Wednesday, May 31, 2017

ನಿನ್ನೆಯಿಂದಲು..

ಜೇಡರ ಬಲೆಯಲಿ ಬಿದ್ದ
ಹುಳುವಿನಂತಾಗಿದೆ ಮನ
ಗಾಳಕ್ಕೆ ಸಿಕ್ಕು ಚಡಪಡಿಸುತಿರುವ
ಮೀನಿನಂತಾಗಿದೆ ಭಾವ

ಗಾಳಿಗೆ ನಲುಗಿ ಬಿದ್ದು... ಪೆಟ್ಟು
ತಿಂದ ಹಣ್ಣಾಂತಾಗಿವೆ ಕಲ್ಪನೆಗಳು
ಕೈ ಜಾರಿ ಬಿದ್ದು.. ಚೂರು ಚೂರಾದ
ಕನ್ನಡಿಯಂತಾಗಿವೆ ಕನಸುಗಳು

ಕಪ್ಪು ಮಸಿಯ ಬಳಿದುಕೊಂಡ ಬಾನಲಿ
ಚದುರಿ ಬಿದ್ದಂತಾಗಿವೆ ಪದಗಳು... ತಾರೆಗಳ ರೂಪದಲಿ
ಎರಡು ಸಾಲು ಬರೆಯಲು ಆಗುತ್ತಿಲ್ಲ...ನೋಡೆ
ಚಂದ್ರಮನು ಮರೆಯಾಗುವನು ಮೋಡದ ಮರೆಯಲಿ

ನಿಂತ ತಿಳಿನೀರಿನ ಕೊಳದಲಿ ಕಲ್ಲು ಒಗೆದಂತಾಗಿ
ಬೇಕು ಬೇಡವಾದ ವಿಚಾರದಲೆಗಳು ಎಳುತಿವೆ ತಲೆಯಲ್ಲಿ
ಬಾಲ ಸುಟ್ಟ ಬೆಕ್ಕಿನಂತೆ... ಒಬ್ಬರ ಹತ್ತಿರವು ಎರಡು
ಮಾತನಾಡದಾಗದೆ ಊರನ್ನೇ ಸುತ್ತು ಹಾಕಿದೆ ಬರಿಗಾಲಲ್ಲಿ

ಹರಿಯುತಿದೆ ಮನ.. ಮೊದಲ ಮಳೆಗೆ ಊರ ಹೊಲಸು
ಕೇಸರನ್ನೆಲ್ಲ ತೇಲಿಸಿಕೊಂಡು ಹರಿಯುವಂತೆ..
ಕುದಿಯುತಿದೆ ತನ... ವಲೆಯ ಮೇಲೆ ಅನ್ನವನಿಟ್ಟು
ಮರೆತು ಹೋಗಿ...ಕುದ್ದು ಕುದ್ದು ಸೀದು ಹೋಗುವಂತೆ

ಬೇಕಿದೆ ಒಂದು ಬದಲಾವಣೆಯ ಗಾಳಿ
ತನುವ ಬೆಂಕಿಯ ಆರಿಸುವ ಸುಳಿಗಾಳಿಯಲ್ಲ
ಮನದ ದೀಪವ ಬೆಳಗಿಸುವ ತಂಗಾಳಿ
ಹುಡುಕುತಿರುವೆ... ಕಾಯುತಿರುವೆ...
ನಿನ್ನೆಯಿಂದಲು....

Tuesday, May 30, 2017

ಕುಡುಕು ಗಂಡ

ಗಂಡು ಮದುವೆಯಾದ ಮೇಲೆ
ಕುಡುಕನಾಗುತ್ತಾನೊ.... ಮದುವೆಗೆ
ಮುಂಚೆಯೆ ಕುಡಿಯುತ್ತಿರುತ್ತಾನೊ... ಯಾರಿಗೆ
ಗೊತ್ತು.. ನೀರಲ್ಲಿ ಇಳಿದ ಮೇಲೆ ತಾನೆ ಅದರ
ಆಳ ತಿಳಿಯಾಗುವುದು.. ಗಂಡನೆಂಬುವನು
ಕುಡಿದು ತೂರಾಡಿ ಬಂದ ಮೇಲೆ ತಾನೆ...
ಅವನ ಯೋಗ್ಯತೆಯ ಅರಿವಾಗುವುದು...

ಮುಪ್ಪು ವಯಸ್ಸಿನ ತಂದೆ ತಾಯಿಗಳು..
ಈ ಕಣ್ಣೀದ್ದರೂ ಕುರುಡಂತಾಗಿರುವ ಸಮಾಜದಲ್ಲಿ
ಹರೆಯಕ್ಕೆ ಬಂದ ಹೆಣ್ಣು ಮಗಳನ್ನು ಎಷ್ಟು ದಿವಸವೆಂದು
ಮಡಿಲ ಕೆಂಡವನ್ನಾಗಿ ಇಟ್ಟುಕೊಳ್ಳುವರು...ಎಷ್ಟೊ
ತಮ್ಮ ಶಕ್ತಿ ಮೀರಿ... ಕೈಲಾದಷ್ಟು ಕೊಟ್ಟು ಒಂದು
ಗಂಡಿಗೆ ಮಗಳನ್ನು ಧಾರೆ ಎರೆದು ಕೊಡುತ್ತಾರೆ...
ಅವಳ ಬಾಳು ಹಸನಾಗಲೆಂದು ಹಾರೈಸುತ್ತಾರೆ..

ಗಂಡ ಮೊದ ಮೊದಲು ಚೆನ್ನಾಗಿಯೇ ಇದ್ದು...
ಎರಡು ಮಕ್ಕಳನ್ನು ಹಡೆದು... ನಿಧಾನವಾಗಿ
ಸಂಜೆಯಾಗುತ್ತಲೆ ಸ್ವಲ್ಪ ಕುಡಿದು ಬರುವುದು.. ಹೆಂಡತಿಯಾದವಳು ಅದನ್ನು ಪ್ರತಿಭಟಿಸದಿದ್ದರೆ..
ಇನ್ನೂ ಹೆಚ್ಚು ಹೆಚ್ಚು ಕುಡಿದು ಬರುವುದು..ಕುಡಿತಕ್ಕೆ
ಹಣವು ಸಾಲದಿದ್ದರೆ ಒಡವೆ ವಸ್ತ್ರಗಳನ್ನು ಮಾರಿ
ಕುಡಿಯುವುದು ಕುಡಿದ ಮತ್ತಿನಲ್ಲಿ.. ಮಡದಿ ಮಕ್ಕಳೆನ್ನದೆ
ಚೆನ್ನಾಗಿ ಹೊಡೆದು ಬಡೆದು ಅವರ ದೇಹವ ಹಣ್ಣಾಗಿಸುವುದು
ಆಗ... ಅವಳಿಗನಿಸುವುದೇನೊ... ಒಂದು ನನ್ನನ್ನು
ಯಾಕಾದರೂ... ಹೆಣ್ಣಾಗಿ ಹುಟ್ಟಿಸಿದೇಯೊ ದೇವರೆ..
ಇನ್ನೊಂದು... ಮೂರು ಹೊತ್ತು ಕೂಳಿಲ್ಲದ ಮನೆಗೆ
ಕೊಟ್ಟಿದ್ದರು ಪರ್ವಾಗಿಲ್ಲ... ಇಂತಹ ಕುಡುಕು ಗಂಡನ
ತಾಳಿಗೆ ನನ್ನನ್ನೇಕೆ ಕುರಿಯಾಗಿಸಿದೇಯೊ...

ಸಹೋದರಿಯರೆ... ಗೃಹಿಣಿಯರೆ..ಇಂದಿನ
ದಿನಮಾನದಲ್ಲಿ ನಿಮಗೆ ಸೋಲೆಂಬುದೆ ಇಲ್ಲ.. ಬನ್ನಿ
ಬೀದಿಗೆ.. ಸುದ್ದಿವಾಹಿನಿಗಳ.. ಮಾಧ್ಯಮಗಳ ಸಹಾಯದಿಂದ
ನಿಮ್ಮೂರಲ್ಲಿ ಬೇರೂರಿರುವ ಸುರೆಯ ಅಂಗಡಿಗಳ ಬಾಗಿಲವ
ಮುಚ್ಚಿಸಿ.. ಕುಡಿದು ಎಡವಿ ಬಿದ್ದು ಸಾಯುವ.. ಜೀವಂತವಿದ್ದು
ಹೆಂಡತಿ ಮಕ್ಕಳು ಅನಾಥ ಪ್ರಜ್ಞೆಯಲ್ಲಿ ಬಾಳುವಂತೆ
ಮಾಡುವ.. ಹೆತ್ತ ತಂದೆ ತಾಯಿಗಳನ್ನು ಕುಡಿದ ಮತ್ತಿನಲ್ಲಿ ಮನೆಯಿಂದ ಹೊರ ಹಾಕುವ ಮಕ್ಕಳನ್ನು..ಗಂಡಂದಿರನ್ನು... ಸಹೋದರರನ್ನು... ಇಂತಹ ಕೂಪದಿಂದ ಎಳೆದು ತರಬೇಕಿದೆ
ಮನೆಗೆ.. ನಾಡಿಗೆ.. ರಾಷ್ಟ್ರಕ್ಕೆ ಏನಾದರೂ ಒಂದು
ಕೊಡುಗೆಯ ನೀಡುವ ನಾಗರಿಕರನ್ನಾಗಿಸಿ...

