ಸಮಯವನ್ನು ನೋಡಿಕೊಂಡನು ಅಖಿಲನು ಹನ್ನೆರಡು ಐವತ್ತಾಗಿತ್ತು, ' ಬಂದು ನಿಂತು ಅರ್ಧ ಗಂಟೆ ಕಳೆದರು ಯಾವ ವಾಹನವು ಬರುವ ಸೂಚನೆಯ ಕಾಣುತ್ತಿಲ್ಲವಲ್ಲ, ಊರಲ್ಲಿ ಬೇರೆ ಕರ್ಪ್ಯೂ ಒಂದನ್ನು ಹೇರಿರುವದರಿಂದ ಯಾವ ವಾಹನವು ಬರಲಾರವೇನೊ, ಸುಮ್ಮನೆ ನಡೆದು ಹೋಗುವದೆ ಸರಿ, ಎಂದುಕೊಳ್ಳುತ್ತ, ಊರಿನ ಕಡೆಗೆ ಹೆಜ್ಜೆಯನ್ನು ಹಾಕತೊಡಗಿದನು. ಅರ್ಧ ಕಿ. ಮೀ ದೂರ ನಡೆದು ಬಂದಿರಬೇಕು ಹಿಂದಿನಿಂದ ಯಾವುದೊ ಬೈಕು ಬರುವ ಸೌಂಡ ಕೇಳಿ ತಿರುಗಿ ನಿಂತು ಲಿಪ್ಟ್ ಗಾಗಿ ಎಡಗೈಯಿಂದ ಥಮ್ಸಪ್ ಚಿನ್ಹೆಯನ್ನು ಮಾಡಿದನು. ಬೈಕು ಬಂದು ಅಖಿಲನ ಮುಂದೆ ನಿಂತುಕೊಂಡಿತು. ' ಸರ್ ಊರಿನ ತನಕ ಲಿಪ್ಟ್ ಕೊಡ್ತೀರಾ,?' ವಿನಯವಾಗಿ ಬೈಕ ಸವಾರನ ಹತ್ತಿರ ಕೇಳಿಕೊಂಡನು, ' ಇಲ್ರೀ, ಊರ ಹೊರಗೆ ಬಂಟೂರ್ ಕ್ರಾಸ್ ಇದೆಯಲ್ಲ ಅಲ್ಲಿ ತನಕ ಅಷ್ಟೆ ನಾನು ಹೋಗೊದು' ಎಂದನಾವ್ಯಕ್ತಿ, 'ಅಷ್ಟೇ ಸಾಕು ಸರ್, ಊರೊಳೊಗೆ ನಾ ಹೇಗಾದರು ಮಾಡಿ ಹೋಗುವೆ, ಅಲ್ಲಿವರೆಗಾದ್ರೂ ಡ್ರಾಪ್ ಮಾಡಿ,'
'ಸರಿ ಹತ್ತಿ' ಎಂದು ಅಖಿಲನನ್ನು ಕುಳ್ಳರಿಸಿಕೊಂಡು ಬಂದು ಬಂಟೂರ್ ಕ್ರಾಸ್ ಗೆ ಇಳಿಸಿ ಹೊರಟು ಹೋದನು.
