Saturday, May 13, 2017

ನನ್ನ ಅಪ್ಪ

ನನ್ನ ತಿಳುವಳಿಕೆ ಬಂದಾಗಿನಿಂದಲೂ...
ನನ್ನಪ್ಪ ಒಂದಿನವಾದರೂ ಎತ್ತಿ ಮುದ್ದಾಡಿದ...
ಅಂಬಾರಿಯಾಗಿದ್ದ....  ನನ್ನ ಬೇಕು ಬೇಡಗಳ...
ನನ್ನ ಓದಿನ... ಆಟೋಟಗಳ.. ಬಟ್ಟೆ ಬರೆಗಳ
ಬಗ್ಗೆ ಒಂದಿನವಾದರೂ...ನನ್ನಲಿ...ಕೇಳಿದ್ದಿಲ್ಲ...
ಹೇಳಿದ್ದಿಲ್ಲ...ಅನುಭವಿಸಿದಿಲ್ಲ...

ಹಾಗಂತ ಅವರು ಮಕ್ಕಳೆಂದರೆ.. ಇಷ್ಟವಿಲ್ಲದವರಲ್ಲ
ಅವರು ಬೆಳೆದು ಬಂದ ಹಾದಿಯೇ... ಅಂತಹದು
ಬಡತನದಲ್ಲೆ ಹುಟ್ಟಿ... ದನಗಳ ಕಾದು.. ಹೊಟ್ಟೆಯ
ಪಾಡಿಗಾಗಿ ಊರೂರು ಅಲೆದು... ಇಲ್ಲಿ ಒಂದು
ಕಡೆ ಗಜೇಂದ್ರಗಡದಲ್ಲಿ ನೆಲೆ ನಿಂತರು...

ಅಪ್ಪನೆಂದರೆ, ಕೆಲವರ ಪಾಲಿಗೆ ಅಂಬಾರಿ..
ಕೇಳಿದ್ದನ್ನು ಕೊಡಿಸುವ ಕಾಮಧೇನು...ಶಿಸ್ತಿನ
ಸಿಪಾಯಿ..... ಹೆಗಲುಗಳಲ್ಲಿ ಕುಳ್ಳರಿಸಿಕೊಂಡು
ಸುತ್ತಾಡಿಸುವವ.. ಜಾತ್ರೆಯ ಬಜಾರಿನಲ್ಲಿ ನನ್ನೀಷ್ಟದ ಆಟಿಕೆಗಳ ಕೊಡಿಸುವವ..ಹೀಗೆ ಇನ್ನೂ ಅನೇಕ ಅನೇಕ
ರೂಪಗಳಲ್ಲಿ‌ ಕಂಡವರು ಆತನನ್ನು...

ನಮ್ಮಪ್ಪನೆಂದರೆ.... ನನಗೆ ನನ್ನ ಬಾಳಿನ ನಾಯಕ..
ಯಾವ ಸಾಧಕರಿಗೂ ಕಮ್ಮಿಯಿಲ್ಲದ
ಶ್ರಮಜೀವಿ.. ನಿಮಗೆ ಗೊತ್ತಾ ಈ ನಾಯಕನ
ಕಾಯಕವ... ಇವರ ಚಹಾದ ಅಂಗಡಿಯ ಕೆಲಸ
ಪ್ರಾರಂಭವಾಗುವುದೆ ಬೆಳ್ಳಂ ಬೆಳಗ್ಗೆ ನಾಲ್ಕು ಗಂಟೆಗೆ....
ಅಂದರೆ ಕೋಳಿ ಕೂಗುವ ಮುಂಚೆಯೇ...

