Saturday, April 25, 2020

ಹಾಯ್ಕುಗಳು

ಹಾಯ್ಕುಗಳು.

೧೬೪.
ಶಿವರಾತ್ರಿ ಬಂದಾಗಲೆಲ್ಲ
ಹಣ್ಣಿನ ವ್ಯಾಪಾರ
ಜೋರಾಗಿರುತ್ತದೆ.

೧೬೫.
ಅಂಗಡಿಯಲ್ಲಿ ಯಾವ
ದೇವರಿರುತ್ತಾರೊ,
ದುಡಿಯುವ ಕೈಗಳು ಅವುಗಳನ್ನೆ
ಪೂಜಿಸುತ್ತಾರೆ.

೧೬೬.
ಬಾಯಿಂದ ಬಾಂಧವ್ಯಗಳನ್ನು
ಬೇಸೆಯಬೇಕೆಂದಾಗ,
ನೆಲದ ಮೇಲೆ ಕುಳಿತವನು 
ಎದ್ದು ನಿಂತ.

೧೬೭.
ಬಿಟ್ಟು ಹೋದ ಸಂಜೆಗೆ
ಕಾರಣವ ಹೇಳಲಿಲ್ಲ.
ತಂದ ಮಲ್ಲಿಗೆಯ ಮುಡಿದಿದ್ದರು ಸಾಕಿತ್ತು.

೧೬೮.
ಕರೆಂಟ್ ಹೋಗಿ ಆಫೀಸ್ ನಲ್ಲಿ
ಕಂಟ್ರ್ಯಾಕ್ಟರ್ ಬೆವತು ನೀರಾಗಿದ್ದ.
ಗಿಡಗಳನ್ನು ಕಡೆದು ನಿವೇಶನಕ್ಕಾಗಿ ನಕ್ಷೆ ಹಾಕುತ್ತಿದ್ದ.

೧೬೯.
ಮದುವೆ ಮಂಟಪದಲ್ಲಿ
ಅನ್ನವನ್ನು ಕೆಡಿಸದಿರಿ ಎಂಬ ಬೋರ್ಡಿತ್ತು.
ಅಕ್ಷತೆಗಾಗಿ ಜನರು ಪರದಾಡುತ್ತಿದ್ದರು.

೧೭೦.
ಮಕ್ಕಳು ಪುಡಿಗಾಸಿಗಾಗಿ ಅಳುತ್ತಿದ್ದರು
ಅಪ್ಪನ ಜೇಬಿನಲ್ಲಿ ಹಣವಿರಲಿಲ್ಲ.
ಹಡೆದದ್ದು ಸಾಕುವುದಕ್ಕಾ, ಕಾಮಕ್ಕಾ, ಅರ್ಥವಾಗಲಿಲ್ಲ.

ಹಾಯ್ಕು -೧೭೧
ಮಾತಿಗಿಂತ, ಮೌನದ ದರವೆ
ದುಬಾರಿಯಾಗಿತ್ತು.
ಕೊಂಡುಕೊಂಡೆ! ನೋವನ್ನು ಒತ್ತೆಯಿಟ್ಟು.

೧೭೨.
ಯಾವಾಗಲೂ ಹತ್ತಿ ಬಟ್ಟೆಯನ್ನೆ
ಧರಿಸಬೇಡಿ.
ಕಡ್ಡಿ ಗೀರುವವರು ಕಾಯುತ್ತಿರುತ್ತಾರೆ.

೧೭೩.
ಹೊಟ್ಟೆಗಾಗಿ ಸೇರಗು ಹಾಸಿದ
ಹಾದರದ ಹೆಂಗಸಿಗೂ ಹೇಳುತ್ತಾರೆ
'ಕೆಲಸ' ಮುಗಿದ ನಂತರ ಕೊಡುತ್ತೇನೆ.

೧೭೪.
ಹಾಸಿಗೆಯಲ್ಲಿ ದೇಹಗಳು ಬಿಸಿಯಾಗುತ್ತವೆ.
ಆಸ್ತಿಯಲ್ಲಿ ತಲೆಗಳು ಬಿಸಿಯಾಗುತ್ತವೆ.
೨ನ್ನೂ ಸರಿದೂಗಿಸಲು 'ಕೈ' ಯನ್ನು ಬಿಸಿ
ಮಾಡಿಕೊಳ್ಳುತ್ತಾರೆ.

೧೭೫.
ವಂದನಾರ್ಪಣೆಗಾಗಿ ಮೈಕನ್ನು ಹಿಡಿದುಕೊಂಡಾಗ
ಕಾರ್ಯಕ್ರಮ ಮುಗಿಯಿತು ಎಂದುಕೊಳ್ಳುತ್ತಾರೆ.
'ಇವರು' ಮತ್ತೆ ಶುರುವಿಟ್ಟುಕೊಳ್ಳುತ್ತಾರೆ.