ನಾರಿ ನೀನಾಗದಿದ್ದರೆ ಕಾಳಿ..
ಉಳಿಯಬಲ್ಲದೆ ನಿನ್ನ ಕೊರಳ ತಾಳಿ...

ಭ್ರೂಣ ಹತ್ಯೆ

ಒಪ್ಪಿದೆವು..... ಮೆಚ್ಚಿದೆವು......ಅಭಿನಂದಿಸುವೆವು
ನಿಮ್ಮ ಭ್ರೂಣ ಹತ್ಯೆಯ ಬಗೆಗಿನ ಕಾಳಜಿಯ..
ಆದರೆ... ಹೊರುವುದು... ಹೇರುವುದು ನೀವೆ
ಸಾಕುವುದು.. ಸಲವುದು.. ತಪ್ಪಿದರೆ ತಿದ್ದುವುದು
ಸಮಾಜದಲ್ಲಿ ಒಂದು ಹೆಣ್ಣು ಹೇಗಿರಬೇಕೆಂದು
ಹೇಳುವವರು..ಇನ್ನೊಬ್ಬರ ಮನೆಯ ಸೊಸೆಯಾಗಿ
ಹೋಗುವಾಗ ಅತ್ತೆ ಮಾವಂದಿರ ಜೊತೆ ಗಂಡನ ಜೊತೆ ಬದುಕಿ ಬಾಳುವುದ ಹೇಳಿ ಕಳಿಸುವವರು
ಈ ಒಂದು ತಪ್ಪನ್ನೇಕೆ ಮೆಟ್ಟಿ ನಿಲ್ಲಿವುದಿಲ್ಲ... ಇದರ
ವಿರುದ್ಧ ನಿಮ್ಮ ಧ್ವನಿಯನ್ನೇಕೆ ಎತ್ತುವುದಿಲ್ಲ...ಇಂತಹ
ಭ್ರೂಣ ಹತ್ಯೆಯ ಕಾರ್ಯಕ್ಕೆ ಪ್ರೇರೇಪಿಸುವ ಶಕ್ತಿಗಳ
ವಿರುದ್ಧ... ನಡುವಿಗೆ ಸೀರೆ ಸೇರಗ ಸಿಕ್ಕಿಸಿ.. ಕೈಯಲ್ಲಿ
ಪೋರಕೆಯ ಹಿಡಿದು ಬೀದಿಗೇಕೆ ಇಳಿಯುವುದಿಲ್ಲ..
ಇಳಿಯುವುದೇ......‌‌‌..ಇಲ್ಲ.. ಕೇಳುವುದೇ.......ಇಲ್ಲ
ತಿದ್ದುವದಂತೂ..... ಮೊದಲೇ ಇಲ್ಲ..

ನೀವು ಈ ಯಾಂತ್ರಿಕ ಯುಗಕ್ಕೆ ಒಗ್ಗಿಕೊಂಡಿರುವಿರಿ
ನೋಡಿ...ಮದುವೆಯಾದ ಹೊಸತರಲ್ಲೆ..ಮೊದಲ
ಹೇರಿಗೆಯಲ್ಲೆ ಗಂಡು ಮಗುವಾದರೆ..ಮತ್ತೈದು
ವರುಷಗಳವರೆಗೆ ಇನ್ನೊಂದು ಮಗು ಎಂದು...
ಕನವರಿಸುವುದಿಲ್ಲ... ಹಂಬಲಿಸುವುದಿಲ್ಲ....
ಚಿಂತಿಸುವುದಿಲ್ಲ... ಅದೇಯೊಂದು ಹೆಣ್ಣಾದರೆ..
ಎಷ್ಟು ಆತಂಕ.. ಏನು ತಳಮಳ.. ಹೆಣ್ಣಿಗೆ ಅಯ್ಯೋ..
ನಾನು ಹೆಣ್ಣು ಮಗುವನ್ನು ಹಡೆದನೆಲ್ಲ... ಎಂಬ
ಕಳವಳವ ಹೊಂದುವಳು ತಾಯಿ... ಛೇ.. ನನಗೊಂದು
ಹುಣ್ಣು ಹುಟ್ಟಿತಲ್ಲ ಎಂಬ ಚಿಂತೆಯೊಂದಿಗೆ.. ಸಾಲು
ಸಾಲು ಹೆಣ್ಣು ಹುಣ್ಣುಗಳ (ಅವರ ಭಾಷೆಯಲ್ಲಿ) ಹುಟ್ಟಿಸುತ್ತಾ
ಹೋಗುವರು... ಕೊನೆಗೆ ಹೇಳುವರು ಈ ಹೆಣ್ಣುಗಳು
ನಮ್ಮನ್ನು ಮದುವೆಯ ಸಾಲಕ್ಕೆ ಮೂಲ ಮಾಡುವವಲ್ಲ
ಎಂದು...

ಎರಿಸಿರಿ... ನಿಮ್ಮ ಕೈ ಬಳೆಗಳನ್ನು..ಹಿಡಿಯಿರಿ
ಕೈಯಲ್ಲಿ ಒನಕೆಯನ್ನು...ಉಕ್ಕಿ ಬರಲಿ ಕಣ್ಣಲಿ
ಜ್ವಾಲಾ ಕಿಡಿಗಳು...ಹೆಣ್ಣು ಭ್ರೂಣ ಹತ್ಯೆ ಮಾಡಿಸುವ
ಷಂಡರ ವಿರುದ್ಧ ನೀವೊಮ್ಮೆ ಸಿಡಿದೆಳಬೇಕಿದೆ...
ಹೊರಬನ್ನಿ ಅವನ ನೆರಳಿಂದ.. ಅವನು ತಾಳಿ ಕಟ್ಟಿದ
ಮಾತ್ರಕೆ.. ಅವನು ನೆರಳು ನೀಡುವನೆಂಬ ಕಾರಣಕ್ಕೆ
ನಿಮ್ಮೊಡಲ ಹೆಣ್ಣು ಕುಸುಮವನ್ನು ಅಂತವರೊಡಗೂಡಿ
ಚೀವುಟಬೇಡಿ... ಪ್ರಪಂಚ ವಿಶಾಲವಾಗಿದೆ.. ನಿಮ್ಮನ್ನು
ಅರಿತು ಬಾಳುವ.. ನಿಮ್ಮ ಮನಸ್ಸನ್ನು ಅರಿತುಕೊಳ್ಳುವ
ಸಾಕಷ್ಟು ಜನರಿಹರಿಲ್ಲಿ.. ನಿಮ್ಮ ಹೆಣ್ಣು ಕರುಳು
ಕುಡಿಯೊಂದಿಗೆ ಹೊರಬಂದು ಹೊಸಜಗತ್ತು ಸೃಷ್ಟಿಸಿರಿ..
ಮದುವೆಗೆ ಮೊದಲು ಹೆಣ್ಣು ಹೆಣ್ಣೆಂದು ಅಲೆದಾಡುವ
ಗಂಡು.. ಮದುವೆಯ ನಂತರ ಹೆಣ್ಣನ್ನು ಹಡೆಯಲು...
ಪಡೆಯಲು... ಸಾಕಿ ಸಲುವಲು ಹುಣ್ಣೆಂಬುವವರ
ತಲೆಯ ಜಜ್ಜಲು ಬೀದಿಗಿಳಿಯಿರೊಮ್ಮೆ......ಇಡೀ
ಬ್ರಹ್ಮಾಂಡವೆ ನಿಮ್ಮತ್ತ ತಿರುಗಿ ನೋಡುವವರೆಗು..

ಹೆಣ್ಣಿನ ಸಾವು ಗಂಡಿನ ಕೈಯಲ್ಲಲ್ಲ..
ನಿಮ್ಮ ಒಡಲೊಳಡಗಿದೆ....
ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿದೆ..