ಅದೂ...ಶೇಂಗಾ ಚಟ್ಟದ ಒಲೆಯ ಮುಂದೆ
ಬೆಂಕಿಯ ಕಾವನುಣ್ಣುತಾ... ಎಣ್ಣೆಯ ಕಡಾಗಿಯಲ್ಲಿ
ಮೊದಲಿಗೆ ಪುರಿ.. ದಾನಿ... ಗುಳಿಗೆ.. ಮಿರ್ಚಿ..
ಉಪ್ಪಿಟ್ಟು... ಬರೀ ಎಣ್ಣೆ ಉಪಹಾರನ್ನೆ
ತಯಾರಿಸುತ್ತಿದ್ದುದು ತದ ನಂತರ ಅರವತ್ತು ಲೀಟರ್‌...
ಚಹಾದಂಗಡಿಗೆ ತರುವ ಹಾಲನ್ನು ಕಾಯಿಸುವುದು.. ಇದಾಗತ್ತಿದ್ದ ಹಾಗೇಯೆ ವಗ್ಗರಣೆ... ಮೊಸರು ಅವಲಕ್ಕಿ..
ಇಷ್ಟೇಲ್ಲಾ ಕೆಲಸ ಮುಗಿಸುವುದರೊಳಗೆ ಸಮಯ
ಎರಡು ಗಂಟೆ ಹೊಡೆದಿರುತ್ತಿತ್ತು... ಆ ಸಮಯಕ್ಕೆ
ನಿಧಾನ ಎನ್ನುವ ಪದವಾದರೂ ಎಲ್ಲಿ ಗೊತ್ತಿರುತ್ತಿತ್ತು
ಹೇಳಿ..

ಸ್ನಾನ... ಊಟವೆನ್ನುತ್ತಲೆ ಮೂರಾಗುತ್ತಿತ್ತು..
ಒಂದು ತಾಸು ನಿದ್ರೆ... ಅದು ಮಧ್ಯಾಹ್ನದ ಗಿರಾಕಿಗಳು
ಬಹಳಿದ್ದರೆ.. ನಿದಿರೆಗೂ ರಜೆ.. ಮತ್ತೆ..
ಸಂಜೆ ನಾಲ್ಕರಿಂದ ಆರರ ತನಕ..ಮತ್ತೆ
ಪುರಿ... ಮಂಡಕ್ಕಿ.. ಖಾರ.. ಇವೆಲ್ಲ ಮುಗಿಯುವದರೊಳಗೆ
ರಾತ್ರಿ ಎಂಟು ಗಂಟೆ.. ಮತ್ತೆ ನಾಳಿನ
ತಯಾರಿಗಾಗಿ... ಈರುಳ್ಳಿ ಹೆಚ್ಚಿಕೊಳ್ಳುವುದು..
ಸ್ಟೌಗಳಿಗೆ ಸೀಮೆಎಣ್ಣೆ ಹಾಕಿಡುವುದು..
ಅಂಗಡಿಯ ರಾತ್ರಿ ಕಸವ ಗುಡಿಸಿ... ಇನ್ನೂ
ಚಿಕ್ಕವರಿರುವ... ಅಷ್ಟೊತ್ತಿಗಾಗಲೆ...
ಮಲಗಿರುವ ನಮ್ಮನು ಹೆಗಲು ಮೇಲೆ
ಹೊತ್ತುಕೊಂಡು ಹೋಗಿ, ಕಾಲು ದೂರ ಇರುವ
ಹಳೆ ಮನೆಯಲ್ಲಿ ಹಾಸಿಗೆಯ ಹಾಸಿ ಮಲಗಿಸುತ್ತಿದ್ದನು..

