Saturday, April 25, 2020

ಹೀಗೆ

ಎಲ್ಲರು ಮಲಗಿರುವಾಗ, ನಾನೊಬ್ಬನೇಕೆ
ಎದ್ದಿರಲಿ?
ಬುದ್ದನ ಹಾಗಿಲ್ಲೀ...ಯಾರು ಪ್ರಭುದ್ಧರೆನಲ್ಲವಲ್ಲ!!
ಬೆಳಕನು ಅರಸಲು ಇರುಳಲಿ ಮನೆ ಬಿಟ್ಟವರದೆಷ್ಟು ಮಂದಿ
ಎಲ್ಲರ ಮನೆಯ ಬಾಗಿಲುಗಳು, ಜೈಲು ಕೋಣೆಗಿಂತಲೂ
ಬಲಿಷ್ಠವಾಗಿರುವಾಗ.

ಹೇಳುವುದಕ್ಕೆ, ಕೇಳುವುದಕ್ಕೆ ಇನ್ನೇನುಳಿದಿದೆ?
ಮಾತು ಮಾತಿಗೂ ಬೆನ್ನು ತೋರಿಸುವವರೀರುವಾಗ!
ಸುಮ್ಮನೆ, ಒಡೆದು ಹೋದ ಮುತ್ತುಗಳ ಜೋಡಿಸುವ
ವ್ಯರ್ಥ ಪ್ರಯತ್ನ
ಮುಟ್ಟಿದರೆ ನುಂಗಿಬಿಡುವಂತಹ ವಿಲಕ್ಷಣ ಸೋಂಕಿತ
ಮನಸುಗಳು.

ಅಳಿಸುವುದಕ್ಕೆ ನನ್ನ ಕೈಯ್ಯಲ್ಲೊಂದು ಡಸ್ಟರ್ ಇರಬೇಕಾಗಿತ್ತು!!
ಅಳಿಸಿ ಬರೆದರೆ? ಮತ್ತೆ ಜೀವ-ಭಾವ ಮೂಡುವುದೇನು
ಸಂಬಂಧಗಳಲ್ಲಿ!
ಹುಚ್ಚುತನ!! ನಾನೇನ್ನಬಹುದು, ಅವರು ತೆವಲೆಂದು ಕರೆದು ಬಿಡುತ್ತಾರೆ.
ಬರೆದ ಪದಗಳಿಗೆ ಬೆಲೆಯಿಲ್ಲವೆಂದ ಮೇಲೆ, ಪುಸ್ತಕ
ಲೇಖಕನಿಗೂ, ಓದುಗರ ಜೇಬಿಗೂ ಹೊರೆ.

ಹೋಗಲಿಬಿಡಿ ಎಂದು ಕೈಯ್ಯನ್ನು ತೊಳೆದುಕೊಂಡು ಬಿಡುವುದಾ?
ಯಾರೊ ಹಚ್ಚಿದ ದೀಪವನು ಊದಿ, ಕತ್ತಲಲಿ ಗಹಗಹಿಸಿ 
ನಗುತ್ತಲಿರುವುದಾ?
ಹರಕು-ಮುರಕು ಗುಡಿಸಲಿಗೆ ಕಡ್ಡಿಯ ಗೀರಿ, ಬಂಗಲೆಯಲ್ಲಿ ಹೊದ್ದು ಮಲಗಿಬಿಡುವುದಾ?

ತುಂಬಿಕೊಳ್ಳಲಿಲ್ಲ ಅರಿವನ್ನು, ಹಂಚಿಕೊಳ್ಳಲಿಲ್ಲ
ಅನುಭವವನ್ನು, ತೋರಿಸುವ ದಾರಿಗಳಂತು ಪ್ರಪಾತಗಳೆ.
ಹಾದಿಗೆ ಹಚ್ಚಿದ ಮುಳ್ಳುಗಳ ನಡುವೆಯೂ ಹೂವೊಂದು
ನಸುನಗುತ್ತದೆ, ಚಿವುಟದಿದ್ದರೆ ಸಾಕು, ದುಂಬಿ ಮಧುವನ್ನು
ಹೀರಲಿ, ಗೂಡನ್ನು ತುಂಬಿಸಲಿ, ತುಂಬು ಜೇನು ಎಲ್ಲರ
ನಾಲಿಗೆಯ ಮೇಲಿನ ವಿಷವನ್ನು ಕಳೆಯಲಿ, ಬದಲಾಗಲಿ,
ಹೊಸಬೆಳಕು ಮೂಡಲಿ.

