Saturday, April 25, 2020

ಚು

ಚುಟುಕುಗಳು

ವರುಣ ಕೊನೆಗೂ
ಭೂರಮೆಯನ್ನು
ಚುಂಬಿಸಿಯೇ..
ಬಿಟ್ಟ.
ನೋಡಿಲ್ಲಿ...
ಎಲೆಗಳೆಲ್ಲ ನಾಚಿ,
ರಂಗೇರಿಬಿಟ್ಟಿವೆ
ಸಾಕ್ಷಿಗೆ

ಮನುಷ್ಯನ ಆಸೆ
ಗುಡಿಯ ಮುಂದಿರುವ
ಹುಂಡಿ...
ಎಂದಿಗೂ ಬತ್ತದ
ಒರತೆಗಳು.

ಕಾಯಿ
ಒಡೆಸಿದ್ದೇನೊ
ಬನಶಂಕರಿ
ತಾಯಿಗೆ.
ರುಬ್ಬಿ
ಹಾಕಿಬಿಡುವುದಿಂದೆ
ತಿಳಿ
ಸಾರಿಗೆ.

ನೋಡಿಲ್ಲಿ
ಸೂಜಿ ಮಲ್ಲಿಗೆ
ದುಂಡು ಮಲ್ಲಿಗೆ
ಕನಕಾಂಬರಿ.
ಪುಟ್ಟಿಯಲ್ಲಿ ತುಂಬಿಟ್ಟಿರುವೆ
ಎಲ್ಲ....ಬಾಡುವ ಮುನ್ನ 
ನೀ ಬರಬೇಕಿಲ್ಲಿಗೆ

ಹಿಡಿ ತುಂಬಾ
ಒಂದಿಷ್ಟು ಮಲ್ಗಿ
ಹೂವಾ ತಂದೀನಿ...
ನಾಚ್ಗೊಂತ ನಿಂದ್ರಬ್ಯಾಡ
ನೀ... ಮನಿ ಬಾಗ್ಲ
ಸಂದ್ಯಾಗ...
ಹೊತ್ತು ಮೀರಿ ಹೊಕ್ಕೈತಿ..
ಹೊತ್ತ ಮೀರ್ತಂದ್ರ
ಹೂ ಬಾಡಿ
ಹೊಕ್ಕೈತಿ....
ಹೂ ಬಾಡಿ ಹೋದ್ವಂದ್ರ
ನಾ ಸತ್ತ್....
ಹೊಕ್ಕೇನಿ..

ಕೆತ್ತಿರುವ
ಶಿಲೆಗಾರನಿಲ್ಲ,
ಸ್ತಂಭವಿದೆ.
ಕುಂಬಾರನಿಲ್ಲ,
ಮಾಡಿಟ್ಟ
ಹಣತೆಯಿದೆ.
ಎಣ್ಣೆ, ಬತ್ತಿಯ
ಹಾಕಿ, ಕಾಯುವ
ಪ್ರೇಮಿಯಿದ್ದೇನೆ.
ದೀಪ ಬೆಳಗಿಸುವ
ಜೀವ ಮಾತ್ರ...
ಸನಿಹದಲ್ಲಿಲ್ಲ.

ಸಾಲು ಕಂಬಗಳ
ಹಿಂದೆ....
ಸಾಲಲಾರದಷ್ಟು
ಕಥೆಗಳಿವೆ.
ನಾನೂ....
ಕಥೆಯಾಗಲೆಂದೆ
ಬಂದವನೇನಲ್ಲ.
ರಂಗೀಯು ಬರದಿದ್ದರೆ?
ನನ್ನ ಕಥೆಯನ್ನು
ಕಂಭಗಳೆ
ಹೇಳುವವಲ್ಲ!!!

ಹೆತ್ತ ಮಕ್ಕಳಿಗಿವಳು
ಹಡದವ್ವ...
ನಮ್ಮಂಥ ಹೊತ್ತು
ಗೊತ್ತಿಲ್ಲದೆ...
ಊರೂರು ಅಲೆವ, 
ಅಲೆಮಾರಿಗಳಿಗೆ
ಕೈ ತುತ್ತನಿಟ್ಟು, 
ತನ್ನೊಡಲ ಹಸಿವ,
ಇಂಗಿಸಿಕೊಳ್ಳುವ
ಕಾಯಕವ್ವ.

