ನಿನ್ನ ರಂಗೇರಿದ ಕೆನ್ನೆಯ ಕಂಡು
ಕಾಶ್ಮೀರದ ಸೇಬದು... ನಾಚಿದೆ
ನಿನ್ನ ಅಧರಮೃತದ ಸವಿಗೆ ಸುರೆಯ
ಸುಧೆಯೆ ಸಾಟಿಯಾಗದಂತಾಗಿದೆ..
ನಿನ್ನ ಹೊಳೆಯುವ ಕಂಗಳಿಗೆ
ಜಿಂಕೆಯ ನಯನಗಳೆ...ನಾಚಿವೆ
ನಿನ್ನ ಸುಶ್ರಾವ್ಯದ ಗೀತೆಗೆ ಶಾರದೆಯ
ವೀಣೆಯು ಮೀಡಿಯದೆ ಮೌನತಾಳಿದೆ
ನಿನ್ನ ನಡುವ ನಡೆಯ ಸೊಬಗ ಕಂಡು
ಬಳ್ಳಿ ಅಳುಕಿ ಬಳುಕಿ ತರುವನಪ್ಪಿದೆ
ನಿನ್ನ ದೇಹ ಸಿರಿಯ ವೈಭವವ ಕಂಡು
ರಸಿಕಲೋಕವೆ ಕಾದ ಉಂಡೆಯಾಗಿದೆ
ನನ್ನಂತರಂಗಕೆ ನಿನ್ನ ಕೈ ಹಿಡಿದು
ಕರೆತರಲು ಮನವು ಕಾತರಿಸುತಿದೆ..
ಯಾವ ಕವಿಯ ಕಾವ್ಯದ ಕಲ್ಪನೆಯೊ..
ಅದಾವ ಶಿಲ್ಪಿಯ ಕೈಯೊಳಗೆ ಮೂಡಿದ ಶಿಲೆಯೊ..
ನನ್ನ ಬದುಕಿನ ಉಸಿರು ನೀನು
ನಿನ್ನ ಪ್ರೀತಿಗೆ ಶರಣಾದ... ಶರಣುದಾಸ
ನಾನು..
No comments:
Post a Comment