Sunday, October 14, 2018

ಭಾಗ ೩

ಅಖಿಲ್ ನು ಆ ಪೇಪರನ್ನು ಹಿಡಿದುಕೊಂಡು ಮೇಲೆಳುತ್ತಾ ರಮೇಶನನ್ನು ಕೈ ಹಿಡಿದು ಬೆಂಚಿನ ಮೇಲೆ ಕುಳ್ಳರಿಸಿ, ತಾನು ಕ್ಷಣಕಾಲ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡ ತೊಡಗಿದನು, ಕೊನೆಗೊಂದು ನಿರ್ಧಾರಕ್ಕೆ ಬಂದವನಂತೆ ರಮೇಶನತ್ತ ನೋಡಿದನು. ರಮೇಶನು ಹಣೆಗೆ ಹೊತ್ತುಕೊಂಡು ಅಲ್ಲೊಂದು ಇಲ್ಲೊಂದ ಸಣ್ಣಗೆ ಆಗಸದಲ್ಲಿ ಮಿನುಗಲು ಅಣಿಯಾಗುತ್ತಿದ್ದಂತಹ ನಕ್ಷತ್ರಗಳನ್ನು ನೋಡುತ್ತಾ ಕುಳಿತುಕೊಂಡಿದ್ದನು. ಅಖಿಲ್ ನು ಮೆಲ್ಲಗೆ ಅವನ ಬಳಿ ಕುಳಿತುಕೊಂಡು ರಮೇಶನ ತೊಡೆಯ ಮೇಲೆ ತನ್ನ ಕೈಯನ್ನಿಟ್ಟು, ' ಸರ್ ' ಎಂದ
'ಹ್ಞಾಂ ' ಎಂದು ವಾಸ್ತವಕ್ಕೆ ಬಂದ ರಮೇಶನು ಏನು ಎನ್ನುವ ಅರ್ಥದಲ್ಲಿ ಗೋಣನ್ನು ಆಡಿಸಿದನು.
'ನಮ್ಮಿಬ್ಬರಿಗೂ ಈಗ ಹಣದ ಅವಶ್ಯಕತೆ ಬಹಳಷ್ಟಿದೆ ಅಲ್ವಾ ಸರ್'
'ಹೌದು'
'ನೀವೇನು ತಪ್ಪನ್ನು ತಿಳಿದುಕೊಳ್ಳುವುದಿಲ್ಲವೆಂದರೆ, ನಾಳೆ ಸಂಜೆಯೊಳಗೆ ನಮ್ಮ ಕೈಯಲ್ಲಿ ಹಣ ಸೇರುವ ಉಪಾಯವೊಂದನ್ನು ಹೇಳಲೆ,'
ಸರ್ರಕ್ಕನೆ ಕತ್ತನ್ನು ತಿರುಗಿಸಿ ಬೆರಗುಗಣ್ಣಿನಿಂದ ಅಖಿಲ್ ನನ್ನೆ ನೋಡತೊಡಗಿದನು ರಮೇಶ, ಪಕ್ಕದಲ್ಲಿಟ್ಟುಕೊಂಡಿದ್ದ ನೀರಿನ ಬಾಟಲಿಯನ್ನು ಎತ್ತುಕೊಂಡು ಗಟಗಟನೆ ನೀರನ್ನು ಕುಡಿದು ಬಾಟಲಿಯನ್ನು ಗಿಡದ ಪೊಟರೆಯತ್ತ ಒಗೆದು, ಕೈ ವಸ್ತ್ರದಿಂದ ಮುಖವನ್ನೊಮ್ಮೆ ಸ್ವಚ್ಚವಾಗಿ ಒರೆಸಿಕೊಂಡು ಮೈಯಲ್ಲಾ ಕಿವಿಯಾಗಿಸಿಕೊಂಡು ಹೇಳು ಎನ್ನುವಂತೆ ಅವನ ಎದುರಿಗೆ ತಿರುಗಿ ಕುತುಹಲದಿಂದ ಕುಳಿತುಕೊಂಡನು.
ಒಮ್ಮೆ ದೀರ್ಘವಾಗಿ ಉಸಿರನ್ನು ಎಳೆದುಕೊಂಡ ಅಖಿಲನು
' ನಾನೊಂದು ನಿರ್ಣಯಕ್ಕೆ ಬಂದಿದ್ದೇನೆ ಸರ್, ಇದು ನಿಮಗೆ ಸರಿ ಅನ್ನಿಸುತ್ತು, ಬಿಡುತ್ತೊ ನನಗೆ ಗೊತ್ತಿಲ್ಲ, ಇವತ್ತೀನ ಈ ಸಂಜೆವಾಣಿ ಪೇಪರನ್ನು ಓದಿದ್ದೀರಾ..?'