ಒಲವ ಒಡವೆ

ನಿಂದನೆಯ ನುಡಿಗಳಾಡುವ ಜನರ
ಬಾಯಿಯಿಂದಲೆ....
ನಿನ್ನಂದದ ಸೊಬಗನು ಕೇಳಿ..
ನಾ ಬಂದು ನಿಂತೆ....ನಿನ್ನ ಮುಂದೆ...
ನನಗನ್ನಿಸಿತು ಆಗ.. ನಿನ್ನ ಸ್ನೇಹ ಸಿರಿಯಿಲ್ಲದೆ
ಬದುಕಬಲ್ಲೇನೆ ಮುಂದೆ..
ನಿನ್ನದೊಂದು ದಿನದ ಪ್ರೀತಿಗೆ...
ಬರಲಿ ಸಾವಿರ ವಿರಹ ತುಂಬಿದ
ದಿನಗಳು.. ನಾ... ಭರಿಸುವೆ..

ಮೇಲು....ಕೀಳಿನ ಗೊಡವೆಗಳ ಮಾಯದಲೇ...
ನೀ.. ಕರಗದಿರು...
ಮರೆಯದಿರು... ನಾ.. ನಿನ್ನೆದೆಯ
ಗೂಡಿನ... ಮ್ಯಾಲಿನ... ಒಲವಿನ...
ಕರಿಮಣೆಯ ಒಡವೆ

Monday, May 29, 2017

ಒಲವ ಬಿಂದಿಗೆ

ಅವನ ಸವಿ ಮಾತಿಲ್ಲದೆ
ಮಿಡುಕುತಿದೆ ಮನ..
ಕಣ್ಣುಗಳು ಹುಡುಕಾಡುತಿವೆ
ಅವನಿಲ್ಲದ ಸಂಜೆಯ..
ಹೃದಯವು ಬರಿದಾಗಿ ಕಾಯುತಿದೆ
ನೀ ಬರದ ಈ ಸಂಜೆಯಲಿ..
ಬಂದುಬಿಡೊಮ್ಮೆ..ಇನ್ನೂ ಸತಾಯಿಸದೆ ಆ
ನಿನ್ನೊಲವಿನ ಬಿಂದಿಗೆಯ ಹೊತ್ತು...

ಹೆಣ್ಣು-ಹುಣ್ಣು

ಹೆಣ್ಣು... ಹುಣ್ಣು..

ಹೆಣ್ಣನು ಹುಣ್ಣೆಂದು ಕಾಣುವ ಹುಂಬರು
ಹುಟ್ಟಿಸಿದ ಒಡಲೊಂದು...ಹೆಣ್ಣೆಂದು ಮರೆತಿರುವರು
ನೆತ್ತರವ ಬಸಿದು... ನಿಮ್ಮನು ಇಳೆಗೆ ತಂದು..
ತನ್ನೆಲ್ಲ ಆಸೆ ಆಕಾಂಕ್ಷೆಗಳ ನಿಮಗಾಗಿ ಕೊಂದು..
ಸಾಕಿ ಸಲುಹುವವಳು ಬದುಕೆಲ್ಲಾ... ಬೆಂದು..
ಈ ತಾಯಿ ತ್ಯಾಗಕೆ ಕರೆಯುವಿರೆಲ್ಲ.. ಅವಳು
ಹುಣ್ಣೆಂದು...

ನಿಮ್ಮ ಹೊತ್ತುರಿಯುವ ಹರೆಯದ...ಕಾಮದ
ಬೆಂಕಿಗೆ.... ಅವಳಾಗುವಳಲ್ಲ ಮಡದಿ ಎಂಬ
ದಂತದ ಕೊರಡು...
ಉರಿದುರಿದು ನಿಮ್ಮ ವಂಶ ಕಳಶಕೆ ಜ್ಯೋತಿಯ ಹಚ್ಚುವಳಲ್ಲ... ಅಂಗಳದ ಹುಲುವಾದ ನಿಮ್ಮ
ಚಿಗುರುಗಳನ್ನು... ಬಾಳಿನ ಬಾನೆತ್ತರ ಮುಟ್ಟುವ
ಮರಗಳನ್ನಾಗಿಸುವಳಲ್ಲ... ಇಂತವಳ ಕರುಣೆ ಕಾಣದೆ
ಅಂತಃಕರುಣೆಯ ಮರೆತು ಹೇಳುವಿರಲ್ಲಾ.. ಹೆಣ್ಣು
ಹುಣ್ಣೆಂದು... ನಿಮ್ಮ ಒಳ ಮನಸ್ಸು ಆಯಿತೆ ಕುರುಡು

ಹುಟ್ಟಿದ ಹೆಣ್ಣಿನ ಕಣ್ಣಿಗೆ ಸುಣ್ಣವ ಹಚ್ಚಿ..
ಅವಳ ಆಸೆಗಳ ಸಸಿಗಳಿಗೆ ನೀರುಣಿಸದೆ
ನಿಮ್ಮ ಒಣದರ್ಪಗಳ ಹೊಡೆತಕ್ಕೆ ನಲುಗಿಸಿ
ಹೆಣ್ಣಿನ ಮನಸನರಿಯದ... ಅವಳ ಭಾವಗಳಿಗೆ
ಸ್ಪಂದಿಸದ ನಿನ್ನಂಥ ಇನ್ನೊಬ್ಬ ಕಟುಕನಿಗೆ...
ಆಡುವ ವಯಸ್ಸಿನಲ್ಲಿ.... ಸಾಯುವವರೆಗೂ
ಉರುಳಾಗಿ ಕಾಡುವ ತಾಳಿಯ ಬಂಧನಕ್ಕೆ
ಕಟ್ಟಿ.. ಸಾಗಿಹಾಕಿ ಬಿಡುವಿರಲ್ಲ.. ಕಟುಕನ ಕೈಗೆ
ಕರುವನು ಕೊಟ್ಟಂತೆ..

ನಿಮ್ಮ ಮನವದು ಆಗಿದ್ದರೆ ಹಣ್ಣು...
ಒಳಮನಸ್ಸು ತೆರೆದಿದ್ದರೆ ಕಣ್ಣು..
ಹುಣ್ಣೆಂದು ಕರೆಯುವ ನಾಗರೀಕ ಜಗದ
ಅನಾಗರೀಕರೆ......ಕಣ್ತೆರೆದು ನೋಡಿರಿ
ಅವಳು ಒಂದು ಹೆಣ್ಣು

Sunday, May 28, 2017

ಪ್ರೀತಿಯ ಸೋಲು..

ನಿ..... ನಿಲ್ಲದ ಈ ಸಂಜೆಯಲಿ
ಬರೆಯಬೇಕಿದೆ ನಿನ್ನದೆ.. ನೆನಪುಗಳಲಿ...
ಏನೆಂದು ಬರೆಯಲಿ ಈ ಪ್ರೀತಿಯಲಿ..
ಬರೆಯುವ ಲೇಖನಿಯಲ್ಲಿ ನಿನ್ನ..
ವಿರಹದ ಶಾಹಿಯೆ ತುಂಬಿರುವಾಗ
ಹೇಗೆ ಬರೆಯಲಿ...

ನೀನಿಲ್ಲವೆನ್ನುವ ಕಹಿ ಕಷಾಯವ
ಕುಡಿದು.... ಬರೆದು ಬಿಡಲೆ
ಎರಡು ಸಾಲು...
ಜಗಕೆ ಸಾರಿ ಬಿಡಲೆ ನಮ್ಮ
ಪ್ರೀತಿಯ ಸೋಲು...

ಕಡಲ ತಟದಲ್ಲಿ

ಕಡಲ ತಟದಲಿ ನೀ ಕಟ್ಟಿ
ಬಿಟ್ಟು ಹೋದೆ...ಪ್ರೀತಿಯ
ಮರಳಿನಾರಮನೆ....ವಿರಹದ
ಅಲೆಗಳಿಗೆ ಸಿಕ್ಕು...ಸಿಕ್ಕು...
ಮುರಿದು ಬಿಳುತಿದೆ....ನಾನಾದರೂ
ಎಷ್ಟೇಂದು ಕಟ್ಟಲಿ ಮರಳಿ...ಮರಳಿ...
ನಿನ್ನ ಪ್ರೀತಿ ನೆನಪಿನ ಮರಳಿನರಮನೆಗಿಂತ
ವಿರಹದಲೆಗಳ ಅಬ್ಬರವೆ.... ಬಲವಾಗಿರುವಾಗ

ವಿರಹದ ಉಸಿರು

ನಿನ್ನೊಡನೆ ಕಳೆದೆ ನಿನ್ನೆಯ ನೆನಪುಗಳು
ಇಂದಿನ ಸಂತೋಷದ ಕ್ಷಣಗಳ ಕೊಲ್ಲುತಿದೆ
ಮುಂದಿನ ದಿನಗಳ ಸಮಯವನ್ನು....
ವಿಷಮಯವಾಗಿಸಿಬಿಟ್ಟಿವೆ... ಬದುಕಲಿ
ಹೇಗಿನ್ನು... ನೀನಿಲ್ಲದ ವಿರಹದ ಉಸಿರನು
ಉಸುರುತ್ತಾ...