'ಇಲ್ಲಿಂದ ಊರೊಳೊಗೆ ಹೇಗಪ್ಪ ಹೋಗೊದು ಆಸ್ಪತ್ರೆಗೆ ಅದು ಅಷ್ಟು ದೂರ,' ಎಂದು ಊರೊಳಗೆ ಕಾಲಿಡುತ್ತಲೆ, ಪೋಲಿಸ್ ಜೀಪೊಂದು ಅವನೆದುರಿಗೆ ದುತ್ತೆಂದು ಬಂದು ನಿಂತುಬಿಟ್ಟಿತು. ಪೋಲಿಸ್ ಜೀಪನ್ನು ನೋಡಿದ ಅಖಿಲನು ಗಡಗಡನೆ ನಡುಗಿ ಹೋದನು. ಗಂಟಲು ಒಣಗಿ ಮಾತೆ ಬಾರದಂತಾಗಿಬಿಟ್ಟಿತು. ಜೀಪ್ ನೊಳಗಿದ್ದ ಎಸ್ಪಿ, ' ಏ ಯಾರೊ ನೀನು ಇಷ್ಟೊತ್ನಲ್ಲಿ ಎಲ್ಲಿಗೆ ಹೋಗ್ತಾ ಇದ್ದೀಯಾ, ' ದರ್ಪದಿಂದ ಕೇಳಿದನು. 'ಸರ್ ನಾನು ಇದೆ ಊರಿನವನೆ, ಇಲ್ಲೆ ಪಕ್ಕದೂರಿನಲ್ಲಿ ನಮ್ಮ ಮಾವನವರ ಆರೋಗ್ಯ ಸರಿಯಾಗಿರಲಿಲ್ಲ ಅವರನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದೆ,' ಭಯದಿಂದಲೆ ಒಂದೊಂದೆ ಮಾತುಗಳನ್ನಾಡಿದನು ಅಖಿಲನು ಹೆಗಲಿಗೆ ಹಾಕಿದ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡು, ಹೆಜ್ಜೆಗಳನ್ನು ಹಿಂದಕ್ಕೆ ಇಡುತ್ತಾ ' ಹೌದಾ..? ಅದೇನು ಹಣೆಮೇಲೆ ಗಾಯ '
ಅನುಮಾನದಿಂದ ಕೇಳಿದನು ಎಸ್ಪಿ, 'ನಮ್ಮ ಮಾವನ ಮಗ ಮತ್ತು ನಾನು ಬೈಕ ತಗೊಂಡು ಬರುತ್ತಿರುವಾಗ ಒಂದು ನಾಯಿ ಅಡ್ಡ ಬಂದು ಬೈಕ್ ಗಾಲಿಗೆ ಸಿಕ್ಕು ಕೆಳಗೆ ಬಿದ್ದು ಬಿಟ್ಟೆವು ಸರ್, ಆಗ ಆದ ಗಾಯವಿದು.' ಎಂದನು ಸ್ವಲ್ಪ ಧೈರ್ಯದಿಂದ
' ಮತ್ತೇಲ್ಲಿ ಅವನು..?'
'ಊರಲ್ಲಿ ಕರ್ಪ್ಯೂ ಇದೆ ಅಂತ ಗೊತ್ತಾಯಿತು, ಇಲ್ಲೆ ಬಂಟನೂರ್ ಕ್ರಾಸ್ ಗೆ ಇಳಿಸಿ ಹೊರಟು ಹೋದನು ಸರ್'
'ಅದು ಸರಿ ಇಷ್ಟೊತ್ನಲ್ಲಿ ಬರೊ ಅವಶ್ಯಕತೆ ಏನಿತ್ತು, ಬೆಳಿಗ್ಗೆ ಬರಬಹುದಿತ್ತಲ್ಲ'
' ಮನೆಯಲ್ಲಿ ತಾಯಿಗೆ ಹುಷಾರಿಲ್ಲ ಸರ್, ಒಬ್ಬಳೆ ಇದ್ದಾಳೆ, ನಾನು ಒಬ್ಬನೆ ಮಗ, ಊರಲ್ಲಿ ಹೀಗಾಗಿದ್ದಕ್ಕೆ ನಾನು ಈ ನಡು ರಾತ್ರಿಯಲ್ಲೆ ಬರಬೇಕಾಯಿತು ಸರ್'
' ಹಾಗಾ, ಎಲ್ಲಿ ಮನೆ?'