ರಮೇಶನು ಇಲ್ಲವೆಂಬುವಂತೆ ತಲೆಯನ್ನು ಅತ್ತಿತ್ತ ಅಲ್ಲಾಡಿಸಿದನು. ಅಖಿಲ್ ನು ಆಗ ಪೇಪರನಲ್ಲಿ ಬಂದಿದ್ದ ಸುದ್ದಿಯನ್ನು ಅವನತ್ತ ತೋರಿಸಿದನು. ಆಗಲೇ ಕತ್ತಲಾಗಿಬಿಟ್ಟಿತ್ತು, ರಮೇಶನಿಗೆ ಸರಿಯಾಗಿ ಪೇಪರಿನ ಅಕ್ಷರಗಳು ಕಾಣಿಸಲಿಲ್ಲ, ಇದನ್ನರಿತ ಅಖಿಲ್ ನು ತನ್ನ ಸ್ಮಾರ್ಟ್ ಪೋನಿನ ಬ್ಯಾಟರಿಯನ್ನು ಆನ್ ಮಾಡಿ ಆ ಪತ್ರಿಕೆಯತ್ತ ಹಿಡಿದನು. ರಮೇಶನು ಅಗ ಕಣ್ಣರಳಿಸಿ ಆ ಸುದ್ದಿಯನ್ನು ಓದತೊಡಗಿದನು. 'ಇಂದು ಬೆಳಿಗ್ಗೆ ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಬೈಕನಲ್ಲಿ ಮುಸುಕುದಾರಿಯಾಗಿ ಬಂದ ಇಬ್ಬರು ಕಳ್ಳರು ಎಸ್.ಬಿ.ಆಯ್. ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯ ಕೈಯಿಂದ ಹಣದ ಸೂಟಕೇಸ್ ನ್ನು ಕಸಿದುಕೊಂಡು ಪರಾರಿಯಾಗಿದ್ದರೆ, ಈ ಸಂದರ್ಭದಲ್ಲಿ ಪ್ರತಿಭಟಿಸಿದ ವ್ಯಕ್ತಿಯ ಕೈಗೆ ಚಾಕುವಿನಿಂದ ಗಾಯವನ್ನು ಮಾಡಿ ಪರಾರಿಯಾಗಿದ್ದಾರೆ.' ಓದಿ ಅಖಿಲ್ ನ ಮೊಗವನ್ನು ನೋಡಿದ ರಮೇಶನು. ಅವನ ಮೊಗದಲ್ಲಿ
ಗೆಲುವಿನ ನಗೆಯನ್ನು ಕಂಡು, ಮುಂದಾಗುವ ಅನಾಹುತವನ್ನು ನೆನೆದ ರಮೇಶನು ಮೈ ತುಂಬಾ ಬೆವರಿಬಿಟ್ಟನು. ಬೆವರಿನಿಂದ ಅಂಗಿಯಲ್ಲ ತೊಯ್ದು ತಪ್ಪಡಿಯಾಗಿಬಿಟ್ಟಿತು. ಎದುರುಸಿರನ್ನು ಬಿಡುತ್ತಾ, ಕೈಯಲ್ಲಿ ಹಿಡಿದುಕೊಂಡಿದ್ದ ಪೇಪರನ್ನು ಕಿತ್ತೊಗೆದು ಎದ್ದು ನಿಂತು ಜೋರಾಗಿ ಉಸಿರಾಡತೊಡಗಿದನು.
