Saturday, April 25, 2020

ಕಥಾ೧

ಭಾಗ ೧

ಅಂದು ಬೆಳಿಗ್ಗೆ ಬೇಗನೆ ಎದ್ದು ನಾನು, ನನ್ನಾಕೆ ಸ್ನಾನ ಮತ್ತು ಉಪಹಾರವನ್ನು ಮುಗಿಸಿಕೊಂಡು, ವಾರದ ಹಿಂದಷ್ಟೆ ಮದುವೆಯಾಗಿದ್ದತಂಹ ನನ್ನ ಗೆಳೆಯನ ಬಾಸಿಂಗ ಬಿಡುವಂತಹ ಕಾರ್ಯಕ್ರಮಕ್ಕೆಂದು ಅವಸರವಸರವಾಗಿ ಹೊರಟು ನಿಂತೆವು. ಬೇಗನೆ ಹೊರಡಲು ಒಂದು ಕಾರಣವೇನಾಯಿತೆಂದರೆ, ಅವರ ಹಳ್ಳಿಯಲ್ಲಿ  ಹಾಲು ಸಿಗುತ್ತಿರಲಿಲ್ಲವಂತೆ. ಆ ವಿಷಯವನ್ನು ಕೇಳಿ ನಾನು ಆಘಾತಕ್ಕೊಳಗಾದದ್ದುಂಟು, ಹಳ್ಳಿಯಲ್ಲಿಯೆ ಹಾಲು ಸಿಗುವುದಿಲ್ಲ ಅಂದರೆ ಏನು ಅರ್ಥ ಅಂತ. ಅವರ ಹಳ್ಳಿಯಲ್ಲಿ ಎಲ್ಲರು ತಮ್ಮ ಮನೆಗೆ ಎಷ್ಟು ಬೇಕೊ ಅಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ಹಾಲನ್ನೆಲ್ಲ ಡೈರಿಗೆ ಹಾಕಿಬಿಡುತ್ತಿದ್ದರಂತೆ, ಕಾರಣವೇನೆಂದರೆ, ಮೊದಲು, ಎಲ್ಲರ ಮನೆಯಲ್ಲಿ ದನಕರುಗಳಿರುತ್ತವೆ, ಎರಡು, ಮನೆ ಮನೆಗೆ ಹಾಕಿ ಬರುವ ಹಾಲಿನ ಹಣ ಇವರ ಖರ್ಚಗೆ ಸಾಕಾಗುವುದಿಲ್ಲವಂತೆ, ಮೂರನೇದ್ದು ತಿಂಗಳಿಗೊ, ಎರಡು ತಿಂಗಳಿಗೊ ಒಟ್ಟೊಟ್ಟಿಗೆ ಬರುವ ಡೈರಿಯ ಹಣದಿಂದಾಗಿ ಮಾಡಿದ ಸಾಲಾನೊ, ಮಗಳ ಮದುವೆ ಖರ್ಚಿಗೆಂದೊ, ಬಂಗಾರ ಮಾಡಿಸಲಿಕ್ಕೊ ಹೀಗೆ ಇನ್ನಿತರ ಖರ್ಚು ವೆಚ್ಷಗಳಿಗೆ ಬಳಸಿಕೊಳ್ಳಬಹುದೆಂಬುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಕುಡುಕ ಗಂಡಸರು ಹಾಲು ಹಾಕಿದ ಮನೆ ಮನೆಗೆ ಹೋಗಿ ಮುಂಗಡವಾಗಿ ಹಣವನ್ನು ಪಡೆದುಕೊಂಡು ಕುಡಿದು ಬರುವುದನ್ನು ತಪ್ಪಿಸುವುದಕ್ಕಾಗಿ, ಹಾಲಿನ ಡೈರಿಗೆ ಹಾಕಿದ ಹಣವು ನೇರವಾಗಿ ಇವರ ಬ್ಯಾಂಕ ಖಾತೆಗಳಿಗೆ ಜಮಾವಣೆ ಆಗುವುದಲ್ಲದೆ, ಹಾಗೂ ಹೀಗೂ ಯಾರಿಂದಲೊ ಹಾಲನ್ನು ಹಾಕಿಸಿಕೊಂಡರೆ ಅರ್ಧ ಹಾಲು ಇನ್ನರ್ಧ ನಲ್ಲಿ ನೀರೆ ಬೇರೆತಿರುತ್ತದೆ. ಎಂಬಿತ್ಯಾದಿ ವಿಷಯಗಳನ್ನು ತಿಳಿಸಿ ನನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿದ್ದನು.ಅವನು ಅಷ್ಟು ಹೇಳಿದ ಮೇಲೆ ನಮ್ಮೂರು ಗಜೇಂದ್ರಗಡದಿಂದಲೆ ನಾವು ಅರ್ಧ ಲೀಟರ್ ನ ನಾಲ್ಕು ಪಾಕೀಟು ಹಾಲು, ಎರಡು ಲೀ. ಮೊಸರನ್ನು ತೆಗೆದುಕೊಂಡು ಹೊರಟು ನಿಂತೆವು, ಬದಾಮಿ ಕಡೆಗೆ ಬಸ್ಸಿನ ಸೌಲಭ್ಯ ಈಗೀನಷ್ಟಿರಲಿಲ್ಲ. ಖಾಸಗಿ ವಾಹನಗಳಲ್ಲೆ ಓಡಾಡಬೇಕಾಗಿರುತ್ತಿತ್ತು, ಅದು ನಮಗೇನು ಕಷ್ಟಕರವಾಗಿದ್ದಿಲ್ಲ ನಮ್ಮ ಅಂಗಡಿ ಮತ್ತು ಮನೆಯು ಬಸ್ ನಿಲ್ದಾಣದ ಎದುರಿಗೆ ಇದ್ದುದರಿಂದ, ಆ ಖಾಸಗಿ ವಾಹನಗಳು