೧೭೬.
ಉಕ್ಕಿಹೋದ ಹಾಲಿಗಾಗಿ ಅತ್ತೆ
ಸೊಸೆಗೆ ಮಂಗಳಾರತಿ ಎತ್ತುತ್ತಿದ್ದಳು.
ಹಾಲನ್ನು ಕುಡಿದ ವಲೆ ನಗುತ್ತಿತ್ತು.

೧೭೭.
ಬೇಸಿಗೆಯ ಹೊಸ್ತಿಲಲ್ಲಿ ನಿಂತಿದ್ದರು
ಕಂಡವರ ಮನ-ಮನೆಗೆ ಬೆಂಕಿಯ
ಹಚ್ಚಿ, ಚಳಿಯನ್ನು ಕಾಯಿಸಿಕೊಳ್ಳುತ್ತಿದ್ದಾರೆ.

೧೭೮.
ಹಲ್ಲಿ ಬಿದ್ದ ಹಾಲು 
ವಿಷಪೂರ್ಣವಾಗಿ ಹೋಗಿತ್ತು.
ಕುಡಿಸಲು ಕೆಲವರು ತಲೆಗಳನ್ನು ಎಣಿಸುತ್ತಿದ್ದರು.

೧೭೯.
ಸಂಸಾರ ಸನ್ಯಾಸದ ಕುರಿತು
ಉಪನ್ಯಾಸ ನೀಡುತ್ತಿದ್ದರು ಸ್ವಾಮೀಜಿ.
ಎದೆಯೊಳಗೆ ಮದನ ಹೂವರಳಿಸುತ್ತಿದ್ದ‌.

೧೮೦.
ಮಹಿಳಾ ದೌರ್ಜನ್ಯದ ವಿರುದ್ಧ
ಸಾವಿರಾರು ಮಹಿಳೆಯರು ಸೇರಿದ್ದರು.
ಕಣ್ಣುಗಳನ್ನು ಬಿಟ್ಟು, ಯಾರೊಬ್ಬರ ಮೊಗವು
ಕಾಣಿಸುತ್ತಿರಲಿಲ್ಲ.

೧೮೧.
ಬೇಕಿದ್ದರೆ ಹೂಗಳನ್ನು ಕೊಂದುಬಿಡಿ
ಅಕ್ಷತೆಯನ್ನು ಬಳಸಬೇಡಿ ವೇದಿಕೆಯಲ್ಲಿ.
ಭೂ ತಾಯಿ ನಗುತ್ತಿದ್ದಳು, ಇವರ ರೀತಿ-ನೀತಿಗೆ.

೧೮೨.
ತೋಡಿದ ಖೆಡ್ಡಾದಲ್ಲಿ ಆನೆಯೆ
ಬೀಳಬೇಕೆಂದೆನಿಲ್ಲ!, ಮತ್ತು
ಹೆಚ್ಚಾದರೆ, ನಾವೆ ಬಿಳಬೇಕಾಗುತ್ತದೆ.

೧೮೩.
ಮಹಿಳಾ ದಿನಾಚರಣೆಯ ಆಚರಣೆಗೆ
ಹೋಗಲು ತಯಾರಾಗಿದ್ದಳು ಮನೆಯೊಡತಿ.
ರಜೆ ಸಿಗದ ಕೆಲಸದಾಳು ಸಂಜೆಗಸವನ್ನು ಗುಡಿಸುತ್ತಿದ್ದಳು.

೧೮೪.
ಕೊಲ್ಲಲು ಸಿದ್ಧವಾಗುವ ಕೈಗಳು
ಕಣ್ಣೀರನ್ನು ಒರೆಸಲು ಸಾಧ್ಯವಿಲ್ಲ.
ನರಿಗಳು ಸಹಾನುಭೂತಿಯ ಮಾತುಗಳನ್ನು
ಆಡುತ್ತವೆ.

೧೮೫.
ನನ್ನ ನೆಲವೀಗ ಬಲಿಷ್ಠವಾಗುತ್ತಿದೆ
ವಿಷದ ಬೀಜಗಳನ್ನು ಬಿತ್ತಲಾಗುತ್ತಿಲ್ಲ.
ಬೆಳೆ ಬೆಯಿಸಿಕೊಳ್ಳುವವರು ಹತಾಶರಾಗಿದ್ದಾರೆ.

೧೮೬.
ತಂದು ಹಾಕುವವರನ್ನು ನಂಬಬಾರದು
ನಾವೆನೆಂಬುದನ್ನು ಅರಿತುಕೊಂಡಿರಬೇಕು. 
ಕಬ್ಬಿಣವನ್ನು ಕಟ್ಟುವುದಕ್ಕಷ್ಟೆ ಉಪಯೋಗಿಸಬೇಕು.