'ಯಾಕ್ ಸರ್ ಏನಾಯ್ತು ?' ಎಂದನು ಅಖಿಲ್
'ಏನಯ್ಯ.. ನನ್ನನ್ನೇನು ಕಳ್ಳ ಅಂತಾ ಅಂದ್ಕೊಂಡಿದ್ದೀಯಾ? ಅಥವಾ ತಲೆಮಾಸಿದವನು ಅಂತೇನಾದರು ತಿಳ್ಕೊಂಡಿದ್ದೀಯಾ,? ಈ ತರ ಕಳ್ಳತನ ಮಾಡೊದಿಕ್ಕೆ ಹೋಗಿ ನಾವಿಬ್ರು ಏನಾದ್ರು ಪೋಲಿಸರ್ ಕೈಗೆ ಸಿಕ್ಕಿ ಬಿದ್ದರೆ, ನನ್ನ ಹೆಂಡತಿ ಮಗಳ ಗತಿಯೇನು? ನಿನ್ನ ತಾಯಿಯ ಗತಿಯೇನು? ಮುಂದೆ ಅವರೇನು ಭಿಕ್ಷೆ ಬೇಡಿಕೊಂಡು ತಿನ್ನಬೇಕಾ? ಸ್ವಲ್ಪನಾದ್ರು  ಸಾಮಾಜಿಕ ಜವಾಬ್ದಾರಿ ಬೇಡವೇನಯ್ಯ ನಿನಗೆ,‌ ಎದ್ದೇಳು ಇಲ್ಲಿಂದ, ನಿನ್ನ ಮಾತನ್ನು ನಂಬಿಕೊಂಡು ನಾನೇನಾದರೂ ಈ ಕೆಲಸಕ್ಕೆ ಕೈ ಜೋಡಿಸಿದರೆ ಅಷ್ಟೇ ನನ್ನ ಕಥೆ, ನಡಿ...ನಡಿ... ಇಂತಹ ಚಿಲ್ಲರೆ ಬುದ್ದಿಯನ್ನು ನನ್ನ ಮುಂದೆ ಪ್ರದರ್ಶಿಸಬೇಡ, ಒಬ್ಬರ ದುಡ್ಡನ್ನು ಅನ್ಯಾಯವಾಗಿ ಎಗರಿಸಿ ನನ್ನ ಮಗಳಿಗೆ ಚಿಕಿತ್ಸೆಯನ್ನು ಕೊಡಿಸುವ ಅವಶ್ಯಕತೆ ನನಗಿಲ್ಲ,  ದೇವರಿದ್ದಾನೆ ಯಾವುದಾದರೊಂದು ದಾರಿಯನ್ನು ತೋರಿಸಿಯೆ, ತೋರಿಸುತ್ತಾನೆ, ಎದ್ದೇಳಯ್ಯ, ಎದ್ದು ಹೋಗು ಇನ್ನು ಇಲ್ಲೆ ಕೂತಿದ್ದಿಯಲ್ಲ,' ಎನ್ನುತ್ತಾ ಸಿಟ್ಟಿನಿಂದ ರಮೇಶನು ಬೆಂಚಿನ ಮೇಲೆ ಕುಳಿತಿದ್ದ ಅಖಿಲ್ ನ ತೋಳನ್ನು ಹಿಡಿದೆಬ್ಬಿಸಿ ದೂಡಿದನು. ರಮೇಶನ ಈ ಅನೀರಿಕ್ಷಿತ ನಡವಳಿಕೆಯಿಂದಾಗಿ ಏನು ಮಾಡಬೇಕೆಂಬುದು ಅಖಿಲನಿಗೆ ಗೊತ್ತಾಗಲೆ ಇಲ್ಲ, ಹೆದರಿ ತಬ್ಬಿಬ್ಬಾಗಿ ಅತ್ತಿತ್ತ ನೋಡಿದನು, ಯಾರಾದರು ನಮ್ಮ ಮಾತಗಳನ್ನು ಕೇಳಿಸಿಕೊಂಡರೇನೊ ಎಂಬ ಭಯದಿಂದ, ಇವರ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ಸನಿಹ ಯಾರಿಲ್ಲದಿದ್ದರು, ಅನತಿ ದೂರದಲ್ಲಿ ಒಂದು ಪೊದೆಯ ಹಿಂದೆ ಸದ್ದು ಬಂದಿತು,  ಕೈಯಲ್ಲಿ ಕಟ್ಟಿದ ಗಡಿಯಾರವನ್ನು ನೋಡಿದ ೭ ಗಂಟೆಯಾಗಿತ್ತು, ಧೈರ್ಯದಿಂದ ಮೊಬೈಲ್ ಟಾರ್ಚನ್ನು ಹಚ್ಚಿಕೊಂಡು ಪೊದೆಯ ಹತ್ತಿರ ಒಂದೊಂದೆ ಹೆಜ್ಜೆಗಳನ್ನಿಡುತ್ತಾ ಬಂದು ನಿಂತನು. ಅಖಿಲನು ಬಂದ ಸದ್ದಿಗೆ ಪೊದೆಯಿಂದ ಎರಡು ಜೋಡಿ ಹಕ್ಕಿಗಳು ಹೆದರಿ ಹೊರಬಂದು ನಿಂತವು ಹೆದರಿಕೆಯಿಂದ, ಅವರ ಮುಖಕ್ಕೆ ಟಾರ್ಚನ್ನು ಹಿಡಿದು ನೋಡಿದ ಅವಳ ತುಟಿಯಲ್ಲಿದ್ದ ಕೆಂಪು ರಂಗು ಅವನ ತುಟಿಗೊಂದಿಷ್ಟು ಬಳಿದಿತ್ತು, ಆ ತರುಣ ಹೆದರುತ್ತಾ ಒಂದು ಐನೂರರ ನೋಟೊಂದನ್ನು ಅಖಿಲನ ಕೈಗಿತ್ತ, ಅಖಿಲನು ಟಾರ್ಚನ್ನು ಆಫ್ ಮಾಡಿ ಅವರಿಬ್ಬರಿಗೂ ದಾರಿಬಿಟ್ಟ, ಅವರು ಸರಸರನೆ ನಡೆಯುತ್ತಾ  ಕತ್ತಲಲ್ಲಿ ಕರಗಿಹೋಗಿಬಿಟ್ಟರು.