ಬಾ ನಲ್ಲೆ

ನಾನವಳ ಕರೆದೆ ಬಾ ನಲ್ಲೆ..
ಅವಳೆಂದಳು ಜೊತೆಯಾಗೋಣ
ಬಾ ಇಬ್ಬರೂ ಬಾಳಲ್ಲೆ..

ಬಾಲ್ಯದ ನೆನಪುಗಳು

ಆಗಿನ ಕಾಲದ ನೆನಪುಗಳ
ಮತ್ತೇಕೆ ಕೆದಕುವಿರಿ..ಹೊಟ್ಟೆ
ಉರಿಯುವ ಹಾಗೆ..

ಬೀರು ಬಿಸಿಲಲು ಆ ಕಾಮನ
ಹುಣ್ಣಿಮೆ ದಿವಸ.. ಮೈದಾ ಹಿಟ್ಟಿನಿಂದ
ತಯಾರಿಸಿದ ಹಲಗೆಯ ಬಾರಿಸುತ್ತ
ಮಧ್ಯ ರಾತ್ರಿಯಲ್ಲಿ ಕಾಮಣ್ಣನ ಸುಟ್ಟು..
ಅವನ ಕೆಂಡದಲ್ಲಿ ಕಡಲೆಯನ್ನು ಹಾಕಿ
ಸುಟ್ಟು.. ಉಪ್ಪು ಹಾಕಿ ಬಾಯಿಗೆ
ಹಾಕಿಕೊಂಡರೆ..... ಹ್ಞೂಂ...
ಈಗಲೂ ಬಾಯಲ್ಲಿ ನೀರೂರುತ್ತೆ..

ಬಸವ ಜಯಂತಿಯ ದಿನ..
ಎತ್ತುಗಳ ಮೆರವಣಿಗೆಯಲ್ಲಿ ಅವುಗಳ
ಕೊರಳಲ್ಲಿ ಕಟ್ಟಿದ ಒಣಕೊಬ್ಬರಿ ಬಟ್ಟಲುಗಳನ್ನು
ಹರಿದುಕೊಂಡು.. ಸಂದಿಗೊಂದಿಗಳಲಿ
ಒಡಾಡಿ ಊರಾಚೆಯ ಒಂಟಿ ಮಾವಿನ
ಮರದ ಕೆಳಗೆ.. ಮನೆಯಿಂದ ಕದ್ದು ತಂದಿದ್ದ ಬಕ್ಕಣದಲ್ಲಿದ್ದ ಬೆಲ್ಲವ ಅದಕ್ಕೆ ಸೇರಿಸಿಕೊಂಡು
ತಿನ್ನುತ್ತಿದ್ದರೆ.. ಏನ್ ಹೇಳ್ಲಿ ಅದರ ಸುಖವಾ..

ಕಾರ ಹುಣ್ಣಿಮೆಯಲ್ಲಿ.. ಪಟವ ಹಾರಿಸುವುದು
ರಂಗು ರಂಗಿನ ಪಟಗಳ ತಯಾರಿಸುವುದು..
ಐವತ್ತು ಪೈಸೆ.. ಸ್ವಲ್ಪ ದೊಡ್ಡದಕ್ಕೆ ಒಂದು
ರೂಪಾಯಿಯಂತೆ ಮಾರುತ್ತಿದ್ದದ್ದು..

ಬುಗುರಿಯ ತಂದು ಆ ದುಂಡಾಗಿ
ಹಾಕಿದ ರೇಖೆಯಲ್ಲಿ ಇಟ್ಟ ಕಟ್ಟಿಗೆಯ
ತುಂಡನ್ನು ಹೊರಗೆ ಹೊಡೆದು ತರುವದು
ಸೋತ ಬುಗುರಿಯನ್ನು ನೆಲದಲ್ಲಿ ಬಡೆದು
ಅದರ ನೆತ್ತಿಯ ಮೇಲೆ ಇನ್ನೊಂದು ಬುಗುರಿಯಿಂದ
ಹೊಡೆದರೆ ಅಷ್ಟೇ.. ಅದು ಎರಡು ಸೀಳಾಗುತ್ತಿತ್ತು.
ಸಂಜೆಗೆ ಅವರಪ್ಪ ನಮ್ಮನ್ನೆಲ್ಲ ಊರ ತುಂಬಾ
ಓಡಾಡಿಸಿ... ಕೈಗೆ ಸಿಕ್ಕವರನ್ನು ಚೆನ್ನಾಗಿ ಹೊಡೆಯುತ್ತಿದ್ದದ್ದು..
ಒಂದೆ ಎರಡೆ ನೆನಪಿಸಿ ಬರೆಯಲು..

ಆದರೆ ಮಿತ್ರ ... ನೀರು ತುಂಬಲು
ಹೋಗಿ ನೆಲಕ್ಕೆ ತಾಗಿದ್ದ ವಿದ್ಯುತ್ ತಂತಿಯಿಂದ
ನಿನ್ನ ಸಾವನ್ನು ಕಂಡು.. ಸಾವಿನ ಭಯದ..
ಮಗನು ಕಳೆದುಕೊಂಡ ತಂದೆ ತಾಯಿಗಳ
ದುಃಖವನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ
ಪರಿಚಯಿಸಿಬಿಟ್ಟೆ....

ಕಳೆದು ಹೋಗಿದೆ ಬೇಸಿಗೆ.. ರಜೆಯು
ಕರಗಿ ನೀರಾಗಿದೆ.. ಮತ್ತೆ ಶಾಲೆಗಳು ಎಂದಿನಂತೆ
ಆರಂಭ.. ಮತ್ತೆ ಹಳೆ ನೆನಪುಗಳೊಂದಿಗೆ
ಹೊಸ ದಿನಗಳು..ಹೊಸ ಪಾಠಗಳು
ಪ್ರಾರಂಭವಾಗುವವು ಅಲ್ಲವೆ..

ಇಂತಹ ಒಂದು ಬರೆಯುವ ಸಂದರ್ಭವನ್ನು
ಸೃಷ್ಟಿಸಿದ್ದಕ್ಕೆ ಮಿತ್ರರಿಗೂ..ಯಶೋದಾ ಅವರಿಗೂ
ನನ್ನ ಹೃತ್ಪೂರ್ವ ನಮನಗಳು..

ಗುಡಿ ಗುಂಡಾರ

ಬಸವಣ್ಣ ಜನಿಸಿದ ನಾಡಿನಲ್ಲೂ..
ಗುಡಿ ಗುಂಡಾರಗಳಲ್ಲಿ..
ನಮ್ಮ ಭಕ್ತಿ ಭಾವಗಳಿಗೆ ನಾವು
ತುಂಬಬೇಕು ಸುಂಕ..ಕಾರಣ
ಮನದಲ್ಲಿದೆಯಲ್ಲ ಭಯದ ಭಕ್ತಿ..

ಎನ್ನ ಕಾಲೆ ಕಂಬ ಎನ್ನ ದೇಹವೆ
ದೇಗುಲ ಎಂದವರ ಭೂಮಿಯಲ್ಲೂ
ಸರತಿ ಸಾಲುಗಳಲಿ ನಿಂತು.. ದರುಶನಕೆ
ತಾಸುಗಟ್ಟಲೆ ಕಾದು ಅವನ ದರುಶನಕ್ಕೆ
ಬಂದರೆ ನೋಡಿಯು ನೋಡಿಸದ ಹಾಗೆ
ದಬ್ಬಿ ಬಿಡುವರ ಆಚಾರಿಗಳು.. ಏಕ್ಹೇಳಿ
ನಮ್ಮ ಹಾಗೆ ಹಿಂದೆ ಭಯವ ತುಂಬಿದ
ಭಕ್ತರಿರುವರಲ್ಲ...

ದೇವರಿಗೆ ಹಣದಾಸೆ ಇದೆಯೊ.. ಇಲ್ಲವೊ
ಮನುಷ್ಯರಿಗಂತೂ ಇದೆ.. ಅರ್ಚಕರು ಕಾಮ
ಕ್ರೋಧ..ಲೋಭ..ಮೋಹ..ಮದ..ಮತ್ಸರ
ಇನ್ನೊಂದು ಮಗದೊಂದು ಹೊಂದಿರುವ
ಮನುಷ್ಯರಲ್ಲವೆ...