ತಲೆಯಲ್ಲಿ ನೆರೆತ
ಕೂದಲುಗಳನೇಣಿಸುತ
ನೀ...ಕೂರಬೇಡ.
ನಿನ್ನೊಲವ ಬೇರು
ಎದೆಯಾಳಕೆ 
ಇಳಿದು... 
ಹಣ್ಣನ್ನು ಬಿಟ್ಟಿದೆ.
ತಡಮಾಡದೆ,
ಓಡೋಡಿ ಬಾ
ಹಣ್ಣು ಮಣ್ಣ
ಸೇರುವ ಮುನ್ನ.

ಅದ್ಹೇಗೆ...
ಭೂದೇವಿಯನ್ನು
ಹೊತ್ತು ನಿಂತಿರುವೇಯೊ!!!
ತುಸು ತಾಳ್ಮೆಯನ್ನಾದರು
ಅನುಗ್ರಹಿಸು
ವರಹಾ....
ಸ್ವಾಮಿ.
ನನ್ನ ರಮೆಯು
ಬಾರದೆ....
ಉರಿದು 
ಹೋಗುತ್ತಿರುವನಿಲ್ಲಿ
ವಿರಹಿ ಪ್ರೇಮಿ.

ಕಾಯಿಸುವುದು
ನಿನಗೆ 
ಹೊಸತಲ್ಲ...
ಕಾಯುವುದು...
ಬೇಯುವುದು ನನಗೂ
ಹೊಸತೇನಲ್ಲ...
ಬಿಸಿಲು...!!!
ನಿನ್ನೆಯ ಹಾಗಿಲ್ಲ,
ಅಳಿದುಳಿದ ತಾಳ್ಮೆಯು
ಉರಿದು ಹೋಗುವ
ಮುನ್ನ... ನೀ ಬಂದು
ಸೇರು ನನ್ನನ್ನ.

ಕಲ್ಯಾಣಿಯೇನೊ
ಬತ್ತಿ ಹೋಗಿದೆ
ನಮ್ಮೆಲ್ಲರ ದುರಾಸೆಯಿಂದ.
ಚಿಂತೆಯಿಲ್ಲ !!! ಯಾರಿಗೂ....
ಜೀವ ಜಲವೇ...
ಇಂಗಿ ಹೋದ ಮೇಲೆ,
ನಾವಿನ್ನು ವರ್ಷಗಳನ್ನೇಣಿಸುವದರಲ್ಲಿ
ಅರ್ಥವಿಲ್ಲ.
ಏನು ಮಾಡುವುದು?
ಸ್ವಾರ್ಥವೆ ತುಂಬಿ ಬಿಟ್ಟಿದೆ
ಜಗದಲೆಲ್ಲ..

ಮೊನ್ನೆತಾನೆಯಷ್ಟೆ
ಬೇವಿನ ಕಹಿಯನುಂಡು
ಇಂದು...
ಮಾವಿನ ನೆರಳಿನಲ್ಲಿ
ಕುಳಿತಿರುವೆ.
ನೀ ಬರುವ ಹಾದಿಗೆ
ಹೂ ಹಾಸುವಷ್ಟು
ನಾನು ಸಾಹುಕಾರನಲ್ಲ.
ಪದಗಳಲ್ಲಿ ನಿನ್ನಂದವ
ಕಟ್ಟಿಕೊಡಲಾರದಷ್ಟು
ಬಡವನು ಅಲ್ಲ.

ನಿನ್ನನೂ...
ಬೇವಿನಮರಕ್ಕೆ
ಜಡಿದುಬಿಟ್ಟರಾ?
ತುಕ್ಕು ಹಿಡಿದರೇನಾಯಿತು
ನಿನಗೆ....ಪತ್ರಗಳೆ
ಬರುವುದಿಲ್ಲವಾ?
ನನಗೂ...
ವಯಸ್ಸಾದರೇನಾಯ್ತು?
ಎದೆಯಲ್ಲಿ  ಪ್ರೀತಿಯೇ....
ಉಕ್ಕುವುದಿಲ್ಲವಾ?.

