ಭಾಗ ೨
ಅಷ್ಟರಲ್ಲಿ 'ಸಾವಕಾರ ನಮಸ್ಕಾರ್ರಿ' ಎಂದ ಗಾಡಿ ಕ್ಲಿನರ್ (ನಿರ್ವಾಹಕ)
ಕಣ್ಬಿಟ್ಟು ನೋಡಿದೆ, ಪರಿಚಯದವನೆ,
'ನಮಸ್ಕಾರ ಹೇಳಯ್ಯ' ಎಂದೆ,
'ಊರಿಗೆ ಹೊಂಟಿರೇನ್ರಿ' ಎಂದ,
'ಹ್ಞೂಂ... ಇಲ್ಲೆ ಬೇವಿನಕಟ್ಟಿಗೆ, ಒಂದ್ ಬಾಸಿಂಗ ಬಿಡೊ ಕಾರಣ ಇತ್ತ ಅದ್ಕ' ಎಂದು ಅಂಗಿಯ ಜೇಬಿನಿಂದ ಹಣವನ್ನು ತೆಗೆದುಕೊಟ್ಟೆ,
'ಅಲ್ಲಾ...' ಎಂದು ತಲೆಯನ್ನು ಕೆರೆದುಕೊಳ್ಳುತ್ತಲೆ
ಹಣವನ್ನು ಪಡೆಯಲು ಹಿಂಜರಿಯತೊಡಗಿದನು, ಯಾಕೆಂದರೆ ನಮ್ಮಂಗಡಿಯ ಮುಂದೆಯೆ ಅವರು ವಾಹನವನ್ನು ನಿಲ್ಲಿಸುತ್ತಿದ್ದರಿಂದ ನನ್ನಿಂದ ಹೇಗೆ ಹಣವನ್ನು ಪಡೆಯುವುದು ಎಂದು ಅವನಿಗೊಂದಿಷ್ಟು ಪೇಚಿಗೆ ಸಿಲುಕಿದ ಹಾಗಿತ್ತು, ಅವನ ಮುಖದ ಭಾವನೆಯನ್ನು ಕಂಡು
'ಏ ಇರ್ಲಿ ತಗೊಳೊ ಮಾರಾಯ, ಮುಂಜಾನಿ ನಾಷ್ಟಕರ ಬೇಕಲ್ಲ '
ಎನ್ನುತ್ತಾ ಕೊಟ್ಟೆ, ಹಣವನ್ನು ತೆಗೆದುಕೊಂಡು ಮರಳಿ ಚಿಲ್ಲರೆಯನ್ನು ಕೊಟ್ಟು ಪಕ್ಕಕ್ಕೆ ಸರಿದು ಆ ಹೆಣ್ಣು ಮಗಳತ್ತ ಕೈ ಚಾಚಿ 'ಬಸ್ ಚಾರ್ಜ್ ಕೊಡ್ರಿ' ಎಂದ.
ಅವಳ ಕಣ್ಣಲ್ಲಿ ದುಃಖದ ಕಡಲೆ ಕಟ್ಟಿಕೊಂಡಿತ್ತೇನೊ...ಸರಸರನೆ ಕಣ್ಣಿಂದ ಕಣ್ಣೀರು ಸುರಿಯತೊಡಗಿತು, ಸೀರೆಯ ಸೆರಂಗಂಚಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, 'ನನ್ಹತ್ರ ರೊಕ್ಕಾ ಇಲ್ಲಣ್ಣಾ ' ಎಂದಳು.