'ಕ್ಯಾನ್ಸರ್ ಆಸ್ಪತ್ರೆಯ ಹಿಂದುಗಡೆ ಒಂದು ಕಾಲೋನಿ ಇದೆಯಲ್ಲ ಸರ್ ಅಲ್ಲೆ'
' ಓ ಹೌದಾ ಬಹಳ ದೂರವಾಯ್ತಲ್ಲಯ್ಯ ಅದು'
'ಹೌದು ಸರ್'
' ಸರಿ ಜೀಪ್ ಹತ್ತು'
ಮೈ ನರನಾಡಿಗಳೆಲ್ಲ ಸಿಡಿದು ಹೋದಂತಹ ಅನುಭವ ಆಗ ಅಖಿಲನಿಗೆ, ' ಯಾಕೆ ಸರ್' ತೊದಲುತ್ತಲೆ ಕೇಳದಿನು
' ಹೆದ್ರಕೊಬೇಡ, ನಾನು ಅಲ್ಲೆ ರೌಂಡ್ಸಗೆ ಹೊಂಟಿದ್ದೀನಿ, ನಿನ್ನನ್ನು ಅದರ ಸಮೀಪದಲ್ಲಿ ಡ್ರಾಪ್ ಮಾಡಿ ಹೋಗುವೆ'
' ಬದುಕಿತು ಬಡಜೀವ' ಎಂದು ಸಮಾಧಾನಗೊಂಡನು ಎಸ್ಪಿಯ ಮಾತಿನಿಂದ. ಜೀಪನ್ನು ಹತ್ತಿ ಕುಳಿತುಕೊಂಡು, ಒಳಗೆಲ್ಲ ನೋಡಿದನು ಇಬ್ಬರು ಪಿ.ಸಿ.ಗಳು ಗನ್ ಸಹಿತ, ಒಬ್ಬ ಡ್ರೈವರ್ ಹಾಗೂ ಎಸ್ಪಿ ಇದ್ದರು, ಜೀಪ್ ಟರ್ನ ತೆಗೆದುಕೊಂಡು ಊರಲ್ಲಿ ಹೊರಟಿತು. ಊರೊಳಗೆ ಸ್ವಲ್ಪ ದೂರ ಬಂದಾಗ ಜೀಪ್ ನಲ್ಲಿಟ್ಟಿದ್ದ ವಾಕಿಟಾಕಿಗೆ ಜೀವ ಬಂದಿತ್ತಾಗ, ಎಸ್ಪಿ ಅದನ್ನೇತ್ತಿಕೊಂಡು ಮಾತನಾಡಲಾರಂಬಿಸಿದರು. ' ಓವರ್, ಓವರ್, ಹ್ಞಾಂ ಸರ್ ಬೆಳಿಗ್ಗೆಯಿಂದ ಟ್ರ್ಯಾಪ್ ಮಾಡಿದ್ದೀವಿ ಸರ್, ಸಿಸಿ ಟಿವಿಯಲ್ಲಿ ಅವರ ಮುಖಗಳು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ ಸರ್, ಅದು ಅಲ್ಲದೆ ಈ ಕೆಲಸಕ್ಕೆ ಅವನು ಹೊಸಬನಂತಿದ್ದಾನೆ, ನಮ್ಮ ರೀಕಾರ್ಡನಲ್ಲಿ ಯಾವುದೆ ರೀತಿಯ ಸುಳಿವುಗಳಿಲ್ಲ ಕಳ್ಳನ ಬಗ್ಗೆ ಓವರ್..ಓವರ್..' ಎಸ್ಪಿ ಮಾತಾನಾಡುತ್ತಿದ್ದದ್ದು ತಾವು ಮಾಡಿದ ಕಳ್ಳತನದ ಬಗ್ಗೆ ಎಂಬುದು ಗೊತ್ತಾಗಿಬಿಟ್ಟಿತು ಅಖಿಲನಿಗೆ, ಮೈಯೆಲ್ಲಾ ಬೆವೆತು ನೀರು ನೀರಾಗಿ ಬಿಟ್ಟನು, ತನ್ನೊಳಗಿನ ಭಯವನ್ನು ತೋರ್ಪಡಿಸಿಕೊಳ್ಳದೆ, 'ಎಷ್ಟೊಂದು ಸೆಖೆ ಸರ್, ಸ್ವಲ್ಪ ಕುಡಿಯೊದಿಕ್ಕೆ ನೀರ್ ಇದ್ರೆ ಕೊಡ್ತೀರಾ,? ' ಎದುರಿಗೆ ಕುಳಿತಿದ್ದ ಕಾನ್ಸಟೇಬಲ್ ಹತ್ತಿರ ನೀರನ್ನು ಕೇಳಿದನು.