ನೀನು....
ಬಿಟ್ಟು ಹೋದ
ಘಳಿಗೆ...ನೋಡು,
ನಿತ್ಯ ಹರಿದ್ವರ್ಣದಲ್ಲೆಲ್ಲೂ...
ಚಿಗುರಿಲ್ಲ.
ಚಿಗರಿ ಇಲ್ಲದ
ಕಾಡಿನಲ್ಲಿ...
ಸಾರಂಗವು
ಒಂಟಿಯಾಗಿಯೇ
ಅಲೆಯುತ್ತಿದೆ
ದಿಕ್ಕಿಲ್ಲದಂತೆ,
ಇದರರಿವು
ನಿನಗಿಲ್ಲ!!!

ಪುಣ್ಯಕ್ಕೆ....
ನೀನಿಲ್ಲದ
ಹೊತ್ತಿಗೆ,
ಕಲ್ಲುಗಂಭಗಳ
ನಡುವೆ ನಿಂತಿರುವೆ,
ಬದುಕಿರುವೆ.
ನಾಲ್ಕು ಜನರ
ಮದ್ಯವಿದ್ದಿದ್ದರೆ?

ಹೌದು...
ಇಂದು ಕಣ್ಣಿಗೆ
ಬಣ್ಣದ ಕನ್ನಡಕವನ್ನು
ಹಾಕಿಕೊಂಡಿರುವೆ.
ಚೆಂದ ಕಾಣುತ್ತೆನಂತಂದಲ್ಲ!!!
ಕಣ್ಣೊಳಗಿನ
ನೋವು....ನಿನ್ನನು
ನೋಯಿಸದಿರಲೆಂದು.

ತಲೆಯ ಮೇಲೆ
ಹೂವಿನ
ಚಪ್ಪರವಿಲ್ಲ!!!
ಕಲ್ಲು ಚಪ್ಪಡಿಯಿದೆ.
ನೋಡಿದವರೆಲ್ಲ
ಏನು ಅಂದಾರು.
ನಮ್ಮಿಬ್ಬರ ಕುರಿತು
ಏನೆಲ್ಲ ಸುದ್ದಿಯ
ಬಿತ್ತಾರು...


ಈ ವರುಷ...
ಮಲ್ಲಯ್ಯನ
ತೇರು...
ಪಥವನ್ನು 
ತಪ್ಪಿ ನಿಂತಿದೆ.
ನೀನೂ...
ಹಾದಿಯನ್ನು
ತಪ್ಪಬೇಡ!!!
ನಿನ್ಹೆಸರಲಿ
ಉಸಿರೊಂದು
ಜಪ ಮಾಡುತಿದೆ
ತಡ ಮಾಡಬೇಡ!

ಜಾತ್ರೆಯ 
ತಯಾರಿಗಾಗಿ
ಗೋಡೆಗಳಿಗೆಲ್ಲ
ಬಳಿದಿದ್ದಾರೆ 
ಸುಣ್ಣ...
ತುಸು ಹೆಚ್ಚಾದ್ರೂ
ಪರ್ವಾಗಿಲ್ಲ...
ಜಾತ್ರೆಗೆ, ಹಚ್ಗೊಂಡ
ಬಾ ನೀ...
ಮುಖಕ್ಕ ಬಣ್ಣ...

ತುಳಿದು ಹೋದವರ
ಹೆಜ್ಜೆ ಗುರುತೊಂದೊ....
ಮೆಟ್ಟಿಲುಗಳ ಮೇಲೆ
ಮೂಡಿಲ್ಲ...!!!
ತುಳಿಯಿಸಿಕೊಂಡು,
ಎಲ್ಲರನೂ ಮೇಲಕ್ಕೆ
ಕಳುಹಿಸಿದೆನೆಂಬ
ಜಂಭ... ಯಾವ
ಮೆಟ್ಟಿಲುಗಳಲ್ಲೂ
ಇಲ್ಲ..!!

ಗಾಲಿ
ಹೋಳಾಗಿ
ಬಿದ್ದಿದೆ...
ಯಾರಿಗಿಲ್ಲ
ಇದರ ಚಿಂತನೆ!
ಬಹುಶಃ...
ಇದು ಅನುಭವಿಸುತ್ತಿರುವುದೇನೊ?
ನನ್ನ ಹಾಗೆ
ಮೂಕ ವೇದನೆ!