ದೇವಸ್ಥಾನದ ಆವರಣದಲ್ಲಿ ಇಂತಹ
ಅರ್ಚಕರನ್ನು ಸೃಷ್ಟಿಸುವುದೆ ನಮ್ಮಂತಹ
ಭಕ್ತರು.. ಊರಲ್ಲಿ ಮಾಡಿದ ಪಾಪ
ಕಾರ್ಯಗಳಿಗೆ ಅವರು ಪಡೆಯುವರು
ಪೂಜೆಯ ನೆಪದಲ್ಲಿ ತೆರಿಗೆ.. ಯಾಕೆಂತ
ನಮ್ಮ ನಮ್ಮ ಅಂತರಾಳಗಳಿಗೆ ಗೊತ್ತಿರುವುದಲ್ಲ

ಎಲ್ಲ ಭಾವಗಳಲೂ ಬೇರೆತುಕೊಂಡಿದೆ
ಹಣದ ಭಾವ..ಎಲ್ಲರ ಮೊಗದಲ್ಲೂ
ತಳಕು ಹಾಕಿದೆ ಹಣವೆಂಬ ನಿರ್ಭಾವ
ಹಣವಿದ್ದರೆ ಪಾಪಗಳ ಮುಕ್ತಿ..ಮರಳಿ
ಹಣವ ಗಳಿಸಲು ಪಾಪಗಳ ಸುರುಳಿ
ಹಣಕ್ಕೂ ಪಾಪಕ್ಕೂ ಸುರುಳಿ ಸುರುಳಿ
ಹೋಗಬೇಕಲ್ಲ ನಮ್ಮ ಪಾಪಗಳ
ಕಳೆಯಲು ನಾವು ಹೊರಳಿ ಹೊರಳಿ

ನಾವು ಎಚ್ಚೆತ್ತುಕೊಳ್ಳುವುದಾದರೂ ಯಾವಾಗ?

ಹೆಣ್ಣು

ಹೆಣ್ಣು...
ಅವಳೊಂದು ಬರಿದಾದ ಪಾತ್ರೆ..
ತಂದೆ ತನಗೆ ಬೇಕಾದ ಅಕ್ಕಿಯನ್ನು
ಗಂಡ ತನಗೀಷ್ಟವಾದ ಬೇಳೆಯನ್ನು
ಮಕ್ಕಳು ತಮ್ಮ ರುಚಿಗೆ ತಕ್ಕನಾದ
ಕಾಳುಗಳೆಂಬ ಅವರವರ ಭಾವಗಳನೆಲ್ಲವ
ಹಾಕಿ.. ಅವಳಿಂದ ತಮಗೆ ಬೇಕಾದ ಕೆಲಸಗಳ
ಪಡೆಯುವಂತವರು... ಅವರವರ ಅಡುಗೆಗಳ
ಭಾವವು ಕೆಡದಂತೆ.. ಹಳಸದಂತೆ.. ಉಪ್ಪು
ಖಾರವಾಗದಂತೆ ನಮ್ಮ ಮನಸ್ಸಿಗೆ ಹಿತವಾಗುವಂತೆ
ತಯಾರಿಸಿಕೊಡುವ ಹೆಣ್ಣು..

ಆ ದೇವರು ಈ ಗಂಡು ಜೀವಕ್ಕೆ ದುಃಖವನ್ನು
ಸಹಿಸಲಾಗದೆಂದೆ.. ಈ ಹೆಣ್ಣು ಜೀವಕ್ಕೆ
ಕಣ್ಣೀರೆಂದರೆ ಕರಗುವ ಹೃದಯವ ಕೊಟ್ಟನೇನೊ..
ಕಲ್ಲು ಹೃದಯವನ್ನು ಕರಗಿಸುವ ಕಲೆಯೊಂದನು
ಇವಳಿಗಾಗಿ ಮಾತ್ರ ಕೊಟ್ಟನೇನೊ..

ನಿಜ... ಕಮಲ ಕೇಸರಿನಲ್ಲರಳುವುದು..
ಅದು ಕೇಸರಿನಲ್ಲಷ್ಟೇ ಅರಳುವುದು.. ಅರಳಿದ
ಅದರ ಸೌಂದರ್ಯ ವರ್ಣಾತೀತ.. ಇವಳು
ಹಾಗೆಯೆ ಕೇಸರೆಂಬ ಹೊಲಸು ನಾರುವ
ಬಾಳಲಿ... ಕಷ್ಟಗಳೊಡನೆ ಹೋರಾಡಿ ಅರಳುವ..
ಕಷ್ಟಗಳನ್ನೆ... ಅರಳಿಸಿ..ಹೂವಾಗಿಸುವ ಕಮಲ
ಈ ಕೆಸರು ಕಮಲದ ಕಮಲಾಕ್ಷಿಗೆ.. ನಮ್ಮ
ಗಂಡು ಕುಲದ ಪರವಾಗಿ ಅನಂತ..ಅನಂತಕೋಟಿ
ಪ್ರಣಾಮಗಳು..

ಸಾಕೆನಗೆ

ಗೆಳತಿ..
ಜಗದ ಪ್ರೀತಿ ಎಷ್ಟಿದ್ದರೇನು
ನನಗೆ...
ನೋವಿಗೆ ಮುಲಾಮನು
ಹಚ್ಚುವ... ನಿನ್ನ
ಸಿಹಿ ನಗುವೊಂದೆ
ಸಾಕೆನಗೆ..

ಚೆಲುವು

ನಿಜವಾಗಿಯೂ..

ನೋವುಗಳಲ್ಲಿಯೂ ಹುರುಪು
ತುಂಬುವ ನಿನ್ನ ನಗವು..

ಹೇಳುತಿದೆ..

ಇವೆಷ್ಟು ಕಷ್ಟಗಳು ನಿನಗೆ..
ಎದ್ದೇಳು ಮೊದಲು.... ಎನ್ನುತಿದೆ
ನಿನ್ನ ಚೆಲುವು..

Friday, May 26, 2017

ಏನಾಗಿದೆ ಮನಸೆ..

ಏನಾಗಿದೆಯೊ... ನಿನಗೆ ಮನಸೆ
ಮತ್ತೆ... ಮತ್ತೆ.. ಅವಳ ನೆನಪುಗಳ
ಕೊಳದಲ್ಲಿ ಜಿಗಿಯುವದೇಕೆ..ಈಜುವುದೇಕೆ..
ಎದ್ದು ಬಂದು ಬಿಡು ಸಾಕು....ಅದಲ್ಲ
ಒಲವಿನ ವರತೆ...

ಅವಳ ನೆನಪಿನ ಹೂಳನ್ನು
ಎಷ್ಟೇ....ಎತ್ತಿ ಹೊರಹಾಕಿದರೂ...
ಕಳೆದ ದಿನಗಳ ನೋವಿನ ನೀರು
ಮತ್ತೆ ಜಿನಗುವುದಲ್ಲ....ದುಃಖದ
ಮಡುವದು ಮತ್ತೆ ತುಂಬುವದಲ್ಲ..
ಅವಳಿಲ್ಲ ಇನ್ನೂ ನನ್ನ ಬಾಳಲ್ಲಿ ಎನ್ನುವ
ಹೂಳು ಹೊರಳಿ.. ಮರಳಿ.. ತುಂಬಿ
ಬರುವುದಲ್ಲ..

ನೆನಪೆ ಏಕೆ ಮನದ ನೆತ್ತಿಯ
ಹತ್ತಿ ಕುಳಿತಿರುವೆ..
ಇಳಿದು ಬಾ ಸಾಕಿನ್ನು.... ಅವಳಿಗೆಂದೆ
ಎಷ್ಟೆಂದು ಸುರಿಸಲಿ ಕಣ್ಣೀರನು..
ತರಿಸಬೇಕಿದೆ.. ಅವಳ ಮರೆವೆಂಬ
ಮಳೆಯ ಹನಿಗಳನು... ಹರಿಸಬೇಕಿದೆ
ಮನದಿಂದ ವಿರಹದ ಕಾಲುವೆಯನು..
ಹಿಡಿದಿಡಬೇಕಿದೆ....ನವ ಬಾಳಿನ
ಚೈತನ್ಯವನು...ಚಿಮ್ಮಿಸಬೇಕಿದೆ
ಮತ್ತೆ ಬದುಕಿನ ಚಿಲುಮೆಯನು

ಪ್ರೇಮ ಗೀತೆ

ನಿನ್ನ ಮೊದಲ ನೋಟಕೆ
ನಾಚಿದ ರೆಪ್ಪೆಗಳು
ಕಣ್ಣ ಪುಟದಲಿ ಬರೆದವು
ನಿನ್ನೊಲವ ಕವಿತೆಯನು

ನಿನ್ನ ಮೊದಲ ಮಂದಹಾಸಕೆ
ಅರಳಿದ ಹೃದಯವು
ಮನದ ಪುಸ್ತಕದಲಿ ಬರೆದಿಟ್ಟಿದೆ
ಅದೇಷ್ಟೊ... ಪ್ರೇಮ ಗೀತೆಗಳನು

ನಿತ್ರಾಣ

ಹಂಸದ ನಡಿಗೆ
ಮಲ್ಲಿಗೆ ಮುಡಿಗೆ
ಬಿಂಕದ ಗಡಿಗೆ

ಮಾತು ಮತ್ತು
ಕೇಳೆ ಮುತ್ತು
ನಾಚಿಲ್ಲ ಯಾವತ್ತೂ

ಮನೆಗೆ ಒಡತಿ
ಮನಕೆ ಗೆಳತಿ
ಬಾಳ ಪ್ರಣತಿ

ಅವಳು ಮೇಣ
ನನ್ನೆದೆಯ ಪ್ರಾಣ
ಅವಳಿಲ್ಲದೆ ನಾ ನೀತ್ರಾಣ

Thursday, May 25, 2017

ಮರಳು ಮರಳಾಗಿ

...ಗಂಧದ ನಾಡಿನ ಚಂದನದ ಚೆಲುವೆ
ಏಕೆ ಬೇಕು ನಿನಗೆ.. ಒಡವೆಗಳ ಗೊಡವೆ
ಮೈ ಕಾಂತಿಯೆ ಮಂಕಾಗಿಸಿರುವುದು
ಆಭರಣಗಳ ಸಾಕಿಲ್ಲವೆ...

