ನನ್ನ, ನಿನ್ನ ನಡುವಿನ ಸಂಬಂಧಕ್ಕೊಂದು
ಹೆಸರನ್ನು ಊರೆ ಇಟ್ಟು ಮಾತನಾಡಿ,
ಹೊಟ್ಟೆಯ ತುಂಬಿಸಿಕೊಂಡಿತು
ಮಾತನಾಡಲಿಲ್ಲ!!
ಆ ಸಂಜೆಯ ಇಳಿಹೊತ್ತಿನಲ್ಲಿ,
ಕಣ್ಣಂಚಿನ ಕೊನೆಯಲ್ಲಿ ಜಿನುಗುವ
ಹನಿಗಳಿಗೂ ನೀನು
ಉತ್ತರಿಸಲಿಲ್ಲ!!
ಎದೆಯೊಳಗಿನೊಲವು, ಬೆಂದು
ಬೆಂಗಾಡಾಗಿ, ಬಿರುಕು ಬಿಟ್ಟು, ಹನಿ
ಹನಿ ಪ್ರೇಮ ಸಿಂಚನಕಾಗಿ ಕಾದು
ಕುಳಿತಾಗಲೂ ನೀ...
ಉಸಿರೆತ್ತಲಿಲ್ಲ!!
ಮತ್ತೇತಕೆ ಬೇಕು ನಾನು?
ಸಮಯ ಕಳೆಯುವುದಕಾ?
ಕತ್ತಲು ಕರಗಿಸುವುದಕ್ಕಾ?
ನನ್ನೆದೆಯೇನು.. ದುಃಖದ
ಭಂಡಾರವೇನಲ್ಲ!
ಅವುಡುಗಚ್ಚಿ ಎಲ್ಲ ನೋವುಗಳನ್ನು
ಅದುಮಿಟ್ಟುಕೊಳ್ಳಲು.
ತೋಡಿಕೊಳ್ಳಲೆ? ಹೇಗೆ?
ಮಿಡಿಯುವ ಮನಸ್ಸಿಗಿಂತ, ಆಡಿಕೊಳ್ಳುವ
ತಾಮ್ರದ ಬಾಯಿಗಳೆ ಹೆಚ್ಚು.
ಜಗತ್ತು... ಮೊದಲು ಮನೆಯಲ್ಲಿಯೆ
ಕೂಡಿ ಹಾಕಿ, ಹಿಂಡುತ್ತಿತ್ತು...ಹಿಂಸೆ
ಸಂಕಟಗಳಾರಿಗು ಕಾಣಿಸುತ್ತಿರಲಿಲ್ಲ!
ಈಗ!!! ಸಮಾನತೆಯ ಹೆಸರಿನಲ್ಲಿ ಬಯಲಿಗೆ
ಬಿಟ್ಟು, ಹಗಲಿರುಳು ಬೇಟೆಯಾಡುತ್ತಿದೆ
ಹೂವನ್ನು ಹೊಸಕುವುದು ಇವರಿಗೆ
ಹೊಸತಲ್ಲ! ವಿಧಾನ ಬೇರೆಯಾಗಿದೆಯಷ್ಟೆ!.
No comments:
Post a Comment