮತ್ತು ಅವನ ಸ್ನೇಹಿತರು ಮನೆ ಮಂದಿಗಾಗಲಿ, ನಿನ್ನ ಸ್ನೇಹಿತರು ಕುಟುಂಬದವರಿಗಾಗಲಿ ನಿಮ್ಮಿಬ್ಬರ ಪರಸ್ಪರ ಪರಿಚಯವೆ ಇಲ್ಲ. ಹೀಗಿರುವಾಗ ಇಂತಹ ಸುವರ್ಣಾವಕಾಶವನ್ನು ಏಕೆ ಕಳೆದುಕೊಳ್ಳುವೆ..?'
' ಮತ್ತೆ ಅವನ ಹೆಂಡತಿ ಮಕ್ಕಳ ಗತಿ.'
' ದಿನ ಸಾಯುವವರಿಗೆ ಅಳುವವರು ಯಾರ್ರೀ.., ಅವನ ಕುಟುಂಬದ ಚಿಂತೆ ನಿನಗೆ ಬೇಡ ಮೊದಲು ನಿನ್ನ ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಉಳಿಸಿಕೊಳ್ಳು, ದಿನವು ಹಿಂಡಿ ಹಿಂಡಿ ಸತಾಯಿಸುವ ಆ ರೋಗದಿಂದ ನಿನ್ನ ತಾಯಿಗೆ ಮುಕ್ತಿಯನ್ನು ನೀಡು.'
' ಅವನಿಗೆ ಮಂಪರು ಬರಿಸಿ ದುಡ್ಡನ್ನು ದೋಚಿದರೆ,' 'ಎಚ್ಚರವಾದ ತಕ್ಷಣವೆ, ನನಗೆ ದಕ್ಕಲಾರದ್ದು ನಿನಗೂ ದಕ್ಕಬಾರದೆಂದು ಪೋಲಿಸ್ ಸ್ಟೇಶನ್ ಗೆ ಹೋಗಿ ನಿನ್ನ ಮುಖ ಚಹರೆ ಹಾಗೂ ನಿನ್ನ ತಾಯಿಯ ಆಸ್ಪತ್ರೆಯ ವಿಷಯವನ್ನು ತಿಳಿಸಿಬಿಟ್ಟರೆ ಅಷ್ಟೇ ನಿನ್ನ ಕಥೆ, ನೀನು ಜೈಲು ನಿನ್ನನು ಹೆತ್ತ ತಪ್ಪಿಗೆ ತಾಯಿ ಮಸಣದ ಪಾಲು, ಮರೆತುಬಿಟ್ಟಿಯಾ.. ಹೆತ್ತ ತಾಯಿಗಾಗಿ ಏನಾದರು ಮಾಡಲು ಸಿದ್ದವೆಂಬುದನ್ನು.' 'ಇಲ್ಲ...ಇಲ್ಲ ಮರೆತಿಲ್ಲ, ಆದರೆ ಅವನನ್ನು ಕೊಂದು ನಾ ಹೇಗೆ ನೆಮ್ಮದಿಯಿಂದ ಇರಲಿ'
'ಅದು ನಿನ್ನ ತಾಯಿ ಬದುಕುಳಿದ ನಂತರ ಚಿಂತಿಸುವ ವಿಷಯ. ಹ್ಞೂಂ ಹೊರಡು ತಡಮಾಡಬೇಡ, ಕೈಗೆ ಸಿಕ್ಕ ಹಕ್ಕಿ ಹಾರಿಹೋಗುವ ಮುನ್ನ ಕತ್ತರಿಸಿಬಿಡು ಅದರ ಕುತ್ತಿಗೆಯನ್ನು, ಪಾಪ ಪುಣ್ಯಗಳ ಲೆಕ್ಕ ಈ ಹೊತ್ತಿನಲ್ಲಿ ತೂಗಿ ನೋಡುವುದಲ್ಲ ಹ್ಞೂಂ ನಡೆ, ಎದ್ದೇಳು' ಅಖಿಲನ ದುರಾಸೆಯ ಮನಸ್ಸು ಹಣಕ್ಕಾಗಿ ಹುಚ್ಚನನ್ನಾಗಿಸಿಬಿಟ್ಟಿತು, ಹೌದು ಇದೆ ಸರಿಯಾದ ನಿರ್ಣಯ. ಅವನ ಕಣ್ಣಲ್ಲಿಗ ಕ್ರೂರತೆ ತುಂಬಿಕೊಂಡುಬಿಟ್ಟಿತು, ಅನ್ನವನ್ನು ಪೂರ್ತಿಯಾಗಿ ಉಣ್ಣದೆ, ಅರ್ಧದಲ್ಲೆ ಕೈಯನ್ನು ತೊಳೆದುಕೊಂಡು, ಕೊಟ್ಟ ಪಾರ್ಸಲ್ ನ್ನು ತೆಗೆದುಕೊಂಡು ಹಣವನ್ನು ಕೊಟ್ಟು ದಾರಿಯ ಮದ್ಯದಲ್ಲಿ ತಿನ್ನುವ ಅನ್ನಕ್ಕೆ ವಿಷವನ್ನು ಬೇರಸಿ ನಗುನಗುತ್ತಲೆ ರಮೇಶನಿಗೆ
ಉಣ್ಣಲಿಕ್ಕಿದ್ದನು.