ಮರಳಿ ರಮೇಶನ ಕಡೆಗೆ ಹೋಗಿ, ಅವನ ಮುಖದ ಮುಂದೆ ಆ ತರುಣ ಕೊಟ್ಟ ಐನೂರರ ನೋಟನ್ನು ಹಿಡಿದು ಹೇಳಿದ
' ನೋಡಿದ್ರಾ ಸರ್ ಹಣವಂತರ ಸಾಮಾಜಿಕ ಜವಾಬ್ದಾರಿ, ತಮ್ಮ ಹುಳುಕನ್ನು ಮುಚ್ವಿಕೊಳ್ಳಲು ನನಗೆ ಕೊಟ್ಟ ಭಕ್ಷಿಸು, ಇದನ್ನೆ ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಸರ್ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿದರೆ, ಕತ್ತೆ ಬೆಳೆದ ಹಾಗೆ ಬೆಳದಿದ್ದೀಯಾ ದುಡ್ಕೊಂಡು ನಿಮ್ಮ ತಾಯಿನ ಉಳ್ಸಕೊ ಹೋಗು ಎಂದು ಬೈದು ಬುದ್ದಿಯನ್ನು ಹೇಳಿ ಸಾಗುಹಾಕುತ್ತಿದ್ದರು, ಅಷ್ಟಕ್ಕು ನಾವೇನು ಜೂಜಾಡಲಿಕ್ಕಾಗಲಿ, ಇಂತಹ ಪೊದೆಯ ಒಳಗೆ ಮಾಡುವ ಹೊಲಸು ಕೆಲಸಕ್ಕೆಂದಾಗಲಿ ಹಣವನ್ನು ದೋಚುತ್ತಿಲ್ಲವಲ್ಲ, ನಮ್ಮ ಪ್ರೀತಿಗೆ ಪಾತ್ರರಾದವರನ್ನು, ನಮ್ಮನ್ನೆ ನಂಬಿದವರನ್ನ ಉಳಿಸಿಕೊಳ್ಳುವುದರ ಸಲುವಾಗಿಯಲ್ಲವೆ ನಾವು ಈ ಕಾರ್ಯವನ್ನು ಮಾಡುತ್ತಿರುವುದು' ಎಂದನು ರೋಷದಿಂದಲೆ,
'ನಿಜ ಹಾಗಂತ ಒಬ್ಬನ ತಲೆ ಒಡೆದು ನಾವು ಬದುಕಬೇಕ ?'