ಕಾಲ ಬುಡದಲ್ಲಿ ಇಟ್ಟುಕೊಂಡಿದ್ದ ನೀರಿನ ಬಾಟಲಿಯನ್ನು ಅವನತ್ತ ಕೊಟ್ಟನು ಕಾನ್ಸಟೇಬಲ್ನು, ಒಂದೆ ಸಲಕ್ಕೆ ಗಟಗಟನೆ ಬಾಟಲಿಯೊಳಗಿನ ನೀರನ್ನೆಲ್ಲ ಖಾಲಿ ಮಾಡಿಬಿಟ್ಟು, ಖಾಲಿ ಬಾಟಲಿಯನ್ನು ಪಿಸಿ ಕೈಯೊಳಗೆ ಕೊಟ್ಟು ಕಣ್ಮುಚ್ಚಿಕೊಂಡು ಕುಳಿತುಕೊಂಡನಾದರು, ಎಲ್ಲಿ ಇವರು ನನ್ನ ಮನೆಗೆ ಬಂದು ಎಲ್ಲವನ್ನು ವಿಚಾರಿಸಿದರೆ, ಕಳ್ಳತನದೊಂದಿಗೆ ಕೊಲೆಯ ಅಪವಾದನೆ ಮೇಲೆ ಪರಪ್ಪನ ಅಗ್ರಹಾರ ಗ್ಯಾರಂಟಿ' ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಲೆ ಕುಡಿದ ನೀರೆಲ್ಲ ಬೆವರಿನ ರೂಪದಲ್ಲಿ ಹೊರಗೆ ಕಿತ್ತು ಬರಲಾರಂಭಿಸಿತು, ಅಖಿಲನ ಬೆವರಿಕೆಯನ್ನು ಕಂಡ ಪಿಸಿ ' ಎಲ್ಲಿ ನಿನ್ನ ಆಧಾರ ಕಾರ್ಡ ಅಥವಾ ಡ್ರೈವಿಂಗ್ ಲೈಸೆನ್ಸ ಏನಾದರು ಒಂದು ಕೊಡಿಲ್ಲಿ ನೋಡೋಣ' ಎಂದು ಕೇಳಿದಾಗ ಅಖಿಲನಿಗೆ ಕೊರಳಿಗೆ ಯಾರೊ ಹಗ್ಗ ಹಾಕಿ ಬಿಗಿದು ಎಳೆಯುವಂತಹ ಅನುಭವವಾಯಿತು. ' ಹ್ಞಾಂ, ಸರ್ ' ಎಂದು ಪ್ಯಾಂಟಿನ ಹಿಂಬದಿ ಜೇಬಿಗೆ ಕೈ ಹಾಕುವ ಹೊತ್ತಿಗೆ ವಾಕಿಟಾಕಿ ಮತ್ತೆ ಮಾತನಾಡಲಾರಂಭಿಸಿತು, ಎಸ್ಪಿ ಮಾತನಾಡಿ ಜೀಪನ್ನು ರಸ್ತೆ ಮದ್ಯದಲ್ಲಿ ನಿಲ್ಲಿಸಿ, ' ನೋಡ್ರಿ ಆ ದುರ್ಗಾ ಸರ್ಕಲ್ ಲ್ಲಿ ಯಾರೊ ನಾಲ್ಕು ಜನ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರಂತೆ, ಬೇಗನೆ ಗಾಡಿಯನ್ನು ಆ ಕಡೆ ತಿರುಗಿಸು,' ಎಂದು ಅವಸರಿಸುತ್ತಾ, ಅಖಿಲನನ್ನು ದಾರಿಯ ಮದ್ಯದಲ್ಲಿ ಇಳಿಸಿ ಹೊರಟು ಹೋದರು, ನೆಮ್ಮದಿಯ ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಂಡು ಒಂದೆ ಓಟದಲ್ಲಿ ಆಸ್ಪತ್ರೆಯತ್ತ ಓಟಕ್ಕಿತ್ತನು.