೧೮೭.
ಹಿಂದೆ ಸರಿದುಬಿಡು ಮಳೆರಾಯ
ಅನ್ನವಿನ್ನು ಒಲೆಯ ಮೇಲಿದೆ.
ಇನ್ನೂ ಹಸಿವನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮೊಳಗುಳಿದಿಲ್ಲ.

೧೮೮.
ಶರಣಪ್ಪ ಮಾಂಸಾಹಾರವ ತ್ಯಜಿಸುತ್ತೇನೆಂದ
ಸಹಪಾಠಿಗಳು ಸಂತೋಷವ ವ್ಯಕ್ತಪಡಿಸಿದರು.
ಸೊಂಕು ಭೇದ-ಭಾವವಿಲ್ಲದೆ ಅಪ್ಪಿಕೊಳ್ಳುತ್ತಿತ್ತು.

೧೮೯.
ಬೇಕಾದವರು ಬೇಡವಾದಾಗ, ಬೇಕಾದವರಿಗೆ
ಬೇಡವಾದವರು ನಮಗೆ ಬೇಕಾಗುತ್ತಾರೆ.
ಇಲ್ಲಿ ಬೇಕು-ಬೇಡಗಳಿಷ್ಟೆ ಪ್ರಾಮುಖ್ಯತೆ.

೧೯೦.
ಪವಿತ್ರ ಸ್ಥಳಗಳಲ್ಲಿಯೂ ಔಷಧಿಯನ್ನು
ಸಿಂಪಡಿಸುತ್ತಿದ್ದಾರೆ.
ಯಾರು ಮಾಡಿದ್ದನ್ನು ಯಾರು ಉಣ್ಣುವುದೊ?.

೧೯೧.
ಕೆಲವು ಆತ್ಮೀಯರ ಒತ್ತಾಸೆಗಾಗಿ
ಅನೌಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ.
ಅವಮಾನದ ಸನ್ಮಾನವನ್ನು ಸ್ವೀಕರಿಸಬೇಕಾಗುತ್ತದೆ.

೧೯೨.
ವೇದಿಕೆಯ ಮೇಲೆ 

೧೯೩.
ವಿಲ್ ಪತ್ರವನ್ನು ಓದಿದಾಗ
ಮಕ್ಕಳಿಗೆ ಅನಿಸಿತು.
ಅಪ್ಪ ಇನ್ನೂ ಬದುಕಬೇಕಿತ್ತು.

೧೯೪.
ಅವರು ಬೆಟ್ಟವನ್ನು ಬಿಟ್ಟುಕೊಟ್ಟರು.
ಇವರು ದುಡ್ಡನ್ನು ಕೈಗಿಟ್ಟರು.
ಮನೆ‌ ಮಕ್ಕಳು ಬೀದಿ ಪಾಲು.

೧೯೫.
ದೀಪ ಹಚ್ಚಲು 'ಎಣ್ಣೆ' ಇಲ್ಲವೆಂದವರು
ಬಾಗಿಲನ್ನು ತೆರೆಯಲೆಂದೆ ಕಾಯುತ್ತಿದ್ದಾರೆ.
ಮನೆಯಲ್ಲಿ, ಬಾಟಲಿಯ 'ಎಣ್ಣೆ' ಖಾಲಿಯಾಗಿದೆ.

೧೯೬.
ಅವನು ಕೇಳಿದ ಖಾಲಿ ಇದ್ದೀರಾ?
ಏನೆಂದು ಉತ್ತರಿಸಲಿ.
ಮೇಲಿನವನೆ ಇನ್ನೂ ಸುಮ್ಮನೆ ಕುಳಿತಿಲ್ಲ.

೧೯೭.
ತಿಂಡಿಯ ಪೊಟ್ಟಣವ ಕೊಟ್ಟು
ಪೋಟೊವನ್ನು ತೆಗೆಸಿಕೊಳ್ಳುತ್ತಿದ್ದರು.
ಒಂದೆರಡು ಜಿರಲೆಗಳು ಹೊರಬಂದವು.

೧೯೮.
ಕೆಚ್ಚಲನ್ನು ಹಿಂಡುವಾಗ ಆಕಳು ಕಣ್ಮುಚ್ಚಿರುತ್ತದೆ.
ಪೋಟೊದಲ್ಲಿ ಕಣ್ಣು ಮುಚ್ಚಿದ್ದ ಅಧಿಕಾರಿ 
ಛಾಯಾಗ್ರಾಹಕನಿಗೆ ಬೈಯ್ಯುತ್ತಿದ್ದ.

೧೯೯.
ಹಸಿವಾದಾಗ, ಕೈ ಚಾಚುವವರ
ನೈತಿಕತೆಯನ್ನು ಪ್ರಶ್ನಿಸುವಂತಿಲ್ಲ!
ಸಾವಿಗೂ..‌.ಹಸಿವಾಗುತ್ತದೆ.

No comments:

Post a Comment