'ಇದು ಸೃಷ್ಟಿಯ ನಿಯಮವೆ ಸರ್, ಹುಳವನ್ನು ಕಪ್ಪೆ ನುಂಗಿದರೆ, ಕಪ್ಪೆಯನ್ನು ಹಾವು ನುಂಗುತ್ತದೆ, ಹಾವನ್ನು ಪಕ್ಷಿಯು ಕೊಂದರೆ, ಪಕ್ಷಿಯನ್ನು ನಾವು ಕೊಂದು ತಿನ್ನುತ್ತೇವೆ. ಹಾಗೆ ಈಗ ಜಗತ್ತಿನಲ್ಲಿ ಯಾರು ನಿಯತ್ತಿನಿಂದ ಬಾಳುತ್ತಿದ್ದಾರೆ ಹೇಳಿ, ಲಕ್ಷಲಕ್ಷಗಟ್ಟಲೆ ಬ್ಯಾಂಕಿನಲ್ಲಿ ಹಣವನ್ನಿಟ್ಟು ಕೊಳಿಸುವರಲ್ಲ, ಅವರೆಲ್ಲ ಸಂಪಾದಿಸಿದ್ದೇನು ನಿಯತ್ತಿನಿಂದೇನು, ನಮ್ಮ ನಿಮ್ಮಂಥ ಬಡಪಾಯಿಗಳ ದುಡ್ಡಲ್ಲವೇನು? ನೋಡಿ ಸರ್ ನನಗೀರುವುದು ಎರಡೆ ದಿನ ಸಮಯ ಅಷ್ಟರಲ್ಲಿ ನಾನು ನನ್ನ ತಾಯಿಯ ಆಪರೇಷನ್ ಮಾಡಿಸಲೆಬೇಕು ಇಲ್ಲದಿದ್ದರೆ ಅದು ಜೀವಕ್ಕೆ ಅಪಾಯ ಅಂತಾ ಡಾಕ್ಟರ ಹೇಳಿದ್ದಾರೆ. ಅದು ಕೂಡ ಈಗ ಲಾಸ್ಟ್ ಸ್ಟೇಜ್ ನಲ್ಲಿರುವುದರಿಂದ ಆಪರೇಷನ್ ಮಾಡಿದ್ರು ಬದುಕಬಹುದು, ಇಲ್ಲ ಸಾಯಲು ಬಹುದು, ಎಂದು ಡಾಕ್ಟರ್  ಯಾವುದೆ ರೀತಿಯ ಭರವಸೆಯನ್ನು ಅವರು ನೀಡಿಲ್ಲ, ನಿಮಗಾದರೆ ನಿಮ್ಮ ಮಗಳಿಗೆ ಆಪರೇಷನ್ ಮಾಡಿಸಿದರೆ ಬದುಕುತ್ತಾಳೆ. ಎಂಬ ವಿಶ್ವಾಸವಿದೆ ನನಗೆ ಅದೂ ಕೂಡ ಇಲ್ಲ, ಆದರೂ ಪ್ರಯತ್ನಿಸುತ್ತಿರುವೆ, ದಿನ..ದಿನ ಕ್ಷಣ..ಕ್ಷಣ ಸತ್ತು ಬದುಕುವುದಕ್ಮಿಂತ ಒಂದೆ ದಿನ ಸತ್ತು ಹೋಗುವುದೆ ಸರಿಯಲ್ಲವೆ.?' ಆವೇಶಭರಿತನಾಗಿ ಮಾತನಾಡಿ  ಪಕ್ಕದಲ್ಲಿಟ್ಟಿದ್ದ ಬಾಟಲಿಯ ನೀರನು ಕುಡಿದು ಬೆಂಚಿನ ಮೇಲೆ ಕುಳಿತುಕೊಂಡನು ಅಖಿಲನು.
ಮತ್ತೆ ಕ್ಷಣಕಾಲ ಇಬ್ಬರ ನಡುವೆ ಮೌನವಾವರಿಸಿಬಿಟ್ಟಿತು.
ಪಾರ್ಕಿನ ಮೂಲೆಯಲ್ಲಿ ಎಲ್ಲೊ ವಟಗುಡುವ ಕಪ್ಪೆಗಳ ಸದ್ದು, ಆಗೊಂದು ಈಗೊಂದು ಗುಂಯ್ಯಂದು ಹಾರಾಡುತ್ತ ಅವಕಾಶ ಸಿಕ್ಕಾಗಲೆಲ್ಲ ಕಚ್ಚಿ ರಕ್ತವ ಹೀರುವ ಸೊಳ್ಳೆಗಳ ಸದ್ದು ಮತ್ತದೆ ನಾಗರಹಾವುಗಳ ಹಾಗೆ ಇವರಿಬ್ಬರ ಮೂಗಿನ ಹೊಳ್ಳೆಗಳಿಂದ ಭುಸುಗುಡುವ ಸದ್ದೊಂದನು ಹೊರತುಪಡಿಸಿದರೆ ಎಲ್ಲವು ನೀರವ ಮೌನವ ಹೊತ್ತು ಮಲಗಿಬಿಟ್ಟಿದ್ದವು.

No comments:

Post a Comment