ಮುಖಸಿಂಡರಿಸಿಕೊಂಡ ಅವನು 'ಮೊದ್ಲ ಹೇಳಿ ಹತ್ತಾಕ ಬರ್ತಿತ್ತಿಲ್ಲ ನಿಂಗ, ಮುಂಜಮುಂಜಾನೆದ್ದ ರೊಕ್ಕಿಲ್ಲಂತದ್ರ, ಮಾಲಕನ ಕೈಯ್ಯಾಗೇನ ಚೊಂಬ ಕೊಡ್ಲೇನ ನಾನು, ಗೊತ್ತಾಗತ್ತಿಲ್ಲ ಬೆ ಹೊಟ್ಟಿ ತೆರ್ದ ಮಕ್ಕಳ ಹಡ್ದಿದಿ ಅಷ್ಟು ತಿಳ್ವಳಿಕಿ ಬ್ಯಾಡನ ನಿಂಗ, ಏ ಡ್ರೈವರ್ ಸಾಬ್ ಗಾಡಿ ಸೈಡ್ಗೆ ಹಾಕಪ.. ಇಲ್ಲೊಂದು ಮುಂಜಾನೆದ್ದ ಲಾಭದ ಗಿರಾಕಿನ ಹತ್ತೈತಿ ಗಾಡ್ಯಾಗ ' ಎನ್ನುತ್ತಾ ಗಾಡಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲುಸಲು ಡ್ರೈವರ್ ನಿಗೆ ಅವಸರಿಸತೊಡಗಿದನು. ಅವಳು ಸರಕ್ಕನೆ ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ ತಾಳಿಯನ್ನು ತೆಗೆದು ಅವನ ಮುಂದೆ ಹಿಡಿದು ತೋರಿಸುತ್ತಾ, ' ಅಣ್ಣಾ ಹಂಗ ಮಾಡಬ್ಯಾಡಣ್ಣ, ಇಲ್ಲೆ ಅರ್ಧ ದಾರ್ಯಾಗ ಬಿಟ್ಟು ಹೋಗ್ಬೇಡ, ನೋಡಿಲ್ಲಿ ಬೇಕಿದ್ರ ಬದಾಮಿ ಬಸ್ಟ್ಯಾಂಡನ್ಯಾಗ ಇಳಿದ ತಕ್ಷಣ ಈ ತಾಳಿ ಮಾರಿ ನಿನ್ನ ರೊಕ್ಕ ಕೊಡ್ತೀನ' ಎಂದಳು. ಅವಳ ಮಾತನ್ನು ಕೇಳಿ ಗಾಡಿಯಲ್ಲಿದ್ದ ಎಲ್ಲರು ಒಂದು ಕ್ಷಣ ಸ್ತಬ್ಧಭೂತರಾದರು. ಡ್ರೈವರ್ ಅವಳ ಮಾತನ್ನು ಕೇಳಿ ಗಾಡಿಯನ್ನು ನಿಲ್ಲಿಸದೆ ಓಡಿಸತೊಡಗಿದನು,
'ಎಲ್ಲಿಂದ ಬಂದಿಯವ್ವ' ಎಂದು ಕ್ಲಿನರ್ ಕುತೂಹಲದಿಂದ ಕೇಳಿದ,
' ನಾವು ಇಲ್ಲೆ ಬದಾಮಿ ದಾಟಿ ಒಂದ ಹಳ್ಳಿರಿ, ಈಗೆರಡ ತಿಂಗಳ್ದ ಹಿಂದ ನಾನು ನನ್ನ ಗಂಡ ಮಂಗ್ಳೂರಿಗೆ ದುಡ್ಕೊಂಡ ತಿನ್ನಾಕಂತ ಹೋಗಿದ್ವಿರಿ, ಒಂದ ತಿಂಗಳ ಛಲೊತ್ನ್ಯಾಗ ದುಡ್ದವ್ರ್ಯಾ, ಬಂದ ರೊಕ್ಕಾನೆಲ್ಲ ನನ್ನ ಗಂಡ ಕುಡ್ದ ಜೂಜಿಗೆ ಆಡಾಕ ಹತ್ತಿದ್ನರ್ರಿ, ಮೊನ್ನೆ ರಾತ್ರಿ ಯಾರೊ ಇಬ್ರನ್ನ ಕರ್ಕೊಂಡ ಬಂದ ಈ ಹಸುಗೂಸನ್ನ ಮಾರಾಕ ಹೊಂಟಿದ್ನರ್ರಿ, ಅಲ್ಲೆಲ್ಲಾ ಗುದ್ದಾಡಿ ಬಾಯ್ ಮಾಡಿದ್ದಕ್ಕ ನಮ್ಹಂಗ ಕೆಲ್ಸಕ್ಕ ಬಂದ ಮಂದಿ ಎಲ್ಲಾ ಸೇರಿ ನನ್ನ ಗಂಡನ್ನ ಅವನ ಜೊತಿಗ ಬಂದ್ರವ್ನ ಬಾಸುಂಡೆ ಬರೊ ಹಂಗ ಹೊಡ್ದ ಹೋದರ್ರಿ.. ಇದ ಸಿಟ್ಟಿಲೆ ನನ್ನ ಗಂಡ ಒಡಗಟಗಿ ತಗೊಂಡು ಮೈ ತುಂಬಾ ರಕ್ತ ಬರಂಗ ಹೊಡ್ದ, ಕುಡ್ದ ಬಂದ ಮತ್ತ ಕೈ ತಗೋತಿನಂತ ಹ್ವಾದನ್ರೀ...ಇನ್ನ ಇಂವ ಇಲ್ಲಿದ್ರ ನನ್ನ ಜೀವಾ ಉಳ್ಸಂಗಿಲ್ಲ ಅಂತ ಅನ್ಕೊಂಡ, ಉಟ್ಟ ಬಟ್ಟಿಲೆ ಹಟ್ಟಿ ಬಿಟ್ಟ ಹೊಂಟ ಬಂದೇನ್ರಿ, ಮಂಗ್ಳೂರಿಂದ ನಮ್ಮೂರಿಗ ಬರಾಕ ಟಿಕೆಟ್ಗೆ ರೊಕ್ಕ ಇರಲಾರ್ದಕ್ಕನ ಕಾಲನ ಬೆಳ್ಳಿ ಕಾಲುಂಗ್ರ ಮಾರಿ ಗಡಾತನ್ಕ ಬಂದಿನ್ರೀ..ಇನ್ನೂ ಒಂದು ಹನಿ ನೀರ ಸೈತ ಬಾಯ್ಯಾಗ ಹಾಕ್ಕೊಂಡಿಲ್ರೀ, ಅಣ್ಣೊರ ನಿಮ್ಗ ಪುಣ್ಯ ಬರತೈತ್ರಿ ಬದಾಮಿ ತಂಕ ಕರ್ಕೊಂಡ ಹೋಗ್ರಿ, ಈ ತಾಳಿನ ಮಾರಿಸಿಕೊಡ್ರಿ, ನಿಮ್ಮ ರೊಕ್ಕ ಕೊಟ್ಟ ನಾ ಅತ್ಲಾಗ ನಮ್ಮ ತವರ ಮನಿ ಗಾಡಿ ಹಿಡಿತಿನ್ರೀ...' ಎಂದು ತನ್ನ ರಾಮಾಯಣವನ್ನೆಲ್ಲ ಒಂದೆ ಉಸಿರಿನಲ್ಲಿ ಹೇಳಿಬಿಟ್ಟಿದ್ದಳು. ಬಾಯೆಲ್ಲಾ ಒಣಗಿ ಬಿಟ್ಟಿತ್ತು, ಇನ್ನು ಒಂದು ಮಾತನ್ನು ಆಡಲು ಆಗದು ಎನ್ನುವ ಹಾಗೆ ಸೀಟಿಗೊರಗಿ ಕುಳಿತುಬಿಟ್ಟಳು. ಆಗ ನಾನು ಅವಳ ಕರುಣಾಜನಕ ಕಥೆಯಿಂದ ಹೊರಬಂದು, ನನ್ನ ಬ್ಯಾಗನಲ್ಲಿದ್ದ ನೀರಿನ ಬಾಟಲಿಯನ್ನು ಅವಳಿಗೆ ಕುಡಿಯಲಿಕ್ಕೆಂದು ಕೊಟ್ಟೆ, ಒಂದೆ ಗುಟುಕಿಗೆ ಅರ್ಧದಷ್ಟು ನೀರನ್ನು ಕುಡಿದು ದಣಿವಾರಿಸಿಕೊಂಡಳು. ಅವಳ ಮಾತುಗಳನ್ನು ಕೇಳಿದ ಎಲ್ಲರ ಮೊಗದಲ್ಲು ಅನುಕಂಪದ, ಪಾಪದ ಭಾವನೆ ಎದ್ದು ಕಾಣುತ್ತಿತ್ತು, ಎಲ್ಲೊ ನನ್ನ ಮನದ ಮೂಲೆಯ ಬಣವಿಗೆ ಸಣ್ಣದೊಂದು ನೋವಿನ ಕಿಡಿ ಹೊತ್ತಿದಂತಾಗಿ ನೋವನ್ನು ತಾಳಿಕೊಳ್ಳಲಾದೆ, ಎರಡು ಹನಿ ಕಣ್ಣೀರನ್ನು ಹಾಕಬೇಕೆಂದುಕೊಂಡೆ, ಗಂಡಸಲ್ವ... ಎಂದುಕೊಂಡು ಕಣ್ಮುಚ್ಚಿ ಅವುಡುಗಚ್ಚಿಕೊಂಡೆ.