ಆಸ್ಪತ್ರೆಯ ಕ್ಯಾಷ್ ಕೌಂಟರನ ಮುಂದೆ ಬಂದು ನಿಂತು ಒಂದೆ ಸಮನೆ ಎದುಸಿರನ್ನು ಬಿಡಲಾರಂಭಿಸಿದನು, ಓಡಿ ಬಂದ ರಭಸಕ್ಕೆ ಮೈ ತುಂಬಾ ಉಕ್ಕಿದ ಬೇವರು ಮೈ ಮೇಲಿನ ಬಟ್ಟೆಗಳನ್ನೆಲ್ಲ ತೋಯಿಸಿಬಿಟ್ಟಿತ್ತು. ಎದೆಯ ಮೇಲಿನ ಎರಡು ಗುಂಡಿಗಳನ್ನು ಬಿಚ್ಚಿ, ಮೇಲೆ ಹಾಕಿದ ಫ್ಯಾನಿನ ಗಾಳಿಗೆ ಎದೆಯೊಡ್ಡಿ ನಿಂತುಕೊಂಡನು. ಕ್ಯಾಷ್ ಕೌಂಟರ್ ನ ನರ್ಸು ಮಲಗಿಕೊಂಡಿದ್ದಳು, ಸ್ವಲ್ಪ ಸುಧಾರಿಸಿಕೊಂಡ ಅಖಿಲನು ಕೌಂಟರ್ ಹತ್ತಿರ ಬಂದು, ನರ್ಸನ್ನು ಎಬ್ಬಿಸಿದನು. ನಿದ್ರೆ ಮಂಪರಿನಲ್ಲಿ ಕಣ್ಬಿಟ್ಟ ನರ್ಸ್ಸು, ಸಮಯವನ್ನು ನೋಡಿಕೊಂಡಳು ಒಂದು ಮೂವತ್ತೈದೆಂದು ತೋರಿಸುತ್ತಿತ್ತು, 'ಏನ್ರೀ ಅದು ಇಷ್ಟೊತ್ನಲ್ಲಿ,'
' ಸಿಸ್ಟರ್, ನನ್ನ ತಾಯಿಗೆ ಬೆಳಿಗ್ಗೆನೆ ಆಪರೇಷನ್ ಅಗಬೇಕಿದೆ ಅದಕ್ಕೆ ಹಣವನ್ನು ತಂದಿರುವೆ ಕಟ್ಟಲಿಕ್ಕೆ, ಸ್ವಲ್ಪ ಡಾಕ್ಟರ್ ಗೆ ತಾವು ಕೇಳಿ ಹೇಳುತ್ತೀರಾ' ಎದುಸಿರನ್ನು ಬಿಡುತ್ತಾ, ಉದ್ವೇಗದಿಂದ ಕೇಳಿದನು ಅಖಿಲನು.
' ಇಷ್ಟೊತ್ನಲ್ಲಾ, ಅಗೋದಿಲ್ಲ ರೀ, ಬೇಕಿದ್ರೆ ನೈಟ್ ಶಿಪ್ಟ ಡಾಕ್ಟರ್ ಇದ್ದಾರೆ, ಅವರ್ಹತ್ರ ಕೇಳಿಕೊಂಡು ಬನ್ನಿ, ದೊಡ್ಡ ಡಾಕ್ಟರ್ ಬರೋದು ಬೆಳಿಗ್ಗೆ ಆರು ಗಂಟೆಯ ರೌಂಡಿಗೆ, ಅಲ್ಲಿಯವರೆಗೂ ಅವರನ್ನು ಡಿಸ್ಟರ್ಬ್ ಮಾಡೊ ಹಾಗಿಲ್ಲ,' ಸ್ವಲ್ಪ ಸಿಡುಕಿನಿಂದಲೆ ಹೇಳಿದಳು ನರ್ಸು
'ಹಾಗೆಲ್ಲ ಹೇಳ್ಬೇಡಿ ಸಿಸ್ಟರ್, ನಮ್ಮ ತಾಯಿ ತುಂಬ ಸಿರಿಯಸ್ ಆಗಿದ್ದಾರೆ ಅದಕ್ಕೆ' ಎರಡು ಕೈಗಳನ್ನು ಮುಗಿಯುತ್ತಾ,
' ಸರಿ ಪೇಷಂಟ ಹೆಸರನ್ನು ಹೇಳಿ ನಾನು ವಿಚಾರಿಸುತ್ತೇನೆ'
ಅಖಿಲನು ತನ್ನ ತಾಯಿಯ ಹೆಸರನ್ನು ಹೇಳಿದನು.
' ಓಹ್ ಇವರು ನಿಮ್ಮ ತಾಯಿಯೆ'
' ಹೌದು ಯಾಕೆ ಏನಾಯಿತು?'