ಮತ್ತೆ.... ದಿನಬೆಳಗಾದರೆ.. ಇದೆ...ಯಥಾ
ಪ್ರಕಾರ ಸಾಗುವುದು.. ಇನ್ನೂ ಕಳಕಪ್ಪನ
ಜಾತ್ರೆ ಬಂದರಂತೂ ಮುಗಿದೆ ಹೋಯ್ತು ಕಥೆ
ಚಹಾ ವಾಟೆಗಳ ತೊಳೆದು ತೊಳೆದು ಗಿರಾಕಿಗಳಿಗೆ
ನೀರು.. ಕೊಡುವುದರೊಳಗೆಯೆ ನಮ್ಮ ನಡುವು
ಸೋತು ಹೋಗಿರುತ್ತಿತ್ತು... ಹೇಳದೆ ಕೇಳದೆ
ರಾತ್ರಿ ಎಂಟರ ತನಕ ಅಂಗಡಿಯ ಹತ್ತಿರ ತಲೆನೆ
ಹಾಕುತ್ತೀರಲಿಲ್ಲ.... ನನಗಿನ್ನೂ ಚೆನ್ನಾಗಿ ನೆನಪಿದೆ
ಡಾ|| ರಾಜ್ ಅವರ ಪರುಶರಾಮ ಚಿತ್ರ ಜಾತ್ರೆಗೆಂದೆ
ಅಲಂಕಾರ ಟಾಕೀಸ್ ಗೆ ಹಾಕಲಾಗಿತ್ತು... ಅಬ್ಬಬ್ಬಾ
ಜಾತ್ರೆಯ ಗದ್ದಲ.. ಅವರ ಸಿನೆಮಾದ ಅಭಿಮಾನಿಗಳ
ಅಬ್ಬರ ಸಹಿಸಲಾಗದೆ ಒಂದು ದಿನ ಅಂಗಡಿಯನ್ನೆ
ಬಂದ್ ಮಾಡಿದ್ದೇವು..

ನಮ್ಮಪ್ಪನ ಬಗ್ಗೆ ಎಷ್ಟು ಹೇಳಿದರೂ.. ಬರೆದರೂ
ಸಾಲದು... ಅವರು ಆಗಾಗ ಒಂದು ಮಾತನ್ನು
ಹೇಳುತ್ತಿದ್ದರು... ನಾನು ಕಷ್ಟಪಟ್ಟ ಹಾಗೆ ನನ್ನ
ಮಕ್ಕಳು ಕಷ್ಟ ಪಡಬಾರದು... ಹಾಗೆಯೆ ಕಷ್ಟಪಟ್ಟು
ದುಡಿದು.. ಬಸ್ ಸ್ಟಾಪ್ ಎದುರೆ ಸ್ವಂತ ಅಂಗಡಿಯನ್ನು
ಕಟ್ಟಿಸಿಕೊಟ್ಟು... ಉಳುಮೆಗೆಂದೆ ಏಳು ಎಕರೆ ಎರಿ
ಹೊಲವನ್ನು ಹಿಡಿದು ಅದನ್ನು ಸ್ವತಃ ತಾವೆ ಸಾಗುವಳಿ
ಮಾಡಿಸುತ್ತ ನಮಗೆ ವ್ಯವಸಾಯದ ರುಚಿಯ
ಹತ್ತಿಸಿದವರು...

ನಮ್ಮಪ್ಪ... ನನ್ನನ್ನೇನು ಕೇಳಲಿಲ್ಲ..
ಕೇಳದ ಹಾಗೆ ದುಡಿದು ಇಟ್ಟ... ಇನ್ನೊಬ್ಬರ
ಹಂಗಲಿ ಬೀಳದಂತೆ ಬದುಕು ಕೊಟ್ಟ...
ನಾವು ಹೀಗೆ ಬದುಕಬೇಕೆಂದು ಹೇಳದೆ
ಬದುಕಿ ತೋರಿಸಿ.. ತೋರಿಸುತ್ತಿರುವ ಈ
ನನ್ನ ಬದುಕಿನ ನಾಯಕನಿಗಿಂತ.....
ಬೇರೊಬ್ಬ ನಾಯಕ ನನಗೆ ಬೇಕಾ?
ಅಪ್ಪ.... ಸಾಕು ಕಣೋ... ಇನ್ನು
ನನ್ನ ಕೈಲಿ ಬರೆಯಲಾಗುತ್ತಿಲ್ಲ.....

No comments:

Post a Comment