ಬಿಕೋ...ಎನ್ನುತಿರುವ ಬೀದಿಗಳು, ಮಾಂಸ ಖಂಡಗಳನೆ ಕಿತ್ತು ತಿನ್ನಲು ಕಾಯುತಿರುವ ನಾಯಿಗಳು,
ಶಾಪಕ್ಕೆ ತುತ್ತಾಗಿರುವಂತಹ ನಗರಗಳು, ವಾಸಿಯೇ... ಮಾಡಲಾರದಂತಹ ರೋಗಗ್ರಸ್ತ ಮನಸ್ಸುಗಳ ಮದ್ಯದಲ್ಲಿ ನನ್ನನು ಒಬ್ಬಂಟಿಯಾಗಿ ಬಿಟ್ಟು ಹೋಗದಿರು ಸಾಕಿ....
ಮದ್ದಿಲ್ಲದ ಮತಾಂದತೆಯ ವ್ಯಾಧಿಯನ್ನು ಗುಣಪಡಿಸಲು, ಶರಣ-ಸಂತರು, ಪ್ರವಾದಿ-ಪಾದ್ರಿಗಳೆ... ಕಾಲಕಾಲಕ್ಕೆ ಜನ್ಮವನೆತ್ತಿ ಬಂದರೂ....ಉಳಿಸಿಕೊಳ್ಳಲಿಲ್ಲ ನಾಲ್ಕು ದಿನ ಹೆಚ್ಚಿಗೆ! ಇನ್ನೂ ನನ್ನನ್ನು ಬಿಡುವರೇನು?
ಈ ಜನ.
ಕೊಲ್ಲಲು ಆಯುಧಗಳೆ ಬೇಕಂತೇನಿಲ್ಲ,
ಎದೆಯ ತುಂಬ ವಿಷವ ತುಂಬಿಕೊಂಡ
ನಾಲ್ಕು ನಂಜಿನ ಮಾತುಗಳೆ ಸಾಕಲ್ಲವೆ
ಮಸಣವ ಸೇರಲು.
ಉಸಿರು ನಿಂತು ಹೋಗುವ ಮುನ್ನ,
ಹನಿ ಗಂಗಾಜಲವನ್ನು ಬಾಯಲ್ಲಿ ಹಾಕುವರೆಂಬ ಭರವಸೆ ನನ್ನೊಳಗಿನ್ನು ಉಳಿದಿಲ್ಲ ಸಾಕಿ....
ವಿರಹಿಗಳು ಕುಡಿದು ಬಿಸಾಡಿ ಹೋದ,
ಮದ್ಯದ ಬಾಟಲಿಯ ಕೊನೆಯ ಹನಿಗಳನ್ನಾದರು ನೀ... ತುಟಿಗೆ ಸವರಿಬಿಡು
ಚಪ್ಪರಿಸಿ, ಸ್ವರ್ಗದ ಮೆಟ್ಟಿಲನ್ನೇರಿಬಿಡುವೆ.
ಉಸಿರು ನಿಂತ ಮೇಲೆ? ಹಳೆಯ ಮನೆಯ ತೊಲೆಗಳಿಂದ ಮಾಡಿದ, ಶವದ ಪೆಟ್ಟಿಗೆಯಲ್ಲಿ ತುರುಕಿಕೊಂಡು, ಮೊದಲೆ ಹೂತು ಹೋಗಿದ್ದ ಖುಣಿಯನ್ನ ಕೆಬರಿ, ಅಸ್ಥಿಪಂಜರಗಳನ್ನು ಹೊರಹಾಕಿ, ನನ್ನನಲ್ಲಿ ಹುಗಿದುಬಿಟ್ಟಾರು ಸಾಕಿ...
ಹುಗಿಯುವುದಾದರೆ, ನಿನ್ನ ಹೂದೋಟದಲ್ಲೆ ಹೂಳು, ವಿವಸ್ತ್ರವಾಗಿಸಿ. ಅನುದಿನವು ನಿನ್ನ
ಸುಕೋಮಲ ಹೆರಳುಗಳನ್ನು ಸಿಂಗರಿಸುವ
ಗುಲಾಬಿ ಗಿಡಗಳ ಬೇರಿಗೆ ಗೊಬ್ಬರವಾಗಿಯಾದರು ಸಾರ್ಥವಾಗುತ್ತೇನೆ.
ಅಳಿಸಿ ಹೋದನೆಂದು ಯಾರಲ್ಲಿಯೂ ಬಾಯ್ಬಿಡಬೇಡ ಸಾಕಿ...
ಸತ್ತವರ ಹೆಸರನ್ನು ಎತ್ತಿ ಹಿಡಿದುಕೊಂಡು
ಕೆಸರೆರಚಾಟವನಾಡುವರಿಲ್ಲಿ ನಾಟಕದ ಜನರು.
ಇಲ್ಲಿ ನನ್ನೊಬ್ಬನ ಸಾವಿನಿಂದ ಅಂಕಣದ ಪರದೆ ಎಳೆಯದು ಸಾಕಿ... ಎಳೆಯದು
ಮುಗಿಯದು.
ನಾನೀಗ ಪಾಪ-ಪುಣ್ಯ, ಕರ್ಮ-ಫಲಗಳ
ಬೆಲೆಯನರಿಯದ ಮುಗ್ದ ಮಗುವಿನಂತೆ.
ಕರೆದುಕೊಂಡು ಹೋಗು, ತೋರಿಸುವ ದಾರಿ
ಮಸಣದ್ದೆ ಆದರು ಸರಿ. ಕಣ್ಮುಚ್ಚಿ ನಡೆದುಬಿಡುವೆ ನಿನ್ನ ಹಿಂದೆ.
No comments:
Post a Comment