ನಿನಗಿಂದು ತೃಪ್ತಿಯಾಯಿತೆ...
ನನ್ನ ಅಜಾಗರೂಕತೆಯ ಫಲವೊ...
ಬರದ ಬೇಗೆಯಲೂ... ನನ್ನ
ಹೊಟ್ಟೆಯನ್ನಾದರೂ ಕಟ್ಟಿ
ಹಳ್ಳಕೊಳ್ಳಗಳ ಸರಕುಗಳಲಿ
ಓಡಾಡಿ... ಬೆಟ್ಟ ಗುಡ್ಡಗಳ ಹತ್ತಿ
ಇಳಿದು... ಅಳಿದುಳಿದ ಹಸಿರು ಮೇವು
ಮಾಡಿ ಸಾಕಿದರ ಪ್ರತಿಫಲವಾಗಿ..
ನನ್ನೆರಡು ಭುಜಗಳ ಬಲದಂತಿದ್ದ ಈ
ಎತ್ತುಗಳಿಗೆ..ಸಾವಿನ ವರವ ದಯಪಾಲಿಸಿ
ಕುಳಿತು ಬಿಟ್ಟೆಯಲ್ಲೊ... ಹೀಗೆ ತಣ್ಣಗೆ..
ಮೂರು ವರ್ಷದ ಸುಡು ಬೇಸಿಗೆಯ
ಬರದಲ್ಲೂ... ನನ್ನ ನೊಗಲಿಗೆ ಹೆಗಲನು
ಕೊಟ್ಟವರು...ಅರೆಹೊಟ್ಟೆಯಲೂ ಭೂಮಿಯ
ಬಿತ್ತಿದವರು...ಮನೆಯ ಮೇಲ್ಛಾವಣಿಗೆ ಬಂಡಿಗಟ್ಟಲೆ
ಮೇಲ್ಮುದ್ದಿಯ ಮಣ್ಣನು ಹೊತ್ತವರು..
ಊರ ಮದುಮಕ್ಕಳ ಮದುವೆಗೆ ಹಂದರ
ತಪ್ಪಲವ... ಹಳ್ಳದ ಏರಿಳುವಿನ ದಿನ್ನೆಗಳ
ಹತ್ತಿ ಹೊತ್ತು ತಂದವರು..ಮೊನ್ನೆ ಮೊನ್ನೆಯಷ್ಟೆ
ಬಸವ ಜಯಂತಿಯ ದಿನದಂದು ಶೃಂಗಾರಗೊಂಡು
ಊರ ಬೀದಿ ಬೀದಿಗಳಲಿ ಗತ್ತಿನಿಂದ ನಡೆದು
ಬಂದವರು...
ನನ್ನ ನಿಮ್ಮ ಭಾಂದವ್ಯವ ಸಹಿಸಲಾಗದೆ....
ಬರಸಿಡಿಲ ಪೆಟ್ಟಿಗೆ ನಿಮ್ಮನು ಬಲಿ ಪಡೆದನಲ್ಲನವನು..
ಮೂರು ವರುಷಗಳ ನಂತರ ಇಳೆಯನು
ತಂಪಾಗಿಸಿರುವೆ... ಹೊಲವನು ಉತ್ತಲು
ಬಿತ್ತಲು... ಈ ಸುಗ್ಗಿಯಲ್ಲಾದರೂ ಹೊಲ
ತುಂಬ ಬೆಳೆ ಬೆಳೆದು.. ಮನೆಯ ಅಂಕಣದ
ತುಂಬ ಕಾಳಿನ ಚೀಲಗಳನೆ ತುಂಬಿಟ್ಟು...
ಬಸವನ ಗ್ವಾದ್ಲಿಯ ತುಂಬ ಹಸಿರಿನ ಮೇವನೆ
ಹಾಕಿ... ಕೊಡಗಟ್ಟಲೆ ಹಾಲ ಕರೆದು... ಮಡದಿ
ಮಕ್ಕಳು ಹಾಲು ಹೈನವನುಂಡು... ಬೆನ್ನಿಗೆ
ಹತ್ತಿದಂತಿರುವ ಹೊಟ್ಟೆಯನ್ನಾದರೂ...
ತುಂಬಿಸಿಕೊಳ್ಳುತ್ತಿದ್ದರು...
ಎಲ್ಲ....... ಆಸೆಗಳಿಗೂ ನೀರು ಸುರಿದುಬಿಟ್ಟೆ....
ಬದುಕಿನ ಬಣವೆಗೆ ಬೆಂಕಿಯನಿಟ್ಟುಬಿಟ್ಟೆ....
ಮರಳಿ ಹೊಟ್ಟೆಗೆ ಹಸಿವಿನ ಕೊಳ್ಳಿಯನು
ಹೊತ್ತಿಸಿಬಿಟ್ಟೆ...
ಇನ್ನೇಷ್ಟು...ನಮ್ಮನು ಕಣ್ಣೀರ ಕಾಲುವೆಯಲಿ
ಮುಳುಗಿಸಬೇಕೆಂದಿರುವೆಯೊ...
ಅದೇಷ್ಟು ಬರದ ಬೆಂಕಿಯಲಿ ಬೇಯಿಸುವೆಯೊ..
ಬಾಳಿಗದೇಷ್ಟು ಸಿಡಿಲ ಬಡಿತಗಳ ಹೊಡೆತವ
ನೀಡುವೆಯೊ... ಶಿವನೆ ನಾನಿಂದು ಅರಿತೆ..
ನೀನೇಕೆ ಕಲ್ಲಾದೆ ಎಂದು..
No comments:
Post a Comment