ನಾಟಕಗಳಲ್ಲಿ 
ಮಾಡಿದ್ದೀರಿ...
ಎಂತೆಂತಹ
ಪಾತ್ರಗಳನ್ನು!!!
ಮುಗಿಸಿ
ನಡೆದಿರಲ್ಲ
ಇಂದು
ಬದುಕಿನ
ಪಾತ್ರವನ್ನು!!!
🙏🙏🙏🙏

ಇಂದೇನೊ
ಬೆನ್ನೆಲುಬಿಗೆ 
ರಜೆ
ಆಲೀಸುವರಾರು
ಹೊಟ್ಟೆಗೆ
ಬೀಳುವ
ಸಜೆ

ಕಡೆದು
ಸುಟ್ಟು ಬಿಟ್ಟರೂ...
ಮತ್ತೆ ಚಿಗುರಿ, 
ಹೂಗಳರಳಿಸಿ
ತೋರುತ್ತಿದೆ
ಪ್ರೀತಿ..
ಸುಟ್ಟ ಮನಗಳು
ಅರಿತುಕೊಳ್ಳುವವೇ...
ಇದರ ರೀತಿ
ನೀತಿ

ಬಾಡಿ ಹೋಗಿವೆ
ಗುಲಾಬಿಯ
ಹೂಗಳು
ಸುಡು ಬಿಸಿಲಿಗೆ!!
ಪ್ರೀತಿಯಿಂದ,
ಬಣ್ಣದ ಹಾಳೆಗಳಲ್ಲೆ
ಮಾಡಿಟ್ಟಿರುವೆ
ಹೂಗಳನ್ನು...
ನೀ ಬರದಿದ್ದರೆ!!
ಇವೂ... 
ಉರಿದು ಹೋಗುವವು.. 
ನನ್ನೆದೆಯ ವಿರಹದ 
ಬಿಸಿಗೆ

ಹೌದು ನಾನು
ಸ್ವಲ್ಪ ದಪ್ಪ
ಆದರೂ...
ನಾನಲ್ಲ ಬೆಪ್ಪ
ಸೋತಿರುವೆ,
ಕೊಟ್ಟುಬಿಡಲೆ
ಇಂದೆ... 
ನಿನ್ನ  ರಂಗೇರಿದ
ಕೆನ್ನೆಗಳಿಗೆ ಮುತ್ತುಗಳ
ಕಪ್ಪ..

ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನೀನು.. ಬಿಟ್ಟು ಹೋದ 
ಮೇಲೆಕೆ....ಈ
ಮನಸ್ಸು ಕಲ್ಲಾಗಲಿಲ್ಲ

ಬೆರಸದಿರು ನೋಟಕ್ಕೆ
ನೋಟವ...
ಕಣ್ಣುಗಳವೇಷ್ಟು
ಮಾತನಾಡಿಕೊಳ್ಳುತ್ತವೆ,
ನಿನಗೆ ಗೊತ್ತಾ...?
ಬಿಡುವುದೆ ಇಲ್ಲ ರಾತ್ರಿಗೆ 
ನಿದ್ರಿಸಲು...
ಎಚ್ಚರವಾಗಿಯೆ ಇರುತ್ತವೆ
ನನ್ನ ನಯನಗಳು 
ನಿನ್ನನೆ ನೆನೆಯುತ್ತಾ...

ಮನಸಿನಲ್ಲಿ ಅವಳಿಗೆಂದೆ..
ಕನಸೊಂದು ಮೂಡಿತು..
ಒಪ್ಪಿಸಿಬಿಟ್ಟೆ ಕಾಗದಕ್ಕೆ
ಕಾಗದವು ಆ ಕನಸಿನ
ಸಾಲುಗಳನೊದಿ..
ಅವಳಿಗಿಂತಲೂ... 
ಹೆಚ್ಚು, ಇದೆ
ನಾಚಿ ಮುದುಡಿಕೊಂಡಿತು

ಸಮಾಜ
ಅದೇಷ್ಟು
ಬೆಂದಿದೆ!!!
ಅದಕ್ಕೆ 
ಇವಳನ್ನು
ಅರೆಬರೆ
ಸುಟ್ಟಿದೆ!!!

