Sunday, May 14, 2017

ಭಾಗ್ಯ

ನಾನು ನನ್ನ ಕನಸು ಸಹೋದರಿಯ ಕವನಕ್ಕೆ ನನ್ನೆರಡು ಸಾಲು

ನಿಮ್ಮಿಬ್ಬರನು... ಗೊತ್ತು ಗುರಿಯಿಲ್ಲದ
ಎಲ್ಲ ಅಪರಿಚಿತರೆ ತುಂಬಿರುವ ಈ
ಜಾಗದಲ್ಲಿ....ನಿಮ್ಮನ್ನು ಕಸವನ್ನಾಯಲು
ಬಿಟ್ಟು... ನಾನೇನು ತಣ್ಣಗಿರುವೇನೆ..
ಮಡಿಲ ಮರಿಗಳೆ..

ನಿಮ್ಮ ಹಸಿವು ಬಾಯಾರಿಕೆಯ
ನೀಗಿಸಲು... ಎಷ್ಟು ದೂರ ನಡೆದು
ಬಂದಿರುವೆ..ಹೊಟ್ಟೆಗೆ ಹಿಟ್ಟನು ಪಡೆಯಲು
ಕಾದ ಹಂಚಾದ ಈ ದಾರಿಯಲಿ
ನಡೆದು ನಡೆದು ಬೊಬ್ಬೆಗಳೆ.... ಎದ್ದೀವಿ
ಈ ಬರಿಗಾಲಲ್ಲಿ....

ಸಹಿಸಿಕೊಳ್ಳುವೆ... ಯಾಕೇ ಕೇಳು..
ಮನೆಗೆ ನಾ ಮರಳಿ ಬಂದಾಗ..
ಏನಾದರೂ ತಿನ್ನಲು ತಂದಿರುವೆಯೊ..
ಏನೊ... ಎಂದು ಆ ಕಣ್ಣೀರು ಬತ್ತಿದ
ಕಂಗಳಿಂದ ನನ್ನ ನೋಡುವ ನೋಟವ
ನಾನೆದುರಿಸಬೇಕು ನೋಡು...

ಗುರುತು ಪರಿಚಯವಿಲ್ಲದ ಊರಿನಲಿ
ಸಾವು ನೋವಾದರೆ ಸ್ಪಂದಿಸದಿರುವ...
ಸದಾ ಕಾಮದ ಕಣ್ಣಿನ ಹದ್ದುಗಳ
ನೋಟಗಳ ಎದುರಿಸಿ.. ನಿಮ್ಮಿಬ್ಬರ
ಸಲುವುವ ಜವಾಬ್ದಾರಿಯು ಇದೆ..

ನಿಮ್ಮ ನೋವಿಗಳಿಗೆ ಮದ್ದಾಗಿ..
ನಲಿವುಗಳಿಗೆ ಹೂವಾಗಿ ಅರಳುವ
ಆಸೆ ಎಷ್ಟಿಲ್ಲ ಮನದಲಿ... ಆ ದೇವರು
ನನಗೆ ಸಂತಾನ ಭಾಗ್ಯವ ಕೊಟ್ಟನೆ
ಹೊರತು... ಲಕ್ಷ್ಮೀ ಭಾಗ್ಯವ... ಅನ್ನ ಭಾಗ್ಯವ..
ನೀಡಲಿಲ್ಲ..

ಬೇಸರಿಸದಿರಿ... ನಿಮ್ಮೊಡನೆ
ಆಡಲಿಲ್ಲವೆಂದು...
ನೋಯದಿರಿ...ಒಳ್ಳೆಯ ಬಟ್ಟೆಗಳ
ಕೊಡಿಸಲಿಲ್ಲವೆಂದು...
ಕೋಪಗೊಳ್ಳದಿರಿ....ಬಿಸಿಲಿಗೆ ಕಾಯುವ
ಮಳೆಗೆ ಸೋರುವ ಸೂರಿರುವದೆಂದು
ಹರುಷವು ಉಕ್ಕುವುದಲ್ಲ.... ನಾ ರಾತ್ರಿಗೆ
ಕೊಡುವ ಕೈ ತುತ್ತಿಗೆ..
ಸಮಾಧಾನಿಸುವಿರಲ್ಲ... ಹಗಲೆಲ್ಲ ಅಲೆದಾಡಿ..
ರಾತ್ರಿ... ಈ ಇರುಳ ಚುಕ್ಕೆಗಳ ಚಿತ್ತಾರ ಬಿದ್ದ
ಸೀರೆಯ ಸೇರಗಂಚಲಿ ಮಲಗುವಾಗ..
ಈ ಒಂದು ಸೌಭಾಗ್ಯವ ನೀಡಿದನಲ್ಲ....
ಅವನ ಹೊಟ್ಟೆ ತಣ್ಣಗಿರಲಿ...

No comments:

Post a Comment