Saturday, April 25, 2020

ಹೀಗೆ

ನನ್ನಾತ್ಮದೊಳಗೆ ಶಾಂತಿಯಿಲ್ಲದಿರುವಾಗ
ನಿಮ್ಮಾತ್ಮಕೆ ನಾ ಹೇಗೆ ಶಾಂತಿಯ ಕೋರಲಿ
ನವರಸಗಳ ಹೊಲಸನೆ ತುಂಬಿಕೊಂಡಿಹ ಮಡಿಕೆಯಿದು
ನಿಮ್ಮ ಹೆಸರನುಸುರಲು ಯೋಗ್ಯವಲ್ಲದ ಜೀವವಿದು
ಮತ್ತೆ...ಮತ್ತೆ...ಹುಟ್ಟಿ ಬನ್ನಿ‌ ಎಂದು ಯಾವ
ನಾಲಿಗೆಯಿಂದ ಪ್ರಾರ್ಥಿಸಲಿ....

ಸಾವಿರ...ಸಾವಿರಗಳ ಕೊಟ್ಟು ಶಿಕ್ಷಣವ ಕಲಿಸಲು
ಬಡಿದಾಡುವೆವಯ್ಯ...
ಲಕ್ಷ..ಲಕ್ಷಗಟ್ಟಲೆ ಪಡೆದರೂ ಜ್ಞಾನವ ಹಂಚದೆ,
ಅನಾಗರೀಕತೆಯನೆ ಹಂಚುತಿರುವರಲ್ಲಯ್ಯ..
ಸುಲಿದು...ಸುಲಿದು...ಪದಗಳನು ಬಜಾರಿನ
ಹರಾಜಿನ ಮೂಟೆಗಳಾಗಿರಿಸಿಹರಯ್ಯ...

ಎಲ್ಲದಕೂ ಬೆಲೆ ಕಟ್ಟುವ ಕಲೆ ನಮಗೆ
ಕರಗತವಾಗಿರುವಾಗ..., ದಾಸೋಹ!!!!
ಅದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗದು.
ಸಂಸ್ಕೃತಿಯನೆ... ಅರಿತುಕೊಳ್ಳಲಾಗದವರೆಲ್ಲ
ಹೋಗಿಬನ್ನಿ‌‌ ಎನ್ನುವರಲ್ಲ... ಅವರಿಗೆಲ್ಲ ಏನು ಗೊತ್ತು
ನಿಮ್ಮ ಕಾಯಕದ ರುಚಿ ಅವರಾರು ಸವಿದಿಲ್ಲ
ದೇಹಿ ಎಂದು ಬೇಡಿ ಬಂದವರ ಹಿಂದೆ ನಾಯಿಗಳನೆ
ಛೂ.. ಬಿಡುವವರಲ್ಲ!!!!

ಕಾಯವ ಬಾಗಿಸದೊಡೆ ಕಾಯಕಕೆಲ್ಲಿ ಬಂತು ಬೆಲೆ
ಬೆವರಿಳಿಸದೆ ಪರರ ಧಾನ್ಯವ ದಾನವಾಗಿಸುವುದು
ದಾಸೋಹದ ಕಗ್ಗೊಲೆ
ದೇವರನ್ನೆ ಕಳೆದುಕೊಂಡು ಸ್ಮಶಾನವಾಗಿಬಿಟ್ಟಿದೆ
ಕರುನಾಡಿನ ನೆಲೆ
ಸಣ್ಣಗಾದರೂ... ವ್ಯಾಪಿಸಬೇಕಿದೆ ಜಗದ ತುಂಬೆಲ್ಲ 
ತ್ರಿವಿಧ ದಾಸೋಹದ ಅಲೆ...

No comments:

Post a Comment