' ಛೇ...ಛೆ...ಛೆ..ಎಂತ ಮಾತ ಬೆ ತಂಗ್ಯಮ್ಮ, ನನ್ನ ಒಡಹುಟ್ಟಿದ
ತಂಗಿಯಾದ್ರು ಒಂದ, ನೀನಾದ್ರು ಒಂದ, ನಿನ್ನ ತಾಳಿ ಮಾರಿಸಿ ನಾ ಯಾ ನರಕಕ್ಕ ಹೋಗ್ಲೆವ್ವ, ಅಳಬ್ಯಾಡ ನೀನು, ನೋಡ ರೊಕ್ಕ ಕೊಡದ ಬ್ಯಾಡ, ಮುಂದ ಬದಾಮ್ಯಾಗ ನಿಮ್ಮೂರ ಬಸ್ಸ ಹತ್ತಿಸಿ ಕಳ್ಸೊ ಜವಬ್ದಾರಿ ನಂದ ಐತವ್ವ, ಆ ತಾಳಿನ ಮೊದ್ಲಕ ಜ್ವಾಕ್ಯಾಗಿ ಹಂತ್ಯಾಕ ಇಟ್ಕೊ' ಅಂದ ಆ ಕ್ಲಿನರ್ ನ ಕಣ್ಣಲ್ಲಿ ಎರಡು ಹನಿ ಕಣ್ಣೀರು ಉದುರಿದ್ದನ್ನು ಯಾರು ನೋಡಲೆ ಇಲ್ಲ ಅವನ ಮುಂಗೈಯೊಂದು ಹೊರತುಪಡಿಸಿ, ಇನ್ನೇನು ಅರ್ಧ ಕಿ.ಮಿ. ನಲ್ಲಿ ನಮ್ಮ ನಿಲ್ದಾಣ ಬರುತ್ತದೆಂದು ಗೊತ್ತಾದ ಮೇಲೆ ಕೈ ಚೀಲದಲ್ಲಿದ್ದ ಒಂದು ಅರ್ಧ ಲಿ. ಹಾಲಿನ ಪಾಕೀಟನ್ನು ತೆಗೆದು ನನ್ನವಳ ಕೈಯಿಂದ ಆ ಮಗುವಿಗೆ ಹಾಲನ್ನು ಕುಡಿಸಲು ಕೊಡಿಸಿಬಿಟ್ಟೆ, ನಾವು ಇಳಿಯಬೇಕಾದ ಸ್ಥಳವು ಬಂದಾಗ, ಇಳಿಯುವ ಮುಂಚೆ ತಾಯಿ ಮಗಳನ್ನೊಮ್ಮೆ ದಿಟ್ಟಿಸಿನೋಡಿ, ನಿಟ್ಟುಸಿರೊಂದನು ಬಿಟ್ಟು ಕೆಳಗಿಳಿದೆವು. ಆ ಕ್ಲಿನರ್ ನ ಬೆನ್ನನ್ನು ತಟ್ಟಿ ಹಳ್ಳಿಯೊಳಕ್ಕೆ ಹೆಜ್ಜೆ ಹಾಕಿದೆವು.
No comments:
Post a Comment