ನಮ್ಮ ಅಂಗಡಿಯ ಎದುರಿಗೆ ನಿಲ್ಲುತ್ತಿದ್ದರಿಂದ ವಾಹನಗಳನ್ನು ಹುಡುಕಿಕೊಂಡು ಹೋಗುವದು ಕಷ್ಟವೆನಿದ್ದಿಲ್ಲ, ಹೋಗಲು ಅನುವಾಗಿದ್ದಂತಹ ಒಂದು ವಾಹನವನ್ನು ಹತ್ತಿ ಕುಳಿತೆವು ಇಬ್ಬರು. ನಮ್ಮಿಬ್ಬರದು ಒಂದಾರೇಳು ತಿಂಗಳುಗಳ ಹಿಂದಷ್ಟೆ ಮದುವೆಯಾಗಿತ್ತು. ಒಬ್ಬರಿಗೊಬ್ಬರು ಒತ್ತೊತ್ತಿಕೊಂಡೆ ಕುಳಿತುಕೊಂಡೆವು, ಟೆಂಪೊ ಹತ್ತು ನಿಮಿಷದ ನಂತರ ಹೊರಟು ನಮ್ಮೂರಿನ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತು, ನಾನು ಅಲ್ಲಿಯೆ ಇದ್ದ ನಮ್ಮ ಹೂ ಮಾರುವ ಅಲ್ಲಾಭಕ್ಷಿಯ ಅಂಗಡಿಗೆ ಹೋಗಿ ಕಾರ್ಯಕ್ರಮದ ಪೂಜೆಗೆಂದು ಎರಡು ಮಾಲೆ, ನನ್ನವಳ ಮುಡಿಗೆಂದು ಒಂದು ಮೊಳ ಕನಕಾಂಬರ, ಇನ್ನೊಂದು ಮೊಳ ಮಲ್ಲಿಗೆಯನ್ನು ಕಟ್ಟಿಸಿಕೊಂಡು ಬಂದು ನನ್ನವಳ ಮುಡಿಗೆ ಮುಡಿಸಿ ಕುಳಿತುಕೊಂಡೆ, ಅಕ್ಕಪಕ್ಕದವರು ಮುಸುಮುಸು ನಕ್ಕರು ಲೆಕ್ಕಿಸದೆ, ಅಷ್ಟರಲ್ಲಾಗಲೆ ನಮ್ಮ ಎದುರು ಸೀಟಿನಲ್ಲಿ ಒಬ್ಬ ಮಹಿಳೆ ಹೆಣ್ಣು ಕೂಸನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತುಕೊಂಡಿದ್ದಳು, ಎಣ್ಣೆಯಿಲ್ಲದೆ ಕೆದರಿ ನಿಂತ ಕೂದಲು, 
ಮುಖವನ್ನು ಸರಿಯಾಗಿ ತೊಳೆದುಕೊಂಡಿಲ್ಲ ಎಂಬುದಕ್ಕೆ ಮಸುಕು ಮಸುಕಾಗಿ ಕಾಣುತ್ತಿದ್ದ ಹಣೆಯ ಕುಂಕುಮ, ಜೋರಾಗಿ ಹಿಡಿದೆಳೆದರೆ ಹರಿದೆ ಹೋಗುವುದೇನೊ ಎಂಬಂತಹ ಉಟ್ಟ ಸೀರೆ, ಕಾಲಿಗೆ ಮೆತ್ತಿಗೊಂಡಿದ್ದ ಮಣ್ಣಿನ ಕೆಸರನ್ನು ನೋಡಿದರೆ ಚಪ್ಪಲಿ...? ಅಂತ ನೋಡುವ ಮಾತೆ ಇಲ್ಲ, ಆದರೆ ಕಾಲುಂಗರದ ಬೆರಳುಗಳಲ್ಲಿ ನನ್ನದೆ ಇದು ಜಾಗ ಎನ್ನುವ ಕುರುಹುಗಳಿದ್ದವೆ ಹೊರತು, ಅವುಗಳಿರಲಿಲ್ಲ,
ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲ ಎನ್ನುವುದಕ್ಕಿಂತ ಏನನ್ನು ಕುಡಿದೆ ಇಲ್ಲ ಎಂಬುದಕ್ಕೆ ಒಣಗಿ ಅದರುತ್ತಿದ್ದ ತುಟಿಗಳು, ಮಗುವಿನ ಹೊಟ್ಟೆಗೂ ಏನು ಇಲ್ಲ ಎಂಬುದಕ್ಕೆ ಅಂಗಾತ ಮಲಗಿದ ಮಗುವಿನ ಹೊಟ್ಟೆಯು ತೆಗ್ಗು ಬಿದ್ದಂತಾಗಿತ್ತು, ಗಣಿಧಣಿಗಳು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನರಿಯದೆ ಹಣದ ದುರಾಸೆಗೆ ನೆಲವನ್ನು ಅಗೆದು ಬಗೆದು ಕಂದರಗಳ ಸೃಷ್ಟಿಸಿದ ಹಾಗಿತ್ತು. ಒಂದು ಕ್ಷಣ ಅವರಿಬ್ಬರ ಸ್ಥಿತಿಯನ್ನು ನೋಡಿ ಮೈ ಝುಮ್ಮೆಂದು ಕರಳು ಹಿಂಡಿದಂತಾಯಿತು. ಕಣ್ಣು ಮುಚ್ಚಿ ಎರಡು ಕ್ಷಣ ಹಾಗೆ ಕುಳಿತುಕೊಂಡುಬಿಟ್ಟೆ. ಅಷ್ಟರಲ್ಲಿ

No comments:

Post a Comment