ಏನು.. ತಿಳಿಕೊಳದೊಳರಳಿನಿಂತ
ಕಮಲದಂತಹ ನಯನಗಳೊ...
ತೊಂಡೆ ಹಣ್ಣುಗಳೆ ನಾಚಿ ನೀರಾಗಿ
ಉದುರಿ ಬೀಳುವಂತೆ... ಕೆಂಪೆರಿರುವ
ಕೆಂದುಟಿಗಳೊ...
ಹೂವಿನ ಬಾಣಗಳ ಹೂಡಿ.. ನೋಡುಗರ
ಎದೆಯನೆ ಸಿಳ್ಳುವಂತೆ ಮೂಡಿರುವ
ಕರಿ ಹುಬ್ಬುಗಳೊ...
ಮೇಣದೊಳು.. ಕಾಮಧೇನುವಿನ
ಬೆಣ್ಣೆಯ ಬೆರೆಸಿ.. ದೇಹ ಸಿರಿಯ ತಿದ್ದಿ
ತಿಡಿ ನಿಲ್ಲಿಸಿದ ಗೊಂಬೆಯೊ...

ನಿನ್ನ ನಗುವ ನೋಟದ ಈ ಬಿಂಕಕೆ
ಕಲ್ಲು ಹೃದಯವು ಹದವಾದ ಮಣ್ಣಾಗಿ
ನಿನ್ನ ಪ್ರೀತಿಯ ತುಂಬಿಸಿಕೊಳ್ಳುಲು ...
ಚಡಪಡಿಸುವ ಮಡಿಕೆಯಾಗುವುದೊ...
ಮರಳುಗಾಡಿನಲಿ ನಿನ್ನೊಲವಿನ
ಮಳೆಯೆಂಬ ಹನಿ ಹನಿಗಾಗಿ ಕಾಯುವ
ಮರುಳಾಗುವುದೊ... ಇಲ್ಲವೆ ನಾನೆ..
ಮರಳು ಮರಳಾಗಿ.. ಮರುಳಾಗಿ ಬಿಡುವೆನೊ....

ರಾಜಕುಮಾರ


ಮುದ್ದು ಮುಖದ ಸುಕುಮಾರ
ನಮ್ಮ ಸಹೋದರಿಯ ಮುದ್ದಿನ ರಾಜಕುಮಾರ
ನಿನ್ನ ನಗುವ ಮೋಡಿಗೆ ಸೋಲದೆ
ಇಲ್ಲವಲ್ಲ... ನಿನೆಂಥ ಸರದಾರ
ನಿನ್ನ ದುಂಡು ಮೊಗವ ಕಂಡ ಹೆಂಗಳೆಯರ
ಮನದಲಿ ಉಕ್ಕಿ ಬರದೆ ಇರುವುದೆ
ಪ್ರೀತಿಯ ಮಮಕಾರ

ಪುಟ್ಟ ಪುಟ್ಟ ಹೆಜ್ಜೆಗಳ ಹಾಕುತ ಓಡಾಡುವ
ಬಾಲ ಚಂದಿರ
ಆಗಾಗ ಅಳದಿರು ನೀನು ಜೋಕುಮಾರ
ನೀನೆ ನಮ್ಮ ಭಾವನವರ ಮುದ್ದಿನ
ಕೃಷ್ಣಕುಮಾರ
ನಮ್ಮೆಲ್ಲರ ಮನವ ಗೆದ್ದ ಸಾಹುಕಾರ
ಆ ದೇವರ ಹಾರೈಕೆ ಸದಾ ನಿನ್ನ ಮೇಲಿರಲೊ..
ನಮ್ಮ ಮುದ್ದಿನ ರಾಜಕುಮಾರ

Wednesday, May 24, 2017

ಅನಾಥರು..

ಅನಾಥರು ನಾವು ಅನಾಥರು
ಹರೆಯದ ವಯಸಲಿ ಎಡವಿದ
ತಪ್ಪಿಗೆ.. ಅವರು ಮಾಡಿದ ರಾತ್ರಿಗಳ
ಪಾಪಕ್ಕೆ... ಹುಟ್ಟಿದ ಪಾಪದ ಪಾಪುಗಳು

ಜೀವವನಿತ್ತ ಪರಮಾತ್ಮನು ಕರುಣಿಸೆ
ಯಾರದೊ ಜೋಳಿಗೆಯ ಪಿಂಡಗಳಾಗುವೆವು
ಇಲ್ಲವೊ ಬೀದಿ ನಾಯಿಗಳ ಬಾಯಿಗೆ ಸಿಕ್ಕ
ಮಾಂಸದ ಉಂಡೆಗಳಾಗುವೆವು...

ನಮ್ಮ ಅಳುವೆ ನಮಗೆ ಜೋಗುಳ
ತೂಗುವವರಿಲ್ಲ... ಲಾಲಿಸುವವರಿಲ್ಲ..
ಹಸಿದಿಹೆ... ಎಂದು ಎತ್ತಿ ಎದೆಹಾಲ
ಕೊಡುವವರಿಲ್ಲ... ಕೆನ್ನೆಗೆ ಮೆತ್ತಿದ
ಕಣ್ಣೀರಿನ ಉಪ್ಪನು ಒರೆಸುವರಿಲ್ಲ..

ಚಳಿಯೆಂದು ಹೊದಿಸುವರಿಲ್ಲ..
ಮಳೆಯೆಂದು ಕೊಡೆ ಹಿಡಿಯದವರಿಲ್ಲ.
ಬಿಸಿಲೆಂದು ಕುಡಿಯಲು ನೀರು ಕೊಡುವವರಿಲ್ಲ
ಹಸಿವೆಂದು ಬೇಡಿದರು... ಕರೆದು ಕೂಳು
ಹಾಕುವರಿಲ್ಲ..

ಅನಾಥರು... ಸ್ನಾನದ ಹೆಸರನು
ಕೇಳದ ಗೊಬ್ಬು ನಾರುವ ನಾಥರು...
ಊರಿಲ್ಲ... ಸೂರಿಲ್ಲ... ನೆಲೆಯಿಲ್ಲ
ಬೇಡಿದ್ದೆ ಊರು.. ಮಲಗಿದ ನೆರಳೆ
ಸೂರು... ದಣಿವಾರಿಸಲು ಕುಳಿತ
ಸ್ಥಳವೆ.. ನೆಲೆಯು..

ಓಡಾಡುವ ರಸ್ತೆಗಳಲಿ ಗಾಡಿಗಳು
ಗುದ್ದಿ ಹೋದರು... ರಾತ್ರಿ ಮಲಗಿದಾಗ
ನಿದ್ರೆ ಮಂಪರು ಬರಿಸಿ...ಅಂಗಾಂಗಗಳ
ಕಿತ್ತುಕೊಂಡು ಹೋದರು.. ಕೆಲಸಕ್ಕಿರುವ
ಮನೆಯಲ್ಲಿ ಹೊಡೆದು ಬಡೆದು..ಲೈಂಗಿಕ
ಕಿರುಕುಳ ಕೊಟ್ಟರು.. ನಮ್ಮನ್ನಾರೂ..
ಕೇಳದ.. ಲೆಕ್ಕಿಸದ ಅನಾಥರು...

ಸುಸಂಸ್ಕೃತರ ನಾಡಿನಲಿ ಅಸಂಸ್ಕೃತರು
ಮಾಡಿದ ಗಲೀಜು ನಾವು...ವಯಸ್ಸಿನ
ಅಮಲಿನಲಿ.. ಹಣದ ಮೋಹಕ್ಕೊಳಗಾಗಿ
ಶೋಕಿಗಾಗಿ ಸಂಸ್ಕೃತವಂತರು ಮಾಡಿದ
ಲಜ್ಜೆಗೇಡಿತನಕ್ಕಾಗಿ... ನಿಮ್ಮ ಸುಸ್ವಸ್ಥವಾದ
ಸಮಾಜದಲ್ಲಿ ಗೊಬ್ಬು ನಾರುವ
ಅ....ನಾಥರು..