' ಕ್ಷಮಿಸಿ ಸರ್, ನಿನ್ನೆ ಸಂಜೆ ನಾಲ್ಕು ಗಂಟೆಗೆ ಬಹಳ ಸಿರಿಯಸ್ ಅಗಿತ್ತು, ಮಗಾ, ಮಗ, ಅನ್ನುತ್ತಿದ್ದರು, ನಿಮ್ಮ ಮೊಬೈಲ್ಗೆ ಬಹಳಷ್ಟು ಪ್ರಯತ್ನಪಟ್ಟೆವು ಕರೆಮಾಡಲು, ನಾಟ್ ರಿಚೇಬಲ್ ಅಂತಾ ಬರ್ತಿತ್ತು, ಅವರು ನಾಲ್ಕುವರೆ ಸುಮಾರಿಗೆ ಹೋಗಿಬಿಟ್ಟರು. ಅವರ ಹೆಣವನ್ನು ಮಾರ್ಚುರಿಯಲ್ಲಿ ಇಡಲಾಗಿದೆ, ಉಳಿದ ಬಿಲ್ಲನ್ನು ಕಟ್ಟಿ ಬಾಡಿನ ತೆಗೆದುಕೊಂಡು ಹೋಗಿ,' ನರ್ಸು ಒಂದೆ ಸಮನೆ ಹೇಳುತ್ತಲೆ ಇದ್ದಳು ಉಸಿರನ್ನು ಬಿಡದೆ, ಮಾತುಗಳನ್ನು ಕೇಳುತ್ತಿದ್ದ ಅಖಿಲನ ಕಾಲುಗಳಲ್ಲಿ ನಡುಕ ಬಂದಂತಾಗಿ, ಬಾಡಿನ ತೆಗೆದುಕೊಂಡು ಹೋಗಿ ಎಂಬ ಮಾತನ್ನು ಕೇಳುತ್ತಲೆ ತಲೆ ಸುತ್ತು ಬಂದಂತವನಾಗಿ ಧಪ್ಪನೆ ಬಿದ್ದು ಬಿಟ್ಟನು. ಕೌಂಟರ್ ನಿಂದ ಹೊರಬಂದ ನರ್ಸು, ಅಖಿಲನ ಮುಖದ ಮೇಲೆ ನೀರನ್ನು ಚಿಮುಕಿಸಿ ಎಚ್ಚರಿಸಿದಳು, ಹತ್ತು ನಿಮಿಷ ಸುಧಾರಿಸಿಕೊಂಡ ಅಖಿಲನು ತಾಯಿಯು ಇನ್ನಿಲ್ಲ ಎಂಬ ವಿಷಯವು ಅತಿಯಾಗಿ ಬಾಧಿಸಿ ಆಸ್ಪತ್ರೆಯ ನೆಲದ ಮ್ಯಾಲೆ ಬಿದ್ದು ಅಳುತ್ತಾ, ಹೊರಳಾಡುತ್ತಾ, ಚಿರಾಡತೊಡಗಿದನು. ಅಖಿಲನು ಮಾಡುವ ರೀತಿಯನದನು ನೋಡಿ ಹೆದರಿದ ನರ್ಸು ಒಳಗಡೆ ಹೋಗಿ ಇಬ್ಬರು ವಾರ್ಡ್ ಬಾಯ್ ಗಳನ್ನು ಕರೆದುಕೊಂಡು ಬಂದಳು, ಅವರಿಬ್ಬರು ಬಂದವರೆ, ಅಖಿಲನ ಕೈಗಳನ್ನು ಹಿಡಿದೆತ್ತಿ ಕುಳ್ಳರಿಸಿದರು. ಕ್ಷಣಕಾಲ ಅತ್ತು ಅತ್ತು ಸುಮ್ಮನಾದ ಅಖಿಲನು ಎದ್ದು, ಬ್ಯಾಗನಿಂದ ಹಣನ್ನು ತೆಗೆದು ಬಿಲ್ಲನ್ನು ತುಂಬಿಕೊಂಡು, ಹೆಣವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಲಾಗದು ಎಂದ ಸಿಸ್ಟರ್ ನ ಮಾತುಗಳನ್ನು ಕೇಳಿ, ಒಂದು ಅಂಬುಲೆನ್ಸ ಮಾಡಿಕೊಂಡು, ಸ್ಮಶಾನದತ್ತ ಹೊರಡಲು ರೆಡಿಯಾದನು, ಶವಾಗಾರದಲ್ಲಿ ಇಟ್ಟಿದ್ದ ತಾಯಿಯ ಹೆಣವನ್ನು ತಾನೆ ಎರಡು ತೋಳುಗಳಿಂದ ಹೊತ್ತುಕೊಂಡು ಬಂದು ಅಂಬ್ಯುಲೆನ್ಸ್ ಹಾಕಿ, ತಾಯಿಯ ಶವದೇದುರು ಅಳುತ್ತಾ ಕುಳಿತುಕೊಂಡನು. ವಾಹನವು ಸ್ಮಶಾನದತ್ತ ಪಯಣಿಸಿತು.