ಇದಾಗದಿದ್ದರೆ?, ಜೇನು ವಿಷವಾಗಿಬಿಡಲಿ, ಬಿದ್ದು ಹೋಗಲಿ ಸಾಲು ಸಾಲು ಹೆಣಗಳು, ಗಂಟಲಿಗೆ ಹನಿ ನೀರು ದಕ್ಕದಂತೆ.
ತಟ್ಟಿಬಿಡಲಿ ನಿಸ್ಸಹಾಯಕ ಕೈಗಳ ಶಾಪ, ದಾರಿ ಹೆದ್ದಾರಿಗಳಗುಂಟ
ತುಂಬಿ ಬಿಡಲಿ ಮಾಂಸದ ಮುದ್ದೆಗಳು. 
ಶತ ಶತಮಾನಗಳಿಂದ ಹಸಿವಿನಿಂದ ಹಾರಾಡುತಿರುವ ಹದ್ದುಗಳು ಕುಕ್ಕಿ... ಕುಕ್ಕಿ.. ಎಳೆದು ತಿಂದು ತೇಗಿಬಿಡಲಿ, 

ಬಹುಶಃ ಅವುಗಳಿಗೂ ಅಜೀರ್ಣವಾಗಬಹುದೇನೊ?
ಮತ್ತೊಬ್ಬರನ್ನು ತಿಂದೆ ಬದುಕಿದಂತವರಿವರು,
ಸುಲಭವಾಗಿ ಹೇಗಾದರೂ ಜೀರ್ಣವಾದಾರು?
ರಕ್ತ ಬೀಜಾಸುರನ ಸಂತತಿಯೆ ಇರಬಹುದೇನೊ?
ಎಲ್ಲವು ಅಳಿಯಿತು ಎನ್ನುತ್ತಿರುವಾಗಲೆ, ಮೂಲೆಯಲ್ಲೊಬ್ಬ
ಉಸಿರಿರುತ್ತಾನೆ.

ಸಾಕು...ಸಾಕು.. ಒಂದೆ ಉಸಿರಿಗೆ ಅದೇಷ್ಟೊಂದು ಸಾಥಗಳು!!
ಇಲ್ಲದಿದ್ದರೆ? ಆಳುತ್ತಿದ್ದರೇನು ಸ್ವಾಮಿ ಮಸಾಲೆಯ ವಾಸನೆಗೆ
ಬಂದ ಮಂದಿ.
ಕಂಡು ಹಿಡಿಯಬೇಕ್ಹೇಗೆ ಕಾಗೆಗಳೊ? ಕೋಗಿಲೆಗಳೊ? ಎಂಬುದನ್ನು
ವದರುವುದನ್ನು ಸಮರ್ಥಿಸುಕೊಳ್ಳುತ್ತವೆ, ನಾವು ಕೋಗಿಲೆಗಳೆಂದೆ

ನಿಜ. ಇವರು ವದರುತ್ತಾರೆ, ವಟಗುಟ್ಟುತ್ತಾರೆ, ಗುಂಯ್ಯಗುಡುತ್ತಾರೆ
ಎಲ್ಲಿ?  ಹೂಗಾರನ ಹೊಟ್ಟೆಯ ಮೇಲೆ ಹೊಡೆದು, ಕತ್ತಿನ ತುಂಬಾಹೂ ಹಾರವನ್ನು ಹಾಕಿಸಿಕೊಂಡು, ಹೆದರಿಸಿ-ಬೆದರಿಸಿ ಹಾಕಿಸಿಕೊಂಡ ಪೆಂಡಾಲಿನ ನೆರಳಿನಲ್ಲಿ
ಇವರ ಬಾಯ್ಚಪಲಕ್ಕೊಂದೆರಡು ಗುಡಿಸಲು, ಡಬ್ಬಾ ಅಂಗಡಿಗಳಿಗೆ
ಹೋಮವನ್ನು ಮಾಡಿದರಾಯಿತು. ಮುಗಿಯಿತು.

