Sunday, May 28, 2017

ಬಾಲ್ಯದ ನೆನಪುಗಳು

ಆಗಿನ ಕಾಲದ ನೆನಪುಗಳ
ಮತ್ತೇಕೆ ಕೆದಕುವಿರಿ..ಹೊಟ್ಟೆ
ಉರಿಯುವ ಹಾಗೆ..

ಬೀರು ಬಿಸಿಲಲು ಆ ಕಾಮನ
ಹುಣ್ಣಿಮೆ ದಿವಸ.. ಮೈದಾ ಹಿಟ್ಟಿನಿಂದ
ತಯಾರಿಸಿದ ಹಲಗೆಯ ಬಾರಿಸುತ್ತ
ಮಧ್ಯ ರಾತ್ರಿಯಲ್ಲಿ ಕಾಮಣ್ಣನ ಸುಟ್ಟು..
ಅವನ ಕೆಂಡದಲ್ಲಿ ಕಡಲೆಯನ್ನು ಹಾಕಿ
ಸುಟ್ಟು.. ಉಪ್ಪು ಹಾಕಿ ಬಾಯಿಗೆ
ಹಾಕಿಕೊಂಡರೆ..... ಹ್ಞೂಂ...
ಈಗಲೂ ಬಾಯಲ್ಲಿ ನೀರೂರುತ್ತೆ..

ಬಸವ ಜಯಂತಿಯ ದಿನ..
ಎತ್ತುಗಳ ಮೆರವಣಿಗೆಯಲ್ಲಿ ಅವುಗಳ
ಕೊರಳಲ್ಲಿ ಕಟ್ಟಿದ ಒಣಕೊಬ್ಬರಿ ಬಟ್ಟಲುಗಳನ್ನು
ಹರಿದುಕೊಂಡು.. ಸಂದಿಗೊಂದಿಗಳಲಿ
ಒಡಾಡಿ ಊರಾಚೆಯ ಒಂಟಿ ಮಾವಿನ
ಮರದ ಕೆಳಗೆ.. ಮನೆಯಿಂದ ಕದ್ದು ತಂದಿದ್ದ ಬಕ್ಕಣದಲ್ಲಿದ್ದ ಬೆಲ್ಲವ ಅದಕ್ಕೆ ಸೇರಿಸಿಕೊಂಡು
ತಿನ್ನುತ್ತಿದ್ದರೆ.. ಏನ್ ಹೇಳ್ಲಿ ಅದರ ಸುಖವಾ..

ಕಾರ ಹುಣ್ಣಿಮೆಯಲ್ಲಿ.. ಪಟವ ಹಾರಿಸುವುದು
ರಂಗು ರಂಗಿನ ಪಟಗಳ ತಯಾರಿಸುವುದು..
ಐವತ್ತು ಪೈಸೆ.. ಸ್ವಲ್ಪ ದೊಡ್ಡದಕ್ಕೆ ಒಂದು
ರೂಪಾಯಿಯಂತೆ ಮಾರುತ್ತಿದ್ದದ್ದು..

ಬುಗುರಿಯ ತಂದು ಆ ದುಂಡಾಗಿ
ಹಾಕಿದ ರೇಖೆಯಲ್ಲಿ ಇಟ್ಟ ಕಟ್ಟಿಗೆಯ
ತುಂಡನ್ನು ಹೊರಗೆ ಹೊಡೆದು ತರುವದು
ಸೋತ ಬುಗುರಿಯನ್ನು ನೆಲದಲ್ಲಿ ಬಡೆದು
ಅದರ ನೆತ್ತಿಯ ಮೇಲೆ ಇನ್ನೊಂದು ಬುಗುರಿಯಿಂದ
ಹೊಡೆದರೆ ಅಷ್ಟೇ.. ಅದು ಎರಡು ಸೀಳಾಗುತ್ತಿತ್ತು.
ಸಂಜೆಗೆ ಅವರಪ್ಪ ನಮ್ಮನ್ನೆಲ್ಲ ಊರ ತುಂಬಾ
ಓಡಾಡಿಸಿ... ಕೈಗೆ ಸಿಕ್ಕವರನ್ನು ಚೆನ್ನಾಗಿ ಹೊಡೆಯುತ್ತಿದ್ದದ್ದು..
ಒಂದೆ ಎರಡೆ ನೆನಪಿಸಿ ಬರೆಯಲು..

ಆದರೆ ಮಿತ್ರ ... ನೀರು ತುಂಬಲು
ಹೋಗಿ ನೆಲಕ್ಕೆ ತಾಗಿದ್ದ ವಿದ್ಯುತ್ ತಂತಿಯಿಂದ
ನಿನ್ನ ಸಾವನ್ನು ಕಂಡು.. ಸಾವಿನ ಭಯದ..
ಮಗನು ಕಳೆದುಕೊಂಡ ತಂದೆ ತಾಯಿಗಳ
ದುಃಖವನ್ನು ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ
ಪರಿಚಯಿಸಿಬಿಟ್ಟೆ....

ಕಳೆದು ಹೋಗಿದೆ ಬೇಸಿಗೆ.. ರಜೆಯು
ಕರಗಿ ನೀರಾಗಿದೆ.. ಮತ್ತೆ ಶಾಲೆಗಳು ಎಂದಿನಂತೆ
ಆರಂಭ.. ಮತ್ತೆ ಹಳೆ ನೆನಪುಗಳೊಂದಿಗೆ
ಹೊಸ ದಿನಗಳು..ಹೊಸ ಪಾಠಗಳು
ಪ್ರಾರಂಭವಾಗುವವು ಅಲ್ಲವೆ..

ಇಂತಹ ಒಂದು ಬರೆಯುವ ಸಂದರ್ಭವನ್ನು
ಸೃಷ್ಟಿಸಿದ್ದಕ್ಕೆ ಮಿತ್ರರಿಗೂ..ಯಶೋದಾ ಅವರಿಗೂ
ನನ್ನ ಹೃತ್ಪೂರ್ವ ನಮನಗಳು..

No comments:

Post a Comment