Saturday, April 25, 2020

ಹೀಗೆ

ಮನಸಿನ ನಿರ್ಭಾವತನಕ್ಕೆ
ಮೂಕ ಸಾಕ್ಷಿಯು ನಾನಿಲ್ಲಿ
ಬಾಗಿಲು ಹಾಕಿದವರಾರು? ಗೊತ್ತಿಲ್ಲ...
ಹುಡುಕಿ, ಸುಮ್ಮನೆ ಕುಳಿತಿರುವೆನೀಗ ಕೈ ಚೆಲ್ಲಿ

ಬಾಗಿಲುಗಳಿದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು
ಬೀಗ ಹಾಕಿಕೊಂಡು, ಸುಮ್ಮನೆ ಕುಳಿತುಕೊಳ್ಳಬಹುದಿತ್ತು
ನೆರೆ ಮನೆಯವರ ಜಗಳವು ಹೊಸ್ತಿಲು ದಾಟಿ
ಒಳ ಬರುತ್ತಿರಲಿಲ್ಲ, ತೆರದ ಕಿಟಕಿಗಳಿಂದಾದರೂ...
ನೆಮ್ಮದಿಯನ್ನು ಕಂಡುಕೊಳ್ಳಬಹುದಿತ್ತು.

ಹೇಗೆ ತೆರೆಯಲಿ ಕಿಟಕಿಯನ್ನೂ ಧೈರ್ಯಮಾಡಿ!!!
ಸುತ್ತಲಿಂದಲೂ...ಸುತ್ತಿ..ಸುತ್ತಿ... ಸುಳಿಸುಳಿಯಾಗಿ
ಕೊಳೆತ‌ ಮನಸುಗಳ ವಾಸನೆಯೆ, ಹರಡುತಿಹುದಲ್ಲ!!!
ನನ್ನ ಮನೆಯಲ್ಲಿಯೇ ನಾ ಮೂಗು ಮುಚ್ಚಿಕೊಂಡು
ಕುಳಿತುಬಿಡಲೇ?

ಹುಚ್ಚನೆಂದುಬಿಡುವುದಿಲ್ಲವೆ!!!? ಅನ್ನುವುದೇನು?
ಕರೆಯುತ್ತಾರೆ, ಹುಟ್ಟಿಸುತ್ತಾರೆ, ಬರೆಯುತ್ತಾರೆ..
ಊರ ತುಂಬೆಲ್ಲಾ  ಸಸಿ ನೆಟ್ಟು ಬರುತ್ತಾರೆ, ಆಗಾಗ
ಬೇರೆಯವರ ಕೈಯಿಂದ ನೀರನ್ನು ಹನಿಸುತ್ತಾರೆ.

ಸುಮ್ಮನಿದ್ದುಬಿಡಲೆ.... ಹೇಡಿ ಎನ್ನುತ್ತಾರೆ, ಮಾತನಾಡಿ
ಬಿಡಲೆ... ಅಯ್ಯಯ್ಯೊ!!! ಬಾಯ್ಬಡಕ ಎನ್ನುವುದಿಲ್ಲವೆ.
ಹೇಗೆ ಇರಲಿ ನಾನು.. ಕುರಿಯಂತೆ, ಸಾಗುತಿರಲೆ ಮಂದೆಯೊಳಗೆ
ಹೆಜ್ಜೆ ಹಾಕಿದರೆ ನನ್ನ ಗಮ್ಯ...? ಎಲ್ಲಿಯದು ಬರೀ ಶೂನ್ಯ!!!
ಅಕ್ಷರದ ಲೋಕದಲ್ಲೂ ತಾರತಮ್ಯ!!, ಹೇಗಿದ್ದುಬಿಡಲಿ ನಾನು ಸೌಮ್ಯ?

ಬೇಕಿದೆ ನನ್ನ ಮನಸ್ಸಿನ ಬಾಗಿಲಿಗೊಂದು ಕೀಲಿ ಕೈ
ಎತ್ತಿಡಬೇಕಿದೆ, ಯಾರ ಕೈಗೂ ಸಿಗದ ಹಾಗೆ,
ಉಸಿರಬೇಕಿದೆ ಒಂದೆ ಸಲವಾದರು, ನೆಮ್ಮದಿಯ ಉಸಿರನು ಉಸಿರುಗಟ್ಟಿಸುವವರ ಮಧ್ಯದಲ್ಲೆ... ಕಾರಣ
ಬದುಕಬೇಕಿದೆಯಲ್ಲ ನಾನೂ... ಈ ಜಗದಲ್ಲೆ!!

No comments:

Post a Comment