ಬ್ಯಾಟರಿಯು
ತಣ್ಣಗಾದರೆ?
ಗಡಿಯಾರದ
ಮುಳ್ಳೂ...
ನಿಂತು 
ಹೋಗುವುದಿಲ್ಲವೇನು?
ನೀನು
ಸುಮ್ಮನಾದರೆ?
ನನ್ನೆದೆಯ ಬಡಿತವು
ನಿಂತು ಹೋಗುವುದಿಲ್ಲವೇನು?

ಮನೆಯ
ಬಾಗಿಲಿಗೆ 
ಹಾಕಿದೆ ಬೀಗ
ಮನಸ್ಸಿಗಲ್ಲ!
ಕೂಗಿ ಬಿಡು
ಒಮ್ಮೆ
ಕರೆಗಂಟೆಯ
ಹಾಗೆ, ಬಂದು
ಬಿಡುವನು ಈ
ನಲ್ಲ!!

ಅವಳು
ಕವಿತೆಯಾಗಲೆಂದೆ
ಬಂದವಳು...
ಕಥೆಯಾದಳು!
ನಾನು!!!!!?
ಕಾದಂಬರಿಕಾರನಾದೆ.

ನಾನೂ...
ಸಾಯಬಹುದು
ಇಂದೊ...ನಾಳೆಯೊ
ಈಗಲೊ..
ದಿನಗಳನ್ನಲ್ಲ,
ಕ್ಷಣಗಳನ್ನು
ಲೆಕ್ಕವಿಟ್ಟಿಲ್ಲ
ಇಟ್ಟುಕೊಂಡುವರು
ನನಗೀನ್ನು
ಎದುರಾಗಿಲ್ಲ!

ಕೈಯ ಮೇಲೆ
ಕೈಯಿಟ್ಟು
ಆಣೆ 
ಮಾಡಿದ್ದವಳು
ಕಾಣೆಯಾಗಿದ್ದಾಳೆ!
ಹುಡುಕಿಕೊಂಡು
ಹೊರಟಾಗ,
ಅವಳೀಗ
ಮದುವೆ ಮಂಟಪದಲ್ಲಿದ್ದಾಳೆ!!!

ತವರಿಗೆ
ಹೋದವಳು
ಹೇಳಿದ್ದಳು ಬರುತ್ತೇನೆ
ಇಂದು ಸಂಜೆ!
ಬರದಿದ್ದರೆ!!!!!!
ಎಲ್ಲ ಪಾತ್ರೆಗಳನ್ನು
ನಾನೆ ತಿಕ್ಕಬೇಕಲ್ಲ
ಎಂತಹ
ಸಜೆ!!

ನಿನ್ನ ಚಿಗುರು 
ಮೀಸೆಯ ನಗುವಿಗೆ
ಸೋತು ಹೋಗಿದೆ
ಮನಸು...
ರಪ್ಪೆಗಳೆರಡು 
ಅಪ್ಪಿಕೊಳ್ಳುತ್ತಲೆ...
ಇಲ್ಲ, ನಲ್ಲ
ಬರಿ ನಿನ್ನದೆ
ಕನಸು..


ಕಡೆದು, ಗೂಡಿಸಿ
ಹಾಕಿಬಿಟ್ಟೆ...
ಹೊಲದೊಳಿದ್ದ
ಕಸ-ಕಡ್ಡಿ,
ಮುಳ್ಳು ಕಂಟಿಗಳ...!!
ಕಿತ್ತೊಗೆಯಲೆ
ಆಗುತ್ತಿಲ್ಲ....
ಮನದಾಳದಲ್ಲಿ
ಬೇರು ಬಿಟ್ಟಿರುವ
ಮೋಹ-ವ್ಯಾಮೋಹಗಳ..!!

ನನ್ನ ಬಗ್ಗೆ
ನಿನಗಿಲ್ಲ
ಒಂಚೂರು
ಮರುಕ...
ನನ್ನೆದೆಯ
ನೋವಿಗೆ,
ಭೂಮಿಯು
ಬಿಟ್ಟಿದೆ ನೋಡ..
ಬಿರುಕ

ಅಲ್ಲಿ ನಿನ್ನ
ಮನದಲ್ಲಿ
ತುಂಬಿದೆ
ಕತ್ತಲು!!
ಇಲ್ಲಿ ನನ್ನ
ಮನಸ್ಸಿಗೆ
ಹತ್ತಿದೆ
ಗೆದ್ದಿಲು!!