ಶವದ ಮುಂದೆ ಕುಳಿತುಕೊಂಡು ಅತ್ತು ಅತ್ತು ಸುಸ್ತಾದ ಅಖಿಲನು ಮಗ್ಗುಲಲ್ಲಿದ್ದ ಬ್ಯಾಗನತ್ತ ಕಣ್ಣು ಹಾಸಿದನು, ಆಸ್ಪತ್ರೆಯ ಬಿಲ್ಲನ್ನು ತುಂಬುವ ಅವಸರದಲ್ಲಿ, ಒಂದು ಎರಡು ಸಾವಿರ ನೋಟಿನ ಅಂಚು ಕಡೆಗೆ ಬಂದಿತ್ತು. ಬಲಗೈ ಅಂಗೈಯಿಂದ ಹಣೆಯನ್ನು ಚಚ್ಚಿಕೊಳ್ಳುತ್ತಾ, ' ಯಾರನ್ನು ಉಳಿಸಿಕೊಳ್ಳಬೇಕೆಂದು ಒಂದು ಜೀವ, ಒಂದು ಕುಟುಂಬವನ್ನೆ ಕೊಂದು ನಿನ್ನನ್ನು ಹೊತ್ತು ತಂದೇನೊ.. ನೀನು ನಿರುಪಯುಕ್ತವಾಗಿಬಿಟ್ಟೆಯಲ್ಲ. ನಿನ್ನಿಂದ ಎಲ್ಲವನ್ನು ಪಡೆದುಕೊಳ್ಳಬಲ್ಲೆನೆಂದುಕೊಂಡಿದ್ದೆ. ಇಲ್ಲ..ಅದು ನನ್ನ ತಪ್ಪು ನಿರ್ಣಯ. ಹಣದಿಂದಲೆ ಎಲ್ಲವನ್ನು ಕೊಂಡುಕೊಳ್ಳುವ ಹಾಗಿದ್ದರೆ ಇವತ್ತು ನಾನು ಹೀಗೆ ಅಳುತ್ತಾ ಕೂರುವ ಪ್ರಮೇಯೆ ಬರುತ್ತಿರಲಿಲ್ಲ, ನಿನ್ನನ್ನೆನೊ ಪಡೆದೆ, ಹೇಗೆ..? ಒಂದು ಮಾತೃ ಹೃದಯದ ದೇವಮಾನವನ್ನು ಕೊಂದು. ಪಡೆದುಕೊಂಡದ್ದಾದರು ಏನು..? ನೋವು.. ನಿನ್ನನ್ನು ಎಷ್ಟು ಸುರಿದರು ಮರಳಿ ಕರೆತರಲಾರದ ಲೋಕಕೆ ಹೋದ ತಾಯಿಯ ಜೀವವನ್ನು. ನಿನ್ನ ಹಿಂದೆ ಬಿದ್ದು ನನ್ನ ತಾಯಿಯ ಬಾಯಿಗೆ ಕೊನೆ ಘಳಿಗೆಯಲ್ಲಿ ಎರಡು ಹನಿ ನೀರನ್ನು ಹಾಕದಂತಾಗಿ ಹೋದೆ, ಆದರೆ ಒಬ್ಬನ ಬಾಯಿಗೆ ವಿಷವನ್ನು ಹಾಕಲು ಅವಕಾಶ ಮಾಡಿಕೊಟ್ಟೆ, ಓ ಹಣವೆ...ನಿನೇಷ್ಟೊಂದು ಅವಶ್ಯವೊ...ಅಷ್ಟೇ ವಿನಾಶಕಾರಿ, ನಿನೊಂದು ಬೆಂಕಿ.. ಅರಿವಿನಿಂದ ಹಚ್ಚಿಕೊಂಡರೆ ದೀಪ, ಇಲ್ಲವಾದರೆ ಉರಿದು ಸುಟ್ಟು ಬೂದಿಮಾಡಿಬಿಡುವ ಕಾಳ್ಗಿಚ್ಚು. ಏನು ಮಾಡಲೀಗ ನಿನ್ನನ್ನು ಕಟ್ಟಿಕೊಂಡು ಸೇರಗಿನಲ್ಲಿ ಕಟ್ಟಿಕೊಂಡ ಕೆಂಡದ ಹಾಗಾಗಿದೆಯಲ್ಲ ನನ್ನ ಪರಿಸ್ಥಿತಿ,' ಎಂದು ಅಂದುಕೊಳ್ಳುತ್ತಿರುವಾಗಲೆ, ಅಂಬ್ಯುಲೆನ್ಸ ಮುಖ್ಯ ರಸ್ತೆಯನ್ನು ಬಿಟ್ಟು ಸ್ಮಶಾನದ ದಾರಿಯನ್ನು ಹಿಡಿದುಬಂದು ಸ್ಮಶಾನದಲ್ಲಿ ಬಂದು ಗಾಡಿಯನ್ನು ನಿಲ್ಲಿಸಿ ಅಖಿಲ್ ಮತ್ತು ಶವವನ್ನು ಇಳಿಸಿ ಹೊರಟು ಹೋಯಿತು.