ಊರಿಗೆ ಬೆಂಕಿ ಹಚ್ಚಿ, ಬಂದು ಕುಳಿತುಕೊಳ್ಳುತ್ತಾರೆ,
ಅದೆ ಬಡವರ ಬೇವರಿನಲ್ಲಿ ಮಿಂದೆದ್ದ, ಸುಭದ್ರವಾದ
ಕಲ್ಲು ಕೋಟೆಯ ಅರಮನೆಯಂಥಹ ಮನೆಯಲ್ಲಿ.
ಎರಡು ತಿಂಗಳು ಸಂಬಳ ಪಡೆಯದ ಆಳು ತಂದುಕೊಟ್ಟ
ಪಾನೀಯವನ್ನು ಕುಡಿದು, ಹೇಳುತ್ತಾರೆ 'ಇಂದಿನ ಕಾರ್ಯ
ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವಂತದ್ದು'

ಉಳಿಯುತ್ತದೆ ಸ್ವಾಮಿ, ಕೆಲವರ ಹೆಸರು ಪೋಲಿಸ್ ಕೇಸ್
ರಜಿಸ್ಟಾರ್ ನಲ್ಲಿ, ವಾರಂಟ್ ನಲ್ಲಿ, ತಲೆ ಮರೆಸಿಕೊಂಡವರಲ್ಲಿ,
ಗಡಿಪಾರು ಆದವರಲ್ಲಿ, 

ಬುದ್ಧ ಬಿಟ್ಟುಬಂದ ಕತ್ತಿ ಗುರಾಣಿಗಳು ಇವರ ಬೆನ್ನ ಹಿಂದೆಯೆ ಇವೆ,
ಕಳಿಂಗ ರಣರಂಗಕ್ಕೆ ಸಿದ್ಧವಾಗುತ್ತಿದ್ದಾರೆ ಎಲ್ಲರೂ...
ಯುದ್ಧವಾದ ಮೇಲೆ? ಸಾಮ್ರಾಟನಂತೆ, ಮರಗುವರಾ?
ಕರಗುವರಾ? ಚಿಂತಿಸುವರಾ? ದುಃಖಿಸುವರಾ? ಎಲ್ಲದಕ್ಕಿಂತಲೂ ಮೊದಲು, ದೀಕ್ಷೆಗಾಗಿ ಹಪಹಪಿಸುವರಾ?
ಇಲ್ಲಾ....!! ಹರಿಸಿದ ನೆತ್ತರಿನ ಗುರುತುಳಿಯದಂತೆ, ಸಾಗರಕ್ಕೆ
ಕಾಲುವೆಯನೆ ಕಟ್ಟುವರಾ?

ಕಟ್ಟಿಸುವುದೆ ಇರಲಾರರೆ? ಸುಂಮಗಳೆಯನು ಅಮಂಗಳೆಯನ್ನಾಗಿಸಿ,
ಮತ್ತೆ ನಡು ಬೀದಿಗೆ ಬಂದು, ಮುಂಜಾನೆ ಮುನ್ಸಿಪಾಲ್ಟಿ ನೌಕರ
ಗುಡಿಸಿದ ರಸ್ತೆಯ ಮೇಲೆ, ಅವಳ ಕೈಯಲ್ಲೆ ರಂಗೋಲಿಯನ್ನು
ಹಾಕಿಸಿ, ಎದೆಯುಬ್ಬಿಸಿ ಬೀಗುವುದಿಲ್ಲವೇನು? ನಾವೆ
ಸಮಾಜ .......ಕರೆಂದು.

