Wednesday, May 10, 2017

ಪರೀಕ್ಷೆ

ಪರೀಕ್ಷೆ ಇದೊಂದು ಮೆಟ್ಟಿಲು...
ಹತ್ತುವ ಮುಂಚೆಯೆ... ಜಾಗರೂಕರಾಗಿರಬೇಕು
ಎಡವಿದರೆ.. ಕಾಲು ಜಾರಿದರೆ....
ಮುಗ್ಗರಿಸಿ ಬಿದ್ದರೆ... ಎಳಲು...
ಸುಧಾರಿಸಿಕೊಳ್ಳಲು... ಮತ್ತೆ  ಇನ್ನೊಮ್ಮೆ
ಎಡವದಂತೆ... ಇನ್ನಷ್ಟು ಹುರುಪಿನಿಂದ
ಹತ್ತಬಹುದು... ಆ ಕೊನೆಯ ಮೆಟ್ಟಲಿನ
ತುದಿಯಲಿರುವ ಫಲಿತಾಂಶವೆಂಬ ಗಿಡದ
ಹಣ್ಣನ್ನು ಸವಿಯಬಹುದು...ಅದು
ನಿಮ್ಮ ಪ್ರಯತ್ನಕ್ಕೆ ಸಿಕ್ಕ ಫಲವಾಗಿರುತ್ತದೆ...
ಸಿಕ್ಕ ಹಣ್ಣು ಸಿಹಿಯೊ... ಕಹಿಯೊ..
ಅದು ನಿಮ್ಮ ಪರಿಶ್ರಮದ ಬೆಲೆಯಾಗಿರುತ್ತದೆ..

ಕೇವಲ ಈ ಕಾಗದದ ಪರೀಕ್ಷೆಗೆ ಹೆದರಿ
ನಿಮ್ಮ ವಿಧಿ ಬರಹವ ನೀವೆ ಅಳಿಸಿಕೊಳ್ಳದಿರಿ..
ಅನುತ್ತೀರ್ಣನಾದೆನೆಂದು.. ಕಡಿಮೆ
ಅಂಕಗಳು ಬಂದವೆಂದು... ಊರುಳಿಗೆ
ಕೊರಳನು ಒಡ್ಡದಿರಿ.... ಹೆತ್ತವರ ಮಡಿಲಿಗೆ
ಕಣ್ಣೀರ ದಿನಗಳ ಹಾಕದಿರಿ...

ಭಾವಜೀವವಿರದ ಈ ಜಗದಲಿ..
ನಿನ್ನ ಜನ್ಮಕ್ಕಾದ... ನಿನ್ನೊದಿಗಾದ ತಂದೆ-ತಾಯಿಗಳನು..
ನಿನ್ನ ಅಕ್ಕರೆಗಾದ ಸೋದರ ಸೋದರಿಯರನು...
ನಿನ್ನ ತುಂಟಾಟಗಳಿಗೆಲ್ಲಾದ ಗೆಳೆಯ ಗೆಳತಿಯರನು
ನಿನ್ನ ನೋವು ಕಷ್ಟಗಳಿಗಾಗದ ಬಂಧು
ಬಳಗವ ತೊರೆದು.. ಇವರೆಲ್ಲರ ಪಾಡಿಗೆ..
ದುಃಖದ ಮಡಿಕೆಯನು ಕೊಡದಿರಿ...
ನೀವೆಂದರೆ... ಕಹಿಯ ಬುತ್ತಿ... ಎಂದು
ನೆನಪಿಸುವ ವಾಸ್ತವವಾಗದಿರಿ...

ಬಾಳಿಲ್ಲವಿದೆಷ್ಟು ಸುಂದರ... ಈ ಬಾಳ
ಹೊಸೆಯದಿದ್ದರೆ ಬದುಕಿಗೆ ನೇಣಾಗುವುದು
ಹೊಸೆದರೆ... ಬದುಕ ಬಾವಿಯ ನೀರ...
ಸೇದುವ ಹಗ್ಗವಾಗುವುದು..ಸೇದಿರಿ....
ಸೇದಿರಿ... ಹರಿಸಿರಿ ನೀರನು.. ನಿಮ್ಮ
ಬುದ್ಧಿ ಬಲದಿಂದ... ತೋಳ್ಬಲದಿಂದ...
ನೋಡುಗರ ಕಂಗಳಿಗೆ... ಹಸಿರು ಹೊದ್ದು
ಮಲಗಿದ ಗದ್ದೆಯಾಗಲಿ... ನಿಮ್ಮ ಬಾಳು..

ಹೆದರದಿರಿ... ಕಾಗದದ ಪರೀಕ್ಷೆಗೆ..
ಉತ್ತರ ಬರೆದಿಟ್ಟವನು ಮೇಲಿರುವಾಗ
ನಿಮಗಿಲ್ಲದಿರಲಿ ಚಿಂತೆ... ಮುಂದಿಹುದಲ್ಲ....
ಸಾಕಷ್ಟು.... ಬದುಕಿನಾ ಸಂತೆ...

No comments:

Post a Comment