ನಾಚಿ ನಿಲ್ಲದಿರು ಹೀಗೆ

ನಾಚಿ ನಿಲ್ಲದಿರು ಹುಡುಗಿ ಹೀಗೆ
ಎದೆಬಡಿತವ ತಡೆಹಿಡಿಯಲಾದರೂ
ಹೇಗೆ.. ಮಿಟುಕಿಸೊಮ್ಮೆ ಆ ಜೋಡಿ
ಜಿಂಕೆ ಕಂಗಳ.. ಮಿಡಿಯಲಿ ಹೃದಯವಿದು
ನಿನ್ನ ಹೆಸರಿಗೆ

ನೋಡಿಲ್ಲಿ ನಿನ್ನ ನಗುವ ಮೋಹಕತೆಗೆ
ಎಷ್ಟು ಸುಮಗಳು ಅರಳಿ.... ಉದುರಿ
ಬಿದ್ದಿವೆ ನಿನ್ನ ದಾರಿಗೆ ...
ಬೀಸಿ ಬರುವ ಗಾಳಿಯು ನಿನ್ನ
ಮೈ ಗಂಧವ ಸೂಸಿ ತಂದಿದೆ
ಸುಮಗಳೆದೆಯ ಗಂಧವನು
ನಾಚಿಸಿದೆ.. ನನ್ನ ಕನಸುಗಳನ್ನೆ
ಬಂಧಿಸಿಬಿಟ್ಟಿದೆ..

ತೋರು ಮಗದೊಮ್ಮೆ ಆ
ನಿನ್ನ ನಗೆ.. ಬಂಧಿಯಾಗಿಬಿಡಲಿ
ಮನವು ನಿನ್ನೊಲವಿನಾ ನಗುವಿಗೆ

ಯಾರು ಹಿತವರು

ನನ್ನ ತಿಳುವಳಿಕೆಗೆ ನಿಲುಕಿದಷ್ಟು
ಅಲ್ಲಿ ಇಲ್ಲಿ ಓದಿ.. ಅವರಿವರು ಹೇಳಿ
ಕೇಳಿದ್ದಷ್ಟು ಇಲ್ಲಿ ಬರೆಯುತ್ತಿದ್ದೇನೆ ಮತ್ತು
ಈ ಬರಹಕ್ಕೆ ನಾನೆ ಹೊಣೆಗಾರನಾಗಿರುತ್ತೇನೆ...

ರಾಮ...
ಕೈಕೆಯ ಮಗನ ಸಿಂಹಾಸನದ ಮೋಹದಾಸೆಗಾಗಿ
ದಶರಥನಿತ್ತ ಎರಡು ವರವ ಸದ್ವಿನಿಯೋಗಪಡಿಸಿಕೊಂಡಳವಳು ಪಟ್ಟಗಟ್ಟುವಲ್ಲಿ
ಮದುವೆಯ ಹೊಸತನದ ಸವಿಯ ಸೀತೆಯ
ಜತೆ ಸವಿಯಬೇಕೆಂದಾಗಲೆ.. ಮಲತಾಯಿಯ
ವಚನಕ್ಕೆ ಸೋತ ತಂದೆಯ ಮಾತಿಗೆ ನಡೆದನವನು
ಕಾಡಿಗೆ... ಕೈಕೆಯ ಮನದ ಮೋಸಕೆ ಎಲ್ಲ ಸುಖವನಿದ್ದೂ
ಕಾನನ ವಾಸಕೆ ನವದಂಪತಿಗಳು ನಡೆದರೆ ಅಣ್ಙನಿಲ್ಲದೆ
ನಾನಿಲ್ಲ ಎಂದ ಲಕ್ಷ್ಮಣ ಉತ್ತರಕ್ಕೆ.. ಇದಾವುದರ ಪರಿವೆಯೆ
ಇಲ್ಲದ ಊರ್ಮಿಳೆಗೆ ಗಂಡನಿಲ್ಲದ ವನವಾಸ ನರಕದರಮನೆಯ ಸೆರೆವಾಸ..
ಶೂರ್ಪನಖಿಯು ಕಾಮದಾಸೆಗಾಗಿ ನಖವ ಕತ್ತರಿಸಿಕೊಂಡಳು
ಲಕ್ಷ್ಮಣನಿಂದ.. ಇದರ ಸೇಡಿನ ಕಾವಿಗಾಗಿ ಬಂದ
ರಾವಣನು ಹೊತ್ತೊಯ್ದುದ್ದು ಸೀತೆಯನು.. ಎಲ್ಲ
ಬಿಟ್ಟು ಬಂದು ಕಾನನದಲ್ಲಾದರೂ ಬಾಳ ಸವಿಯ ಸವಿಯಬಹುದೆಂದಿದ್ದ ರಾಮನಿಗೆ ಇಲ್ಲೂ ಅವಳಗಲಿಕೆಯ
ಆಘಾತ.. ಮನಮೆಚ್ಚಿದ ಮಡದಿ ಇನ್ನೊಬ್ಬರ ಬಂಧನದಲ್ಲಿರಲು ಯಾರು ಅರಿಯರು ಅವನ ಮನದ
ತಳಮಳವ..
ರಾಜನಾಗಿ.. ರಾಜಧರ್ಮವ ನಿಭಾಯಿಸಲು ಮಡದಿಯನ್ನು
ಕಾಡಿಗೆ ಕಳುಹಿಸಿದನು.. ಒಬ್ಬಳನ್ನ ಕಾಡು ಮೃಗಗಳಿರುವ
ಭೀಕರ ಅರಣ್ಯಕ್ಕೆ ಕಳುಹಿಸಿ ಹೇಗಿದ್ದನೊ ಅವಳಿಲ್ಲದ ವಿರಹವ ಸಹಿಸಿಕೊಂಡು..

ಬುದ್ಧ...
ಸದಾ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ ರಾಜನು
ಮುದಿತನ.. ರೋಗಗ್ರಸ್ಥ.. ಸಾವನ್ನು ಕಂಡು ವೈರಾಗಿಯಾದವನು ಇವನ ಬದುಕಿನಲ್ಲಿ ಹೆಣ್ಣು ಹೊನ್ನು ಮಣ್ಣು ಕೇವಲ ಇವನಿಗೆ ವೈರಾಗ್ಯ ತೋರಲು ನೆಪವಾದವುಗಳಷ್ಟೇ.. ವಿಶ್ವಕ್ಕೆ ಶಾಂತಿಯ ಮಂತ್ರವ
ಸಾರಿದನವನು ಬುದ್ದಿಯಿಲ್ಲದವರಿಗೆ ಬೌದ್ಧಿಕ ಬುದ್ದಿಯ
ಸಾರುವಂತವನಾದವನು

ಬಸವಣ್ಣ...
ಇವನ ಕ್ರಾಂತಿ ಬಂಡಾಯವೆದ್ದಿದ್ದೆ ಮನೆಯಂಗಳದಿಂದ
ಅವನಕ್ಕಳಿಗೂ ಉಪನಯನವ ಮಾಡದಿದ್ದಾಗ ಸಿಡಿದೆದ್ದವ
ಮೊದಲು ಮಹಿಳೆಯರಿಗೆ ಸಮಾಜದಲ್ಲಿ ಗಂಡಸಿಗೆ
ಸಮಾನವಾದ ಸ್ಥಾನಮಾನವ ದೊರಕಿಸಿಕೊಟ್ಟವ..
ಪ್ರತಿಯೊಂದು ಹೆಣ್ಣಿನಲ್ಲೂ ತಾಯಿ ರೂಪವ ಕಂಡವನು
ಇಬ್ಬರು ಸತಿಯರನ್ನು ಎರಡು ಕಣ್ಣುಗಳಂತೆ ಕಂಡವನು
ವಚನ ಸಾಹಿತ್ಯದಲ್ಲಿ ಮಹಿಳೆಯರನ್ನು ಗುರುತಿಸಿ ಅಕ್ಷರ
ಜ್ಞಾನದಿಂದ.. ಕಾಯಕದ ಕಾರ್ಯದಿಂದ ಎತ್ತಿ ಹಿಡಿದವನು
ಮಹಾ ಮಾನವತಾವಾದಿಯಾದವನು ಬಸವಣ್ಣ..