ಮತ್ತೆ, ಮುಗ್ದ? ಜನತೆ ತಲೆದೂಗುತ್ತಾರೆ, ಕಿವಿಗಡಚಿಕ್ಕುವಂತೆ
ಚಪ್ಪಾಳೆಯನ್ನು ಹೊಡೆಯುತ್ತಾರೆ, ಬೆನ್ನನ್ನು ತಟ್ಟಿಸಿಕೊಳ್ಳುತ್ತಾರೆ.
ಮುಂದೇನು?, ಮುಂದೇನು?... ಮುಂದೇನು?
ಈ ನಡು ರಸ್ತೆಯ ಕ್ರಾಂತಿ ಕಾರ್ಯಕ್ಕೆ, ಖಾತೆಯಲ್ಲೊಂದಿಷ್ಟು
ಹಣ ಜಮಾವಣೆಯಾಗುತ್ತದೆ, ಕಲ್ಲಿನ ಕೋಟೆಯಲ್ಲಿ
ಅಮಂಗಳೆಗೆ ಸುಖದ ಪರಿಚಯವನ್ನು ಮಾಡಿಸುತ್ತಾರೆ.

ಮತ್ತದೇ... ನಿಟ್ಟುಸಿರು, ಮತ್ತದೆ ಸವಕಲು ಪ್ರಶ್ನೆ, ಮತ್ತದೆ ನಿರ್ಭಾವ ನೋಟ, ಮತ್ತದೇ ದಾರಿ ತಪ್ಪಿಸುವವರ ಮಾತುಗಳು.
ಯಾವುದನ್ನು ಕೇಳಬೇಕು, ಅರ್ಥೈಸಿಕೊಳ್ಳಬೇಕು, ಚರ್ಚಿಸಬೇಕು, 
ಅಳವಡಿಸಿಕೊಳ್ಳಬೇಕು, ಅನುಸರಿಸಬೇಕು. ಎಲ್ಲದಕ್ಕೂ
ನಿರುತ್ತರ.

ಯಾಕೆ ಹೀಗೆ, ಈ ಮಣ್ಣಿನ ಗುಣಧರ್ಮವೆ ಹೀಗೆಯೆ?
ಶಿಲುಬೆಗೆರಿದವನಿಗದೇಷ್ಟು ಬೆಳಕು!!! ದೇವಧೂತನಿಗೂ
ಶಾಂತಿ ಸಿಕ್ಕಿಲ್ಲವಾ!?
ಮಣ್ಣು ಗೋರಿಯ ಮೇಲೆ ಕಲ್ಲಿನ ಕಟ್ಟೆಯನ್ನು ಕಟ್ಟಿ,
ಸುಕೋಮಲ ಹೂವನ್ನು ಹೊದಿಸಿಕೊಳ್ಳುವ ಅಲ್ಲಾನಿಗೂ
ಏಕೆ? ನೆಮ್ಮದಿ ಸಿಕ್ಕಿಲ್ಲವಾ?
ಹಣ್ಣು, ಹಾಲು, ತುಪ್ಪ, ಬಂಗಾರಗಳಿಂದ ಅಲಂಕೃತಗೊಳ್ಳುವ
ಮುಕ್ಕೊಟಿ ದೇವರುಗಳಿಗೂ ಆಸೆಗಳೆ ತೀರಿಲ್ಲವಾ?

ಯಾರಲ್ಲಿ ಕೇಳಬೇಕು? ಅವರು ಚಿಂತಾನಾಶೀಲರು
ಇವರು ದೈವ ಭಕ್ತರು, ಕೆಲವರು ನಾಸ್ತಿಕರು, ಹಲವರು
ಸಂಶೋಧಕರು. ಬಹುಶಃ ಎಲ್ಲರೂ ಹೇಳುವುದೆ ಒಂದೆ
'ಹುಚ್ಚ' ನೀನು... ಇಲ್ಲಿ ಬಾ ಶಾಂತಿಯಿದೆ, ಅಲ್ಲಿ ನೋಡು
ಕ್ರಾಂತಿಯ ಭ್ರಾಂತಿಯಿದೆ, ನಾವು ಕೊಂದು ಬದುಕೋಣ‌.

ಎಲ್ಲ ಎಲ್ಲವ ನೋಡಿ, ಎಲ್ಲರ ಮಾತಿನ ಮಂಟಪದ
ಅಡಕತ್ತರಿಯಲ್ಲಿ ಸಿಕ್ಕು, ನನಗೆ ನಾನೆ ಹಾಕಿಕೊಳ್ಳುವ
ಪ್ರಶ್ನೆ. ಯಾಕಾದರೂ ಬಂದೇನೊ ಈ ಭೂಮಿಗೆ.

No comments:

Post a Comment