Wednesday, May 31, 2017

ನಿನ್ನೆಯಿಂದಲು..

ಜೇಡರ ಬಲೆಯಲಿ ಬಿದ್ದ
ಹುಳುವಿನಂತಾಗಿದೆ ಮನ
ಗಾಳಕ್ಕೆ ಸಿಕ್ಕು ಚಡಪಡಿಸುತಿರುವ
ಮೀನಿನಂತಾಗಿದೆ ಭಾವ

ಗಾಳಿಗೆ ನಲುಗಿ ಬಿದ್ದು... ಪೆಟ್ಟು
ತಿಂದ ಹಣ್ಣಾಂತಾಗಿವೆ ಕಲ್ಪನೆಗಳು
ಕೈ ಜಾರಿ ಬಿದ್ದು.. ಚೂರು ಚೂರಾದ
ಕನ್ನಡಿಯಂತಾಗಿವೆ ಕನಸುಗಳು

ಕಪ್ಪು ಮಸಿಯ ಬಳಿದುಕೊಂಡ ಬಾನಲಿ
ಚದುರಿ ಬಿದ್ದಂತಾಗಿವೆ ಪದಗಳು... ತಾರೆಗಳ ರೂಪದಲಿ
ಎರಡು ಸಾಲು ಬರೆಯಲು ಆಗುತ್ತಿಲ್ಲ...ನೋಡೆ
ಚಂದ್ರಮನು ಮರೆಯಾಗುವನು ಮೋಡದ ಮರೆಯಲಿ

ನಿಂತ ತಿಳಿನೀರಿನ ಕೊಳದಲಿ ಕಲ್ಲು ಒಗೆದಂತಾಗಿ
ಬೇಕು ಬೇಡವಾದ ವಿಚಾರದಲೆಗಳು ಎಳುತಿವೆ ತಲೆಯಲ್ಲಿ
ಬಾಲ ಸುಟ್ಟ ಬೆಕ್ಕಿನಂತೆ... ಒಬ್ಬರ ಹತ್ತಿರವು ಎರಡು
ಮಾತನಾಡದಾಗದೆ ಊರನ್ನೇ ಸುತ್ತು ಹಾಕಿದೆ ಬರಿಗಾಲಲ್ಲಿ

ಹರಿಯುತಿದೆ ಮನ.. ಮೊದಲ ಮಳೆಗೆ ಊರ ಹೊಲಸು
ಕೇಸರನ್ನೆಲ್ಲ ತೇಲಿಸಿಕೊಂಡು ಹರಿಯುವಂತೆ..
ಕುದಿಯುತಿದೆ ತನ... ವಲೆಯ ಮೇಲೆ ಅನ್ನವನಿಟ್ಟು
ಮರೆತು ಹೋಗಿ...ಕುದ್ದು ಕುದ್ದು ಸೀದು ಹೋಗುವಂತೆ

ಬೇಕಿದೆ ಒಂದು ಬದಲಾವಣೆಯ ಗಾಳಿ
ತನುವ ಬೆಂಕಿಯ ಆರಿಸುವ ಸುಳಿಗಾಳಿಯಲ್ಲ
ಮನದ ದೀಪವ ಬೆಳಗಿಸುವ ತಂಗಾಳಿ
ಹುಡುಕುತಿರುವೆ... ಕಾಯುತಿರುವೆ...
ನಿನ್ನೆಯಿಂದಲು....

No comments:

Post a Comment