ಹೂಗಳನ್ನು 
ಮೂಸಬೇಡ,
ಅವುಗಳೆದೆಯಲ್ಲಿ
ಸುಗಂಧವಿಲ್ಲ!!
ನನ್ನನೆ ದಿಟ್ಟಿಸಿ
ನೋಡಬೇಡ,
ನಾನು 
ಅಂದವಿಲ್ಲ!!!
ಆದರೆ ಎದೆಯಾಳಕ್ಕೆ
ಇಳಿದು ನೋಡು..
ಮತ್ತೆ ನೀ...
ಎದ್ದು ಬರುವುದೆ
ಇಲ್ಲ!!!

ಖೇದವೇನಿಲ್ಲ!!
ನಿಂತು ಹೋಗಲಿ
ಉಸಿರು...
ನಿನ್ನ ಹೆಸರಿನಲ್ಲೆ
ಘಾಸಿಗೊಳಿಸಿದರು
ಮನಸ್ಸನ್ನು
ಉಸಿರಾಡುತಿರಲಿ
ಹೇಗೆ?
ನೋವಿನಲ್ಲೆ!!

ನಾನು
ಬಂಗಾರವೇನಲ್ಲ!!
ಕಬ್ಬಿಣವಂತೂ
ಮೊದಲೆ ಅಲ್ಲ!!
ಒಂದನ್ನು ಅರಿತಿಕೊ...
ತಾಮ್ರ ಬೆರೆಯದೆ
ಬಂಗಾರವು ರೂಪಗೊಳ್ಳದು,
ನೀನು ಸೇರದೆ...
ನಮ್ಮ ಬಾಳು
ಹೊನ್ನಾಗದು.

ಹಪ್ಪಳದ ಹಿಟ್ಟನ್ನು
ಹದವಾಗಿ ಲಟಿಸಲು
ಅವಳ ಕೈಯ್ಯಲ್ಲಿದೆ
ಲಟ್ಟಣಿಗೆ!!
ಹೇಳುವುದು, ಕೇಳುವುದು
ಮಾಡಬಾರದು ಈ
ಹೊತ್ತಿಗೆ!!
ಕೇಳಿದರೆ?!!!! ಸಿಗಬಹುದೇನೊ?
ಹೆಚ್ಚಿಗೆ!!

ಕಾಯಕವೇ
ಕೈಲಾಸವೆಂದ
ಬಸವಣ್ಣ....!!
ಕಾಯಕವ ಮರೆತು,
ನಿನ್ನ ಹೆಸರನ್ನೆ
ಹೇಳಿಕೊಂಡು
ಉದರವ 
ಹೊರೆಯುತಿಹರು
ನೋಡಣ್ಣ!!!!

ನೆತ್ತಿಯು
ಸುಡುವುದೆಂದರೆ
ಹೊಟ್ಟೆಯು
ತುಂಬುವುದೇನು?
ನಂ ಕೆಲಸವನ್ನು
ನಾವೆ ಮಾಡಿಕೊಳ್ಳದಿದ್ದರೆ!!!
ಕಾಯಕಕ್ಕೆ
ಅರ್ಥವುಂಟೇನು?

ನಾನು...
ಹೊಲಸು
ತಿಂಬುವ
ಹೊಲಿಯ...!!!
ನಾದರೂ...
ಅನುಸರಿಸೇನು
ಇಬ್ಬಗೆಯ
ನೀತಿಯ!!

ಬೇಡಿ ಬಂ್ಇರುವೆ
ಹನುಮ...
ತೂಗಿ ನೋಡು
ನನ್ನ ಕರ್ಮ

ಶುಭ ಕಾರ್ಯಕ್ಕೆಂದೆ
ಸುಣ್ಣದ ಗೋಡೆಯ
ಮೇಲೆ ಸುರಿದಿದ್ದಾರೆ
ಸುರುಮಾ...



No comments:

Post a Comment