ಶವದ ಮುಂದೆ ಕುಳಿತಿದ್ದ ಅಖಿಲನು ಕತ್ತೆತ್ತಿ ನೋಡಿದನು ರಮೇಶನ ಹೆಣವು ಸುಟ್ಟು ನಿಗಿ ನಿಗಿ ಕೆಂಡವು ಝಗಮಗಿಸುತ್ತಿತ್ತು. ಈಗೇನು ಮಾಡಲಿ ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆಯಿಲ್ಲವಲ್ಲ, ಇಷ್ಟೊತ್ನಲ್ಲಿ ಯಾರನ್ನು ಕೇಳುವುದು ಎಲ್ಲಿಯಂತ ಅಲೆದಾಡುವುದು. ಬೆಳಗಾಗುವ ತನಕ ಇಲ್ಲೆ ಇರಲೆ, ಬೇಡ ಬೇಡ ಬೆಳಗಾಗುತ್ತಲೆ ನಾನು ರಮೇಶರ ಮಗಳ ಆಪರೇಷನ್ ಗಾಗಿ ಈ ಅಳಿದುಳಿದ ಹಣವನ್ನು ಕೊಟ್ಟು ನಾನು ದೇಶಾಂತರ ಹೊರಟುಬಿಡಬೇಕು, ಆವಾಗಲೆ ಮನಸ್ಸಿಗೆ ನೆಮ್ಮದಿ, ನನಗೆ ಉಪಯೋಗವಾಗದ ಈ ಹಣ ಅವರ ಮಗಳ ಚಿಕಿತ್ಸೆಗಾದರೂ ಉಪಯೋಗವಾಗಲಿ, ಎಂದು ಮನಸ್ಸಿನಲ್ಲಿ ಗಟ್ಟಿ ನಿರ್ಧಾರವನ್ನು ಮಾಡಿಕೊಂಡು ಶವವನ್ನು ಎತ್ತಿ ದೇವಾಲಯದ ಅಂಗಳದಲ್ಲಿ ಹಾಕಿ, ಮುಖ್ಯ ರಸ್ತೆಗೆ ಬಂದು ದಾರಿಯ ಪಕ್ಕದಲ್ಲಿ ಇದ್ದ ಅಂಗಡಿಯವರನ್ನು ಎಬ್ಬಿಸಿ ಅವರಿಂದ ಗುದ್ದಲಿ ಸಲಿಕೆಯನ್ನು ಪಡೆದುಕೊಂಡು ಬಂದು, ಗುಂಡಿಯನ್ನು ತೋಡಿ, ಅದರಲ್ಲಿ ತಾಯಿಯನ್ನು ಮಲಗಿಸಿ
ಮಣ್ಣನ್ನು ಮುಚ್ಚಿ ಕೈ ಮುಗಿದು ಅಳುತ್ತಾ ಕುಳಿತುಕೊಂಡನು.
ಆಗಲೆ ತೆಳ್ಳಗೆ ಬೆಳಕು ಹರಿಯಲು ಪ್ರಾರಂಭಿಸಿತು, ಮೆಲ್ಲನೆದ್ದು ಬ್ಯಾಗನ್ನು ಹೆಗಲಿಗೆ ಹಾಕಿಕೊಂಡು ಸಲಿಕೆ ಗುದ್ದಲಿಯನ್ನು ಹೊತ್ತುಕೊಂಡು ಬಂದು ಅಂಗಡಿಯ ಹೊರಗೆ ಹಾಕಿದ್ದ ಟೇಬಲ್ ಮೇಲೆ ಕುಳಿತುಕೊಂಡು ಮೆಲ್ಲಗೆ ನಿದ್ರಾ ದೇವಿಯ ಮಡಿಲಿಗೆ ಜಾರಿದನು.
Monday, October 15, 2018
ಭಾಗ ೧೬
Subscribe to:
Post Comments (Atom)
No comments:
Post a Comment