ಈ ತ್ರಿವಳಿಗಳು ಆಯಾ ಕಾಲಕ್ಕೆ.. ತಕ್ಕಂತೆ ಬದುಕಿನ
ವಿರುದ್ಧ ಹೋರಾಡಿದವರೆ ಜಗದಲಿ ತುಂಬಿದ
ಅಜ್ಞಾನ ಮತ್ತು ಕಾಮದ ವಿರುದ್ದ ಹೋರಾಡಿದವರೆ
ಇನ್ನೂ ಇವರು ಮೂವರಲ್ಲಿ ನಿಮಗೆ ಹಿತವರಾರು
ಎಂದೊಡೆ ನಾನೇನ ಹೇಳಲಿ... ಕಳಕಮಲ್ಲಯ್ಯ..

ನಾರಿ ಒಲಿದರೆ

ಇದೊಂದು ಜಠಿಲವಾದ...
ಎಂದೂ ಬಗೆಹರಿಯದ..ಇತ್ಯರ್ಥವೆ
ಕಾಣದಂತಹ ಬಹುದೊಡ್ಡ ಸಮಸ್ಯೆ

ಅವಳಂದಕೆ ಹೋರಾಡಿದವರು..
ಕಳೆದುಕೊಂಡರು ಪ್ರಾಣವನು...ಅಳಿಸಿ
ನಿರ್ನಾಮವಾಗಿ ಹೋದವು ಸಾಮ್ರಾಜ್ಯಗಳು
ಎಷ್ಟೊ... ಅಮಾಯಕ ಸೈನಿಕರ ನೆತ್ತರಿನ
ಕಾಲುವೆಗಳೆ ಹರಿದುಬಿಟ್ಟವು... ಲೆಕ್ಕವಿಲ್ಲದಷ್ಟು
ಸಿಂಧೂರದ ಹಣೆಗಳು ಬಂಡೆಯಾಗಿಬಿಟ್ಟವು..
ಸ್ನೇಹಿತನ ಹೊಟ್ಟೆಯನೆ ಸೀಳಿಬಿಟ್ಟವು ಚಾಕುಗಳು
ಅವಳ ಅಂದದ ಅರಮನೆಯ ಬಯಸಿ..

ಅವಳಂತರಂಗವನರಿತವರು.. ಕಟ್ಟಿದರು
ಅವಳು ಅಳಿದು ಹೋದರು ಅವಳ ನೆನಪು
ಮಾಸದಂತೆ ಬೇಲೂರಿನ ಶಿಲಾಬಾಲಿಕೆಗಳಾಗಿ
ಸ್ನಿಗ್ಧ ಸೌಂದರ್ಯದ ಕುರುಹುವಾಗಿ ತಾಜಮಹಲನು
ರವಿವರ್ಮನ ಚಿತ್ರಪಟಗಳಲಿ... ಚಿತ್ರಿಸಿದರು
ಮೈಸೂರು ಮಲ್ಲಿಗೆಯ ಕಾವ್ಯದಲಿ..
ಬೇಂದ್ರೆಯವರ ಭಾವದ ಸಾಲುಗಳಲಿ
ಕುವೆಂಪುರವರ ಪ್ರೇಮಕಾಶ್ಮೀರದ
ಪುಸ್ತಕದಲಿ ಬರೆದಿಟ್ಟಿರುವರು

ಈ ಇಪ್ಪತ್ತೊಂದನೆ ಶತಮಾನದಲ್ಲಿ...ತಾಂತ್ರಿಕತೆಯ
ಉತ್ತುಂಗದ ಹೊಸ್ತಿಲಲಿ ....ಅವಳ ದಾಸ್ಯವ ಅವಳೆ
ತೊಡೆದುಕೊಳ್ಳಬೇಕು... ಹಾಸ್ಯ ಮಾಡುವ
ಬಾಯಿಗಳ ಮುಚ್ಚಿಸಬೇಕು.. ಮನವನರಿಯದ
ಕಟುಕರೆದೆಯ ಮೇಲೆ ಕಾಳಿಯಂತೆ ನರ್ತಿಸಬೇಕು
ಅವರ ಮನದಲೂ ಪ್ರೀತಿಯ ಗರಿಕೆಯ ಬೆಳೆಸಬೇಕು
ನಾರಿ... ನೀ ಒಲಿದರೆ ನಾರಿ
ಮುನಿದರೆ... ಮಾರಿ ಎಂಬ ನಾಣ್ಣುಡಿಯ
ನಿಜವಾಗಿಸಬೇಕು..

Tuesday, May 23, 2017

ಶರಣುದಾಸ ನಾನು

ನಿನ್ನ ರಂಗೇರಿದ ಕೆನ್ನೆಯ ಕಂಡು
ಕಾಶ್ಮೀರದ ಸೇಬದು... ನಾಚಿದೆ

ನಿನ್ನ ಅಧರಮೃತದ ಸವಿಗೆ ಸುರೆಯ
ಸುಧೆಯೆ ಸಾಟಿಯಾಗದಂತಾಗಿದೆ..

ನಿನ್ನ ಹೊಳೆಯುವ ಕಂಗಳಿಗೆ
ಜಿಂಕೆಯ ನಯನಗಳೆ...ನಾಚಿವೆ

ನಿನ್ನ ಸುಶ್ರಾವ್ಯದ ಗೀತೆಗೆ ಶಾರದೆಯ
ವೀಣೆಯು ಮೀಡಿಯದೆ ಮೌನತಾಳಿದೆ

ನಿನ್ನ ನಡುವ ನಡೆಯ ಸೊಬಗ ಕಂಡು
ಬಳ್ಳಿ ಅಳುಕಿ ಬಳುಕಿ ತರುವನಪ್ಪಿದೆ

ನಿನ್ನ ದೇಹ ಸಿರಿಯ ವೈಭವವ ಕಂಡು
ರಸಿಕಲೋಕವೆ ಕಾದ ಉಂಡೆಯಾಗಿದೆ

ನನ್ನಂತರಂಗಕೆ ನಿನ್ನ ಕೈ ಹಿಡಿದು
ಕರೆತರಲು ಮನವು ಕಾತರಿಸುತಿದೆ..

ಯಾವ ಕವಿಯ ಕಾವ್ಯದ ಕಲ್ಪನೆಯೊ..
ಅದಾವ ಶಿಲ್ಪಿಯ ಕೈಯೊಳಗೆ ಮೂಡಿದ ಶಿಲೆಯೊ..

ನನ್ನ ಬದುಕಿನ ಉಸಿರು ನೀನು
ನಿನ್ನ ಪ್ರೀತಿಗೆ ಶರಣಾದ... ಶರಣುದಾಸ
ನಾನು..

ಈ ಹರೆಯದ ಹೃದಯಕೆ

ಓ... ಗೆಳತಿ ನಿನಗೆಂದೆ
ತುಂಬಿ ಬಂದಿದೆ ಹರೆಯ..
ನಿನ್ನ ಪ್ರೀತಿಯ ಬಯಸಿ
ಓಡೊಡಿ ಬಂದಿದೆ ಹೃದಯ

ಕಡಲಲೆಗಳಂತೆ ತೇಲಿ ತೇಲಿ
ಬರುತಲಿವೆ ನೂರಾರು ಕನಸುಗಳು
ಗಿರಿಶೃಂಗದಿಂದ ಜಾರಿ ಚಿಮ್ಮಿ...ಚಿಮ್ಮಿ..
ಧುಮಕಿ ಬರುತಿರೆ ಭಾವಗಳು

ನಿನ್ನ ಆಲಿಂಗನದ ಆಸೆಗಾಗಿ
ಕಾದಿಹೆ ನನ್ನೆರಡು ತೋಳುಗಳು
ಎದೆಯುಸಿರ ಬಿಸಿಯ ಸೋಕಿಸಿಕೊಳ್ಳಲು
ಉಸಿರುಗಟ್ಟಿ ನಿಂತಿವೆ ನರನಾಡಿಗಳು

ಸಾಕು ಸಾಕಾಗಿದೆ ನೀನಿಲ್ಲದೆ
ಕಳೆದ ವಿರಹದ ಕ್ಷಣಗಳನು
ತಂದು ಹರಿಸಿಬಿಡು ಈ ದಿನಗಳಿಗೆ
ತುಂಬು ಪ್ರೀತಿಯ ಚಿಲುಮೆಯನು

ಹರಿದು ಬಾ ಝರಿಯಂತೆ
ಎದೆಯ ಕೊಳವ ತುಂಬಲು
ಬೀಸಿ ಬಾ ತಂಗಾಳಿಯಂತೆ
ಮನದ ಬಯಕೆಯ ತೀರಿಸಲು

ಹೂವು ಎಲ್ಲಿದ್ದರೇನು...
ದುಂಬಿಗದರ ಇರವು ಅರಿಯದೆ
ನಿನ್ನ ಪ್ರೀತಿಯ ಅರಿವು ನನಗಿದೆ
ನನ್ನ ಪ್ರೀತಿಯ ಅರಿತು ಬರಬಾರದೆ
ಈ ಹರೆಯದ ಹೃದಯಕೆ...