ಕಣ್ಣುಗಳೆಲ್ಲ ಕೆಂಪಾಗಿ ರಕ್ತ ಕಾರುವ ಸ್ಥಿತಿಯನ್ನು ತಲುಪಿ, ವಿಲವಿಲನೆ ಒದ್ದಾಡತೊಡಗಿದನು ರಮೇಶನು ಒಂದೆರಡು ಸಾರಿ ಅಖಿಲನ ಕಡೆಗೆ ನೋಡಿ ಯಮಯಾತನೆಯ ನೋವಿನಲ್ಲೂ ಮುಗುಳು ನಗುತ್ತಾ, ಕೊನೆಯುಸಿರನ್ನು ಬಿಟ್ಟುಬಿಟ್ಟನು. ಅಖಿಲನು ತಡಮಾಡದೆ ರಮೇಶನ ಬ್ಯಾಗನ್ನು ಎಳೆದುಕೊಂಡು ಜಿಪ್ಸನ್ನು ಎಳೆದು ನೋಡಿ ಗಾಬರಿಯಾಗಿಬಿಟ್ಟನು. ಬ್ಯಾಗಿನೊಳಗಿದ್ದ ಹಣವೆಲ್ಲ ಖಾಲಿ.. ಒಂದು ನೋಟು ಇಲ್ಲ, ನೆತ್ತಿಗೇರಿದ್ದ ಹಣದ ಹುಚ್ಚು ಝರ್ರನೆ ಕೆಳಗಿಳಿದು ಬಿಟ್ಟಿತು ಅಖಿಲನಿಗೆ, ' ನನ್ನ ಹಣ ?' ಎಂದುಕೊಳ್ಳುತ್ತಲೆ, ತನ್ನ ಬ್ಯಾಗನ್ನು ಎಳೆದು ಜಿಪ್ಸನ್ನು ತೆಗೆದು ನೋಡಿದಾಗ ಸಿಡಿಲು ಬಡಿದು ಸುಟ್ಟು ನಿಂತ ಒಂಟಿ ಮರದ ಹಾಗೆ ಸ್ತಂಬ್ದಭೂತವಾಗಿ ನಿಂತುಬಿಟ್ಟನು. ಬ್ಯಾಗಿನ ತುಂಬೆಲ್ಲಾ ಹಣವಿತ್ತು, ಆ ಹಣದ ಮೇಲೊಂದು ಪತ್ರವೊಂದಿತ್ತು. ಅದನ್ನು ತೆಗೆದುಕೊಂಡು ಕೆಳಗೆ ದೇವಾಲಯದ ಕಂಬಕ್ಕೆ ಆನಿಸಿ ಕುಳಿತುಕೊಂಡು, ಚೀಟಿಯನ್ನು ಬಿಚ್ಚಿ ದೇವಾಲಯದ ದೀಪದ ಬೆಳಕಿನಲ್ಲಿ ಒಂದೊಂದೆ ಅಕ್ಷರಗಳನ್ನು ಓದುತ್ತಾ ಹೋದಂತೆ ಕೈ ಕಾಲುಗಳೆಲ್ಲ ನಡುಗಿ, ತನ್ನ ತಲೆಯನ್ನು ತಾನೆ ಜಜ್ಜಿಕೊಳ್ಳುವ ಹಾಗಾಗಿಬಿಟ್ಟಿತು ಅಖಿಲನಿಗೆ.
No comments:
Post a Comment